ಕರ್ನಾಟಕ ಸ್ಟೇಟ್ ಸ್ಕೂಲ್ ಚೆಸ್ ಚಾಂಪಿಯನ್ಶಿಪ್–2026ಗೆ ಕಾಪುವಿನ ಶ್ರೀ ಹಳೇ ಮಾರಿಯಮ್ಮ ಸಭಾಭವನದಲ್ಲಿ ಶನಿವಾರ ಚಾಲನೆ ದೊರೆಯಿತು. ಶ್ರೀ ನಾರಾಯಣಗುರು ಸ್ಪೋರ್ಟ್ಸ್ ಆ್ಯಂಡ್ ಎಜುಕೇಷನಲ್ ಟ್ರಸ್ಟ್ ನೇತೃತ್ವದಲ್ಲಿ, ಉಡುಪಿ ಜಿಲ್ಲಾ ಚೆಸ್ ಅಸೋಸಿಯೇಷನ್, ಕರ್ನಾಟಕ ರಾಜ್ಯ ಚೆಸ್ ಅಸೋಸಿಯೇಷನ್ ಹಾಗೂ ಆಫಿಲಿಯನ್ಸ್ ಟೆಕ್ನಾಲಜಿ, ಮಂಗಳೂರು ಸಹಯೋಗದಲ್ಲಿ ಎರಡು ದಿನಗಳ ಈ ಚಾಂಪಿಯನ್ಶಿಪ್ ಆಯೋಜಿಸಲಾಗಿದೆ.
ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ, ಕಳೆದ ಎರಡು ದಶಕಗಳಿಂದ ನಿರಂತರವಾಗಿ ಚೆಸ್ ಸ್ಪರ್ಧೆಗಳನ್ನು ಆಯೋಜಿಸುತ್ತಿರುವ ಸಂಸ್ಥೆಯ ಸೇವೆಯನ್ನು ಶ್ಲಾಘಿಸಿದರು. ಅಭಿವೃದ್ಧಿಯ ಹಾದಿಯಲ್ಲಿ ಸಾಗುತ್ತಿರುವ ಕಾಪುವಿನಲ್ಲಿ ರಾಜ್ಯಮಟ್ಟದ ಚೆಸ್ ಚಾಂಪಿಯನ್ಶಿಪ್ ಆಯೋಜನೆಯಾಗಿರುವುದು ಹೆಮ್ಮೆಯ ವಿಷಯವಾಗಿದ್ದು, ಎಲ್ಲಾ ಸ್ಪರ್ಧಿಗಳು ಕ್ರೀಡಾ ಮನೋಭಾವದಿಂದ ಉತ್ತಮ ಪ್ರದರ್ಶನ ನೀಡುವಂತೆ ಶುಭ ಹಾರೈಸಿದರು.
ಚೆಸ್ ಕಾಯಿ ಮುನ್ನಡೆಸಿದ ಕಾಪು ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನದ ಆಡಳಿತ ಮೊಕ್ತೇಸರ ಮನೋಹರ್ ಎಸ್. ಶೆಟ್ಟಿ, ಚೆಸ್ ಸ್ಪರ್ಧೆಗಳು ಮಕ್ಕಳಲ್ಲಿ ಏಕಾಗ್ರತೆ, ಆತ್ಮವಿಶ್ವಾಸ, ತಾರ್ಕಿಕ ಚಿಂತನೆ ಹಾಗೂ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಿವೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಂಆರ್ಪಿಎಲ್ನ ಸಿಎಸ್ಆರ್ ಮ್ಯಾನೇಜರ್ ಮಂದಾರ ವಿ. ಕಾಳೆ, , ಮಕ್ಕಳ ಮೇಲೆ ಅನಗತ್ಯ ಒತ್ತಡ ಹೇರದೆ ಅವರ ಪ್ರತಿಭೆ, ಆಸಕ್ತಿ ಹಾಗೂ ಕನಸುಗಳಿಗೆ ಪೋಷಕರು ಮತ್ತು ಶಿಕ್ಷಕರು ಬೆಂಬಲ ನೀಡಬೇಕು ಎಂದು ಕರೆ ನೀಡಿದರು.
ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಸ್ಪರ್ಧಿಗಳಿಗೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಡಾ. ವ್ಯಾಸರಾಜ ತಂತ್ರಿ, ಅಜಯ್ ಕುಮಾರ್ ಶೆಟ್ಟಿ, ಅವಿನಾಶ್ ಶೆಟ್ಟಿ, ಶ್ರೀಧರ ಶೆಣೈ, ಲೋಕೇಶ್ ಬೆಳ್ಚಡ ಹಾಗೂ ಮಾಧುರ್ಯ ಎಸ್.ಕೆ. ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.
ಶ್ರೀ ನಾರಾಯಣ ಗುರು ಸ್ಕೂಲ್ ಆಫ್ ಚೆಸ್ನ ಸ್ಥಾಪಕ ಸಾಕ್ಷಾತ್ ಯು.ಕೆ. ಸ್ವಾಗತಿಸಿದರು. ಟ್ರಸ್ಟ್ ಅಧ್ಯಕ್ಷ ಉಮಾನಾಥ ಕಾಪು ವಂದಿಸಿದರು. ನಿರ್ದೇಶಕಿ ಸೌಂದರ್ಯ ಯು.ಕೆ. ಕಾರ್ಯಕ್ರಮ ನಿರೂಪಿಸಿದರು.
24 ಮಂದಿಗೆ ರಾಷ್ಟ್ರಮಟ್ಟದ ಅವಕಾಶ
ಎರಡು ದಿನಗಳ ಕಾಲ ನಡೆಯಲಿರುವ ಈ ಚಾಂಪಿಯನ್ಶಿಪ್ನಲ್ಲಿ 7, 9, 11, 13, 15 ಹಾಗೂ 17 ವರ್ಷದೊಳಗಿನ ಬಾಲಕ ಮತ್ತು ಬಾಲಕಿಯರಿಗಾಗಿ ಪ್ರತ್ಯೇಕ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯುತ್ತಿವೆ. ರಾಜ್ಯದ ವಿವಿಧ ಜಿಲ್ಲೆಗಳಿಂದ 400ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿದ್ದಾರೆ.
ಪ್ರತಿ ವಿಭಾಗದಿಂದ ಇಬ್ಬರು ಬಾಲಕರು ಹಾಗೂ ಇಬ್ಬರು ಬಾಲಕಿಯರು ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಲಿದ್ದು, ಒಟ್ಟು 24 ಮಂದಿ ರಾಷ್ಟ್ರಮಟ್ಟದ ಚೆಸ್ ಚಾಂಪಿಯನ್ಶಿಪ್ಗೆ ಅರ್ಹತೆ ಪಡೆಯಲಿದ್ದಾರೆ. ಜೊತೆಗೆ ಆರು ವಿಭಾಗಗಳಲ್ಲಿ ಬಾಲಕ ಮತ್ತು ಬಾಲಕಿಯರಿಗೆ ತಲಾ ಹತ್ತು ಟ್ರೋಫಿಗಳಂತೆ ಒಟ್ಟು 120 ಟ್ರೋಫಿಗಳನ್ನು ವಿತರಿಸಲಾಗುವುದು ಎಂದು ಸಂಘಟಕ ಸಾಕ್ಷಾತ್ ಯು.ಕೆ. ತಿಳಿಸಿದ್ದಾರೆ.
The Karnataka State School Chess Championship 2026 began in Kapu with more than 400 students participating from across the state. Winners from each age category will qualify for the national-level championship, with a total of 24 players earning national berths.
ಅಸ್ಸಾಂನ ಇಬ್ಬರು ಅಡಿಕೆ ವ್ಯಾಪಾರಿಗಳಿಗೆ ಸೇರಿದ ₹1.12 ಕೋಟಿ ಮೌಲ್ಯದ 34 ಟನ್…
ಈ ವರ್ಷ ದೇಶದಲ್ಲಿ ಬರಗಾಲ ಉಂಟಾಗುವ ಸಾಧ್ಯತೆ ಇರುವುದರಿಂದ ರೈತರನ್ನು ರಕ್ಷಿಸಲು ಎಲ್ಲರೂ…
ಒಂದು ಕಾಲದಲ್ಲಿ ಬಡವರ ಹಣ್ಣು ಎಂದೇ ಕರೆಯಲ್ಪಟ್ಟ ಹಲಸು ಈಗ ಆರೋಗ್ಯಕರ ಆಹಾರ…
ಧರ್ಮಸ್ಥಳದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ರೈತರಿಗೆ ಉತ್ತಮ…
ಅಡಿಕೆ ಉತ್ಪಾದನಾ ವೆಚ್ಚ ಭಾರೀ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಕನಿಷ್ಠ ಆಮದು ಬೆಲೆ (MIP)ಯನ್ನು…
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಂಗಾರು ಭತ್ತದ ಬೆಳೆ ವಿಮೆ ನೋಂದಣಿ ಆರಂಭವಾಗಿದ್ದು, ಆಗಸ್ಟ್…