ಈ ವಿಡಿಯೋ ನೋಡಿ… ಸುಡುಮಣ್ಣೂ ಆಯ್ತು, ಕಸಗಳ ವಿಲೇವಾರಿಯೂ ಆಯ್ತು ಎಂದು ತೋಟದ ಮಧ್ಯೆ ಸಿಬ್ಬಂದಿಗಳು ಎಲೆಕಸಗಳಿಗೆ(Dry leaf waste) ಬೆಂಕಿ(Fire) ಕೊಟ್ಟಿದ್ದರು. ಅಲ್ಲೇ ಸಮೀಪದ ಮುಂಡಕ್ಕಿ ಹಣ್ಣಿನ ಗಿಡ (ಗುಡ್ಡ ನೇರಳೆ, ಮೀನಂಗಿ, Syzygium zeylanicum, Cat eye fruit)ಕ್ಕೆ ಘಾತವಾಯಿತು . ಸ್ನೇಹಿತರೊಬ್ಬರು ಆ ಬೀಜದ ಗಿಡ ಕೊಟ್ಟಿದ್ದರು. ಅದನ್ನು ನೆಟ್ಟು ಕೆಲವು ವರ್ಷಗಳೇ ಆಗಿತ್ತು. ಬಾಲ್ಯದಲ್ಲಿ ಅಜ್ಜನ ಮನೆ ಪರಿಸರದಲ್ಲಿ ಸಿಕ್ಕಾಪಟ್ಟೆ ಅದರ ಹಣ್ಣುಗಳನ್ನು ತಿಂದ ಕಾರಣ ಆ ಗಿಡದ ಮೇಲೆ ವಿಶೇಷ ಮೋಹವಿತ್ತು. ಏನು ಮಾಡಲಿ, ಈ ಬಿರು ಬೇಸಗೆಗೆ ಗಿಡ ಹೀಗೆ ಸೋತು ಹೋದರೆ ಬದುಕಿ ಉಳಿಯುತ್ತದೋ ಎನ್ನುವ ಅನುಮಾನ ಇತ್ತು. ಆ ದುಃಖದಲ್ಲಿ 2 ವಾರ ಕಳೆದು ಹೋಯ್ತು.
ಪ್ರತೀ 15 ದಿನಗಳಿಗೊಮ್ಮೆ ಗೋಕೃಪಾಮೃತ ( ಸುಲಭದ ಭಾಷೆಗೆ ಜೀವಾಮೃತ ಎನ್ನಿ)ವನ್ನು ತೆಂಗು, ತರಕಾರಿ, ಹೂಗಿಡಗಳಿಗೆ ಹಾಕುವುದು ಅಭ್ಯಾಸವಾಗಿದೆ. 100ಲೀಟರ್ ಡ್ರಮ್ಮಿನಲ್ಲಿ ಒಂದೈದು ಲೀಟರ್ ಇರುವಾಗಲೇ ಪುನಃ 1ಕೇಜಿ ಬೆಲ್ಲ, 1ಕೇಜಿ ಕಡಲೆಹಿಟ್ಟು , ನೀರು ಬೆರಸಿ ಯಾವಾಗಲೂ ಜೀವಾಮೃತ ಸಿದ್ಧವಿರುತ್ತದೆ. ನೋಡಿಯೇ ಬಿಡೋಣವೆಂದು ಹಾಗೆಯೇ ಈ ಸೋತುಹೋದ ಮುಂಡಕ್ಕಿ ಹಣ್ಣಿನ ಗಿಡಕ್ಕೆ ಅಂದಾಜು 1 ಲೀಟರ್ ಹಾಕಿದ್ದೆ.
ಒಂದು ವಾರದಲ್ಲಿ ಗಿಡವೆಲ್ಲ ಹೊಸ ಚಿಗುರುಗಳಿಂದ ಕಂಗೊಳಿಸಲು ಶುರುವಾಯ್ತು . ಈ ರೀತಿಯ ಬದಲಾವಣೆ ಎಲ್ಲ ವಿಧದ ಸಸ್ಯ, ಮರಗಳಲ್ಲಿ ಕಂಡಿದ್ದೇನೆ. ಹೆಚ್ಚಾಗಿ ಗಿಡ/ಮರದ ಎಲೆಗಳು ಆ ಗಿಡ/ಮರದ ಬುಡದಲ್ಲೇ ಬಿದ್ದು ಮಣ್ಣು ಫಲವತ್ತಾಗಿರುತ್ತದೆ. ಆ ಫಲವತ್ತತೆಯನ್ನು ಗಿಡಕ್ಕೆ ಒದಗಿಸಿಕೊಡುವ ಕೆಲಸ ( Bioavailability) ಮಾಡುವುದು ಈ ಜೀವಾಮೃತ. ಮಣ್ಣಿನಲ್ಲಿರುವ ಸೂಕ್ಷ್ಮ ಜೀವಿಗಳು ಮತ್ತು ಜೀವಾಮೃತದಲ್ಲಿರುವ ಜೀವಿಗಳು ಜಂಟಿಯಾಗಿ ( ಅವರಿಬ್ಬರ synergistic effect ) ಮಣ್ಣಿನಲ್ಲಿರುವ ಪೋಶಕಾಂಶಗಳು ಇನ್ನಷ್ಷು ಕರಗುವಂತೆ ( soluble) ಮಾಡಿ ಬೇರಿಗೆ ಒದಗಿಸಲು ಸಹಾಯ ಮಾಡುತ್ತವೆ. ಈ ಅಗತ್ಯವಿರುವ ಫಲವತ್ತತೆಯಿಂದ ಹಣ್ಣು, ಹೂವುಗಳ ಗಾತ್ರ, ಸಂಖ್ಯೆ, ಬಣ್ಣ, ಸುವಾಸನೆಯಲ್ಲಿ ಹೆಚ್ಚಳ ನಿಚ್ಚಳ. ತೆಂಗು, ಅಡಿಕೆಯಂತಹ ಏಕದಳ ಮರಗಳ ( ಬೇರು ಆಳಕ್ಕಿರುವುದಿಲ್ಲ ) ಸೋಗೆ ( ಎಲೆ, ಹೆಡೆ)ಗಳನ್ನು ಅವುಗಳ ಬುಡದಲ್ಲೇ ಕೊಚ್ಚಿಹಾಕಿ ಎರಡು ತಿಂಗಳಿಗೊಮ್ಮೆ ಜೀವಾಮೃತ ಮಾತ್ರ ಹಾಕಿ ( ಬೇರೆ ಗೊಬ್ಬರ, ಸಿಂಪಡಣೆ ಇಲ್ಲ) ಅಧಿಕ, ರೋಗರಹಿತ ಬೆಳೆ ತೆಗೆಯುವವರಿದ್ದಾರೆ.ಜೀವಾಮೃತದಿಂದ ಈ ವರ್ಷದ ಹೊಸ ಪಾಠ ಏನೆಂದರೆ ಗಿಡ/ಮರಗಳನ್ನು ಬಿಸಿ ಮತ್ತು ಬರ(ನೀರಿನ ಕೊರತೆ)ಕ್ಕೆ ಸಹಿಷ್ಣುತೆ ಹೆಚ್ಚಿಸುತ್ತದೆಯೆಂದು.
ಪೂರಕ ಮಾಹಿತಿ: ಹಟ್ಟಿ ತೊಳೆದ ನೀರಿನಲ್ಲಿ ಜೀವಾಮೃತದಲ್ಲಿರುವಂತೆ ಸೂಕ್ಷ್ಮ ಜೀವಿಗಳು ಇರುತ್ತವೆ. ಜೀವಾಮೃತದಲ್ಲಿ ಪೋಷಕಾಂಶಗಳು ಹೆಚ್ಚಿರುತ್ತವೆ ಅಂದರೆ ನಾವು ಒದಗಿಸುವ ಬೆಲ್ಲ ಮತ್ತು ಕಡಲೆಹಿಟ್ಟು ( ಯಾವುದೇ ಧಾನ್ಯದ ಹಿಟ್ಟು) ಬೆರಸಿದ ಮಾಧ್ಯಮವು ಬುರುಗುವಿಕೆ( Fermentation)ಗೆ ಒಳಗಾಗಿ ಕೋಟ್ಯಾಂತರ ಸೂಕ್ಷ್ಮ ಜೀವಿಗಳ ಪುನರ್ ಜನನ – ಮರಣ ನಿರಂತರ. ಹಾಗೆ ಸಾಯುವಾಗ ಅವುಗಳ ದೇಹದಿಂದ ಕಿಣ್ವಗಳು ( enzymes) ಮತ್ತು ಜೀವಸತ್ವಗಳು ಬಿಡುಗಡೆಯಾಗಿ ಅವೆಲ್ಲ ಮತ್ತೆ ಸಸ್ಯಗಳಿಗೆ ಸಮೃದ್ಧ ಆಹಾರವೇ. ಗೋಬರ್ ಗ್ಯಾಸಿನ ಸ್ಲರಿಯಲ್ಲಿ ಯಾವುದೇ ಸೂಕ್ಷ್ಮ ಜೀವಿಗಳಿರುವುದಿಲ್ಲ.
ಅರಣ್ಯದಲ್ಲಿ ಬೆಳೆಯುವ "ಸಿಕ್ಕಿಂ ಬಾಳೆ" ಜಾತಿಯಲ್ಲಿ ಹವಾಮಾನ ಬದಲಾವಣೆಯನ್ನು ತಾಳುವ ಜಿನೀಯ ಗುಣಗಳು…
ಕರ್ನಾಟಕದ ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ ಏರಿಳಿತ ಕಂಡುಬಂದಿದೆ. ಮಲೆನಾಡು ಮಾರುಕಟ್ಟೆಗಳಲ್ಲಿ ಸ್ವಲ್ಪ ಏರಿಕೆ…
ಅಸ್ಸಾಂನಲ್ಲಿ ಐಸಿಎಆರ್–ಐಎಆರ್ಐ ಸಂಸ್ಥೆ “ನೈಸರ್ಗಿಕ ಕೃಷಿ” ವಿಷಯದಡಿ ಕಿಸಾನ್ ಮೇಳ 2026 ಆಯೋಜಿಸಿತು.…
ಜಾಗತಿಕ ತಾಪಮಾನ ಏರಿಕೆಯಿಂದ ಭಾರತದಲ್ಲಿ ಮಾರುತ ಮಳೆಯ ತೀವ್ರತೆ ಹೆಚ್ಚುತ್ತಿರುವುದು ಹೊಸ ಅಧ್ಯಯನದಲ್ಲಿ…
ಮ್ಯಾನ್ಮಾರ್ನಿಂದ ಅಕ್ರಮ ಅಡಿಕೆ ಕಳ್ಳಸಾಗಣೆ ವಿರುದ್ಧ ಮಿಜೋರಾಂ ಸರ್ಕಾರ ಜಾರಿ ಕ್ರಮವನ್ನು ಬಿಗುಗೊಳಿಸಿದೆ.…
ಕೊಲ್ಕತ್ತಾದಲ್ಲಿ ನಡೆದ ಸಭೆಯಲ್ಲಿ ಸೆಣಬು ವಲಯ ಸುಧಾರಣೆ, ಸುಸ್ಥಿರ ಕೃಷಿ ಹಾಗೂ ಮೀನುಗಾರಿಕೆ…