ಅನುಕ್ರಮ

ರಾಷ್ಟ್ರಪತಿಗಳೇ ಟೀಕಿಸಿದ ಮೇಲೆ….?

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail
ನ್ಯಾಯಾಂಗ ನಿಂದನೆಯ ತೂಗುಕತ್ತಿ ತಲೆಯನ್ನು ಸೀಳಬಹುದೆಂಬ ಭಯವಿದ್ದುದರಿಂದ ಭಾರತೀಯ ನ್ಯಾಯಾಂಗ ವ್ಯವಸ್ಥೆಯು ಪ್ರಶ್ನಾತೀತವಾಗಿತ್ತು. ಅಂದರೆ ಜನರು ತಮಗೆ ಮನ ಬಂದಂತೆ ನ್ಯಾಯಾಲಯಗಳ ತೀರ್ಪುಗಳನ್ನು ವಿಮರ್ಶೆಯ ಒರೆಗೆ ಹಚ್ಚುವಂತಿರಲಿಲ್ಲ. ನ್ಯಾಯಾಲಯಗಳ ತೀರ್ಪುಗಳ ಮೇಲೆ ಮೇಲ್ಮನವಿ ಸಲ್ಲಿಸಬಹುದಿತ್ತೇ ಹೊರತು ಟೀಕಿಸುವ ಹಕ್ಕು ನಾಗರಿಕರಿಗೆ ಇಲ್ಲ.
ಪ್ರಜಾಪ್ರಭುತ್ವದ ಮೊದಲ ಎರಡು ಸ್ತಂಭಗಳಾದ ಶಾಸಕಾಂಗ ಮತ್ತು ಕಾರ್ಯಾಂಗಗಳು ಹಿಗ್ಗಾಮುಗ್ಗಾ ಟೀಕೆಗೆ ಒಳಗಾಗುತ್ತಿದ್ದರೂ ಮೂರನೇ ಸ್ತಂಭವಾದ ನ್ಯಾಯಾಂಗದ ಬಗ್ಗೆ ಯಾರೂ ಧ್ವನಿ ಎತ್ತುತ್ತಿರಲಿಲ್ಲ. ಇನ್ನೊಂದೆಡೆಯಲ್ಲಿ ನಾಲ್ಕನೇ ಸ್ತಂಭವೆನಿಸಿದ ಮಾಧ್ಯಮಗಳು ಕೂಡಾ ನಿರ್ದಾಕ್ಷಿಣ್ಯವಾಗಿ ಟೀಕಿಸಲ್ಪಡುತ್ತಿವೆ.  ಈ ಮಧ್ಯೆ ಮೂರನೇ ಸ್ತಂಭವೆನಿಸಿದ್ದ ನ್ಯಾಯಾಂಗವು ಮಾತ್ರ ಟೀಕಾ ಮುಕ್ತವಾಗಿದ್ದದ್ದು ಹೇಗೆ?  ಹೇಗೆಂದರೆ ನ್ಯಾಯಾಂಗದ ಮೇಲೆ ಏನೇ  ಅಸಮಾಧಾನಗಳು ಇದ್ದರೂ ಖಾಸಗಿ ಮಾತುಗಳ ವಲಯದಿಂದ ಆಚೆಗೆ ಹೋಗುತ್ತಿರಲಿಲ್ಲ. ಬಹಿರಂಗ ಟೀಕೆಗೆ ಅವಕಾಶವಿರಲಿಲ್ಲ. ಆದರೆ ಇತ್ತೀಚೆಗೆ ಭಾರತದ ಸರ್ವೋಚ್ಛ ನ್ಯಾಯಾಲಯವೇ ಟೀಕೆಗಳ ಹೊದಿಕೆಯನ್ನು ಮೈಮೇಲೆ ಎಳೆದು ಕೊಂಡಂತಿದೆ. ಅದರೊಂದಿಗೆ ಬಿ.ಜೆ.ಪಿ.ಯ ನಿಶಿಕಾಂತ ದುಬೆ ಎಂಬ ಸಂಸದರು ಕೂಡ “ನ್ಯಾಯಾಂಗವೇ ಎಲ್ಲವನ್ನು ನಿರ್ಧರಿಸುವುದಾದರೆ ಶಾಸಕಾಂಗ ಯಾಕೆ ಬೇಕು?” ಎಂದು ಕೇಳಿದ್ದಾರೆ. ಏನಿದ್ದರೂ ಈ ಬಹಿರಂಗ ಅಸಮಾಧಾನಕ್ಕೆ ಮುಕ್ತತೆಯ ಬಾಗಿಲನ್ನು ರಾಷ್ಟ್ರಪತಿಗಳೇ ತೆರೆದಿರುವುದು ಭಾರತೀಯ ಪ್ರಜಾಪ್ರಭುತ್ವದ ಮುಂದಿನ ನಡೆಯನ್ನು ಕುತೂಹಲದಿಂದ ಗಮನಿಸುವಂತೆ ಮಾಡಿದೆ.
ನ್ಯಾಯಾಂಗದ ಕಾರ್ಯಶೈಲಿಯ ಬಗ್ಗೆ ಬಹುಕಾಲದಿಂದ ಹೊಗೆಯಾಡುತ್ತಿದ್ದ ಅಸಮಾಧಾನವು ಸಣ್ಣ ಜ್ವಾಲೆಯಾದದ್ದು ತಮಿಳುನಾಡಿನಲ್ಲಿ. ಅಲ್ಲಿನ ಡಿ.ಎಂ.ಕೆ. ಸರಕಾರವು ಕೇಂದ್ರ ಸರಕಾರದ ಸೂಚನೆಗಳನ್ನು ತಿರಸ್ಕರಿಸುವುದು, ಅದರ ರಾಜಕಾರಣಿಗಳು ಭಾರತದ ಸನಾತನ ಧರ್ಮವನ್ನು ನಿಂದಿಸುವುದು ಇತ್ಯಾದಿ ವರ್ತನೆಗಳ ಮೂಲಕ ತಾನು ದೇಶದೊಳಗಿನ ಒಕ್ಕಟ್ಟು ವ್ಯವಸ್ಥೆಯೊಳಗೆ ಹೊಂದಿಕೊಳ್ಳಲು ಆಗುವುದಿಲ್ಲವೆಂಬ ಉದ್ದಟ ನಿರ್ಧಾರಗಳನ್ನು ಶಾಸನ ಸಭೆಯಲ್ಲಿ ಮಾಡಿತು. ತನ್ನ ನಿರ್ಧಾರಗಳಿಗೆ ರಾಜ್ಯಪಾಲರ ಸಹಿ ಪಡೆಯುವ ಪ್ರಯತ್ನಕ್ಕೂ ತೊಡಗಿತು. ಆದರೆ ಸಾಂವಿಧಾನಿಕ ಸಮಸ್ಯೆಗಳನ್ನು ಮುಂದಿಟ್ಟು ರಾಜ್ಯಪಾಲರು ನಿರೀಕ್ಷಿತ ಸಮಯದೊಳಗೆ ಸಹಿ ಹಾಕದಿದ್ದಾಗ ತಮಿಳುನಾಡು ಸರಕಾರ ಭಾರತದ ಸರ್ವೋಚ್ಚ ನ್ಯಾಯಾಲಯಕ್ಕೆ ದೂರು ನೀಡಿತು. ಇದಕ್ಕೆ ಉತ್ಸಾಹದಿಂದ ಸ್ಪಂದಿಸಿದ ಸರ್ವೋಚ್ಚ ನ್ಯಾಯಾಲಯವು “ರಾಜ್ಯಪಾಲರು ಮತ್ತು ರಾಷ್ಟ್ರಪತಿಗಳು ಸಹಿಗಾಗಿ ಸಲ್ಲಿಸಿದ ಶಾಸನಗಳನ್ನು ಮೂರು ತಿಂಗಳಿನ ಒಳಗೆ ಸಹಿ ಮಾಡಿ ಕಳಿಸಬೇಕು. ಇಲ್ಲವಾದರೆ ಅಂತಹ ಶಾಸನಗಳು ರಾಜ್ಯಪಾಲರ ಸಹಿ ಇಲ್ಲದೇನೇ ಕಾರ್ಯರೂಪಕ್ಕೆ ಬರಲು ಅರ್ಹವಾಗುತ್ತವೆ” ಎಂಬ ತೀರ್ಪನ್ನು ನೀಡಿತು. ಇದು ತಮಿಳುನಾಡು ಸರ್ಕಾರವು ಅಂದರೆ ಡಿ.ಎಂ.ಕೆ. ಪಕ್ಷವು ರಾಜ್ಯಪಾಲರ ಮೇಲೆ ಸಾಧಿಸಿದ ಗೆಲುವು ಎಂಬುದಾಗಿ ಮಾಧ್ಯಮಗಳಲ್ಲಿ ಪ್ರಚಾರವಾಯಿತು. ನ್ಯಾಯಾಂಗದ ತೀರ್ಪಿಗೆ ಪ್ರತಿನುಡಿಯುವಂತಿಲ್ಲ ಎಂಬುದೇ ಎಲ್ಲರ ಮನಸ್ಸಿನೊಳಗೆ ಇದ್ದ ಅಭಿಪ್ರಾಯವಾಗಿತ್ತು. ಈ ಗಾಢ ಮೌನದ ಕಾರ್ಮೋಡವನ್ನು ಕರಗಿಸಿದ್ದು ಉಪರಾಷ್ಟ್ರಪತಿ  ಶ್ರೀ ಜಗದೀಪ್ ಧನಕರ್‍ರವರು. ಅವರು “ನ್ಯಾಯಾಂಗ ತನ್ನ ಎಲ್ಲೆ ಮೀರುತಿದೆ” ಎಂಬುದಾಗಿ ಮುಕ್ತವಾಗಿ ಟೀಕಿಸಿದರು. ಅದರ ಬೆನ್ನಲ್ಲೇ ಸಂಸದ ನಿಶಿಕಾಂತ ದುಬೆಯವರ “ಶಾಸಕಾಂಗ ಏಕೆ ಬೇಕು?” ಎಂಬ ಟೀಕೆ ಕೇಳಿ ಬಂತು. ಇವೆಲ್ಲಕ್ಕೆ ಶಕ್ತಿ ನೀಡುವಂತೆ ರಾಷ್ಟ್ರಪತಿಗಳೂ ಸುಪ್ರೀಂಕೋರ್ಟ್‍ಗೆ ಹದಿನಾಲ್ಕು ಪ್ರಶ್ನೆಗಳನ್ನು ಕೇಳಿ ಇಡೀ ಜಡ್ಡುಗಟ್ಟಿದ್ದ ವ್ಯವಸ್ಥೆಯನ್ನು ಅಲ್ಲಾಡಿಸಿ ಬಿಟ್ಟರು.
   ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮುರವರು ತನ್ನ ಘನತೆಗೆ ತಕ್ಕಂತೆ ಮೌನವನ್ನು ವಹಿಸುತ್ತಾರೆ; ಹಾಗೆಯೇ ಅಗತ್ಯವಿದ್ದಾಗ ಧ್ವನಿಯೆತ್ತಿ ಪ್ರಶ್ನಿಸುತ್ತಾರೆ. ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳ ನೇಮಕಾತಿ ಹಾಗೂ ಪ್ರಮಾಣ ವಚನಗಳನ್ನು ಬೋಧಿಸುವ ರಾಷ್ಟ್ರಪತಿಗಳಿಗೇ ಆಜ್ಞೆ ನೀಡುವ ಮಟ್ಟಕ್ಕೆ ನ್ಯಾಯಾಲವು ಉದ್ಯುಕ್ತವಾದಾಗ ಅವರು ಮೌನ ಮುರಿಯಬೇಕಾಯಿತು. ಮುಖ್ಯ ನ್ಯಾಯಾಧೀಶರು ಉಪಸ್ಥಿತರಿದ್ದ ಸಭೆಯಲ್ಲೇ “ಬಡವರಿಗೂ, ಹಳ್ಳಿಗರಿಗೂ, ಮಹಿಳೆಯರಿಗೂ ಸಮರ್ಪಕವಾಗಿ ನ್ಯಾಯ ವಿತರಣೆಯಾಗುತ್ತಿದೆಯೇ?” ಎಂದು ಪ್ರಶ್ನಿಸಿದ ಅವರು ಹದಿನಾಲ್ಕು ಪ್ರಶ್ನೆಗಳಿದ್ದ ಪತ್ರವನ್ನೇ ಸರ್ವೋಚ್ಚ ನ್ಯಾಯಾಧೀಶರಿಗೆ ಕಳಿಸಿದರು. ಸಂವಿಧಾನದ 200 ಮತ್ತು 201ನೇ ವಿಧಿಗಳ ಅಡಿಯಲ್ಲಿ ರಾಜ್ಯಪಾಲರು ಹಾಗೂ ರಾಷ್ಟ್ರಪತಿಗಳು ಹೊಂದಿರುವ  ಅಧಿಕಾರ ಮತ್ತು ಕಾರ್ಯ ವಿಧಾನಗಳ ಬಗ್ಗೆ  ಸೃಷ್ಟೀಕರಣವನ್ನು ಕೇಳಿದರು. ಏಕೆಂದರೆ 2025ರ ಏಪ್ರಿಲ್ 8 ರ ತೀರ್ಪಿನ ಪ್ರಕಾರ ರಾಜ್ಯಪಾಲರಿಗೆ ಹಾಗೂ ರಾಷ್ಟ್ರಪತಿಗಳಿಗೆ ಶಾಸಕಾಂಗವು ಸಹಿಗಾಗಿ ಕಳಿಸಿದ ಶಾಸನವನ್ನು ಮೂರು ತಿಂಗಳಿನ ಒಳಗಾಗಿ ಒಪ್ಪಿಗೆ ನೀಡಬೇಕೆಂದು ಸೂಚಿಸಲಾಗಿತ್ತು. ಕೇರಳ, ತೆಲಂಗಾಣ ಹಾಗೂ ಪಂಜಾಬ್ ರಾಜ್ಯಗಳಲ್ಲೂ ಮೋದಿ ವಿರೋಧಿ ಸರಕಾರಗಳಿದ್ದು ಅವೆಲ್ಲವೂ ಈ ತೀರ್ಪಿನಿಂದ ಗೆಲುವು  ಸಾಧಿಸಿದಂತಾಗಿತ್ತು. ಇದು ರಾಷ್ಟ್ರದ ಅಖಂಡತೆಗೆ ಒಂದು  ಏಟಿನಂತೆ ಪರಿಗಣಿಸಲ್ಪಟ್ಟಿತ್ತು. ಅದೇ ಹೊತ್ತಿನಲ್ಲಿ ಎಲ್ಲಾ ಉದ್ಧಟತನಗಳಿಗೆ ಮದ್ದೆರೆಯುವಂತೆ  ರಾಷ್ಟಪತಿಗಳು ಸಂವಿಧಾನದ 143 (1) ವಿಧಿಯ ಅಡಿಯಲ್ಲಿ ತನ್ನ ಅಧಿಕಾರವನ್ನು ಬಳಸಿ ಮುಖ್ಯ ನ್ಯಾಯಾಧೀಶರಿಗೆ ಒಂದು  ಪ್ರಶ್ನಾವಳಿಯನ್ನು ಕಳಿಸಿದರು.
      ಕೆಲವೊಮ್ಮೆ “ಸಮಸ್ಯೆಗಳ ಪರಿಹಾರಕ್ಕೆ ಕಾಲ ಕೂಡಿ ಬರುತ್ತದೆ” ಎಂಬ ಮಾತಿದೆ. ಪ್ರಾಯಶಃ ನ್ಯಾಯಾಲಯಗಳೂ ಚರ್ಚೆಗೆ ಒಳಗಾಗುವ ವಿವಿಧ ಪ್ರಕರಣಗಳು ಇತ್ತೀಚೆಗೆ ಏಕಕಾಲಕ್ಕೆ ಸಂಭವಿಸಿವೆ. ಪಶ್ಚಿಮಬಂಗಾಳದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಯಲ್ಲಿ ನಡೆದ ಅಕ್ರಮಗಳ ಬಗ್ಗೆ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಎಲ್ಲ ನೇಮಕಾತಿಗಳನ್ನು ರದ್ದುಗೊಳಿಸಿತು. ಇದು ಸಮುಚಿತ ನ್ಯಾಯವೆಂದು ಪ್ರಶಂಸೆಗೆ ಒಳಗಾದರೂ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ದೀದಿಯವರು ನ್ಯಾಯಾಲಯದ ವಿರುದ್ಧ ಪರೋಕ್ಷ ದಾಳಿ ನಡೆಸಿದರು. “ಜಡ್ಜರಿಗೆ ಒಂದು ನೀತಿ ಮತ್ತು ಶಿಕ್ಷಕರಿಗೆ ಇನ್ನೊಂದು ನೀತಿನಾ” ಎಂದು ಕೇಳಿದರು. ಅವರು ಪ್ರಶ್ನಿಸಿದ ಪ್ರಕರಣ ಹೀಗಿದೆ: ದಿಲ್ಲಿಯಲ್ಲಿ ವಾಸಿಸುತ್ತಿದ್ದ ನ್ಯಾಯಮೂರ್ತಿ ಯಶವಂತ ವರ್ಮಾ ಎಂಬವರ ಮನೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟ ನೋಟುಗಳ ಕಂತೆಗಳು ಸಿಕ್ಕಿದ್ದುವು. ಅಲಹಾಬಾದ್ ಹೈಕೋರ್ಟ್‍ನಲ್ಲಿ ಬಹುವರ್ಷಗಳ ಕಾಲ ನ್ಯಾಯಾಧೀಶರಾಗಿದ್ದ ಅವರು 2021ರಲ್ಲಿ ದೆಹಲಿಯ ನ್ಯಾಯಾಲಯಕ್ಕೆ ವರ್ಗಾವಣೆಯಾಗಿದ್ದರು. ಈ ವರ್ಷದ ಹೋಳಿ ಹಬ್ಬದ ಸಂದರ್ಭದಲ್ಲಿ ಪ್ರವಾಸಕ್ಕೆ ಹೋಗಿದ್ದ ಅವರ ಮನೆಯು ಅಗ್ನಿ ಅವಘಡಕ್ಕೆ ತುತ್ತಾದಾಗ ಬೆಂಕಿ ನಂದಿಸುತ್ತಿದ್ದ ಅಗ್ನಿಶಾಮಕದಳದವರಿಗೆ ನ್ಯಾಯಾಧೀಶರ ಖಾಸಗಿ ಕೊಠಡಿಯಲ್ಲಿದ್ದ ಕರೆನ್ಸಿ ನೋಟುಗಳು ಬೆಂಕಿಗೆ ಆಹುತಿಯಾಗುತ್ತಿದ್ದುದು ಕಂಡು ಬಂತು. ಇದು ಅಕ್ರಮ ಸಂಪತ್ತು ಎಂದೇ ಪರಿಗಣಿಸಲ್ಪಟ್ಟಿದ್ದರಿಂದ ಆರೋಪಿಯಾಗಿದ್ದ ಜಡ್ಜ್ ಮೇಲೆ ಯಾವ ಕ್ರಮ ಕೈಗೊಳ್ಳಲಾಗುತ್ತದೆ ಎಂಬ ಕುತೂಹಲ ಸಾರ್ವತ್ರಿಕವಾಗಿಯೇ ಇತ್ತು. ಆದರೆ ದೋಷಿ ಎಂದು ಕಂಡು ಬಂದಿದ್ದರೂ ತಮ್ಮ ತಪ್ಪನ್ನು ಒಪ್ಪಿಕೊಳ್ಳದ ಯಶವಂತ ವರ್ಮಾರಿಗೆ ಸುಪ್ರೀಂಕೋರ್ಟ್ ತಾತ್ಕಾಲಿಕ ಶಿಕ್ಷೆ ಎಂಬಂತೆ ಮರಳಿ ಅಲಹಾಬಾದ್ ಹೈಕೋರ್ಟ್‍ಗೆ ವರ್ಗಾವಣೆ ಮಾಡಿತು.  ಈ ಘಟನೆಯನ್ನೇ ಉಲ್ಲೇಖಿಸಿದ ಮಮತಾ ದೀದಿಯವರು “ಶಿಕ್ಷಕರಿಗೆ ಮಾತ್ರ ಶಿಕ್ಷೆ ನ್ಯಾಯಾಧೀಶರಿಗೆ ವರ್ಗಾವಣೆಯಷ್ಟೇ ಶಿಕ್ಷೆಯೇ?” ಎಂದು ತನ್ನ ಅಸಮಾಧಾನವನ್ನು ವ್ಯಕ್ತಪಡಿಸಿದರು. ಆದರೆ ಅದು ನ್ಯಾಯಾಂಗ ನಿಂದನೆ ಎಂಬ ಟೀಕೆಗೆ ಒಳಗಾಗಲಿಲ್ಲ. ಏಕೆಂದರೆ ಅವರ ಟೀಕೆ ವಸ್ತುಸ್ಥಿತಿಯ ಪ್ರತಿಬಿಂಬವಾಗಿತ್ತು. ಹಾಗಾಗಿ ಮಮತಾದೀದಿಗೆ ಅದು ದಕ್ಕಿತು.
ನಮ್ಮ ದೇಶದ ನ್ಯಾಯವಾದಿಗಳ ವಲಯದಲ್ಲಿಯೇ ವರ್ಮಾರಿಗೆ ವರ್ಗಾವಣೆ ಶಿಕ್ಷೆ ಮಾತ್ರ ನೀಡಿದ್ದು ಸಮಾಧಾನಕರವೆನ್ನಿಸಿರಲಿಲ್ಲ. ಇಂದಿನ ಒಟ್ಟು ನ್ಯಾಯಾಂಗ ವ್ಯವಸ್ಥೆಯ ಬಗ್ಗೆ ಹಾಗೂ ನ್ಯಾಯಮೂರ್ತಿಗಳ ವೃತ್ತಿನಿಷ್ಟೆಯ ಬಗ್ಗೆ ಅನೇಕ ನ್ಯಾಯವಾದಿಗಳೂ ಸಂತುಷ್ಟರಾಗಿಲ್ಲ. ಒಂದೆಡೆಯಲ್ಲಿ ಲಕ್ಷಗಟ್ಟಲೆ ದಾವೆಗಳು ವಿಚಾರಣೆಗೆ ಬಾರದೇ ಉಳಿದಿರುವಂತೆಯೇ ಇನ್ನೊಂದೆಡೆಯಲ್ಲಿ ಹಣವಂತರ ಹಾಗೂ  ಪ್ರಭಾವಿಗಳ ಕೇಸ್‍ಗಳು ತಕ್ಷಣಕ್ಕೆ ವಿಚಾರಣೆಗೆ ಬರುತ್ತವೆ. ರಾಜಕಾರಣಿಗಳ ಮತ್ತು ಸಿನೆಮಾ ನಟರ ಕೇಸ್‍ಗಳು ಪಡೆಯುತ್ತಿರುವ ಆದ್ಯತೆಯು ಅಚ್ಚರಿ ಪಡಿಸುತ್ತದೆ.
ನ್ಯಾಯದಾನ ಪ್ರಕ್ರಿಯೆಯ ಒಂದು ಉದಾಹರಣೆ ಹೀಗಿದೆ: 2001ರಲ್ಲಿ ತಮಿಳುನಾಡಿನಲ್ಲಿ ಅಜಾಗ್ರತೆಯಿಂದ ಶಾಲೆಯೊಂದರಲ್ಲಿ ನಡೆದ ಬೆಂಕಿ ಅವಘಡ ಮತ್ತು ಅಲ್ಲಿ ಸಂಭವಿಸಿದ ಮಕ್ಕಳ ಸಾವಿನ ದುರಂತವನ್ನು ಉಲ್ಲೇಖಿಸಿ ಒಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಸುಪ್ರೀಂ ಕೋರ್ಟ್‍ನಲ್ಲಿ ದಾಖಲಾಯಿತು. ಅದು 2009ರಲ್ಲಿ ವಿಚಾರಣೆಗೆ ಬಂದು ಅರ್ಜಿದಾರರು ಅಪೇಕ್ಷಿಸಿದಂತೆ ಒಂದು ಹೊಸ ಆರ್ಡರ್‍ನ್ನು ನ್ಯಾಯಾಲಯ ನೀಡಿತು. ಅದರಲ್ಲಿ ಅಗ್ನಿ ನಂದಿಸುವ ವ್ಯವಸ್ಥೆಯನ್ನು ಎಲ್ಲಾ ಶಾಲೆಗಳಲ್ಲಿ ಮಾಡಬೇಕು ಎಂದು ವಿಧಿಸಲಾಯಿತು. ಇದು ಎಷ್ಟು ರಾಜ್ಯಗಳಲ್ಲಿ ಅನ್ವಯಿಸಲ್ಪಟ್ಟಿದೆಯೋ ಗೊತ್ತಿಲ್ಲ! ಆದರೆ ಕರ್ನಾಟಕದಲ್ಲಿ ಮಾತ್ರ 2018ರಲ್ಲಿ ಘಟನೆ ನಡೆದು 18 ವರ್ಷಗಳ ಬಳಿಕ ಒಬ್ಬ ಶಿಕ್ಷಣ ಆಯುಕ್ತರು ಖಾಸಗಿ ಶಾಲೆಗಳು ಈ ಕಾನೂನನ್ನು ಪಾಲಿಸಬೇಕೆಂದು ಆದೇಶಿಸಿದರು. ಆದರೆ ಅವರು ಅಗ್ನಿ ಸುರಕ್ಷೆಯನ್ನು ಸರಕಾರಿ ಶಾಲೆಗಳಿಗೆ ಕಡ್ಡಾಯ ಮಾಡಲಿಲ್ಲ. ಖಾಸಗಿ ಶಾಲೆಗಳಿಗೆ ಮಾತ್ರ ಕಡ್ಡಾಯ ಮಾಡಿ ಅದನ್ನು ಶಾಲೆಗಳ ಮಾನ್ಯತೆಗೆ ಅಗತ್ಯವೆಂದರು. ಇದರ ಹಿಂದೆ ಮಕ್ಕಳ ಸುರಕ್ಷೆಗಿಂತ ಹೆಚ್ಚಾಗಿ ಭ್ರಷ್ಟಾಚಾರಕ್ಕೆ ಅವಕಾಶ ಮಾಡಿಕೊಡುವ ಉದ್ದೇಶ ಇತ್ತು ಎಂಬುದು ಮೇಲ್ನೋಟಕ್ಕೆ ಕಾಣುತ್ತಿತ್ತು. ಅರ್ಥಾತ್ ಸುಪ್ರೀಂ ಕೋರ್ಟ್‍ನ ಒಂದು ಆಜ್ಞೆ ಪರೋಕ್ಷವಾಗಿ ಭ್ರಷ್ಟಾಚಾರದಂತಹ ಸಾಮಾಜಿಕ ಪಿಡುಗಿಗೆ ಕಾರಣವಾಗಿದೆ. ಇಂತಹ ಒಂದು ಉದಾಹರಣೆಯು ಸುಪ್ರೀಂ ಕೋರ್ಟ್‍ಗೆ ತನ್ನ ಆಜ್ಞೆಗಳು ಋಣಾತ್ಮಕ ಪರಿಣಾಮ ಹೊಂದಿವೆಯೇ ಎಂಬುದರ ಅಧ್ಯಯನ ಮಾಡುವ ಅಗತ್ಯವನ್ನು ಮನಗಾಣಿಸುತ್ತದೆ. ಸರಕಾರಿ ಶಾಲೆಗಳಿಗೆ ಬರುವ ಬಡವರ ಮಕ್ಕಳು ಅಗ್ನಿ ದುರಂತಕ್ಕೆ ಬಲಿಯಾಗಬಹುದೇ? ಅವರಿಗೆ ಸುರಕ್ಷೆ ಬೇಡವೇ? ಈ ನನ್ನ ಪ್ರಶ್ನೆಗಳಿಗೆ ಇಲಾಖಾಧಿಕಾರಿಗಳು ಸಮರ್ಪಕ ಉತ್ತರ ನೀಡುವುದಿಲ್ಲ.
ಪ್ರಸ್ತುತ ರಾಷ್ಟ್ರಪತಿಗಳು ಕೇಳಿರುವ ಹದಿನಾಲ್ಕು ಪ್ರಶ್ನೆಗಳು ಕೂಡಾ ಕಾನೂನಿನ ಪರಿಭಾಷೆಯಲ್ಲಿದ್ದು ಲೇಖನದ ಭಾಷೆಯಲ್ಲಿಲ್ಲ. ಆದರೆ ಅವರು ನ್ಯಾಯಾಂಗಕ್ಕೆ ತನ್ನ ಸ್ಥಾನಗೌರವದ ಚಿಂತನೆಯನ್ನು ನೀಡಿದ್ದಾರೆ. ಅದರ ಅರ್ಥ ನ್ಯಾಯಾಲಯಗಳ ತೀರ್ಪುಗಳ ಬಗ್ಗೆ ಯಾರು ಬೇಕಾದರೂ ಟೀಕಿಸಬಹುದೆಂದು ಅಲ್ಲ. ಬದಲಾಗಿ ನಾವು ವಸ್ತುನಿಷ್ಟವಾಗಿ ನ್ಯಾಯದಾನವಾಗಿದೆಯೇ ಎಂಬುದನ್ನು ನಮ್ಮಷ್ಟಕ್ಕೆ ವಿಮರ್ಶಿಸಬಹುದು. ಇದಕ್ಕೊಂದು ಪೂರಕ ಚಿಂತನೆಯೆಂದರೆ ಪ್ರತಿಯೊಂದನ್ನೂ ನ್ಯಾಯಾಲಯಕ್ಕೆ ಎಳೆದು ವಾಸ್ತವಿಕ ನ್ಯಾಯದ ಪರಿಪಾಲನೆ ತಪ್ಪುವಂತೆ ಮಾಡಬಾರದು.
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಡಾ.ಚಂದ್ರಶೇಖರ ದಾಮ್ಲೆ

ಡಾ. ಚಂದ್ರಶೇಖರ ದಾಮ್ಲೆಯವರು ಸುಳ್ಯದ ನೆಹರು ಮೆಮೋರಿಯಲ್ ಕಾಲೇಜ್ ನಲ್ಲಿ ಸಮಾಜಶಾಸ್ತ್ರ ಪ್ರಾಧ್ಯಾಪಕರಾಗಿ 35 ವರ್ಷಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದವರು. ವೃತ್ತಿಯಲ್ಲಿರುವಾಗಲೇ ರಾಷ್ಟ್ರೀಯ ಸೇವಾ ಯೋಜನಾಧಿಕಾರಿಯಾಗಿ ಸಮಾಜಸೇವೆಯಲ್ಲಿ ತೊಡಗಿಕೊಂಡವರು. ಸಾಂಸ್ಕೃತಿಕ ಸಂಘದ ಮೂಲಕ ಮಕ್ಕಳಿಗೆ ಯಕ್ಷಗಾನ ನಿರ್ದೇಶಕನ, ಸುಳ್ಯದಲ್ಲಿ ಯಕ್ಷಗಾನ ಹಿತರಕ್ಷಣಾ ವೇದಿಕೆಯ ಸ್ಥಾಪನೆ, ಸಂಪೂರ್ಣ ಸಾಕ್ಷರತಾ ಆಂದೋಲನದಲ್ಲಿ ಸಂಪನ್ಮೂಲ ವ್ಯಕ್ತಿ, ಕನ್ನಡಮಾಧ್ಯಮದಲ್ಲಿ ಸ್ನೇಹ ಶಿಕ್ಷಣ ಸಂಸ್ಥೆಯ ಸ್ಥಾಪನೆ ಮುಂತಾದ ಸಮಾಜಮುಖಿ ಕಾರ್ಯಗಳಲ್ಲಿ ಸೇವೆ ನೀಡಿದವರು. ಶಿಕ್ಷಣದಲ್ಲಿ ಸೃಜನಶೀಲತೆಗೆ ಒತ್ತು ನೀಡುವ ದಾಮ್ಲೆಯವರು ಸಂಶೋಧಕರಾಗಿದ್ದು ಕನ್ನಡ ಇಂಗ್ಲಿಷ್ ಭಾಷೆಗಳಲ್ಲಿ ಕೃತಿ ರಚನೆ ಮಾಡಿದವರು. 'ನೆಲದನಂಟು' ಮತ್ತು "ಶಾಲೆ ಎಲ್ಲಿದೆ?" ಇವು ಇವರ ಪ್ರಸಿದ್ಧ ಕಾದಂಬರಿಗಳು. ಅನೇಕ ಪ್ರಶಸ್ತಿ ಸಮ್ಮಾನಗಳಿಂದ ಗೌರವಿಸಲ್ಪಟ್ಟ ದಾಮ್ಲೆಯವರಿಗೆ ಅಸಾಮಾನ್ಯ ಕನ್ನಡಿಗ ಪ್ರಶಸ್ತಿ, ಯಕ್ಷಮಂಗಳ ಪ್ರಶಸ್ತಿ, ಅರಣ್ಯಮಿತ್ರ ಮತ್ತು ಜಲಮಿತ್ರ ಪ್ರಶಸ್ತಿ, Nation Builder ಪ್ರಶಸ್ತಿ ಮುಂತಾದುವು ಲಭಿಸಿವೆ. ಹೊಸದಿಗಂತ ಪತ್ರಿಕೆಯಲ್ಲಿ "ಇದ್ಯಾಕೆ ಹೀಗೆ " ಅಂಕಣವನ್ನು ಬರೆಯುತ್ತಿದ್ದರು.

Published by
ಡಾ.ಚಂದ್ರಶೇಖರ ದಾಮ್ಲೆ

Recent Posts

ಬದುಕು ಪುರಾಣ | ನಾವ್ಯಾಕೆ ‘ಶಕುನಿ’ಗಳಾಗುತ್ತಿದ್ದೇವೆ?

ಎಲ್ಲಾದರೂ ನೋಡಿದ್ದೀರಾ.. ಧರ್ಮರಾಯ, ಕೃಷ್ಣ, ಕರ್ಣ, ಭೀಷ್ಮ.. ಮೊದಲಾದ ಹೆಸರುಗಳನ್ನು ನಂನಮ್ಮ ಸಾಧನೆಗಳಿಗೆ…

56 minutes ago

ಯಾವುದೇ ಕ್ಷಣದಲ್ಲಿ ಕೆ.ಆರ್.ಎಸ್. ಅಣೆಕಟ್ಟಿನಿಂದ ನೀರು ಬಿಡುಗಡೆ ಮಾಡುವ ಸಾಧ್ಯತೆ

ಕಾವೇರಿ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕಾವೇರಿ ನದಿ ಮೈದುಂಬಿ ಹರಿಯುತ್ತಿದೆ.…

9 hours ago

ಕೃಷಿಗೆ ತಂತ್ರಜ್ಞಾನ ಏಕೆ ಬೇಕು..? | ಗ್ರಾಮೀಣ ಭಾಗದ ಈ ಕೃಷಿ ಕಾರ್ಮಿಕ ನೀಡಿದ ಸಂದೇಶ

ಕಾಸರಗೋಡು ಜಿಲ್ಲೆಯ ನೆಟ್ಟಣಿಗೆ ಬಳಿಯ ಕೃಷಿ ಕಾರ್ಮಿಕ ರಾಮಕೃಷ್ಣ ಇಳಂತೋಡಿ ಅವರು ಅಡಿಕೆಗೆ…

11 hours ago

ಮಿಜೋರಾಂನಲ್ಲಿ ಅಡಿಕೆ ಬೆಳೆಗೆ ಉತ್ತೇಜನ | ಅಡಿಕೆ ಸಂಸ್ಕರಣಾ ಘಟಕಗಳ ಸ್ಥಾಪನೆಗೆ ಆದ್ಯತೆ | ರೈತರಿಂದ ಪೊರಕೆ ಕಡ್ಡಿ ಖರೀದಿಸುವ ಸರ್ಕಾರ |

ಕೃಷಿ ಬೆಳವಣಿಗೆಯ ಬಗ್ಗೆ ಮಿಜೋರಾಂ ಸರ್ಕಾರವು ಆದ್ಯತೆ ನೀಡುತ್ತಿದೆ. ಕಳೆದ ಕೆಲವು ಸಮಯಗಳಿಂದ…

16 hours ago

ಹವಾಮಾನ ವರದಿ | 21-06-2025 | ಹೇಗೆ ಸಾಗುತ್ತಿದೆ ಮಳೆಯ ದಾರಿ..? | ಜೂ.28 ರವರೆಗೆ ಮಳೆಯೋ..? ಬಿಸಿಲೋ..?

ಬಂಗಾಳಕೊಲ್ಲಿಯ ತಿರುಗುವಿಕೆಯು ಉತ್ತರ ಪ್ರದೇಶ ತಲುಪಿದ್ದು ಅಲ್ಲಿ ಶಿಥಿಲಗೊಳ್ಳುವ ಲಕ್ಷಣಗಳಿವೆ. ಇಂಡೋನೇಷ್ಯಾದಲ್ಲಿ ಉದ್ರೇಕಗೊಂಡಿರುವ ಜ್ವಾಲಾಮುಖಿಯು…

17 hours ago

ಬಂಡೆ ತೆರವು | ಶಿರಾಡಿಯಲ್ಲಿ ರೈಲು ಸಂಚಾರ ಆರಂಭ |

ಮಂಗಳೂರು-ಬೆಂಗಳೂರು ರೈಲು ಮಾರ್ಗದ ಶಿರಾಡಿ ಘಾಟಿಯ  ಎಡಕುಮಾರಿ ಮತ್ತು ಶಿರಿಬಾಗಿಲು ನಿಲ್ದಾಣಗಳ ನಡುವೆ…

22 hours ago