ಅನುಕ್ರಮ

ಇದೆಲ್ಲಾ ಹೇಗಾಗ್ತದೆ? ಇದು ನಮ್ಗೆಲ್ಲಿ ಗೊತ್ತಾಗ್ತದೆ!?

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಗ್ರಾಮ ಪಂಚಾಯತುಗಳ ಕಚೇರಿಗಳಿಗೆ ನೀವು “ಹೀಗೇ ಸುಮ್ಮನೇ” ಎಂತ ಹೋಗುವುದಿದೆಯೇ? ಗ್ರಾಮ ಲೆಕ್ಕಾಧಿಕಾರಿಗಳೊಡನೆ ಉಭಯಕುಶಲೋಪರಿ ಮಾತಾಡುತ್ತ ಅಭಿವೃದ್ಧಿ ಯೋಜನೆಗಳ ಬಗ್ಗೆ ತಿಳಿದುಕೊಳ್ಳುವ ಕ್ರಮ ಇದೆಯೆ? ಅವರು ಹಳ್ಳಿಗರೊಡನೆ ಪಂಚಾಯತ್‍ನ ಆದಾಯ ವೆಚ್ಚಗಳ ವಿವರಗಳನ್ನು ಅಥವಾ ತಲೆಬಿಸಿಗಳನ್ನು ಹಂಚಿಕೊಳ್ಳುತ್ತಾರೆಯೆ? ಗ್ರಾಮ ಪಂಚಾಯತ್ ಅಧ್ಯಕ್ಷರು ಹಾಗೂ ಸದಸ್ಯರು ಜನಸಾಮಾನ್ಯರಿಗೆ ಸೌಹಾರ್ದ ಭೇಟಿ ನೀಡುತ್ತಾರೆಯೆ?

Advertisement
Advertisement

ಪಂಚಾಯತು ವಿಧಿಸುವ ವಿವಿಧ ಕರಗಳ ಬಗ್ಗೆ ನಿಮಗೆ ಅರಿವಿದೆಯೆ? ನಿಮ್ಮ ಪಂಚಾಯತುಗಳಿಗೆ ಸರಕಾರದಿಂದ ಬರುವ ಅನುದಾನಗಳ ಬಗ್ಗೆ ಸಮುದಾಯದಲ್ಲಿ ಚರ್ಚೆಯಾಗುತ್ತಿದೆಯೆ? ಅವುಗಳ ವೆಚ್ಚಗಳ ಮೌಲ್ಯಮಾಪನದಲ್ಲಿ ಜನಾಭಿಪ್ರಾಯಕ್ಕೆ ಅವಕಾಶವಿದೆಯೆ? ನಿಜವಾದ ಪ್ರಜಾಪ್ರಭುತ್ವದ ಬೀಜಗಳು ಮೊಳೆಯುವುದು ಇಲ್ಲಿಯೇ? ಅಂತಹ ಸಾಧ್ಯತೆಗಳ ನಿರೀಕ್ಷೆ ಇಟ್ಟುಕೊಳ್ಳಬಹುದೇ? ಆದರೆ ಅದು ಅಸಾಧ್ಯವೆಂದು ದಿ-ಫೈಲ್ ಮಾಹಿತಿ ಹಕ್ಕಿನ ಆಧಾರದಲ್ಲಿ ಪ್ರಕಟಿಸಿದ ವರದಿಗಳಿಂದ ಅರ್ಥವಾಗುತ್ತದೆ.

The-File ಎಂಬ ವೆಬ್ ಪತ್ರಿಕೆಯಲ್ಲಿ ವರದಿಗಾರರಾಗಿರುವ ಮಹಾಂತೇಶ್ ಭದ್ರಾವತಿಯವರು ಸೂಕ್ತ ದಾಖಲೆಗಳನ್ನು ಸಂಗ್ರಹಿಸಿ ಫೇಸ್‍ಬುಕ್‍ನಲ್ಲಿ ಮಾಡುತ್ತಿರುವ ವರದಿಗಳು ನಿಜಕ್ಕೂ ಆಘಾತಕಾರಿಯಾಗಿವೆ. ಆದರೆ ಯಾರೂ ಆಘಾತಕ್ಕೊಳಗಾಗುತ್ತಿಲ್ಲ ಎಂಬುದು ವಿಚಿತ್ರ ಆದರೂ ನಿಜ. ಈ ವರದಿಗಳಲ್ಲಿ ನೇರವಾಗಿ ಆರೋಪಕ್ಕೊಳಗಾದ ರಾಜಕಾರಣಿಗಳಾಗಲೀ ಅಧಿಕಾರಿಗಳಾಗಲೀ ಯಾವುದೇ ಗಾಬರಿಗೆ ಒಳಗಾಗುವುದಿಲ್ಲ. ಇನ್ನು ವಾಸ್ತವಿಕ ನಷ್ಟಕ್ಕೆ ಒಳಗಾಗುವ ತೆರಿಗೆದಾರರೂ ಚಿಂತಿಸುವುದಿಲ್ಲ. ಮಹಾಂತೇಶರ ವರದಿಗಳಿಗೆ ಹೆಚ್ಚಿನ ಲೈಕ್‍ಗಳಿಲ್ಲ, ಕಮೆಂಟ್‍ಗಳು ಇನ್ನೂ ಕಡಿಮೆ. ಕೆಲವೊಮ್ಮೆ ಶೇರ್ ಗಳು ಹೆಚ್ಚಿರುತ್ತವೆ. ಆದರೆ ನಾನಂತೂ ಬಹಳ ದಿನಗಳಿಂದ ಅವರ ವರದಿಗಳನ್ನು ಗಮನಿಸುತ್ತಿದ್ದೇನೆ. ಅವುಗಳು ಮುಂದಿಡುವ ಅವ್ಯವಹಾರ, ಲಂಚ, ಸ್ವಜನ ಪಕ್ಷಪಾತ, ಕಾನೂನಿನ ಉಲ್ಲಂಘನೆ ಮುಂತಾದ ಪ್ರಕರಣಗಳಲ್ಲಿ ಭಾಗಿಯಾದ ತಪ್ಪಿತಸ್ಥರು ತಮ್ಮ ಅಕ್ರಮಗಳು ಬಹಿರಂಗವಾದ ಬಗ್ಗೆ ಯಾವುದೇ ನಾಚಿಕೆ ತಾಳದಿರುವುದನ್ನು ನೋಡಿದರೆ “ಇದೆಲ್ಲಾ ಹೇಗಾಗ್ತದೆ?” ಎಂಬ ಪ್ರಶ್ನೆ ಮೂಡುತ್ತದೆ.

ಯಾರೇ ಅಧಿಕಾರಿಗಳ ಅಥವಾ ರಾಜಕಾರಣಿಗಳ ಭ್ರಷ್ಟಾಚಾರ ಬಹಿರಂಗವಾದಾಗ ಕಚೇರಿಗಳ ಒಳಗೆ ನಡೆದ ನಿರ್ಧಾರಗಳ ಹಾಗೂ ಅನುಮತಿ ಪತ್ರಗಳ ದಾಖಲೆಗಳ ಫೊಟೊಗಳು ಮಹಾಂತೇಶ್‍ರವರ ಕಮೆಂಟ್ ಬಾಕ್ಸ್ ನಲ್ಲಿರುತ್ತವೆ. ಬಹುಕೋಟಿ ಹಣವನ್ನು ಲಪಟಾಯಿಸಿದ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಣಕಾಸು ವಂಚನೆಗಳನ್ನು ಅವರು ಬಹಿರಂಗಪಡಿಸಿದ್ದಾರೆ. ಒಬ್ಬ ಅಧಿಕಾರಿಯ ಆತ್ಮಹತ್ಯೆಗೂ ಕಾರಣವಾದ ಈ ಹಗರಣದಲ್ಲಿ ಹೆಸರು ತಳಕು ಹಾಕಿಕೊಂಡಿದ್ದ ಸಚಿವರು ರಾಜೀನಾಮೆ ನೀಡುವಲ್ಲಿಯ ತನಕ ಈ ಪ್ರಕರಣ ಮುಂದುವರಿದರೂ ನೈತಿಕ ಹೊಣೆ ಹೊರುವ ರಾಜಕಾರಣಿಗಳು ಮುಂದೆ ಬಾರದಿರುವುದು ಬಹುಮತದ ಪ್ರಜಾರಾಜಕಾರಣದ ದೌರ್ಬಲ್ಯವಾಗಿದೆ.

ಮೂಡಾ ಹಗರಣವೆಂದೇ ಪ್ರಸಿದ್ಧವಾದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಭಾರೀ ಅಕ್ರಮದ ವಿವರಗಳ ದಾಖಲೆಗಳೂ ಬಹಿರಂಗಗೊಂಡಿವೆ. ಇಂತಹ ಅಂತರ್ಗತ ತನಿಖಾ ದಾಖಲೆಗಳ ಹೊರತಾಗಿ ಈ ಅಕ್ರಮದ ಸ್ವರೂಪವೇ ನಮಗೆ ಅರ್ಥವಾಗುವುದಿಲ್ಲ. ಮುಖ್ಯಮಂತ್ರಿಗಳೂ ಸೇರಿದಂತೆ ಭೂ ಅವ್ಯವಹಾರದಲ್ಲಿ ತಪ್ಪು ನಡೆದಿದೆ ಹಾಗೂ ನಡೆದಿಲ್ಲವೆಂಬ ವಾರ್ತೆಗಳು ಜನರನ್ನು ಗೊಂದಲಕ್ಕೀಡುಮಾಡುತ್ತವೆ. ಈ ಪ್ರಕರಣದ ಹೋರಾಟವು ಕೋರ್ಟ್‍ನಲ್ಲೇ ನಡೆಯುತ್ತಿದ್ದು ಇದರ ಕೊನೆ ಹೇಗಾಗ್ತದೆ ಎಂಬ ಅಚ್ಚರಿ ಉಳಿಯುತ್ತದೆ ಅಷ್ಟೇ ಹೊರತು ತಪ್ಪಿತಸ್ಥರಾಗಿ ಯಾರೂ ಅಧಿಕಾರ ಬಿಡುವುದಿಲ್ಲ.
ರಾಜ್ಯದ ಶಕ್ತಿ ಕೇಂದ್ರವಾದ ವಿಧಾನ ಸಭೆಯಲ್ಲಿ ಶಾಸಕರೂ ರಾಜಕಾರಣಿಗಳೂ ಇರುತ್ತಾರೆ. ಅವರ ಖರ್ಚು ವೆಚ್ಚಗಳ ಬಿಲ್ ಗಳ ಪರಿಶೀಲನೆ ಮತ್ತು ಅನುಮೋದನೆಗಳು ಎಲ್ಲಿ ಹಾಗೂ ಹೇಗೆ ನಡೆಯುತ್ತವೆಂದು ನಮಗೆ ಹೇಗೆ ತಿಳಿಯಲು ಸಾಧ್ಯ. ಆದರೆ ದಿ-ಫೈಲ್ ವರದಿಯ ಪ್ರಕಾರ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಸಿ.ಬಿ.ಐ. ತನಿಖೆಯನ್ನು ರದ್ದು ಪಡಿಸಲು ಉನ್ನತ ಕೋರ್ಟ್ ಗಳಲ್ಲಿ ವಾದ ಮಾಡಿದ ಹಿರಿಯ ವಕೀಲ ಅವರು 2.80 ಕೋಟಿ ರೂ.ಗಳ ಸಂಭಾವನೆಯನ್ನು ಸರಕಾರದಿಂದ ಕೋರಿದ್ದಾರೆ. ಈ ಮೊದಲು ಮೂಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಶ್ರೀ ಸಿದ್ಧರಾಮಯ್ಯನವರ ವಾದಿಸಿದ ಬಾಬ್ತು 1.49 ಕೋಟಿ ರೂ ಗಳ ಸಂಭಾವನೆಯನ್ನು ಬಯಸಿದ್ದರು. ಈ ಬಯಕೆಗಳೆಲ್ಲವೂ ಸೂಕ್ತ ಅಧಿಕಾರಿಗಳು ಸೂಕ್ತ ಕಾರಣಗಳೊಂದಿಗೆ ಶಿಫಾರಸು ಮಾಡಿ ನೀಡಲಾಗುತ್ತದೆ. ಹೀಗೆಯೇ ‘ಸಿದ್ಧಾರ್ಥ’ ಹೆಸರಿನಲ್ಲಿ ಪ್ರಭಾವಿ ರಾಜಕೀಯ ಕುಟುಂಬಗಳು ಟ್ರಸ್ಟ್, ಸೊಸೈಟಿಗಳನ್ನು ಸ್ಥಾಪಿಸಿ ಸರಕಾರದಿಂದ ಕೊಟ್ಯಾಂತರ ಹಣ, ಜಮಿನು ಮತ್ತು ನಿವೇಶನಗಳನ್ನು ಮಂಜೂರು ಮಾಡಿಸಿಕೊಂಡ ಉದಾಹರಣೆಯೂ ದಿ-ಫೈಲ್ ನಲ್ಲಿ ಪ್ರಕಟವಾಗಿದೆ. ಇದರಲ್ಲಿ ಗೃಹಸಚಿವ ಪರಮೇಶ್ವರ ಒಡೆತನದ ಸಿದ್ಧಾರ್ಥ ಸಂಸ್ಥೆಗಳ ಹೆಸರು ಬಯಲಾಗಿದೆ. ಅಂತೆಯೇ ಕಲಬುರ್ಗಿಯಲ್ಲಿ ಸನ್ಮಾನ್ಯ ಖರ್ಗೆ ಕುಟುಂಬದವರ ಸೊಸೈಟಿಗೆ ಅನುದಾನ ಲಭ್ಯವಿಲ್ಲದಿದ್ದರೂ ಎರಡು ವರ್ಷಗಳಲ್ಲಿ 9.9 ಕೋಟಿ ಹಣ ಮಂಜೂರು ಮಾಡಿದ ದಾಖಲೆಗಳನ್ನು ದಿ.ಫೈಲ್ ಪ್ರಕಟಿಸಿದೆ.

Advertisement

ಇತ್ತೀಚೆಗೆ ದಿ-ಫೈಲ್ ಬಹಿರಂಗ ಗೊಳಿಸಿದ ಒಂದು ವರದಿಯು ಪ್ರಜಾಪ್ರಭುತ್ವದ ಬುಡಕ್ಕೇ ಲಗ್ಗೆ ಇಟ್ಟಿದೆ. ಈ ಹಿಂದಿನ ಬಿ.ಜೆ.ಪಿ. ಆಡಳಿತ ಅವಧಿಯಲ್ಲಿ 29 ಜಿಲ್ಲೆಗಳಲ್ಲಿನ 1930 ಪಂಚಾಯ್ತಿಗಳಲ್ಲಿ 356.65 ಕೋಟಿ ರು. ವೆಚ್ಚಕ್ಕೆ ಪೂರಕ ಬಿಲ್‍ಗಳೇ ಇಲ್ಲದೆ ಹಣ ದುರ್ಬಳಕೆ ನಡೆದಿದೆ. ಅಂದರೆ ಭ್ರಷ್ಟಾಚಾರದ ರೋಗ ತಳಮಟ್ಟದಲ್ಲೂ ಉಲ್ಬಣಗೊಂಡಿದೆ ಎಂದಾಯ್ತು. ಪಂಚಾಯತುಗಳಲ್ಲಿಯೂ ಕೋಟಿಗಳ ಲೆಕ್ಕದಲ್ಲಿ ಸಾರ್ವಜನಿಕ ಬೊಕ್ಕಸಕ್ಕೆ ವಂಚನೆ ನಡೆಯುತ್ತದೆಂದರೆ ಭ್ರಷ್ಟಾಚಾರವು ಕೇನ್ಸರ್‍ನಂತೆ ವ್ಯಾಪಿಸ್ತಿದೆ ಎಂಬುದು ನಮಗೆ ಗೊತ್ತಾಗ್ತಿದೆಯೇ? ಇದು ಪಂಚಾಯಿತಿಗಳ ಆಡಳಿತ ಹೇಗಿದೆ ಎಂಬುದಕ್ಕೆ ಒಂದು ಜ್ವಲಂತ ನಿದರ್ಶನ ಇಲ್ಲಿದೆ. ಹಿಂದಿನ ಬಿ.ಜೆ.ಪಿ ಆಡಳಿತದಲ್ಲಿ ನಡೆದ ಈ ನಿರ್ಲಕ್ಷ್ಯದ ವರದಿಯನ್ನು ರಾಜ್ಯ ಲೆಕ್ಕಪತ್ರ ಪರಿಶೋಧನಾ ಇಲಾಖೆಯೇ ನೀಡಿದ್ದರೂ ಕಾಂಗ್ರೆಸ್ ಸರಕಾರವು ಮೌನವಹಿಸಿರುವುದು ಒಂದು ಸೋಜಿಗವಾಗಿದೆ ಎನ್ನುತ್ತದೆ ದಿ-ಪೈಲ್ ವರದಿ. ಇಲ್ಲಿ ಹೆಚ್ಚು ಗಮನೀಯ ಸಂಗತಿ ಎಂದರೆ ಒ.ಎಫ್.ಸಿ. ಕೇಬಲ್ ಅಳವಡಿಕೆಗೆ ಸಂಬಂಧಿಸಿ ಜಿಯೋ ಕಂಪನಿಯಿಂದ ವಸೂಲು ಮಾಡಬೇಕಿದ್ದ ನಿಗದಿತ ಶುಲ್ಕವನ್ನು ಕೂಡಾ ವಸೂಲು ಮಾಡದೇ ಬಿಟ್ಟಿದ್ದಾರೆ. ಈ ಉದಾರತೆಯ ಹಿಂದೆ ವಂಚನೆ ಇರಲೇ ಬೇಕಲ್ಲ! ಈ ವರದಿಗಳಲ್ಲಿ ಬಹಿರಂಗವಾದ ಇನ್ನೊಂದು ವಿಚಾರವೆಂದರೆ 2916 ಗ್ರಾಮ ಪಂಚಾಯತುಗಳಲ್ಲಿ ವಾರ್ಷಿಕ ಆಯವ್ಯಯವನ್ನೇ ತಯಾರಿಸಿಲ್ಲ. 1363 ಗ್ರಾಮ ಪಂಚಾಯತುಗಳು ನಗದು ಪುಸ್ತಕವನ್ನೇ ನಿರ್ವಹಿಸಿಲ್ಲ. ಇವುಗಳೊಂದಿಗೆ ಸೇರಿದ ಇನ್ನೊಂದು ವ್ಯತ್ಯಯವೆಂದರೆ ಬಹುತೇಕ ಪಂಚಾಯತುಗಳು ವಸೂಲು ಮಾಡಿರುವ ಉಪ ತೆರಿಗೆ ಹಣಗಳನ್ನು ಸರ್ಕಾರಕ್ಕೆ ಜಮೆ ಮಾಡಿಲ್ಲ!

ಜಿಯೋ ಕಂಪನಿಯು ಆಪ್ಟಿಕಲ್ ಫೈಬರ್ ಕೇಬಲ್‍ಗಳನ್ನು ಅಳವಡಿಸಲು ರಸ್ತೆ ಅಗೆಯುವ ಬಾಬ್ತು ಶುಲ್ಕ ವಸೂಲು ಮಾಡಬೇಕೆಂಬ ನಿಯಮವನ್ನು 2016 ರಲ್ಲೇ ಸುತ್ತೋಲೆಯ ಮೂಲಕ ನಿರ್ದಿಷ್ಟಪಡಿಸಲಾಗಿತ್ತು. ಆದರೆ ಗ್ರಾಮ ಪಂಚಾಯತು ಅಧಿಕಾರಿಗಳು ಶುಲ್ಕ ನಿಗದಿ ಮತ್ತು ವಸೂಲು ಮಾಡುವಲ್ಲಿ ತಪ್ಪು ಮಾಡಿದ್ದಾರೆಂದು ವರದಿ ಹೇಳುತ್ತದೆ. ಇದರ ಮೊತ್ತವೇ 33.26 ಲಕ್ಷ ರೂ ಗಳಷ್ಟಿದೆ. ಹೀಗಾಗಿ ಗ್ರಾಮ ಪಂಚಾಯತುಗಳಿಗೆ ಬರಬೇಕಿದ್ದ ವರಮಾನ ನಷ್ಟವಾಗಿದೆ. ಹಾಗಾಗಿಯೇ ಸರಕಾರದ ಅನುದಾನಗಳಿಗೆ ಹಾತೊರೆಯುವ ಪ್ರಮಾಣ ಹೆಚ್ಚಾಗಿದೆ.

ಪಂಚಾಯತು ಅಧಿಕಾರಿಗಳು ಮಾಡುವ ಕರ್ತವ್ಯ ಲೋಪಕ್ಕೆ ಶಿಸ್ತು ಕ್ರಮ, ಸೇವಾ ಭಡ್ತಿ ತಡೆಯುವುದು, ಸಿವಿಲ್ ಮತ್ತು ಕ್ರಿಮಿನಲ್ ಮೊಕದ್ದಮೆಯನ್ನು ಸಹ ಹೂಡಲು ಅವಕಾಶವಿದೆ. ಆದರೆ ಮೇಲಧಿಕಾರಿಗಳು ಅಂತಹ ಯಾವುದೇ ಕ್ರಮ ಜರುಗಿಸದೇ ಇರುವುದರ ಹಿಂದಿನ ಕಾರಣಗಳು ನಿಗೂಢವಾಗಿವೆ. ಉದಾಹರಣೆಗೆ ಪಂಚಾಯಿತಿಗಳ ಲೋಪಗಳ ಜಿಲ್ಲಾವಾರು ಲೆಕ್ಕವನ್ನು ನೀಡಿರುವ ವರದಿಯ ಪ್ರಕಾರ 335 ಪಂಚಾಯತುಗಳಲ್ಲಿ ಮ್ಯುಟೇಶನ್ ರಿಜಿಸ್ಟರನ್ನೇ ನಿರ್ವಹಿಸಿಲ್ಲ. ಇದೆಲ್ಲಕ್ಕೆ ಮುಕುಟಪ್ರಾಯವಾಗಿ 179 ಪಂಚಾಯತುಗಳಲ್ಲಿ ಸಾಮಾಜಿಕ ನ್ಯಾಯ ನಿರ್ವಹಣೆ ಸಮಿತಿಗಳೇ ಇರಲಿಲ್ಲ. 342 ಪಂಚಾಯತುಗಳಲ್ಲಿ ಗ್ರಾಮ ಸಭೆಯೂ ನಡೆದಿರಲಿಲ್ಲ. ಇದಕ್ಕೆ ಕಾರಣವೆಂದರೆ ಸಾರ್ವಜನಿಕ ಸಹಭಾಗಿತ್ವದ ಕೊರತೆ ಎನ್ನಲಾಗಿದೆ. ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕಾಮಗಾರಿಗಳನ್ನು ಕೈಗೆತ್ತಿಕೊಂಡಿರುವ ಪಂಚಾಯತುಗಳ ಪೈಕಿ 274 ಪಂಚಾಯಿತಿಗಳು ಲೆಕ್ಕ ಪರಿಶೋಧನೆಯನ್ನೇ ನಡೆಸಿಲ್ಲ. ಇದೆಲ್ಲ ನಮ್ಗೆ ಗೊತ್ತಾಗ್ತದೆಯೇ?

ಬಹಿರಂಗವಾಗಿರುವ ಇನ್ನೊಂದು ವಿವರವೆಂದರೆ ಶಿಕ್ಷಣದ ಉಪ ತೆರಿಗೆಗೆ ಸಂಬಂಧಿಸಿದ್ದು. ಈ ಕರದ ವಸೂಲಾತಿಯನ್ನು 2019 ರಲ್ಲೇ ಸ್ಥಗಿತಗೊಳಿಸಿದ್ದರೂ 2022-23ರಲ್ಲಿ 171.83 ಕೋಟಿ ರೂಗಳನ್ನು ವಸೂಲು ಮಾಡಲಾಗಿತ್ತು. ಇದರಲ್ಲಿ ನಡೆದಿರುವ ಒಳ ವಂಚನೆ ಎಂದರೆ ವಸೂಲಾದ ಒಟ್ಟು ಕರದಲ್ಲಿ 54.31 ಕೋಟಿ ಮಾತ್ರ ಸರಕಾರಕ್ಕೆ ಸಲ್ಲಿಕೆಯಾಗಿ 117.51 ಕೋಟಿ ಹಣವನ್ನು ಸರಕಾರಕ್ಕೆ ಜಮೆಯನ್ನೇ ಮಾಡಿರಲಿಲ್ಲ. ಇದಲ್ಲದೆ ಗ್ರಾಮ ಪಂಚಾಯತುಗಳಲ್ಲಿ ವಸೂಲಾದ ಆರೋಗ್ಯ ತೆರಿಗೆ, ಗ್ರಂಥಾಲಯ ತೆರಿಗೆ, ಭಿಕ್ಷುಕರ ತೆರಿಗೆ, ಅಭಿವೃದ್ಧಿ ತೆರಿಗೆ ಇತ್ಯಾದಿಗಳ ಒಟ್ಟು 766.74 ಕೋಟಿ ಹಣವನ್ನು ಸರಕಾರಕ್ಕೆ ಜಮೆ ಮಾಡಿಲ್ಲ. ಹಾಗಿದ್ರೆ ಆ ಹಣ ಎಲ್ಲಿಗೆ ಹೋಗಿದೆಯೆಂದು ನಾವು ತಿಳಿಯಬೇಕು!

ದಿ-ಫೈಲ್‍ನ ವರದಿಯನ್ನು ಓದಿದರೆ ಇನ್ನೊಂದಷ್ಟು ಕಳ್ಳಾಟಗಳು ಬಯಲಾಗುತ್ತವೆ. ರಾಜ್ಯದ 2916 ಗ್ರಾಮ ಪಂಚಾಯತುಗಳು ವಾರ್ಷಿಕ ಆಯ ವ್ಯಯವನ್ನೇ ತಯಾರಿಸಿರಲಿಲ್ಲ. ಅಲ್ಲದೆ 1363 ಪಂಚಾಯತುಗಳು ನಗದು ಪುಸ್ತಕವನ್ನೇ ನಿರ್ವಹಿಸಿರಲಿಲ್ಲ, ಹೀಗಾಗಿ ಆರೋಗ್ಯ ತೆರಿಗೆ, ಅಭಿವೃದ್ಧಿ ತೆರಿಗೆ, ಗ್ರಂಥಾಲಯ ತೆರಿಗೆ, ಭಿಕ್ಷುಕರ ತೆರಿಗೆ ಇತ್ಯಾದಿ ವಸೂಲಾದ ಒಟ್ಟು ಕರದಲ್ಲಿ 769.73 ಕೋಟಿ ರೂ.ಗಳನ್ನು ಸರಕಾರಕ್ಕೆ ಜಮೆ ಮಾಡಿಲ್ಲ. ಇದೇನೂ ಹೊಸ ವಿಚಾರವಲ್ಲ. 2021-22 ರಲ್ಲಿಯೂ ಲೆಕ್ಕ ಪರಿಶೋಧಕರು ಇಂತಹುದೇ ಹಲವು ಲೋಪಗಳನ್ನು ಪತ್ತೆ ಹಚ್ಚಿದ್ದರೂ ಇದು ಮತ್ತೆ ಮುಂದುವರಿಯುತ್ತದೆಂದರೆ ಜನರ ತೆರಿಗೆಯ ಹಣದ ಬಗ್ಗೆ ಅಧಿಕಾರಿಗಳಲ್ಲೂ ಜನಪ್ರತಿನಿಧಿಗಳಲ್ಲೂ ಅದೆಂಥ ಕ್ಷುಲ್ಲಕ ಆಕರ್ಷಣೆಯಿದೆ!?

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಡಾ.ಚಂದ್ರಶೇಖರ ದಾಮ್ಲೆ

ಡಾ. ಚಂದ್ರಶೇಖರ ದಾಮ್ಲೆಯವರು ಸುಳ್ಯದ ನೆಹರು ಮೆಮೋರಿಯಲ್ ಕಾಲೇಜ್ ನಲ್ಲಿ ಸಮಾಜಶಾಸ್ತ್ರ ಪ್ರಾಧ್ಯಾಪಕರಾಗಿ 35 ವರ್ಷಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದವರು. ವೃತ್ತಿಯಲ್ಲಿರುವಾಗಲೇ ರಾಷ್ಟ್ರೀಯ ಸೇವಾ ಯೋಜನಾಧಿಕಾರಿಯಾಗಿ ಸಮಾಜಸೇವೆಯಲ್ಲಿ ತೊಡಗಿಕೊಂಡವರು. ಸಾಂಸ್ಕೃತಿಕ ಸಂಘದ ಮೂಲಕ ಮಕ್ಕಳಿಗೆ ಯಕ್ಷಗಾನ ನಿರ್ದೇಶಕನ, ಸುಳ್ಯದಲ್ಲಿ ಯಕ್ಷಗಾನ ಹಿತರಕ್ಷಣಾ ವೇದಿಕೆಯ ಸ್ಥಾಪನೆ, ಸಂಪೂರ್ಣ ಸಾಕ್ಷರತಾ ಆಂದೋಲನದಲ್ಲಿ ಸಂಪನ್ಮೂಲ ವ್ಯಕ್ತಿ, ಕನ್ನಡಮಾಧ್ಯಮದಲ್ಲಿ ಸ್ನೇಹ ಶಿಕ್ಷಣ ಸಂಸ್ಥೆಯ ಸ್ಥಾಪನೆ ಮುಂತಾದ ಸಮಾಜಮುಖಿ ಕಾರ್ಯಗಳಲ್ಲಿ ಸೇವೆ ನೀಡಿದವರು. ಶಿಕ್ಷಣದಲ್ಲಿ ಸೃಜನಶೀಲತೆಗೆ ಒತ್ತು ನೀಡುವ ದಾಮ್ಲೆಯವರು ಸಂಶೋಧಕರಾಗಿದ್ದು ಕನ್ನಡ ಇಂಗ್ಲಿಷ್ ಭಾಷೆಗಳಲ್ಲಿ ಕೃತಿ ರಚನೆ ಮಾಡಿದವರು. 'ನೆಲದನಂಟು' ಮತ್ತು "ಶಾಲೆ ಎಲ್ಲಿದೆ?" ಇವು ಇವರ ಪ್ರಸಿದ್ಧ ಕಾದಂಬರಿಗಳು. ಅನೇಕ ಪ್ರಶಸ್ತಿ ಸಮ್ಮಾನಗಳಿಂದ ಗೌರವಿಸಲ್ಪಟ್ಟ ದಾಮ್ಲೆಯವರಿಗೆ ಅಸಾಮಾನ್ಯ ಕನ್ನಡಿಗ ಪ್ರಶಸ್ತಿ, ಯಕ್ಷಮಂಗಳ ಪ್ರಶಸ್ತಿ, ಅರಣ್ಯಮಿತ್ರ ಮತ್ತು ಜಲಮಿತ್ರ ಪ್ರಶಸ್ತಿ, Nation Builder ಪ್ರಶಸ್ತಿ ಮುಂತಾದುವು ಲಭಿಸಿವೆ. ಹೊಸದಿಗಂತ ಪತ್ರಿಕೆಯಲ್ಲಿ "ಇದ್ಯಾಕೆ ಹೀಗೆ " ಅಂಕಣವನ್ನು ಬರೆಯುತ್ತಿದ್ದರು.

Published by
ಡಾ.ಚಂದ್ರಶೇಖರ ದಾಮ್ಲೆ

Recent Posts

ವಿಶ್ವ ಪರಿಸರ ದಿನಾಚರಣೆ | ಪ್ರಧಾನಿ ನರೇಂದ್ರ ಮೋದಿ ಭಾಗಿ  | 700 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಅರಣ್ಯೀಕರಣ ಯೋಜನೆಗೆ ಚಾಲನೆ |

ವಿಶ್ವ ಪರಿಸರ ದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು, ದೆಹಲಿಯ ಭಗವಾನ್…

1 hour ago

ವಿಶ್ವ ಪರಿಸರ ದಿನ | ರಾಜ್ಯದೆಲ್ಲೆಡೆ ಪ್ಲಾಸ್ಟಿಕ್ ಮುಕ್ತ ಅಭಿಯಾನ

ವಿಶ್ವ ಪರಿಸರ ದಿನ. ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪರಾಷ್ಟ್ರಪತಿ…

2 hours ago

ರಾಷ್ಟ್ರಪತಿಗಳೇ ಟೀಕಿಸಿದ ಮೇಲೆ….?

ನಮ್ಮ ದೇಶದ ನ್ಯಾಯವಾದಿಗಳ ವಲಯದಲ್ಲಿಯೇ ವರ್ಮಾರಿಗೆ ವರ್ಗಾವಣೆ ಶಿಕ್ಷೆ ಮಾತ್ರ ನೀಡಿದ್ದು ಸಮಾಧಾನಕರವೆನ್ನಿಸಿರಲಿಲ್ಲ.…

2 hours ago

ವಿಶ್ವಪರಿಸರ ದಿನ | ತಾಯಿಯ ಹೆಸರಲ್ಲಿ ಒಂದು ಮರ -2.0 ಅಭಿಯಾನ

"ತಾಯಿಯ ಹೆಸರಲ್ಲಿ ಒಂದು ಸಸಿ"-2.0 ಅಭಿಯಾನದಡಿ 10 ಕೋಟಿ ಗಿಡಗಳನ್ನು ನೆಡುವ ಗುರಿ…

16 hours ago

ಮದುವೆಯ ವಿಳಂಬಕ್ಕೆ ಈ ಕಾರಣವೂ ಇರಬಹುದು..! ಪರಿಹಾರ ಕ್ರಮಗಳು ಇಲ್ಲಿದೆ ನೋಡಿ

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490

16 hours ago

ಅಡುಗೆಯ ಕಚ್ಚಾ ಎಣ್ಣೆಯ ಮೇಲಿನ ಆಮದು ಸುಂಕ ಕಡಿತ | ತೆಂಗಿಗಿಲ್ಲ ಆತಂಕ.. | ಧಾರಣೆ ಇಳಿಕೆಯ ಆತಂಕವಿಲ್ಲ |

ಆಮದಾಗುವ ಕಚ್ಚಾ ಉತ್ಪನ್ನದ ಪ್ರಭಾವ ತೆಂಗು ಮತ್ತು ಅದರ ಉತ್ಪನ್ನಗಳ ಮೇಲೆ ಇಲ್ಲದೇ…

2 days ago