ಹಾಲಿನ ದರವನ್ನ 4 ರೂ. ಹೆಚ್ಚಳ ಮಾಡಿರುವ ಸರ್ಕಾರದ ನಿರ್ಧಾರವನ್ನ ಮೈಮುಲ್ ಅಧ್ಯಕ್ಷ ಚೆಲುವರಾಜು ಸಮರ್ಥಿಸಿಕೊಂಡಿದ್ದಾರೆ. ಈ ಕುರಿತು ಮಾತನಾಡಿದ ಮೈಮುಲ್ ಅಧ್ಯಕ್ಷ ಚೆಲುವರಾಜು, ಯುಗಾದಿ ಹಬ್ಬದ ಸಂದರ್ಭದಲ್ಲಿ ಸರ್ಕಾರ ರೈತರಿಗೆ ವಿಶೇಷ ಕೊಡುಗೆ ನೀಡಿದೆ. ರೈತರ ಹಿತದೃಷ್ಟಿಯಿಂದ ಸರ್ಕಾರ ಒಳ್ಳೆಯ ನಿರ್ಧಾರ ಕೈಗೊಂಡಿದೆ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಂದಿನಿ ಹಾಲಿನ ಬೆಲೆ ಕಡಿಮೆ ಇದೆ. ಕೇರಳ, ತಮಿಳುನಾಡು, ಗುಜರಾತ್ ಭಾಗದಲ್ಲಿ ಸಾಮಾನ್ಯ ಹಾಲಿಗೆ 54 ರೂ ಇದೆ. ರಾಜ್ಯದಲ್ಲಿ ಬೆಲೆ ಏರಿಕೆ ಮಾಡಿದರೂ ಸಾಮಾನ್ಯ ಹಾಲಿಗೆ 46 ರೂ ಇದೆ. ರೈತರು ಖರೀದಿಸುವ ಹುಲ್ಲು, ಇಂಡಿ, ಬೂಸ, ರಾಸುಗಳ ಸಾಕಾಣಿಕೆ ವೆಚ್ಚ, ದುಪ್ಪಾಟಾಗಿದೆ. ಹೈನೋದ್ಯಮ ಉತ್ತೇಜನಕ್ಕೆ ಇದು ಉತ್ತಮ ನಿರ್ಧಾರ ಎಂದರು.
ನಂದಿನಿ, ರೈತರಿಗಾಗಿ ಇರುವ ಸಂಸ್ಥೆಯಾಗಿದ್ದು, ಪರಿಶುದ್ಧ ಹಾಲನ್ನು ಒದಗಿಸುತ್ತದೆ. 4 ರೂಪಾಯಿ ನೇರವಾಗಿ ರೈತರಿಗೆ ತಲುಪಿಸಲಾಗುತ್ತದೆ. ಸಂಸ್ಥೆ ಆರ್ಥಿಕ ಸಂಕಷ್ಟದಲ್ಲೇನು ಇಲ್ಲ. ಈ ವರ್ಷ ವಾರ್ಷಿಕ 6 ರಿಂದ 7 ಕೋಟಿ ಲಾಭದಲ್ಲಿ ಇದೆ ಎಂದು ಮೈಸೂರು ಹಾಲು ಒಕ್ಕೂಟದ ಅಧ್ಯಕ್ಷ ಚೆಲುವರಾಜು ಹೇಳಿದರು.
ಬೇಸಿಗೆ ಸಂದರ್ಭದಲ್ಲಿ ನಂದಿನಿ ಮಜ್ಜಿಗೆ, ಮೊಸರು,ಲಸ್ಸಿ, ಬಾದಾಮ್ ಮಿಲ್ಕ್ ಸೇರಿದಂತೆ ತಂಪು ಪಾನೀಯಗಳ ಬೇಡಿಕೆ ದುಪ್ಪಟ್ಟಾಗಿದೆ. ಬೇಡಿಕೆಗೆ ಅನುಗುಣವಾಗಿ ಉತ್ಪಾದನೆಯಾಗುತ್ತಿದೆ. ಸಾಮಾನ್ಯ ದಿನಗಳಿಗಿಂತ ಬೇಸಿಗೆ ಸಂಧರ್ಭದಲ್ಲಿ ಪ್ರತಿದಿನ 1 ಲಕ್ಷ ಲೀಟರ್ ನಷ್ಟು ಮೊಸರು,ಮಜ್ಜಿಗೆ ಮಾರಾಟವಾಗುತ್ತದೆ. ಬೇಡಿಕೆ ಎಷ್ಷೇ ಬಂದರೂ ಪೂರೈಕೆ ಮಾಡುವ ನಿಟ್ಟಿನಲ್ಲಿ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ಮೈಮುಲ್ ಅಧ್ಯಕ್ಷ ಚೆಲುವರಾಜು ತಿಳಿಸಿದರು.