ಅಯೋಧ್ಯೆ ರಾಮ ಮಂದಿರದ ಪ್ರತಿಷ್ಠಾಪನೆಗೆ ದೇಶ – ವಿದೇಶಗಳ ಜನರು ಕಾತುರದಿಂದ ಕಾಯುತ್ತಿದ್ದಾರೆ. ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಭವ್ಯವಾದ ರಾಮ ಮಂದಿರದ ಗರ್ಭಗುಡಿಯಲ್ಲಿ ಶ್ರೀರಾಮನ ಬಾಲರೂಪದ ವಿಗ್ರಹವನ್ನು ಪ್ರತಿಷ್ಠಾಪಿಸಲು ಸಿದ್ಧತೆಗಳು ಭರದಿಂದ ಸಾಗುತ್ತಿದೆ.
ಜನವರಿ ತಿಂಗಳ ಅಂತ್ಯದೊಳಗೆ, ಮಕರ ಸಂಕ್ರಮಣ ಕಳೆದ ಬಳಿಕ ವಾರದೊಳಗೆ ಅಯೋಧ್ಯೆ ಶ್ರೀರಾಮ ಮಂದಿರ ಉದ್ಘಾಟನೆ ನಡೆಯಲಿದೆ ಎಂದು ಅಯೋಧ್ಯೆ ಶ್ರೀ ರಾಮ ಮಂದಿರ ನಿರ್ಮಾಣ ಸಮಿತಿಯ ಸದಸ್ಯ, ಪೇಜಾವರ ಮಠದ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ತಿಳಿಸಿದರು. ಮಂಗಳೂರಿನಲ್ಲಿ ಮಾತನಾಡಿದ ಅವರು ಅಯೋಧ್ಯೆ ಶ್ರೀರಾಮ ಮಂದಿರ ನಿರ್ಮಾಣದ ಕಾರ್ಯ ಭರದಿಂದ ಸಾಗುತ್ತಿದೆ. ಮಕರ ಸಂಕ್ರಾಂತಿ ಕಳೆದು ಒಂದು ವಾರದೊಳಗೆ ಅಂದರೆ ಜನವರಿ ತಿಂಗಳ ಅಂತ್ಯದೊಳಗೆ ಶ್ರೀರಾಮ ಮಂದಿರದ ಉದ್ಘಾಟನೆ ನಡೆಯಲಿದೆ. ಬಗ್ಗೆ ಉದ್ಘಾಟನೆ ದಿನ ಶೀಘ್ರದಲ್ಲೇ ನಿಗದಿಯಾಗಲಿದೆ ಎಂದು ಅವರು ತಿಳಿಸಿದರು.
ಅಯೋಧ್ಯೆ ಶ್ರೀರಾಮ ಮಂದಿರ ದಲ್ಲಿ ಇತರ ದೇವಸ್ಥಾನಗಳಂತೆ ಸೇವೆಯ ಪಟ್ಟಿ ಇರುವುದಿಲ್ಲ . ಸಾಮಾನ್ಯವಾಗಿ ಭಕ್ತರು ದೇವಸ್ಥಾನಗಳಿಗೆ ಹೋದಾಗ ಅಲ್ಲಿನ ಸೇವೆಯ ಪಟ್ಟಿಯನ್ನು ನೋಡಿ ದೇವಸ್ಥಾನದಲ್ಲಿ ಸೇವೆ ನೀಡುತ್ತಾರೆ. ಆದರೆ ಈ ರೀತಿಯ ವ್ಯವಸ್ಥೆ ಅಯೋಧ್ಯೆ ಶ್ರೀ ರಾಮ ಮಂದಿರ ದಲ್ಲಿ ಇರುವುದಿಲ್ಲ. ದೇವರಿಗೆ ಕಾಣಿಕೆ ಸಮರ್ಪಿಸುವವರು ರಾಮ ರಾಜ್ಯದ ಕನಸು ನನಸು ಗೊಳಿಸಲು ನೀಡುವ ಕಾಣಿಕೆ ಆಗಿದೆ. ಬದುಕಿನಲ್ಲಿ ಒಬ್ಬನಿಗೆ ಹತ್ತು ಲಕ್ಷ ರೂ ಖರ್ಚು ಮಾಡುವ ಸಾಮರ್ಥ್ಯ ಇದ್ದರೆ, ವಾಸಕ್ಕೆ ಮನೆ ಇಲ್ಲದವನಿಗೆ ಮನೆ ನಿರ್ಮಾಣ ಮಾಡಿ ಕೊಡುವುದು, ಆರೋಗ್ಯ ಶಿಕ್ಷಣದಂತಹ ಕೊಡುಗೆಗಳನ್ನು ಆತನ ಸಂಪತ್ತಿಗೆ ತಕ್ಕಂತೆ ನೀಡಿ ರಾಮ ರಾಜ್ಯದ ಕನಸು ನನಸು ಮಾಡಿದರೆ ಅದುವೆ ನೀಡುವ ಸೇವೆ ಆಗಿದೆ ಎಂದು ತಿಳಿಸಿದರು.
ಶ್ರೀ ರಾಮ ಮಂದಿರದಲ್ಲಿ ಯಾವುದೇ ಸೇವೆಯು ಭಕ್ತರಿಗೆ ಇರದೆ ಇದ್ದರೂ ಭಕ್ತರೂ ತಮ್ಮ ಇಷ್ಟಾನುಸಾರ ಕಾಣಿಕೆಗಳನ್ನು ಕಾಣಿಕೆ ಡಬ್ಬಿಗೆ ಹಾಕಬಹುದು ಎಂದರು. ಶ್ರೀ ರಾಮ ಮಂದಿರ ವಿಚಾರದಲ್ಲಿ ರಾಜಕೀಯ ಪಕ್ಷಗಳು ವೋಟ್ ಬ್ಯಾಂಕ್ ರಾಜಕೀಯ ಮಾಡುತ್ತಿರುವ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು ಅದಕ್ಕೂ ನನಗೂ ಸಂಬಂಧ ಇಲ್ಲ. ರಾಮ ಸೇವೆ ಮಾಡುವುದೆ ದೇಶ ಸೇವೆ. ಯಾರೂ ಏನೂ ಬೇಕಾದರೂ ಮಾಡಲಿ ಎಂದರು.