Advertisement
MIRROR FOCUS

ಕವಲು ದಾರಿಯಲ್ಲಿ ಕರ್ನಾಟಕದ ರಬ್ಬರ್ ಆರ್ಥಿಕತೆ | ಒಂದು ಅಧ್ಯಯನ ವರದಿ

Share

ಜಾಗತಿಕ ಮಟ್ಟದಲ್ಲಿ ರಬ್ಬರ್ ಕೃಷಿ. ಥೈಲ್ಯಾಂಡ್, ಇಂಡೋನೇಷಿಯಾ ಮತ್ತು ವಿಯೆಟ್ನಾಂ ರಾಷ್ಟ್ರಗಳು ರಬ್ಬರ್ ಉತ್ಪಾದನೆಯಲ್ಲಿ ಮೊದಲ ಮೂರು ಸ್ಥಾನಗಳಲ್ಲಿ ಇದ್ದು,ಭಾರತ 5 ನೇ ಸ್ಥಾನ ಪಡೆದಿದೆ.

Advertisement
Advertisement

ಭಾರತದಲ್ಲಿ ರಬ್ಬರ್ ಕೃಷಿ : 1902 ರ ಸಮಯದಲ್ಲಿ ಆರಂಭಗೊಂಡ ರಬ್ಬರ್ ಕೃಷಿಯನ್ನು ಇಂದು ಕೇರಳ, ತ್ರಿಪುರ, ತಮಿಳುನಾಡು, ಕರ್ನಾಟಕ, ಅಸ್ಸಾಂ, ಮೇಘಾಲಯ ರಾಜ್ಯಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಾಡಲಾಗುತ್ತಿದೆ.ಇವುಗಳೊಂದಿಗೆ ಮಣಿಪುರ, ನಾಗಾಲ್ಯಾಂಡ್, ಮಿಜೋರಾಂ, ಗೋವಾ ಮತ್ತು ಮಹಾರಾಷ್ಟ್ರ ಮುಂತಾದ ರಾಜ್ಯಗಳಲ್ಲಿ ಅಲ್ಪ ಪ್ರಮಾಣದಲ್ಲಿ ಇದರ ಕೃಷಿ ಆಗುತ್ತಿದೆ. ಇವುಗಳ ಪೈಕಿ ಕೇರಳ ಮತ್ತು ತಮಿಳುನಾಡು ರಾಜ್ಯಗಳನ್ನು ರಬ್ಬರ್ ಬೆಳೆಯುವ ಸಾಂಪ್ರದಾಯಿಕ ರಾಜ್ಯಗಳೆಂದು ಪರಿಗಣಿಸಲಾಗಿದ್ದು,ಇನ್ನುಳಿದ ರಾಜ್ಯಗಳನ್ನು ಅಸಂಪ್ರದಾಯಿಕ ರಾಜ್ಯಗಳೆಂದು ಹೆಸರಿಸಲಾಗಿದೆ.

ಭಾರತದಲ್ಲಿ ರಬ್ಬರ್ ಬೆಳೆಯ ವಿಸ್ತೀರ್ಣ ಮತ್ತು ಉತ್ಪಾದನೆ :  ರಬ್ಬರ್ ಬೋರ್ಡ್ ಒದಗಿಸುವ ಅಂಕಿ ಅಂಶಗಳ ಪ್ರಕಾರ 2024-2025 ರ ಸಮಯದಲ್ಲಿ ಈ ಬೆಳೆಯ ಒಟ್ಟು ವಿಸ್ತೀರ್ಣ ಸುಮಾರು 9,41,200 ಹೆಕ್ಟೇರ್ ಆಗಿ ಉತ್ಪಾದನೆ ಸುಮಾರು 8,75,000 ಟನ್ ಆಗಿತ್ತು.ಇಲ್ಲಿ ವಿಸ್ತೀರ್ಣ ಮತ್ತು ಉತ್ಪಾದನೆ ದೃಷ್ಟಿಯಿಂದ ಕೇರಳ ರಾಜ್ಯ ಏಕಸ್ವಾಮ್ಯ ಹೊಂದಿದೆ.ಭಾರತದಲ್ಲಿ ಇದರ ಕೃಷಿಯನ್ನು ಮಾಡುವ ಕೃಷಿಕರಲ್ಲಿ ಶೇಕಡಾ 95 ರಷ್ಟು ಸಣ್ಣ ಕೃಷಿಕರು ಆಗಿದ್ದಾರೆ.

ಆಂತರಿಕ ಬಳಕೆ: ನಮ್ಮಲ್ಲಿ ಬಳಕೆ ಆಗುವ ರಬ್ಬರಿನ ಶೇಕಡಾ 50 ವಾಹನ ಉದ್ದಿಮೆ, ಶೇಕಡಾ 15 ಸೈಕಲ್ ಚಕ್ರ ಹಾಗೂ ಟ್ಯೂಬ್, ಶೇಕಡಾ 12 ಪಾದರಕ್ಷೆ, ಶೇಕಡಾ 6 ಬೆಲ್ಟ್, ಶೇಕಡಾ 7 ಒಂಟೆಯ ಹೊದಿಕೆ ಇತ್ಯಾದಿಗಳಿಗೆ ಬಳಕೆ ಆಗುತ್ತಿದೆ.ಒಟ್ಟಾರೆಯಾಗಿ ನಮ್ಮಲ್ಲಿ ಸುಮಾರು 35,000 ರಬ್ಬರಿನ ಉತ್ಪನ್ನಗಳ ಉತ್ಪಾದನೆ ನಮ್ಮಲ್ಲಿ ಆಗುತ್ತಿದೆ.

ಭಾರತದಲ್ಲಿ ಸ್ವಾಭಾವಿಕ ರಬ್ಬರ್ ಉತ್ಪಾದನೆ ಮತ್ತು ಬಳಕೆ :  2024-2025 ರ ಸಮಯದಲ್ಲಿ ನಮ್ಮ ಉತ್ಪಾದನೆ ಸುಮಾರು 8,75,000 ಟನ್ ಆಗಿದ್ದರೆ ಇದರ ಬಳಕೆ ಸುಮಾರು 14,10,000 ಟನ್ ಆಗಿತ್ತು. ಪರಿಣಾಮವಾಗಿ ಆಂತರಿಕ ಬೇಡಿಕೆಯನ್ನು ಸರಿದೂಗಿಸಲು ದೇಶ ವಿಯೆಟ್ನಾಂ, ಇಂಡೋನೇಷಿಯಾ, ಐವರಿ ಕೋಸ್ಟ್,ಥೈಲ್ಯಾಂಡ್ ಮತ್ತು ಚೀನಾ ರಾಷ್ಟ್ರಗಳಿಂದ ಆಮದು ಮಾಡಿಕೊಳ್ಳಲು ದಾರಿಯಾಯಿತು. ಈ ಆಮದಿನ ಪ್ರಮಾಣ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಾ ಹೋಗುತ್ತಿದೆ. ಇನ್ನೊಂದು ಬದಿಯಲ್ಲಿ ಆಂತರಿಕ ಉತ್ಪಾದನೆ ನಿಧಾನಗತಿಯಲ್ಲಿ ಏರುತ್ತಿದೆ.

ಆಂತರಿಕವಾಗಿ ಬೆಳೆಗಾರರನ್ನು ರಕ್ಷಿಸುವ ಉದ್ದೇಶದಿಂದ ಕೇಂದ್ರ ಸರಕಾರ ಇದರ ಆಮದಿನ ಮೇಲೆ ಶೇಕಡಾ 25 ರ ಸುಂಕ ಅಥವಾ ಕಿಲೋ ಒಂದರ ಮೇಲೆ ರೂಪಾಯಿ 30 ವಿಧಿಸಿ ಹತೋಟಿಗೆ ಪ್ರಯತ್ನಿಸಿದ್ದರೂ ನಮ್ಮ ಆಮದು 2024-2025 ರ ಸಮಯದಲ್ಲಿ 5,50,000 ಟನ್ ಆಗಿತ್ತು. ಇನ್ನೊಂದು ಬದಿಯಲ್ಲಿ ನಮ್ಮ ರಫ್ತಿನ ಪ್ರಮಾಣ ಇದೇ ಅವಧಿಯಲ್ಲಿ ಕೇವಲ 4,819 ಟನ್ ಆಗಿತ್ತು.

ಒಟ್ಟಾರೆಯಾಗಿ ನಮ್ಮ ಆಮದು ಹೆಚ್ಚಾಗಿ ರಫ್ತು ಕಡಿಮೆಯಾಗಿ ದೇಶದ ಆರ್ಥಿಕ ಅಭಿವೃದಿಗೆ ಅನಿವಾರ್ಯವಾದ ವಿದೇಶಿ ವಿನಿಮಯದ ಹೊರಹರಿವು ಹೆಚ್ಚಾಗುತ್ತಿದೆ. ಈ ಎಲ್ಲಾ ದೃಷ್ಟಿಯಿಂದ ಭಾರತ ಸ್ವಾಭಾವಿಕ ರಬ್ಬರ್ ಉತ್ಪಾದನೆಯನ್ನು ಹೆಚ್ಚಿಸಿ ಸ್ವಾವಲಂಬನೆ ಸಾಧಿಸಬೇಕಾದ ಅನಿವಾರ್ಯತೆ ಇದೆ. ಈ ನಿಟ್ಟಿನಲ್ಲಿ ಇಲ್ಲಿನ ಕೃಷಿಕರು ಇಂದು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕಿದೆ.

ಕರ್ನಾಟಕದಲ್ಲಿ ರಬ್ಬರ್ ಕೃಷಿ : ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನಲ್ಲಿ 1961 ರ ಸಮಯದಲ್ಲಿ ಆರಂಭಗೊಂಡ ರಬ್ಬರ್ ಕೃಷಿ ಇಂದು ಇಡೀ ದಕ್ಷಿಣ ಕನ್ನಡ ಜಿಲ್ಲೆ,ಉಡುಪಿ,ಕೊಡಗು,ಚಿಕ್ಕಮಗಳೂರು, ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಗಳಿಗೆ ವಿಸ್ತರಿಸಿದೆ.ಈ ಎಲ್ಲಾ ಜಿಲ್ಲೆಗಳಲ್ಲಿ ಅಂದಾಜು 50,000 ಕೃಷಿಕರು ಇದ್ದು,ಇವರಲ್ಲಿ ಶೇಕಡಾ 95 ಕೃಷಿಕರು ಸಣ್ಣ ಮತ್ತು ಮಧ್ಯಮ ವರ್ಗದವರಾಗಿದ್ದಾರೆ.

ವಿಸ್ತೀರ್ಣ ಮತ್ತು ಉತ್ಪಾದನೆ: 2019-2020 ರ ಸಮಯದಲ್ಲಿ ಸುಮಾರು 51,450 ಹೆಕ್ಟೇರ್ ಪ್ರದೇಶದಲ್ಲಿ ಇದರ ಕೃಷಿ ಇದ್ದುದು 2023-2024 ರ ಸಮಯದಲ್ಲಿ 50,800 ಹೆಕ್ಟೇರಿಗೆ ಇಳಿದಿದೆ. ಉತ್ಪಾದನೆ ದೃಷ್ಟಿಯಿಂದ ನೋಡುವುದಾದರೆ ಇದೇ ಅವಧಿಯಲ್ಲಿ ಅದು 41,550 ಟನ್ ಇದ್ದುದು 52,780 ಟನ್ ಆಗಿತ್ತು.  ಇತ್ತೀಚಿನ ವರ್ಷಗಳಲ್ಲಿ ಈ ವಿಸ್ತೀರ್ಣ ಕಡಿಮೆ ಆಗಿ ಆ ಪ್ರದೇಶಗಳಲ್ಲಿ ಅಡಿಕೆ,ನಾನಾ ರೀತಿಯ ಹಣ್ಣುಗಳ ಕೃಷಿ ಹೆಚ್ಚಾಗುತ್ತಿದೆ ಮಾತ್ರವಲ್ಲದೆ ರಬ್ಬರು ಮರಗಳನ್ನು ಕಡಿದು ಅಲ್ಲಿ ಕಟ್ಟಡಗಳ ನಿರ್ಮಾಣ ಆಗುತ್ತಿದೆ. ಇದಕ್ಕೆಲ್ಲ ಮುಖ್ಯ ಕಾರಣ ಕುಸಿಯುತ್ತಿರುವ ಧಾರಣೆ ಮತ್ತು ಇತರ ಸಮಸ್ಯೆಗಳು.

ಕರ್ನಾಟಕದಲ್ಲಿ ರಬ್ಬರ್ ಮಾರಾಟ ವ್ಯವಸ್ಥೆ:  ರಬ್ಬರ್ ಬೋರ್ಡ್ ಒದಗಿಸುವ ಮಾಹಿತಿ ಪ್ರಕಾರ ಇಲ್ಲಿ 84 ರಬ್ಬರ್ ಉತ್ಪಾದಕರ ಸಂಘಗಳು,3 ಒಕ್ಕೂಟ ಸಂಸ್ಕರಣಾ ಕೇಂದ್ರಗಳು,142 ನೋಂದಾಯಿತ ವ್ಯವಹಾರಸ್ಥರು ಮತ್ತು 142 ಪರವಾನಗಿ ಹೊಂದಿದ ರಬ್ಬರ್ ಉತ್ಪನ್ನಗಳ ಉತ್ಪಾದಕರು ಮತ್ತು 5 ರಬ್ಬರ್ ಸಂಸ್ಕರಣಕಾರರು ಇದ್ದಾರೆ.

ಕರ್ನಾಟಕದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ರಬ್ಬರ್ ಉತ್ಪಾದನೆಯಲ್ಲಿ ಮೊದಲನೇ ಸ್ಥಾನದಲ್ಲಿದೆ. ಇದರ ಖರೀದಿ ಮತ್ತು ಮಾರಾಟ ವ್ಯವಸ್ಥೆಯಲ್ಲಿ ಉತ್ಪಾದಕರ ಸಂಘಗಳು,ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಮತ್ತು ಕ್ಯಾಂಪ್ಕೊ ಸಂಸ್ಥೆ ಇವೆ. 1985 ರ ಸಮಯದಲ್ಲಿ ಆರಂಭಗೊಂಡ ಬೆಳ್ತಂಗಡಿ ತಾಲೂಕು ರಬ್ಬರ್ ಬೆಳೆಗಾರರ ಮಾರ್ಕೆಟಿಂಗ್ ಮತ್ತು ಪ್ರೊಸೆಸಿಂಗ್ ಕೋ ಆಪರೇಟಿವ್ ಸೊಸೈಟಿ,ಉಜಿರೆ ಕರ್ನಾಟಕ ರಾಜ್ಯದಲ್ಲಿ ಉತ್ಪಾದನೆ ಆಗುವ ರಬ್ಬರಿನ ಒಟ್ಟು ಪ್ರಮಾಣದ ಶೇಕಡಾ 40 ಮಾರಾಟ ಮಾಡುತ್ತದೆ. ಈ ಸಂಘ ರಬ್ಬರಿನ ಖರೀದಿಗಾಗಿ 4 ಜಿಲ್ಲೆಗಳಲ್ಲಿ 33 ಶಾಖೆಗಳನ್ನು ಹೊಂದಿ ಬೆಳೆಗಾರರಿಗೆ ನೆರವಾಗುತ್ತಿದೆ.
ರಬ್ಬರ್ ಬೆಳೆಗಾರರ ಹಿತ ಕಾಪಾಡುವ ದೃಷ್ಟಿಯಿಂದ ಉಜಿರೆಯ ಹಿತರಕ್ಷಣಾ ವೇದಿಕೆ ಮತ್ತು ರಾಜ್ಯ ಮಟ್ಟದ ರಬ್ಬರ್ ಬೆಳೆಗಾರರ ಸಂಘಟನೆ ಕೃಪಾ ಕಾರ್ಯನಿರ್ವಹಿಸುತ್ತಿವೆ.

ಕರ್ನಾಟಕದ ರಬ್ಬರ್ ಬೆಳೆಗಾರರ ಸಮಸ್ಯೆಗಳು: 

  1. ಹೆಚ್ಚುತ್ತಿರುವ ಉತ್ಪಾದನಾ ವೆಚ್ಚ
  2. ಕಾರ್ಮಿಕರ ಅಭಾವ
  3. ಏರುಪೇರಾಗುತ್ತಿರುವ ಧಾರಣೆ
  4. ಹೆಚ್ಚುತ್ತಿರುವ ಆಮದು
  5. ಸರಕಾರಗಳ ಬೆಂಬಲದ ಕೊರತೆ
  6. ಹವಾಮಾನದ ವೈಪರೀತ್ಯದಿಂದಾಗಿ ಕಂಡು ಬರುವ ಸಮಸ್ಯೆಗಳು
  7. ಕೇಂದ್ರ ಮತ್ತು ರಾಜ್ಯ ಸರ್ಕಾರ ರಬ್ಬರನ್ನು ಕೃಷಿ ಉತ್ಪನ್ನ ಎಂದು ಪರಿಗಣಿಸದೆ ಇರುವುದು.
  8. ಇತರೇ ಕೃಷಿಕರಿಗೆ ದೊರಕುವ ಬೆಂಬಲ ಬೆಲೆ,ಮಾರುಕಟ್ಟೆ ಮದ್ಯ ಪ್ರವೇಶ,ವಿಮಾ ಯೋಜನೆ ಇತ್ಯಾದಿಗಳು ದೊರಕದೇ ಇರುವುದು.

ಕರ್ನಾಟಕದಲ್ಲಿ ರಬ್ಬರ್ ಉತ್ಪಾದನಾ ವೆಚ್ಚ. ಇದರ ನಿರ್ಧರಿಸುವಿಕೆಗಾಗಿ ರಬ್ಬರು ಬೆಳೆಯುವ ನಾನಾ ಜಿಲ್ಲೆಗಳ 200 ಬೆಳೆಗಾರರನ್ನು ಸೊಸೈಟಿ ಮೂಲಕ ಸಂಪರ್ಕಿಸಿ ಪ್ರಾಥಮಿಕ ಮಾಹಿತಿ ಸಂಗ್ರಹಿಸಿ ಇಲ್ಲಿ ಉತ್ಪಾದನಾ ವೆಚ್ಚ ನಿಗದಿ ಪಡಿಸಲಾಗಿದೆ.  ಸಮೀಕ್ಷೆ ಆಧಾರದಲ್ಲಿ ಲೆಕ್ಕಾಚಾರ ಮಾಡಿದಾಗ
ಒಂದು ಕಿಲೋ ರಬ್ಬರ್ ಉತ್ಪಾದನಾ ವೆಚ್ಚ ರೂಪಾಯಿ 258.55 ಆಗಿದೆ. ಅಧ್ಯಯನ ಅವಧಿಯ ಧಾರಣೆ ಒಂದು ಕಿಲೋಗೆ ಸರಾಸರಿ ರೂಪಾಯಿ 190 ಆಗಿತ್ತು.
ಆದ್ದರಿಂದ ಈಗ ಪ್ರತಿಯೊಬ್ಬ ಬೆಳೆಗಾರರು ಅನುಭವಿಸುವ ಒಟ್ಟು ನಷ್ಟ ಕಿಲೋ ಒಂದರ ರೂಪಾಯಿ 68.55.

ಸಾಮಾನ್ಯವಾಗಿ ಬೆಳೆಗಾರನಿಗೆ ಶೇಕಡಾ 25 ರಷ್ಟು ಲಾಭಗಳಿಸುವ ಅರ್ಹತೆ ಇರುವ ಕಾರಣ ಉತ್ಪಾದನಾ ವೆಚ್ಚಕ್ಕೆ ಅದನ್ನು ಸೇರಿಸಿದಾಗ ಈ ಮೊತ್ತ ಕಿಲೋ ಒಂದರ ರೂಪಾಯಿ 323.19 ಆಗುತ್ತದೆ.

ಪರಿಹಾರೋಪಾಯಗಳು: 

  1. ಆಂತರಿಕವಾಗಿ ಉತ್ಪಾದನೆ ಹೆಚ್ಚಿಸಲು ಮತ್ತು ಬೆಳೆಗಾರರನ್ನು ರಕ್ಷಿಸುವ ಉದ್ದೇಶದಿಂದ ಆಮದಿನ ಮೇಲಿನ ಸುಂಕವನ್ನು ಹೆಚ್ಚಿಸಬೇಕು.
  2. ಆಂತರಿಕ ಉತ್ಪಾದನಾ ವೆಚ್ಚಕ್ಕೆ ಅನುಗುಣವಾಗಿ ಆಮದಿನ ಮೇಲೆ ಸುಂಕ ನಿರ್ಧಾರ ಆಗಬೇಕು.
  3. ಆಮದು ಆಗುವ ರಬ್ಬರಿನ ಕನಿಷ್ಠ ಬೆಲೆ ಕಿಲೋ ಒಂದರ ರೂಪಾಯಿ 323 ಇರಬೇಕು.
  4. ಕನಿಷ್ಟ ಬೆಂಬಲ ಬೆಲೆ ನಿಗದಿ ಮಾಡಬೇಕು.
  5. ಮಾರುಕಟ್ಟೆ ಮದ್ಯ ಪ್ರವೇಶ
  6. ಬೆಳೆ ವಿಮೆ
  7. ಬೆಳೆ ಮತ್ತು ಬೆಳೆಗಾರರ ರಕ್ಷಣೆಗೆ ಪೂರಕ ನೀತಿ
  8. ಬೆಲೆ ಸ್ಥಿರೀಕರಣ ನಿಧಿ ಸ್ಥಾಪನೆ
  9. ರಬ್ಬರ್ ಒಂದು ಲಾಭದಾಯಕ ಉದ್ದಿಮೆಯಾಗಬೇಕು.
  10. ಕ್ಷೇತ್ರದ ಅಧ್ಯಯನ ಮಾಡಲು ಸರಕಾರ ಒಂದು ಉನ್ನತ ಮಟ್ಟದ ಸಮಿತಿಯ ರಚನೆ ಮಾಡಬೇಕು
  11. ರಬ್ಬರು ಒಂದು ಕೃಷಿ ಉತ್ಪನ್ನ ಆಗಬೇಕು
  12. ಸಬ್ಸಿಡಿ ಪ್ರಮಾಣ ಹೆಚ್ಚಳ ಮಾಡಿ ವಿಸ್ತೀರ್ಣದ ವಿಸ್ತರಣೆ ಆಗಬೇಕು
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಡಾ|ವಿಘ್ನೇಶ್ವರ ಭಟ್‌ ವರ್ಮುಡಿ

ಡಾ|ವಿಘ್ನಶ್ವರ ಭಟ್ ವರ್ಮುಡಿ ಅವರು ಕೃಷಿಕರು. ಪುತ್ತೂರಿನ ವಿವೇಕಾನಂದ ಮಹಾವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾಗಿದ್ದವರು. ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧೀನ ಸಂಸ್ಥೆಯದ ಪೆರ್ಲದ ನಲಂದಾ ಮಹಾವಿದ್ಯಾಲಯದ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೃಷಿ ಅರ್ಥಶಾಸ್ತ್ರಜ್ಞರಾಗಿ ಗುರುತಿಸಿಕೊಂಡಿದ್ದಾರೆ. ಹಲವು ಸಂಶೋಧನಾ ಬರಹಗಳು ಪ್ರಕಟವಾಗಿದೆ. ಅಡಿಕೆ ಮಾರುಕಟ್ಟೆ ಬಗ್ಗೆ ಅಧಿಕೃತವಾಗಿ ಮಾತನಾಡುವ ವ್ಯಕ್ತಿಯಾಗಿದ್ದಾರೆ. ಹಲವು ಸಂಘಟನೆಗಳಲ್ಲಿ ಸಕ್ರಿಯವಾಗಿ ಕೆಲಸ ಮಾಡಿದ್ದಾರೆ. ಅಡಿಕೆಯ ಬಗ್ಗೆ ವಿವಿಧ ಬರಹಗಳನ್ನು ಪ್ರಕಟಿಸಿದ್ದಾರೆ.

Published by
ಡಾ|ವಿಘ್ನೇಶ್ವರ ಭಟ್‌ ವರ್ಮುಡಿ

Recent Posts

ಮಣ್ಣಿಲ್ಲದೇ ಅವಕಾಡೊ ಬೆಳೆ..! ಜೇನು ಸೇರಿಸಿದ ಕೃಷಿ ಈಗ ಹೊಸ ಟ್ರೆಂಡ್

2026 ರಲ್ಲಿ ಹೈಡ್ರೋಪೋನಿಕ್ ಅವಕಾಡೊ ಕೃಷಿ ಮತ್ತು ಜೇನು ಪರಾಗಸ್ಪರ್ಶದ ಸಂಯೋಜನೆ ಹೊಸ…

8 hours ago

ರೇಷ್ಮೆ ಗೂಡಿಗೆ 800 ರೂ.ವರೆಗೆ ಬೆಲೆ | ಚಾಮರಾಜನಗರದಲ್ಲಿ ರೈತರಿಗೆ ಲಾಭದಾಯಕ ಹಾದಿ

ಚಾಮರಾಜನಗರ ಜಿಲ್ಲೆಯಲ್ಲಿ ರೇಷ್ಮೆ ಗೂಡಿಗೆ ಕೆಜಿಗೆ 750ರಿಂದ 800 ರೂಪಾಯಿವರೆಗೆ ಬೆಲೆ ಸಿಗುತ್ತಿದೆ.…

8 hours ago

ಸ್ಥಳೀಯ ಚುನಾವಣೆಗಳಲ್ಲಿ ಇವಿಎಂಗೆ ಬ್ರೇಕ್ | ಬ್ಯಾಲೆಟ್ ಪೇಪರ್ ಮೂಲಕ ಮತದಾನಕ್ಕೆ ಸಚಿವ ಸಂಪುಟ ಹಸಿರು ನಿಶಾನೆ

ಕರ್ನಾಟಕದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಇವಿಎಂ ಬದಲಿಗೆ ಬ್ಯಾಲೆಟ್ ಪೇಪರ್ ಮೂಲಕ ಮತದಾನ…

8 hours ago

ಕೇಂದ್ರವು ಕೇರಳದ ರಬ್ಬರ್ ಕ್ಷೇತ್ರವನ್ನು ದುರ್ಬಲಗೊಳಿಸುತ್ತಿದೆ – ಆರೋಪ

ಕೇಂದ್ರ ಸರ್ಕಾರವು ರಾಜ್ಯದ ರಬ್ಬರ್ ಕೃಷಿಯನ್ನು ಈಶಾನ್ಯಕ್ಕೆ ಸ್ಥಳಾಂತರಿಸುವ ಮೂಲಕ ರಬ್ಬರ್ ಕ್ಷೇತ್ರವನ್ನು…

8 hours ago

ಅಡಿಕೆ ಮಾರುಕಟ್ಟೆ ಸಮೀಕರಣ : ಬೆಲೆ ನಿರ್ಧಾರದ ಹಿಂದಿನ ಅರ್ಥಶಾಸ್ತ್ರ ಮತ್ತು ಮನೋವಿಜ್ಞಾನ

ಅಡಿಕೆ ಮಾರುಕಟ್ಟೆ ಎಂದರೆ ಕೇವಲ ಕೃಷಿ ಉತ್ಪನ್ನಗಳ ವಿನಿಮಯ ಕೇಂದ್ರವಲ್ಲ; ಅದೊಂದು ಸಂಕೀರ್ಣವಾದ…

17 hours ago

ಅಡಿಕೆ ಕಳ್ಳಸಾಗಣೆ ಜಾಲಕ್ಕೆ ಮಿಝೋರಂ ಸರ್ಕಾರದ ಬಿಗಿ ಹಿಡಿತ – ಅಡಿಕೆ ಮಾರುಕಟ್ಟೆ ಚೇತರಿಕೆ ಸಾಧ್ಯತೆ

ಮಿಝೋರಂ ಸರ್ಕಾರವು ಅಡಿಕೆ ಕಳ್ಳಸಾಗಣೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಘೋಷಿಸಿದೆ. ಯಾವುದೇ…

18 hours ago