ಸ್ನೇಹಯಾನ

ಧರ್ಮಕ್ಕೆ ಸಿಗುವುದಾದರೆ ಇರಲಿ ಎಂಬ ಮನೋಭಾವ

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail
ತಮಗೆ ಬೇಕಾದ್ದನ್ನು ದುಡ್ಡುಕೊಟ್ಟು ಖರೀದಿಸುವ ಅನಿವಾರ್ಯತೆ ಇರುವ ಮಾನವರ ವರ್ತನೆಗಳು ಒಂದೇ ರೀತಿ ಇರುವುದಿಲ್ಲ. ಪ್ರಾಣಿಗಳಿಗೆ ಈ ಅನಿವಾರ್ಯತೆ ಇಲ್ಲ. ಮಾನವರಲ್ಲಿ ಸಾಕಷ್ಟು ದುಡ್ಡು ಇದ್ದಾಗಿನ ಮನೋಸ್ಥಿತಿಯು ದುಡ್ಡಿಲ್ಲದಾಗ ಇರುವುದಿಲ್ಲ. ತಮ್ಮ ಬಳಕೆಗೆ ಬೇಕಾದ ಉತ್ಪನ್ನದ ಬ್ರಾಂಡ್‍ನ ಪ್ರಸಿದ್ಧಿಗೆ ಅನುಸರಿಸಿ ಶ್ರೀಮಂತರು ಕೈ ಬಿಚ್ಚಿ ಖರೀದಿಸುತ್ತಾರೆ. ಆದರೆ ಬಡವರು ಬ್ರಾಂಡ್‍ನ ಪ್ರಸಿದ್ಧಿಗಿಂತ ಹೆಚ್ಚಾಗಿ ವಸ್ತುವಿನ ಉಪಯುಕ್ತತೆಯ ಲೆಕ್ಕಾಚಾರ ಮಾಡುತ್ತಾರೆ. ಸಾಮಾನ್ಯ ಮಟ್ಟದ ಜೀವನದ ನಿರ್ವಹಣೆಗೆ ಸಾಕಾಗುವಂತಿದ್ದರೆ ಬಡ ಮತ್ತು ಮಧ್ಯಮ ವರ್ಗದವರು ದುಬಾರಿ ಖರೀದಿಗೆ ಹೋಗುವುದಿಲ್ಲ. ತಮ್ಮ ಅಗ್ಗದ ಆಯ್ಕೆಗೆ ಸರಳತೆಯ ಲೇಪನ ಹಚ್ಚುವ ಮೂಲಕ ಆತ್ಮಗೌರವವನ್ನು ಹೆಚ್ಚಿಸಿಕೊಳ್ಳುತ್ತಾರೆ. ಆದರೂ ಆಸೆಯೆಂಬ ತಂತು ಒಳಗಿಂದೊಳಗೆ ಜೀವಂತವಾಗಿರುತ್ತದೆ. ಶ್ರೀಮಂತರೂ ಬಡವರೂ ಇದಕ್ಕೆ ಹೊರತಾಗಿಲ್ಲ. ಧರ್ಮಕ್ಕೆ ಸಿಗುವುದಿದ್ದರೆ ಶ್ರೀಮಂತರೂ ಬಡವರೂ ಒಂದೇ ಸಾಲಿನಲ್ಲಿ ಸೇರುತ್ತಾರೆ. ಅಂತಹ ಅನೇಕ ವಿದ್ಯಮಾನಗಳು ಕಾಣಸಿಗುತ್ತವೆ.
ಸರಕಾರವು ಮಹಿಳೆಯರಿಗೆ ಸರಕಾರಿ ಬಸ್ಸಿನಲ್ಲಿ ಉಚಿತ ಪ್ರಯಾಣದ ಸವಲತ್ತನ್ನು ನೀಡಿದಾಗ ಬೇಡವೆಂದವರು ಇದ್ದಾರೆಯೇ? “ನಾನು ಇಷ್ಟು ದಿನ ದುಡ್ಡು ಕೊಟ್ಟು ಪ್ರಯಾಣಿಸಿದ್ದೇನೆ. ನನ್ನಲ್ಲಿ ದುಡ್ಡಿದೆ. ಪುರುಷರಿಗೆ ಸಮಾನವಾಗಿ ನಾನು ಟಿಕೇಟು ಕೊಂಡುಕೊಳ್ಳುತ್ತೇನೆ” ಎಂದ ಮಹಿಳೆಯರು ಇದ್ದಾರೆಯೆ? ಒಂದು ವೇಳೆ ಇದ್ದರೂ ಅವರನ್ನು ಬುದ್ಧಿ ಇಲ್ಲದವರೆಂದು ಬುದ್ಧಿವಂತ ಮಹಿಳೆಯರು ಟೀಕಿಸದೆ ಇರಲಾರರು. ಅದೇ ರೀತಿ ಭಾಗ್ಯಲಕ್ಷ್ಮಿ ಯೋಜನೆಯಲ್ಲಿ ತಮ್ಮ ಖಾತೆಗೆ ಹಣ ಜಮೆಯಾಗುತ್ತದೆಯೇ ಎಂಬುದರ ಪರಿಶೀಲನೆಯನ್ನು ಪ್ರತಿಯೊಬ್ಬರೂ ಮಾಡಿರುತ್ತಾರೆ. ಇದು ಕೇವಲ ಹೆಂಗಸರ ವರ್ತನೆಯಲ್ಲ. ತಮ್ಮ ಮನೆಯವರಿಗೆ ಹಣ ಬರುತ್ತದೋ ಇಲ್ಲವೊ ಎಂಬುದನ್ನು ಗಂಡಸರೂ ಪರಿಶೀಲಿಸುತ್ತಾರೆ. ಹಾಗಾಗಿ ಇದು ವಯಸ್ಸಿನ ಹಾಗೂ ಗಂಡು ಹೆಣ್ಣೆಂಬ ಭೇದವಿಲ್ಲದೆ ಶ್ರೀಮಂತರಲ್ಲೂ ಬಡವರಲ್ಲೂ ಕಂಡು ಬರುವ ವರ್ತನೆಯಿದು. ಎಲ್ಲ ದೇಶಗಳ ಎಲ್ಲ ಮತದವರಲ್ಲಿಯೂ ಕಂಡು ಬರುವ ಪ್ರವೃತ್ತಿ ಇದು.
ಮತ್ಯಾಕೆ ಈ ಪ್ರಶ್ನೆ? ಎಂಬುದರ ಚರ್ಚೆ ಮುಂದೆ ಇದೆ. ದುಡ್ಡು ಕೊಡದೆ ಸಿಗುತ್ತದೆಂದಾದರೆ ತಾನೆಷ್ಟು ತೆಗೆದುಕೊಳ್ಳಬೇಕು? ತನಗೆಷ್ಟು ಬೇಕು? ಎಂಬುದರ ವಿವೇಚನೆ ಬೇಕೆಂಬುದು ಈ ಲೇಖನದ ಆಶಯ. ಸರಕಾರವು ಮಹಿಳೆಯರ ಖಾತೆಗೆ ಜಮೆ ಮಾಡುವ ಹಣಕ್ಕೊಂದು ಮಿತಿ ಇದೆ. ಹಾಗೆಯೇ  ವಿದ್ಯುತ್ ಬಿಲ್ ವಿನಾಯಿತಿಗೂ ಮಿತಿ ಇದೆ. ಆದರೆ ಉಚಿತ ಬಸ್ ಪ್ರಯಾಣಕ್ಕೆ ಮಿತಿ ಇಲ್ಲ. ಎಷ್ಟು ಸಲವೂ ಹೋಗಬಹುದು. ಎಲ್ಲಿ ಬೇಕಾದರೂ ಇಳಿಯಬಹುದು! ಮತ್ತೊಂದು ಬಸ್ಸ್‍ಗೆ ಬದಲಾಯಿಸಿ ಪ್ರಯಾಣಿಸಬಹುದು. ಈ ಬಗೆಯ ದುರುಪಯೋಗವು ಕಂಡಕ್ಟರ್ ಗಳ ಉದ್ಯೋಗಕ್ಕೆ ಸಂಚಕಾರ ತರುತ್ತದೆಂಬ ಆತಂಕದ ವಾರ್ತೆ ಪ್ರಕಟವಾಗಿದೆ. ಇದು ಸ್ವಂತಕ್ಕೂ ಹಾಳು, ವ್ಯವಸ್ಥೆಗೂ ಹಾಳು. ಅಂದರೆ ಉಚಿತ ಸೌಲಭ್ಯಗಳನ್ನು ಬಾಚಿಕೊಳ್ಳುವುದರಲ್ಲಿ ಸಂಯಮವಿರಬೇಕು.
ನಾನು 1981 ರಲ್ಲಿ ಮೊದಲ ಬಾರಿಗೆ ಅಮೇರಿಕಾಕ್ಕೆ ಹೋದಾಗಿನ ಒಂದು ಅನುಭವ ಹೀಗಿದೆ. ಅದೇ ಮೊದಲಿಗೆ ನನಗೆ ಬಫೆ ಸಿಸ್ಟಂನ ಪರಿಚಯವಾಗಿತ್ತು. ಖಾಲಿ ತಟ್ಟೆಯಲ್ಲಿ ಸ್ಫೂನ್‍ಗಳನ್ನು ಎತ್ತಿಕೊಂಡು ಅಲ್ಲಿದ್ದ ಆಹಾರ ಪದಾರ್ಥಗಳನ್ನು ನನಗೆ ಬೇಕಾದಷ್ಟು ಹಾಕಿಕೊಂಡು ಬೆಳಗ್ಗಿನ ಉಪಾಹಾರಕ್ಕೆ ಸಿದ್ಧನಾಗಿದ್ದೆ. ಯಾವುದನ್ನು ಎಷ್ಟು ಹಾಕಿಕೊಳ್ಳಬೇಕು? ಅದರ ರುಚಿ ಹೇಗಿರಬಹುದು? ವೈವಿಧ್ಯಮಯ ಬ್ರೆಡ್‍ಗಳಲ್ಲಿ ಯಾವುದನ್ನು ಆಯ್ದುಕೊಳ್ಳಬೇಕು? ಇಡ್ಲಿ ಸಾಂಬಾರ್. ದೋಸೆ ಚಪಾತಿ ಇಲ್ಲದಿರುವಾಗ ಪರ್ಯಾಯ ಆಹಾರ ಪದಾರ್ಥಗಳು ಯಾವುವು? ಈ ಬಗ್ಗೆ ನಿರ್ಧರಿಸಲಾಗದೆ ಒಂದಿಷ್ಟು ಹಾಕಿಕೊಂಡು ಬಾಯಿಗಿಡಲು ಸಿದ್ಧನಾಗಿದ್ದೆ. ನಮ್ಮ ತಂಡದ ನಾಯಕ ರೊ| ಶಾಂತರಾಮ್‍ರವರು, “ಏನು ದಾಮ್ಲೆಯವರೇ, ಇಷ್ಟನ್ನು ನೀವು ತಿನ್ನಬಲ್ಲಿರಾ?” ಎಂದರು. “ಗೊತ್ತಿಲ್ಲ ಸರ್, ಯಾವುದರ ರುಚಿ ಏನೆಂದು ಗೊತ್ತಿಲ್ಲ. ತಿಂದೇ ತಿಳಿಯಬೇಕಷ್ಟೇ. ಚೆನ್ನಾಗಿಲ್ಲದಿದ್ದರೆ ಎಸೆಯುವುದು” ಎಂದೆ. “ಹಾಗೆಲ್ಲ ಆಗುವುದಿಲ್ಲ. ನೀವು ಹಾಕಿಕೊಂಡ ಬಳಿಕ ತಿನ್ನಲೇ ಬೇಕು. ಇಲ್ಲಿ ಆಹಾರವನ್ನು ಬಿಸಾಡುವಂತಿಲ್ಲ” ಎಂದರು. ಮತ್ತೆ ಅದಕ್ಕಿದ್ದ ಪರಿಹಾರ ಒಂದೇ, ಸ್ವಲ್ಪವೇ ಹಾಕಿಕೊಂಡು ರುಚಿ ನೋಡಿ ಇಷ್ಟವಾದದ್ದನ್ನು ಬೇಕಾದಷ್ಟು ಹಾಕಿಕೊಂಡು ತಿನ್ನುವುದು. ಅಂದರೆ ಕೈ ಹಾಕಿ ತೆಗೆದುಕೊಳ್ಳಲು ಸ್ವಾತಂತ್ರ್ಯ ಇದ್ದರೂ ಬೇಕಾದ್ದನ್ನು ಬೇಕಾದಷ್ಟೇ ತೆಗೆದುಕೊಳ್ಳುವ ಸಂಯಮ ಬೇಕು. ನಮಗೆ ಪರಿಚಯವೇ ಇಲ್ಲದ ಆಹಾರ ಪದಾರ್ಥಗಳಲ್ಲಿ ಯಾವುದನ್ನು ಆಯ್ಕೆ ಮಾಡಬೇಕೆಂಬ ಪರಿಜ್ಞಾನ ಇಲ್ಲದಿದ್ದರೆ ಕಷ್ಟವೇ. ಚೈನಾದಲ್ಲಿ ಒಮ್ಮೆ ನನಗೆ ಸಸ್ಯಾಹಾರದ ಐಟೆಂಗಳನ್ನು ಹುಡುಕಿ ಕೊಡಲು ಒಬ್ಬ ಭಾರತೀಯ ಮಿತ್ರ ನೆರವಾಗಿದ್ದರು. ಎಲ್ಲದರಲ್ಲೂ ಮಾಂಸವನ್ನು ಬೆರೆಸುವ ಅವರ ಜಾಣ್ಮೆಯಿಂದ ಬಚಾವಾಗುವುದು ಸುಲಭವಿರಲಿಲ್ಲ.
ಇದು ವಿದೇಶಗಳಲ್ಲಿ ಮಾತ್ರ ಎದುರಾಗುವ ಸಮಸ್ಯೆ ಅಲ್ಲ. ಭಾರತೀಯ ಪಂಚತಾರಾ ಹೋಟೇಲ್‍ಗಳಲ್ಲೂ ಸಮಸ್ಯೆಯಾಗ್ತದೆ. ನಾವೇ ಕೊಟ್ಟಿರುವ ದುಬಾರಿ ಬಾಡಿಗೆಯಲ್ಲಿBreakfast free ಎಂಬ ಆಮಿಷ ಇರುತ್ತದೆ. ಇಲ್ಲಿ ನಮ್ಮಿಷ್ಟದ ಇಡ್ಲಿ, ವಡೆ, ದೋಸೆ, ಅಪ್ಪಂ, ಪರೋಟಾ ಇತ್ಯಾದಿ ತಿಂಡಿಗಳು ತುಂಬಾ ಇರುವುದರಿಂದ ತಟ್ಟೆ ತುಂಬ ಹಾಕಿಕೊಂಡರೂ ಹೊಟ್ಟೆ ಬಿರಿಯ ತಿನ್ನುವುದಕ್ಕಾಗುವುದಿಲ್ಲ. ಇನ್ನು ಹಣ್ಣುಗಳನ್ನು ಸಾಕಷ್ಟು ಕತ್ತರಿಸಿ ಇಟ್ಟಿರುತ್ತಾರೆ. ಏನಿದ್ದರೂ ರುಚಿ ನೋಡುವ ನೆಪದಲ್ಲಿ ಹೆಚ್ಚು ಬಡಿಸಿಕೊಂಡು ಎಸೆಯುವಂತಿಲ್ಲ. ಅರ್ಥಾತ್ ಅಲ್ಲಿ ಸಿಗುತ್ತಿರುವುದು ಉಚಿತವೆಂದು ತಿಳಿದು ಅನುಚಿತವಾಗಿ ಬಡಿಸಿಕೊಳ್ಳುವಂತಿಲ್ಲ. ಇತ್ತೀಚೆಗೆ ವಿವಾಹ ಮಹೋತ್ಸವಗಳಲ್ಲಿ, ಗಣೇಶೋತ್ಸವ ಹಾಗೂ ಇನ್ನಿತರ ಸಾರ್ವಜನಿಕ ಸಂತರ್ಪಣೆಯ ಸಂದರ್ಭದಲ್ಲಿ ಬಫೆ ಸಿಸ್ಟಂ ಇರುತ್ತದೆ. ಈಗ ಜನರಿಗೆ ಬೇಕಷ್ಟೇ ಬಳಸಿಕೊಂಡು ಸಾಕಷ್ಟು ಉಣ್ಣುವ ಅಭ್ಯಾಸ ಬಂದಿದೆ.  ಆದರೆ ಕೆಲವೊಮ್ಮೆ ಬಳಸಲು ನಿಂತವರಿಗೆ ಕೈ ಹಿಡಿತವಿಲ್ಲದಿದ್ದರೆ ಕಷ್ಟ. ಅಗತ್ಯಕ್ಕಿಂತ ಹೆಚ್ಚು ಬಡಿಸಿಬಿಡುತ್ತಾರೆ.
ಇತ್ತೀಚೆಗೆ ತಿನ್ನುವ ಐಟಂಗಳಲ್ಲಿ ಅಸಾಧಾರಣ ವೈವಿಧ್ಯತೆ ತಂದು ತಮ್ಮ ಸಂಪತ್ತಿನ ಹಿರಿಮೆಯನ್ನು ಪ್ರಕಟಿಸುವ ಖಯಾಲಿ ಶ್ರೀಮಂತರಲ್ಲಿ ಹೆಚ್ಚಿದೆ. ಅಂತಹ ಸಂದರ್ಭಗಳಲ್ಲಿ ಆಹಾರದ ಆಯ್ಕೆಯಲ್ಲಿ ಗಲಿಬಿಲಿಗೊಳ್ಳುವ ಅತಿಥಿಗಳು ಬೇಡದ್ದನ್ನು ಹೊಟ್ಟೆಗೆ ತುಂಬಿಸಿಕೊಂಡು ಬೇಕಾದ್ದಕ್ಕೆ ಜಾಗ ಉಳಿಸಿಕೊಳ್ಳದೆ ಅಸಂತುಷ್ಟರಾಗಿ ಹಿಂದಿರುಗುವ ಪ್ರಮೇಯ ಉಂಟಾಗುತ್ತದೆ. ಹಾಗಾಗಿ  ಔತಣದ ಏರ್ಪಾಡಿನಲ್ಲಿಯೂ ಸಂಯಮ ಅಗತ್ಯ. ತಿಂದದ್ದಕ್ಕಿಂತ ಬಿಸಾಡಿದ್ದೇ ಹೆಚ್ಚಾದಾಗ ಬಂದವರಿಗೂ ಬರಿಸಿದವರಿಗೂ ಲಾಭಕ್ಕಿಂತ ನಷ್ಟವೇ ಹೆಚ್ಚು.
“ಹಣ ಕೊಡ್ಬೇಕಾಗಿಲ್ಲವೆಂದಾದರೆ ಇರಲಿ, ಕುಡಿಯೋಣ” ಎಂಬ ಮಾತು ಒಂದು ವಿವಾಹ ಸಮಾರಂಭದ ಅಂಗಳದಲ್ಲಿ ಕೇಳಿ ಬಂತು. ಅಲ್ಲಿ ಒಂದು ಗಾಡಿಯಲ್ಲಿ ವಿವಿಧ ಬಗೆಯ ಶರಬತ್‍ಗಳನ್ನು ವಿತರಿಸುತ್ತಿದ್ದರು. ಆದರೆ ಅದನ್ನು ನಿಲ್ಲಿಸಿದ್ದ ಜಾಗೆಯು ವಿವಾಹದ ಆತಿಥೇಯರಿದ್ದೊ ಅಥವಾ ಖಾಸಗಿಯೋ ಎಂಬುದು ಸಂಶಯಕ್ಕೆಡೆ ಮಾಡಿತ್ತು. ನಾನು ಹೋದಾಗ ಹೆಂಗಸರ ಒಂದು ಗುಂಪು ಅದನ್ನೇ ನೋಡುತ್ತ ಅದರ ಬಗ್ಗೆ ಕುತೂಹಲ ವ್ಯಕ್ತಪಡಿಸಿದರು. ಅದು ಜಿಂಜರ್, ಲಿಂಬೆ, ಆರೆಂಜ್, ಅನನಾಸು ಇತ್ಯಾದಿ ಜ್ಯೂಸ್‍ಗಳ ವಿತರಣೆ. ಅತಿಥಿಗಳ ಬಾಯಾರಿಕೆಗೆ ಮೊದಲ ಪೇಯವನ್ನು ನೀಡಲು ವ್ಯವಸ್ಥೆಗೊಳಿಸಲಾಗಿತ್ತು. “ಬನ್ನಿ, ತೆಗೆದುಕೊಳ್ಳಿ” ಎಂದು ಕರೆದೆ. “ಅದಕ್ಕೆ ಹಣಕೊಡ್ಬೇಕಲ್ವಾ” ಎಂಬ ಒಂದು ಧ್ವನಿ ಗುಂಪಿನಿಂದ ಕೇಳಿತು. “ಇಲ್ಲಪ್ಪಾ, ಇದು ಹೆಣ್ಣಿನ ಕಡೆಯವರದ್ದೇ ವ್ಯವಸ್ಥೆ. ನೀವು ಬೇಕಾದ್ದನ್ನು ಬೇಕಾದಷ್ಟು ಕುಡಿಯಬಹುದು” ಎಂದೆ. “ಹೌದೇ, ಹಾಗಿದ್ರೆ ತೆಗೆದುಕೊಳ್ಳುವಾ. ನಾವು ಹಣಕೊಡ್ಬೇಕಿದ್ರೆ ಸುಮ್ಮನೆ ಯಾಕೆ ಕುಡಿಯೋದು ಎಂತ ಅಮರಿದೆವು” ಎನ್ನುತ್ತ ಸಮೀಪಕ್ಕೆ ಬಂದ ಗುಂಪಿನವರು ಬೇರೆ ಬೇರೆ ಪೇಯಗಳ ರುಚಿ ನೋಡಿ ಅದು ಒಳ್ಳೇದುಂಟು, ಇದು ಒಳ್ಳೇದುಂಟು ಎನ್ನುತ್ತ ನಾಲ್ಕೈದು ಪೇಯಗಳನ್ನು ಕುಡಿದರು. ತಾವು ಪೇಯವನ್ನು ಕುಡಿದ ಪ್ರತಿಯೊಬ್ಬರೂ ಸರಾಸರಿ ನಾಲ್ಕೈದು ಪ್ಲಾಸ್ಟಿಕ್ ಲೋಟೆಗಳನ್ನು ಕಸದ ಬುಟ್ಟಿಗೆ ಎಸೆದರು. ಹೀಗೆ ಕುಡಿಯುವಾಗ “ಧರ್ಮಕ್ಕೆ ಸಿಗುತ್ತದೆಂದರೆ ಕುಡಿಯುವುದಕ್ಕೇನು?” ಎಂಬ ಸಮಜಾಯಿಸಿಯೂ ಅವರ ಮಾತುಕತೆಯಲ್ಲಿ ಕೇಳಿಬಂತು. ಅಂತೂ ದಣಿವಾರಿಸಿಕೊಂಡ ಅವರೆಲ್ಲ ಚಪ್ಪರದೊಳಗೆ ಹೋಗಿ ಕ್ಯೂ ನಿಂತು ಮದುಮಕ್ಕಳಿಗೆ ಶುಭಾಶಯ ಹೇಳಿ ಹೊರಗೆ ಬಂದರೂ ಮಿಶ್ರದ್ರಾವಣ ತುಂಬಿದ ಹೊಟ್ಟೆಯಲ್ಲಿ ಊಟಕ್ಕೆ ಜಾಗವಿರಲಿಲ್ಲ. “ಹಣ ಕೊಡದೆ ಸಿಗುತ್ತದೆಂದು ಸುಮ್ಮನೇ ಕುಡಿಯಬಾರದಿತ್ತು” ಎಂದು ಗೊಣಗುತ್ತಿದ್ದುದು ಕೂಡಾ ಕೇಳಿಸಿತು.   ಹಾಗಾಗಿ ದಾನವಿರಲಿ, ಉಚಿತ ಪ್ರಸಾದವಾಗಿರಲಿ ನಾಲಿಗೆ ರುಚಿಗೆ ಪಕ್ಕಾಗಿ ಸಿಕ್ಕಿಬೀಳಬಾರದು.
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಡಾ.ಚಂದ್ರಶೇಖರ ದಾಮ್ಲೆ

ಡಾ. ಚಂದ್ರಶೇಖರ ದಾಮ್ಲೆಯವರು ಸುಳ್ಯದ ನೆಹರು ಮೆಮೋರಿಯಲ್ ಕಾಲೇಜ್ ನಲ್ಲಿ ಸಮಾಜಶಾಸ್ತ್ರ ಪ್ರಾಧ್ಯಾಪಕರಾಗಿ 35 ವರ್ಷಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದವರು. ವೃತ್ತಿಯಲ್ಲಿರುವಾಗಲೇ ರಾಷ್ಟ್ರೀಯ ಸೇವಾ ಯೋಜನಾಧಿಕಾರಿಯಾಗಿ ಸಮಾಜಸೇವೆಯಲ್ಲಿ ತೊಡಗಿಕೊಂಡವರು. ಸಾಂಸ್ಕೃತಿಕ ಸಂಘದ ಮೂಲಕ ಮಕ್ಕಳಿಗೆ ಯಕ್ಷಗಾನ ನಿರ್ದೇಶಕನ, ಸುಳ್ಯದಲ್ಲಿ ಯಕ್ಷಗಾನ ಹಿತರಕ್ಷಣಾ ವೇದಿಕೆಯ ಸ್ಥಾಪನೆ, ಸಂಪೂರ್ಣ ಸಾಕ್ಷರತಾ ಆಂದೋಲನದಲ್ಲಿ ಸಂಪನ್ಮೂಲ ವ್ಯಕ್ತಿ, ಕನ್ನಡಮಾಧ್ಯಮದಲ್ಲಿ ಸ್ನೇಹ ಶಿಕ್ಷಣ ಸಂಸ್ಥೆಯ ಸ್ಥಾಪನೆ ಮುಂತಾದ ಸಮಾಜಮುಖಿ ಕಾರ್ಯಗಳಲ್ಲಿ ಸೇವೆ ನೀಡಿದವರು. ಶಿಕ್ಷಣದಲ್ಲಿ ಸೃಜನಶೀಲತೆಗೆ ಒತ್ತು ನೀಡುವ ದಾಮ್ಲೆಯವರು ಸಂಶೋಧಕರಾಗಿದ್ದು ಕನ್ನಡ ಇಂಗ್ಲಿಷ್ ಭಾಷೆಗಳಲ್ಲಿ ಕೃತಿ ರಚನೆ ಮಾಡಿದವರು. 'ನೆಲದನಂಟು' ಮತ್ತು "ಶಾಲೆ ಎಲ್ಲಿದೆ?" ಇವು ಇವರ ಪ್ರಸಿದ್ಧ ಕಾದಂಬರಿಗಳು. ಅನೇಕ ಪ್ರಶಸ್ತಿ ಸಮ್ಮಾನಗಳಿಂದ ಗೌರವಿಸಲ್ಪಟ್ಟ ದಾಮ್ಲೆಯವರಿಗೆ ಅಸಾಮಾನ್ಯ ಕನ್ನಡಿಗ ಪ್ರಶಸ್ತಿ, ಯಕ್ಷಮಂಗಳ ಪ್ರಶಸ್ತಿ, ಅರಣ್ಯಮಿತ್ರ ಮತ್ತು ಜಲಮಿತ್ರ ಪ್ರಶಸ್ತಿ, Nation Builder ಪ್ರಶಸ್ತಿ ಮುಂತಾದುವು ಲಭಿಸಿವೆ. ಹೊಸದಿಗಂತ ಪತ್ರಿಕೆಯಲ್ಲಿ "ಇದ್ಯಾಕೆ ಹೀಗೆ " ಅಂಕಣವನ್ನು ಬರೆಯುತ್ತಿದ್ದರು.

Published by
ಡಾ.ಚಂದ್ರಶೇಖರ ದಾಮ್ಲೆ

Recent Posts

ಯುದ್ಧ ಆದರೆ ಕೃಷಿ ಉತ್ಪನ್ನಗಳ ಧಾರಣೆ ಏನಾಗಬಹುದು?

ಯುದ್ಧ ಆದರೆ ಅಥವಾ ಬಿಗುವಿನ ವಾತಾವರಣ ನಿರ್ಮಾಣವಾದರೆ ತಾತ್ಕಾಲಿಕವಾಗಿ ಎಲ್ಲಾ ಉತ್ಪನ್ನಗಳ ಮಾರುಕಟ್ಟೆಗಳು…

10 hours ago

ಪ್ರೀತಿಯ ಹಂಬಲ ಇರುವ, ವಯಸ್ಸಾದ, ಅನುಭವ ಹೊಂದಿದ ವ್ಯಕ್ತಿಗಳನ್ನು ಗೌರವಿಸುವ 5 ರಾಶಿಯ ಹುಡುಗಿಯರು |

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರಾದ ಜ್ಯೋತಿಷ್ಗಳನ್ನು ಸಂಪರ್ಕಿಸಿ 9535156490

10 hours ago

ಮಂಗಳೂರು | ರಾಷ್ಟ್ರೀಯ ಚೆಸ್ ಪಂದ್ಯಾಟ ಇಂದು ಸಮಾರೋಪ

ಮಂಗಳೂರು ಟೌನ್ ಹಾಲ್ ನಲ್ಲಿ ಶನಿವಾರದಿಂದ ನಡೆಯುತ್ತಿದ್ದ ರಾಷ್ಟ್ರೀಯ ಓಪನ್ ಕ್ಲಾಸಿಕಲ್ ರೇಟೆಡ್…

10 hours ago

ಸಹಜ ಸಾವನ್ನಪ್ಪುವ ಕಾಡುಪ್ರಾಣಿಗಳನ್ನು ಸುಡುವಂತಿಲ್ಲ | ಪ್ರಕೃತಿ ಚಕ್ರ ಕಾಪಾಡಲು ಸಹಕಾರಿ | ರಾಜ್ಯ ಸರ್ಕಾರದಿಂದ ಸುತ್ತೋಲೆ

ರಾಜ್ಯದ ವಿವಿಧ ಅರಣ್ಯ ಪ್ರದೇಶಗಳಲ್ಲಿ ಸಹಜವಾಗಿ ಸಾವನ್ನಪ್ಪುವ ಕಾಡುಪ್ರಾಣಿಗಳ ಕಳೇಬರವನ್ನು ಸುಡದೆ ಕಾಡಿನಲ್ಲಿಯೇ…

19 hours ago

ಬದರೀನಾಥ ಧಾಮ ಯಾತ್ರಾ ಆರಂಭ | ಭಾರೀ ಪ್ರಮಾಣದಲ್ಲಿ ಆಗಮಿಸಿರುವ ಭಕ್ತರು | ಸುರಕ್ಷತೆಗಾಗಿಅರೆಸೇನಾ ಪಡೆ ನಿಯೋಜನೆ

ಉತ್ತರಾಖಂಡದ ಪ್ರಸಿದ್ಧ ಯಾತ್ರಾ ಕ್ಷೇತ್ರ ಬದರೀನಾಥ ಧಾಮವನ್ನು  ತೆರೆಯಲಾಗಿದೆ. ಮುಂಜಾನೆ 6 ಗಂಟೆಯ…

1 day ago

ಅರಣ್ಯ ಭೂಮಿ ಕಬಳಿಸಲು ಪ್ರಯತ್ನಿಸುತ್ತಿರುವವರ ವಿರುದ್ಧ ಕಾನೂನು ಕ್ರಮ – ಅರಣ್ಯ ಸಚಿವ ಈಶ್ವರ ಖಂಡ್ರೆ

ಅರಣ್ಯ ಪ್ರದೇಶದಲ್ಲಿ ಆಗಿರುವ ಅಕ್ರಮ ಮಂಜೂರಾತಿ ರದ್ದುಪಡಿಸಿ, ಅರಣ್ಯ ಭೂಮಿ ಕಬಳಿಸಲು ಪ್ರಯತ್ನಿಸುತ್ತಿರುವವರ…

1 day ago