ಅಫ್ಘಾನಿಸ್ತಾನಕ್ಕೆ 20,000 ಮೆ. ಟನ್ ಗೋಧಿ ಕಳುಹಿಸಲಿದೆ ಭಾರತ | ಸಂತ್ರಸ್ತರ ಜೊತೆ ನಿಲ್ಲಲು ಭಾರತ ನಿರ್ಧಾರ

March 8, 2023
1:40 PM

ವಿದೇಶದಲ್ಲಿ ಯಾವುದೇ ತೊಂದರೆಯಾದರೂ ಅದಕ್ಕೆ ಸಾಥ್ ನೀಡಲು ಭಾರತ ಸದಾ ಮುಂದೆ ನಿಲ್ಲುತ್ತದೆ. ಶತ್ರು ದೇಶವಾದ ಪಾಕಿಸ್ತಾನವಾದ್ರೂ ಸೈ, ಅತ್ತ ಮಿತ್ರ ದ್ರೋಹಿ ಟರ್ಕಿಯಾದರು ಸರಿ….ಇದೀಗ ಸಹಾಯ ರೂಪದಲ್ಲಿ ಅಫ್ಘಾನಿಸ್ತಾನಕ್ಕೆ 20,000 ಮೆಟ್ರಿಕ್ ಟನ್ ಗೋಧಿಯನ್ನು ಸರಬರಾಜು ಮಾಡುವುದಾಗಿ ಭಾರತ ಘೋಷಿಸಿದೆ. ಸರಕುಗಳನ್ನು ಇರಾನ್‌ನ ಚಬಹಾರ್ ಬಂದರಿನ ಮೂಲಕ ಕಳುಹಿಸಲಾಗುವುದು ಎಂದು ಕೇಂದ್ರ ಸರಕಾರ ಹೇಳಿದೆ.

ಅಫ್ಘಾನಿಸ್ತಾನದ ಕುರಿತಾದ ಭಾರತ-ಮಧ್ಯ ಏಷ್ಯಾ ಜಂಟಿ ಕಾರ್ಯನಿರತ ಗುಂಪಿನ ಮೊದಲ ಸಭೆಯಲ್ಲಿ ಭಾರತ ಈ ಘೋಷಣೆ ಮಾಡಿದೆ. ಅಫ್ಘಾನಿಸ್ತಾನದ ಮಣ್ಣನ್ನು ಯಾವುದೇ ಭಯೋತ್ಪಾದಕ ಚಟುವಟಿಕೆಗಳಿಗೆ ಬಳಸಬಾರದು ಎಂದು ಭಾರತ ಮತ್ತು ಐದು ಮಧ್ಯ ಏಷ್ಯಾ ರಾಷ್ಟ್ರಗಳು ಮಂಗಳವಾರ ಪ್ರತಿಪಾದಿಸಿವೆ ಹಾಗೈ ಮಹಿಳೆಯರು ಮತ್ತು ಅಲ್ಪಸಂಖ್ಯಾತರು ಸೇರಿದಂತೆ ಎಲ್ಲಾ ಆಫ್ಘನ್ನರ ಹಕ್ಕುಗಳನ್ನು ಗೌರವಿಸುವ ರಾಜಕೀಯ ರಚನೆಯನ್ನು ರೂಪಿಸಲು ಕರೆ ನೀಡಿವೆ.

ದೆಹಲಿಯಲ್ಲಿ ನಡೆದ ಅಫ್ಘಾನಿಸ್ತಾನ ಕುರಿತಾದ ಭಾರತ-ಮಧ್ಯ ಏಷ್ಯಾ ಜಂಟಿ ಕಾರ್ಯಕಾರಿ ಗುಂಪಿನ ಮೊದಲ ಸಭೆಯಲ್ಲಿ ಯುದ್ಧದಿಂದ ಧ್ವಂಸಗೊಂಡಿರುವ ಅಫ್ಘಾನಿಸ್ತಾನದ ಪರಿಸ್ಥಿತಿಯ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು.

ಎಲ್ಲಾ ಆಫ್ಘನ್ನರ ಹಕ್ಕುಗಳನ್ನು ಗೌರವಿಸುವ ಮತ್ತು ಶಿಕ್ಷಣದ ಪ್ರವೇಶ ಸೇರಿದಂತೆ ಮಹಿಳೆಯರು, ಹುಡುಗಿಯರು ಮತ್ತು ಅಲ್ಪಸಂಖ್ಯಾತ ಗುಂಪುಗಳ ಸದಸ್ಯರ ಸಮಾನ ಹಕ್ಕುಗಳನ್ನು ಖಾತ್ರಿಪಡಿಸುವ ನಿಜವಾದ ಅಂತರ್ಗತ ಮತ್ತು ಪ್ರಾತಿನಿಧಿಕ ರಾಜಕೀಯ ರಚನೆ ಮುಖ್ಯವಾಗಿದೆ ಎಂದು ಜಂಟಿ ಹೇಳಿಕೆಯಲ್ಲಿ ಹೇಳಲಾಗಿದೆ. ಡಿಸೆಂಬರ್‌ನಲ್ಲಿ, ಅಫ್ಘಾನಿಸ್ತಾನದಲ್ಲಿ ಮಹಿಳೆಯರಿಗೆ ವಿಶ್ವವಿದ್ಯಾನಿಲಯ ಶಿಕ್ಷಣವನ್ನು ನಿಷೇಧಿಸುವ ತಾಲಿಬಾನ್ ನಿರ್ಧಾರವನ್ನು ಭಾರತ ಸೇರಿದಂತೆ ಇತರ ಹಲವಾರು ದೇಶಗಳೊಂದಿಗೆ ಟೀಕಿಸಿದೆ.

ಸಭೆಯಲ್ಲಿ ಅಧಿಕಾರಿಗಳು ಭಯೋತ್ಪಾದನೆ, ಉಗ್ರವಾದ, ಮೂಲಭೂತವಾದ ಮತ್ತು ಮಾದಕವಸ್ತು ಕಳ್ಳಸಾಗಣೆಯ ಪ್ರಾದೇಶಿಕ ಬೆದರಿಕೆಗಳ ಬಗ್ಗೆಯೂ ಚರ್ಚಿಸಿದರು. ಈ ಬೆದರಿಕೆಗಳನ್ನು ಎದುರಿಸಲು ಪ್ರಯತ್ನಗಳನ್ನು ಸಂಘಟಿಸುವ ಸಾಧ್ಯತೆಗಳ ಬಗ್ಗೆಯೂ ಸಮಾಲೋಚನೆ ನಡೆಸಿದರು. ಅಫ್ಘಾನಿಸ್ತಾನದ ಪ್ರದೇಶವನ್ನು ಯಾವುದೇ ಭಯೋತ್ಪಾದಕ ಕೃತ್ಯಗಳಿಗೆ ಆಶ್ರಯ, ತರಬೇತಿ, ಯೋಜನೆ ಅಥವಾ ಹಣಕಾಸು ಒದಗಿಸಲು ಬಳಸಬಾರದು ಎಂದು ಈ ದೇಶಗಳು ಒತ್ತಾಯಿಸಿವೆ.

ಆತಿಥೇಯ ಭಾರತವಲ್ಲದೆ, ಕಝಾಕಿಸ್ತಾನ್, ಕಿರ್ಗಿಜ್ ಗಣರಾಜ್ಯ, ತಜಿಕಿಸ್ತಾನ್, ತುರ್ಕಮೆನಿಸ್ತಾನ್ ಮತ್ತು ಉಜ್ಬೇಕಿಸ್ತಾನ್‌ನ ವಿಶೇಷ ರಾಯಭಾರಿಗಳು ಅಥವಾ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು. ಸಭೆಯಲ್ಲಿ ರಾಜಕೀಯ, ಭದ್ರತೆ ಮತ್ತು ಮಾನವೀಯ ಅಂಶಗಳು ಸೇರಿದಂತೆ ಅಫ್ಘಾನಿಸ್ತಾನದ ಪ್ರಸ್ತುತ ಪರಿಸ್ಥಿತಿಯ ಕುರಿತು ಅಧಿಕಾರಿಗಳು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು ಎಂದು ಜಂಟಿ ಹೇಳಿಕೆಯು ತಿಳಿಸಿದೆ.

ಆಗಸ್ಟ್ 2021ರಲ್ಲಿ ಕಾಬೂಲ್‌ನ ನಿಯಂತ್ರಣವನ್ನು ತಾಲಿಬಾನ್ ಕೈವಶ ಮಾಡಿಕೊಂಡ ಬಳಿಕ ತೀವ್ರ ಆಹಾರ ಬಿಕ್ಕಟ್ಟಿನಿಂದ ತತ್ತರಿಸುತ್ತಿದ್ದ ಆಫ್ಘನ್ ಜನರಿಗೆ ಭಾರತವು 50,000 ಮೆಟ್ರಿಕ್ ಟನ್ ಗೋಧಿಯ ಸಹಾಯವನ್ನು ಘೋಷಿಸಿತ್ತು. ಈ ವೇಳೆ ಪಾಕಿಸ್ತಾನದ ಮೂಲಕ ಭೂ ಮಾರ್ಗದಲ್ಲಿ ಸರಕುಗಳನ್ನು ಅಫ್ಘಾನಿಸ್ತಾನಕ್ಕೆ ಕಳುಹಿಸಲಾಗಿತ್ತು. ಹಲವಾರು ತಿಂಗಳುಗಳ ಕಾಲ ಚರ್ಚೆ ನಡೆಸಿದ ಬಳಿಕ ಪಾಕಿಸ್ತಾನ ಮೂಲಕ ಸರಕು ಸಾಗಣೆಗೆ ಅಲ್ಲಿನ ಸರಕಾರ ಅನುಮತಿ ನೀಡಿತ್ತು. ಆದರೆ ಈ ಬಾರಿ ನೇರವಾಗಿ ಇರಾನ್‌ ಮಾರ್ಗ ಬಳಸಲಾಗುತ್ತಿದೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಹವಾಮಾನ ಬದಲಾವಣೆಯಿಂದ ರೈತರ ರಕ್ಷಣೆಗೆ ಸರ್ಕಾರದ ತಂತ್ರ – 310 ಜಿಲ್ಲೆಗಳು ಅಪಾಯದಲ್ಲಿ, 2,661 ಸಹಿಷ್ಣು ತಳಿಗಳ ಅಭಿವೃದ್ಧಿ
August 12, 2026
8:24 PM
by: ದ ರೂರಲ್ ಮಿರರ್.ಕಾಂ
ಗುಟ್ಕಾ ನಿಷೇಧದ ಹೆಸರಿನಲ್ಲಿ ಅಡಿಕೆ ಬೆಳೆಗಾರರಿಗೆ ತೊಂದರೆ ಆಗದಂತೆ ಸರ್ಕಾರ ಸ್ಪಷ್ಟ ಮಾರ್ಗಸೂಚಿ ನೀಡಲಿ
August 12, 2026
8:03 PM
by: ದ ರೂರಲ್ ಮಿರರ್.ಕಾಂ
ತಂಬಾಕು ನಿಷೇಧ ಜಾರಿ: ಅಡಿಕೆ ಬೆಳೆಗಾರರ ಹಿತ ಕಾಪಾಡಲು ಸ್ಪಷ್ಟ ಚೌಕಟ್ಟು ರೂಪಿಸಿ – ಕ್ಯಾಂಪ್ಕೊ
August 12, 2026
7:50 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 12-08-2026 | ಕರ್ನಾಟಕದಲ್ಲಿ ಮುಂದುವರಿಯಲಿದೆ ಬಿಡುವಿನ ಮಳೆ
August 12, 2026
7:19 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror