ಕಾರಣವೇ ಇಲ್ಲದೆ ಮನದಲ್ಲಿ
ಮೌನದ ಮೋಡ ಕವಿದಿದೆ.
ಹೆಜ್ಜೆಯ ಜೊತೆ ಗೆಜ್ಜೆಯ ಸಪ್ಪಳವಿದ್ದರೂ
ನಡಿಗೆಯಲಿ ಏಕಾಂಗಿತನದ ನೆರಳಿದೆ.
ಮನದ ಮೋಡಗಳ ನಡುವೆ ಅದೇಕೋ ಗುದ್ದಾಟ..
ಯಾಕೆ…..ಈ ಸಂಘರ್ಷ…?
ಹನಿಯಾಗಿ ಹರಿಯುತ್ತಿಲ್ಲ.. ಅಲ್ಲೇ ಬತ್ತಿದ ಭಾವ..
ಏನೀ … ತೊಳಲಾಟ…?
ಹೊತ್ತು ಸರಿದಷ್ಟು ಗಾಢ ಕತ್ತಲು ಆವರಿಸುತ್ತಿದೆ…
ಮೌನ ರಕ್ಕಸತನದಿ ಮೆರೆಯುತಿದೆ
ಮಾತು ಹೊರಬರಲು ಅಂಜುತಿದೆ
ಮೊಗದ ಕನ್ನಡಿಯಲಿ…..
ಪ್ರಶ್ನೆಗಳದೇ ಸುರಿಮಳೆ
ಎಲ್ಲಿದೆ …..ಉತ್ತರ…?
ಕಣ್ಣ ರೆಪ್ಪೆಗಳೂ ಮುಚ್ಚದೇ ಕಾಯುತಿದೆ
ತುಟಿಯಂಚಿನಲಿ ಮಾತು ಹೊರಬರಲು ಯತ್ನಿಸುತಿದೆ
ಮನಸ್ಸು ಮೌನದ ಬೇಗೆಯಿಂದ
ಬೇರ್ಪಡಲು ತವಕಿಸುತಿದೆ…
ಮೌನದ ರಕ್ಕಸ ನರ್ತನಕೆ
ಮನಸ್ಸು ಶರಣಾಗಿದೆ…
ಸೋತು ಬಸವಳಿದಿದೆ…..
ಆದರೂ ಅದೆಲ್ಲೋ ಮೂಲೆಯಲಿ
ನಾಳಿನ ಬೆಳಕು ಕಾಣುವ
ಭರವಸೆಯ ಕಿಡಿಯು ಗೋಚರಿಸುತಿದೆ
# ಅಪೂರ್ವ ಚೇತನ್ ಪೆರಂದೋಡಿ
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel