ಜಮ್ಮು-ಕಾಶ್ಮೀರ ರಾಜ್ಯವನ್ನು ಕೇಂದ್ರಾಡಳಿತ ಪ್ರದೇಶವೆಂದು 2019ರಲ್ಲಿ ಘೋಷಿಸಿದ ಬಳಿಕ ಇದೇ ಮೊದಲ ಬಾರಿ ಪ್ರಧಾನಿ ನರೇಂದ್ರ ಮೋದಿ ಅಲ್ಲಿಗೆ ತೆರಳಿದ್ದು, ಭಾನುವಾರ ಔಪಚಾರಿಕವಾಗಿ ಸಾರ್ವಜನಿಕ ಸಮಾರಂಭದಲ್ಲಿ ಭಾಗಿಯಾದರು. ಈ ಸಂದರ್ಭದಲ್ಲಿ ಅವರು ಬನಿಹಾಲ್-ಖಾಝಿಗುಂಡ್ ಸುರಂಗ ಮತ್ತು ಎರಡು ಜಲವಿದ್ಯುತ್ ಯೋಜನೆಗಳು ಸೇರಿ 20,000 ಕೋಟಿ ರೂಪಾಯಿ ಯೋಜನೆಗಳಿಗೆ ಚಾಲನೆ ನೀಡಿದರು.
ಜಮ್ಮುವಿನ ಪಲ್ಲಿ ಗ್ರಾಮದಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರೀಯ ಪಂಚಾಯತ್ ರಾಜ್ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿದ್ದರು. ‘ಈ ಪ್ರದೇಶ ನನಗೆ ಹೊಸದಲ್ಲ. ಅದೇ ರೀತಿ ನಿಮಗೆ ನಾನು ಹೊಸಬನೂ ಅಲ್ಲ. ಕಳೆದ ಎರಡು ಅಥವಾ ಮೂರು ವರ್ಷಗಳ ಅವಧಿಯಲ್ಲಿ ಜಮ್ಮು- ಕಾಶ್ಮೀರ ಅನೇಕ ಮೈಲಿಗಲ್ಲುಗಳನ್ನು ಸ್ಥಾಪಿಸಿದೆ. ಇದಕ್ಕೂ ಹಿಂದಿನ ಸರ್ಕಾರಗಳು ಕೇಂದ್ರ ಸರ್ಕಾರದ ಯೋಜನೆಗಳನ್ನು ಇಲ್ಲಿ ಜಾರಿಗೊಳಿಸುತ್ತಿರಲಿಲ್ಲ. ನಾವು ಅದನ್ನು ಸಾಧಿಸಿದ್ದೇವೆ. ಕಳೆದ ಆರು ದಶಕದಲ್ಲಿ ಈ ಪ್ರದೇಶದಲ್ಲಿ ಕೇವಲ 17,000 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ. ಕಳೆದ ಎರಡು ವರ್ಷಗಳಲ್ಲಿ 38,000 ಕೋಟಿ ರೂಪಾಯಿಯನ್ನು ಮೂಲಸೌಕರ್ಯ ಒದಗಿಸಲು ಹೂಡಿಕೆ ಮಾಡಲಾಗಿದೆ’ ಎಂದರು.