ಡೀಸೆಲ್ ದರ ಹೆಚ್ಚಳವನ್ನು ರಾಜ್ಯ ಸರ್ಕಾರ ಹಿಂಪಡೆಯಬೇಕು, ಟೋಲ್ ಶುಲ್ಕ ಕಡಿಮೆ ಮಾಡಬೇಕು, ಆರ್ಟಿಒ ಗಡಿ ಚೆಕ್ಪೋಸ್ಟ್ ತೆಗೆಯಬೇಕು, ಎಫ್ಸಿ ಶುಲ್ಕ ಕಡಿಮೆ ಮಾಡಬೇಕು, ಸರಕು ಸಾಗಾಣೆ ವಾಹನ ನಿರ್ಬಂಧ ಹಿಂಪಡೆಯಬೇಕು ಎಂಬ ನಾಲ್ಕು ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯದ ವಿವಿಧೆಡೆಗಳಲ್ಲಿ ಅನಿರ್ದಿಷ್ಟಾವಧಿ ಲಾರಿ ಮುಷ್ಕರ ಆರಂಭಗೊಂಡಿದೆ. ಬೆಂಗಳೂರು ಗ್ರಾಮಾಂತರ, ಮೈಸೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ಲಾರಿ ಸಂಚಾರ ಭಾಗಶಃ ಸ್ಥಗಿತಗೊಂಡಿದೆ. ಕರ್ನಾಟಕ ರಾಜ್ಯ ಲಾರಿ ಮಾಲೀಕರ ಸಂಘಟನೆ ಕರೆ ನೀಡಿರುವ ಮುಷ್ಕರಕ್ಕೆ ದೇಶದ 60 ವಿವಿಧ ಸಂಘಟನೆಗಳು ತಮ್ಮ ಬೆಂಬಲ ಸೂಚಿಸಿವೆ. ಸುಮಾರು 6 ಲಕ್ಷ ಲಾರಿಗಳ ಸಂಚಾರ ಸ್ಥಗಿತಗೊಂಡಿದೆ ಎಂದು ವರದಿಯಾಗಿದೆ. ಈ ನಡುವೆ ಲಾರಿ ಮಾಲೀಕರ ಜೊತೆ ಸಿಎಂ ನಿವಾಸದಲ್ಲಿ ನಡೆದ ಮಾತುಕತೆಯಲ್ಲಿ ಲಾರಿ ಮಾಲೀಕರು ಇಟ್ಟ ಎಲ್ಲಾ ಬೇಡಿಕೆ ಪೂರೈಕೆಗೆ ಸರ್ಕಾರ ಒಪ್ಪಿಲ್ಲ. ಹೀಗಾಗಿ ಲಾರಿ ಮಾಲೀಕರು ಮುಷ್ಕರ ವಾಪಸ್ ಪಡೆಯದಿರಲು ನಿರ್ಧರಿಸಿದ್ದಾರೆ. ಮತ್ತಷ್ಟು ಉಗ್ರ ಹೋರಾಟ ಮಾಡುವ ಸೂಚನೆಯನ್ನು ನೀಡಿದ್ದಾರೆ.