ಭಾರತದಲ್ಲಿ ನೈಋತ್ಯ ಮುಂಗಾರು ತೀವ್ರ ಕುಂಠಿತಗೊಂಡಿದ್ದು, ಜೂನ್ 1 ರಿಂದ 18 ರವರೆಗಿನ ಅವಧಿಯಲ್ಲಿ ದೇಶದ ಮಳೆ ಕೊರತೆ 40%ಕ್ಕೆ ಏರಿಕೆಯಾಗಿದೆ. ಉಪಗ್ರಹ ಚಿತ್ರಗಳಲ್ಲಿ ದೇಶದ ಪ್ರಮುಖ ಕೃಷಿ ಪ್ರದೇಶಗಳಾದ ಮಧ್ಯ ಭಾರತ, ಮಹಾರಾಷ್ಟ್ರ, ಮಧ್ಯಪ್ರದೇಶ, ಛತ್ತೀಸ್ಗಢ ಹಾಗೂ ಇತರೆ ಪ್ರಮುಖ ಕೃಷಿ ವಲಯಗಳಲ್ಲಿ ಮೋಡಗಳ ಪ್ರಮಾಣ ಅತ್ಯಂತ ಕಡಿಮೆಯಿರುವುದು ಕಂಡುಬಂದಿದೆ.
ಮುಂಗಾರು ಮಳೆ ಸಾಮಾನ್ಯವಾಗಿ ಜೂನ್ನಿಂದ ಸೆಪ್ಟೆಂಬರ್ವರೆಗೆ ದೇಶದ ಕೃಷಿಗೆ ಜೀವನಾಡಿಯಾಗಿರುತ್ತದೆ. ಆದರೆ ಈ ಬಾರಿ ಮುಂಗಾರು ಪ್ರಗತಿ ನಿಧಾನಗೊಂಡಿದ್ದು, ಬಿತ್ತನೆ ಚಟುವಟಿಕೆಗಳ ಮೇಲೆ ಪರಿಣಾಮ ಬೀರುವ ಆತಂಕ ಹೆಚ್ಚಾಗಿದೆ.
ಉಪಗ್ರಹ ಚಿತ್ರಗಳ ಪ್ರಕಾರ ದೇಶದ ಮಧ್ಯ ಭಾಗ ಮತ್ತು ದಕ್ಷಿಣ ಒಳನಾಡಿನ ಹಲವು ಪ್ರದೇಶಗಳಲ್ಲಿ ಮೋಡಗಳ ಚಟುವಟಿಕೆ ಕುಸಿದಿದ್ದು, ಮಳೆ ನೀಡುವ ಹವಾಮಾನ ವ್ಯವಸ್ಥೆಗಳು ದುರ್ಬಲಗೊಂಡಿವೆ. ಇದರ ಪರಿಣಾಮವಾಗಿ ಮಳೆ ಕೊರತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.
ಕೃಷಿ ಕ್ಷೇತ್ರಕ್ಕೆ ಎಚ್ಚರಿಕೆ : ಭಾರತದ ಖಾರಿಫ್ ಬೆಳೆಗಳಾದ ಭತ್ತ, ಮೆಕ್ಕೆಜೋಳ, ಸೋಯಾಬೀನ್, ಹತ್ತಿ, ಕಾಳುಬೆಳೆಗಳ ಬಿತ್ತನೆ ಮುಂಗಾರು ಮಳೆಯ ಮೇಲೆ ಅವಲಂಬಿತವಾಗಿದೆ. ಮಳೆ ವಿಳಂಬವಾದರೆ ಬಿತ್ತನೆ ವಿಸ್ತೀರ್ಣ ಕಡಿಮೆಯಾಗುವ ಸಾಧ್ಯತೆ ಇದೆ. ವಿಶೇಷವಾಗಿ ಮಳೆಆಧಾರಿತ ಕೃಷಿ ಪ್ರದೇಶಗಳಲ್ಲಿ ರೈತರ ಆತಂಕ ಹೆಚ್ಚಾಗಿದೆ.
ಹವಾಮಾನ ತಜ್ಞರ ಅಭಿಪ್ರಾಯ : ಹವಾಮಾನ ವ್ಯವಸ್ಥೆಗಳಿಗೆ ಬಲ ನೀಡುವ ವಾಯುಮಂಡಲದ ಅಸ್ಥಿರತೆಗಳು ಹಾಗೂ ಕಡಿಮೆ ಒತ್ತಡದ ಪ್ರದೇಶಗಳ ಕೊರತೆಯಿಂದ ಮುಂಗಾರು ದುರ್ಬಲಗೊಂಡಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಮುಂದಿನ ಕೆಲವು ದಿನಗಳಲ್ಲಿ ಹೊಸ ಹವಾಮಾನ ವ್ಯವಸ್ಥೆಗಳು ರೂಪುಗೊಂಡರೆ ಮಳೆ ಚಟುವಟಿಕೆ ಪುನಶ್ಚೇತನಗೊಳ್ಳುವ ಸಾಧ್ಯತೆ ಇದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ
ಕರ್ನಾಟಕದ ಕೃಷಿಕರು ಯಾಕೆ ಚಿಂತಿಸಬೇಕು? :
ಮಳೆ ಕೊರತೆ ಉಂಟಾದರೆ ರಾಜ್ಯದ ಕೃಷಿಕರು ಕೂಡಾ ಗಂಭಿರವಾಗಿ ಚಿಂತನೆ ನಡೆಸಬೇಕಾಗಿದೆ. ಈಗಾಗಲೇ ಬಿತ್ತನೆ ಮಾಡಿರುವ ಕೃಷಿಯ ಬಗ್ಗೆ ಹಾಗೂ ವಾರ್ಷಿಕ ಬೆಳೆಗಳ ಬಗ್ಗೆಯೂ ಕೃಷಿಕರು ಚಿಂತನೆ ನಡೆಸಬೇಕಿದೆ. ಮಳೆ ಕಡಿಮೆಯಾದರೆ ಬೆಳೆಯೇ ಇಲ್ಲವಾಗುವ ಸ್ಥಿತಿ ಇದೆ.
ಅಡಿಕೆ ಬೆಳೆಗಾರರು ಈಗಾಗಲೇ ಎಲೆಚುಕ್ಕೆರೋಗ ಮತ್ತು ಕೊಳೆರೋಗದ ಆತಂಕದಲ್ಲಿದ್ದಾರೆ. ಆದರೆ ನಿರಂತರ ಮಳೆಯ ಕೊರತೆಯಾದರೆ ತೋಟಗಳಲ್ಲಿ ತೇವಾಂಶ ಕಡಿಮೆಯಾಗಿ ಹೊಸ ರೀತಿಯ ಒತ್ತಡ ಉಂಟಾಗಬಹುದು. ನಂತರ ಏಕಾಏಕಿ ಭಾರೀ ಮಳೆ ಬಂದರೆ ರೋಗದ ತೀವ್ರತೆ ಹೆಚ್ಚುವ ಸಾಧ್ಯತೆ ಇರುತ್ತದೆ.
ಮಲೆನಾಡು ಭಾಗದಲ್ಲಿ ಜೂನ್-ಜುಲೈ ಮಳೆ ಕಾಫಿ ಮತ್ತು ಕರಿಮೆಣಸು ಬೆಳೆಗಳಿಗೆ ಅತ್ಯಂತ ಮುಖ್ಯ. ಮುಂಗಾರು ದುರ್ಬಲಗೊಂಡರೆ ಹೂವು, ಬೆಳವಣಿಗೆ ಹಾಗೂ ಉತ್ಪಾದನೆ ಮೇಲೆ ಪರಿಣಾಮ ಬೀಳಬಹುದು. ಅದಕ್ಕೇನು ಎಂಬುದರ ಬಗ್ಗೆಯೂ ಯೋಜನೆ ಅಗತ್ಯ.
ಈ ಪರಿಸ್ಥಿತಿಯಲ್ಲಿ ರೈತರು ತೋಟಗಳಲ್ಲಿ ಮಳೆನೀರು ಸಂಗ್ರಹ ವ್ಯವಸ್ಥೆ ಬಲಪಡಿಸಬೇಕು. ಮಲ್ಚಿಂಗ್ ಹೆಚ್ಚಿಸಬಹುದು. ಅಂದರೆ ತೋಟದಲ್ಲಿರುವ ಕಳೆಗಳನ್ನು ಈಗ ತೆಗೆಯುವುದು ಸದ್ಯಕ್ಕೆ ನಿಲ್ಲಿಸಬೇಕು. ನೀರಿನ ಬಳಕೆಯಲ್ಲಿ ಮಿತವ್ಯಯ ಅನುಸರಿಸಬೇಕು. ತೋಟದ ತೇವಾಂಶ ಕಾಪಾಡಲು ಸಾವಯವ ವಸ್ತುಗಳ ಬಳಕೆ ಹೆಚ್ಚಿಸಬೇಕು.
ಎಲ್ ನಿನೋ ಪರಿಣಾಮವೇ? : ಕೆಲವು ಹವಾಮಾನ ವಿಶ್ಲೇಷಕರು ಪೆಸಿಫಿಕ್ ಮಹಾಸಾಗರದ ತಾಪಮಾನ ಬದಲಾವಣೆ ಹಾಗೂ ಜಾಗತಿಕ ಹವಾಮಾನ ವ್ಯವಸ್ಥೆಗಳ ಪರಿಣಾಮದಿಂದ ಮುಂಗಾರು ದುರ್ಬಲಗೊಳ್ಳುತ್ತಿರುವ ಸಾಧ್ಯತೆಯನ್ನು ಸೂಚಿಸಿದ್ದಾರೆ. ಮುಂದಿನ ವಾರಗಳಲ್ಲಿ ಮಳೆಯ ಚಟುವಟಿಕೆ ಹೇಗಿರುತ್ತದೆ ಎಂಬುದು ಕೃಷಿ ಕ್ಷೇತ್ರದ ದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ
India’s southwest monsoon has slowed significantly, pushing the nationwide rainfall deficit to nearly 40%. Satellite images show limited cloud cover over major agricultural regions, raising concerns about delayed sowing, crop growth, and agricultural productivity if rainfall does not improve soon.
ಮುಂಗಾರು ಮಳೆ ಕೊರತೆ 40%ಕ್ಕೆ ಏರಿಕೆ – ದೇಶದ ಕೃಷಿಯ ಹೃದಯಭಾಗದಲ್ಲಿ ಮೋಡಗಳೇ ಇಲ್ಲ..! https://t.co/yUNjegPm8A #Monsoon2026 #RainfallDeficit #ClimateAlert #KharifSeason #FarmerNews #TheRuralMirror pic.twitter.com/rlFwnAwdaR
— theruralmirror (@ruralmirror) June 22, 2026
ಕರ್ನಾಟಕದಲ್ಲಿ ಮಳೆ ಕೊರತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪೂರ್ಣಾವಧಿ ಕೃಷಿ ಸಚಿವರನ್ನು ತಕ್ಷಣ ನೇಮಿಸಬೇಕು…
ವಿಶ್ವ ಯೋಗ ದಿನದ ಅಂಗವಾಗಿ ಕ್ಯಾಂಪ್ಕೊ ಚಾಕಲೇಟ್ ಕಾರ್ಖಾನೆ ಉದ್ಯೋಗಿಗಳ ರಿಕ್ರಿಯೇಷನ್ ಸೆಂಟರ್…
ಕೇರಳ ಸರ್ಕಾರ ರಬ್ಬರ್ ಬೆಂಬಲ ಬೆಲೆಯನ್ನು ₹200ರಿಂದ ₹250ಕ್ಕೆ ಹೆಚ್ಚಿಸಿದೆ. ಮಾರುಕಟ್ಟೆ ಬೆಲೆ…
ಮೂರು ವರ್ಷಗಳಲ್ಲಿ ದೇಶದ ಅರಣ್ಯ ಪ್ರದೇಶಗಳಲ್ಲಿ 28 ಲಕ್ಷಕ್ಕೂ ಹೆಚ್ಚು ಮರಗಳನ್ನು ಕಡಿಯಲು…
ಜೂನ್ 30ರೊಳಗೆ LPG e-KYC ಪೂರ್ಣಗೊಳಿಸುವಂತೆ ಗ್ರಾಹಕರಿಗೆ ಸೂಚನೆ ನೀಡಲಾಗಿದೆ. e-KYC ಬಾಕಿ…
ಮಹಾರಾಷ್ಟ್ರದಲ್ಲಿ ಅಡಿಕೆ ಸಾಗಾಟದ ವಿರುದ್ಧ ಕಠಿಣ ಕ್ರಮಗಳ ಆತಂಕದ ಹಿನ್ನೆಲೆಯಲ್ಲಿ ಕರ್ನಾಟಕ ಅಡಿಕೆ…