2026-27ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಕಾರ್ಯಕ್ಕೆ ರಾಜ್ಯ ಸರ್ಕಾರ ಚಾಲನೆ ನೀಡಿದ್ದು, ಈ ಬಾರಿ ರೈತರು ತಮ್ಮ ಬೆಳೆ ಮಾಹಿತಿಯನ್ನು ತಾವೇ ಮೊಬೈಲ್ ತಂತ್ರಾಂಶದ ಮೂಲಕ ದಾಖಲಿಸಲು ಅವಕಾಶ ಕಲ್ಪಿಸಲಾಗಿದೆ.
ಕೃಷಿ ಇಲಾಖೆಯ ಫ್ರೂಟ್ಸ್ (Fruits) ತಂತ್ರಾಂಶದಲ್ಲಿ ಎಫ್.ಐ.ಡಿ. (FID) ಸಂಖ್ಯೆಯನ್ನು ಹೊಂದಿರುವ ರೈತರು ಗೂಗಲ್ ಪ್ಲೇ ಸ್ಟೋರ್ನಿಂದ “ಮುಂಗಾರು ರೈತರ ಬೆಳೆ ಸಮೀಕ್ಷೆ-2026-27” ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಂಡು ಬೆಳೆ ಸಮೀಕ್ಷೆ ನಡೆಸಬಹುದು.
ಬೆಳೆ ಸಮೀಕ್ಷೆ ಹೇಗೆ ಮಾಡಬೇಕು?
- ಗೂಗಲ್ ಪ್ಲೇ ಸ್ಟೋರ್ನಿಂದ “ಮುಂಗಾರು ರೈತರ ಬೆಳೆ ಸಮೀಕ್ಷೆ-2026-27” ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಬೇಕು.
- ಇ-ಕೆವೈಸಿ (e-KYC) ಮೂಲಕ ಆಧಾರ್ ದೃಢೀಕರಣ ಮಾಡಬೇಕು.
- ಆಧಾರ್ ಸಂಖ್ಯೆಯನ್ನು ನಮೂದಿಸಿ OTP ಪಡೆಯಬೇಕು.
- OTP ದಾಖಲಿಸಿದ ಬಳಿಕ ರೈತರ FID ಸಂಖ್ಯೆಗೆ ಸಂಬಂಧಿಸಿದ ಜಮೀನುಗಳ ಮಾಹಿತಿ ಲಭ್ಯವಾಗುತ್ತದೆ.
- ನಂತರ ಸರ್ವೆ ನಂಬರ್, ಹಿಸ್ಸಾ ನಂಬರ್, ಮಾಲೀಕರ ಹೆಸರು ಸೇರಿದಂತೆ ಅಗತ್ಯ ಮಾಹಿತಿಯನ್ನು ಆಯ್ಕೆ ಮಾಡಬೇಕು.
- ಜಮೀನಿನ ಗಡಿ ವ್ಯಾಪ್ತಿಯೊಳಗೆ ನಿಂತು ಬೆಳೆ ವಿವರ ದಾಖಲಿಸಿ ಸ್ಥಳದಲ್ಲೇ ಫೋಟೋ ತೆಗೆದು ಅಪ್ಲೋಡ್ ಮಾಡಬೇಕು.
FID ಇಲ್ಲದ ರೈತರು ಏನು ಮಾಡಬೇಕು? : ಎಫ್.ಐ.ಡಿ. ಸಂಖ್ಯೆ ಇಲ್ಲದ ರೈತರು ತಮ್ಮ ಹತ್ತಿರದ ಕೃಷಿ ಇಲಾಖೆ ಅಥವಾ ತೋಟಗಾರಿಕೆ ಇಲಾಖೆ ಕಚೇರಿಗೆ ಭೇಟಿ ನೀಡಿ FID ಸಂಖ್ಯೆ ಮಾಡಿಸಿಕೊಳ್ಳಬಹುದು ಎಂದು ಇಲಾಖೆ ತಿಳಿಸಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಫಾಲೋಮಾಡಲು ಇಲ್ಲಿ ಕ್ಲಿಕ್ ಮಾಡಿ
ಬೆಳೆ ಸಮೀಕ್ಷೆ ಏಕೆ ಮಹತ್ವದ್ದು? : ರೈತರು ಸಲ್ಲಿಸುವ ಬೆಳೆ ಮಾಹಿತಿಯನ್ನು ಈ ಕೆಳಗಿನ ಉದ್ದೇಶಗಳಿಗೆ ಬಳಸಲಾಗುತ್ತದೆ.
- ಪ್ರಕೃತಿ ವಿಕೋಪ ಪರಿಹಾರ ವಿತರಣೆ
- ಬೆಳೆ ವಿಮೆ ಯೋಜನೆ ಅನುಷ್ಠಾನ
- ವಿವಿಧ ಬೆಳೆಗಳ ವಿಸ್ತೀರ್ಣ ವರದಿ ತಯಾರಿ
- ಕೃಷಿ, ತೋಟಗಾರಿಕೆ ಹಾಗೂ ರೇಷ್ಮೆ ಇಲಾಖೆಗಳ ಫಲಾನುಭವಿ ಯೋಜನೆಗಳು
- ರೈತರ ಪಹಣಿಯಲ್ಲಿ ಬೆಳೆ ವಿವರ ದಾಖಲಿಸುವ ಕಾರ್ಯ
ಜಿಲ್ಲೆಯ ರೈತರು ನಿಗದಿತ ಅವಧಿಯೊಳಗೆ ಯಾವುದೇ ಲೋಪದೋಷಗಳಿಲ್ಲದೆ ತಮ್ಮ ಜಮೀನಿನ ಸರ್ವೆ ನಂಬರ್ವಾರು ಬೆಳೆ ವಿವರವನ್ನು ತಾವೇ ಖುದ್ದಾಗಿ ಮೊಬೈಲ್ ತಂತ್ರಾಂಶದಲ್ಲಿ ದಾಖಲಿಸಿ ಮುಂಗಾರು 2026-27ರ ಬೆಳೆ ಸಮೀಕ್ಷೆ ಯಶಸ್ವಿಗೊಳಿಸುವಂತೆ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.
The Karnataka Agriculture Department has launched the 2026-27 Kharif Crop Survey, allowing farmers to submit crop details themselves through the “Mungaru Raithara Bele Sameekshe-2026-27” mobile app. The data will be used for crop insurance, disaster relief, beneficiary schemes, crop statistics, and land records.

