Advertisement
MIRROR FOCUS

ಭೂಮಿಯ ಆರಾಧನೆ | ಜೀವನೋತ್ಸಾಹ ಹೆಚ್ಚಿಸುವ ಕೆಡ್ಡಸ |

Share

ಮನೆ ತುಂಬಾ ಏಲಕ್ಕಿ ಪರಿಮಳ ಬರುತ್ತಿದ್ದರೆ ಅದಾಗಷ್ಟೇ ಜ್ವರದಿಂದ ಚೇತರಿಸುತ್ತಿದ್ದ ಶಾಂತಮ್ಮನಿಗೆ ಏನೆಂದು ಅರ್ಥವಾಗಲಿಲ್ಲ. ಮನೆಯಲ್ಲಿ ಏನು ಗೌಜಿಯಪ್ಪಾ? ನೆಂಟರು ಬಂದಿರಬಹುದೇ? ಅಥವಾ ಮಕ್ಕಳ ಹುಟ್ಟು ಹಬ್ಬವೇನಾದ್ರೂ ಇತ್ತಾ? ನಾನೇ ಮರೆತು ಬಿಟ್ಟೆನಾ ? ಪೂರ ಗೊಂದಲಮಯವಾದ ಮನಸು. ಅಡುಗೆ ಮನೆಯಲ್ಲಿ ಪಾತ್ರಗಳ ಸಪ್ಪಳ ಬಿಟ್ಟರೆ ಯಾರೂ ಬಂದ ಸೂಚನೆ ಕಾಣುತ್ತಿಲ್ಲ. ವಚನ ಯಾಕೆ ಏನೂ ಹೇಳುತ್ತಿಲ್ಲ… ಎರಡು ದಿನದಿಂದ ಮನೆ ಕೆಲಸದವರೂ ನಾಪತ್ತೆ. ಎದ್ದು ಹೋಗಿ ನೋಡೋಣವೆಂದರೆ ತಲೆ ಯಾಕೋ ಭಾರ ಭಾರ. ಅಷ್ಟರಲ್ಲಿ ಇವರ ಮನಸು ಅರ್ಥವಾಯಿತೋ ಎಂಬಂತೆ ಸೊಸೆ ವಚನ ಅಲ್ಲಿಗೆ ಹಾಜರು. ಕೈಯಲ್ಲಿ ಸೌಟು ಬೇರೆ. ನೋಡಿ ಅತ್ತೆ ಒಮ್ಮೆ ಪಾಕ ಬಂತಾ? ಸಾಕ ಅಂತ? ಏನು ಎತ್ತ ಅರ್ಥವಾಗದೆ ಯಾವುದಕ್ಕೇ ಇದು, ಎಂತ ಮಾಡುತ್ತಿರುವೆ ಎಂದರೆ ಶಾಂತಮ್ಮನನ್ನೇ ವಚನ ವಿಚಿತ್ರವಾಗಿ ನೋಡ ತೊಡಗಿದಳು. ಅತ್ತೆ ನೀವು ಮರೆತಿರಾ? ನಾಳೆ ಏನು ವಿಶೇಷ ಅಂತ. ಜ್ವರದ ಸುಸ್ತಲ್ಲಿ ಇದ್ದ ಶಾಂತಮ್ಮನಿಗೆ ಏನೂ ಗೊತ್ತಾಗಲಿಲ್ಲ. ನಾಳೆ ಕೆಡ್ಡಸ ಅಲ್ವಾ. ಹಾಗೆ ತಂಬಿಟ್ಟು ಉಂಡೆ ಮಾಡಲು ಹೊರಟಿರುವೆ. ನೀವು ಒಂದು ಬಾರಿಯೂ ತಪ್ಪಿಸಲಿಲ್ಲ. ಹಾಗಾಗಿ ಈ ಬಾರಿ ನಾನೇ ಮಾಡ ಹೊರಟೆ. ಪಾಕ ಒಂದು ನೋಡಿ ಹೇಳಿ. ಅನ್ನುತ್ತಲೇ ಅಚ್ಚರಿ ಪಡುವ ಸರದಿ ಶಾಂತಮ್ಮನದ್ದು.

ನಾವು ಎಷ್ಟೇ ಒತ್ತಡಗಳಲ್ಲಿದ್ದರೂ , ಸಂಕಷ್ಟಗಳಲ್ಲಿದ್ದರೂ ಹಬ್ಬಗಳೆಂದರೆ ಏನೋ ಚೈತನ್ಯ , ಉಲ್ಲಾಸ ಮನಸಿನಲ್ಲಿ ಗರಿಗೆದರುತ್ತದೆ.

ನಾವು ಕರಾವಳಿಗರು ಹಲವು ಹಬ್ಬಗಳನ್ನು ಆಚರಿಸುತ್ತೇವೆ. ಅವುಗಳಲ್ಲಿ ಹೆಚ್ಚಿನವು ಕೃಷಿಗೆ ಸಂಬಂಧ ಪಟ್ಟ ಹಬ್ಬಗಳು. ಹಬ್ಬಕ್ಕೂ ಪ್ರಕೃತಿಗೂ ನೇರಾನೇರ ಸಂಬಂಧ ಇಲ್ಲಿನ ವಿಶೇಷ.

ಅವುಗಳಲ್ಲಿ ಮುಖ್ಯವಾದ ಹಬ್ಬಗಳಲ್ಲಿ ಒಂದು ಈ ಕೆಡ್ಡಸ. ಕೆಡ್ಡಸವನ್ನು ಭೂಮಿ ತಾಯಿಯ ಮಿಯಾದ ಹಬ್ಬವೆನ್ನುತ್ತಾರೆ. ನಮಗೆ ಹಾಗೂ ಭೂಮಿ ತಾಯಿಗೆ ನೇರವಾಗಿ ಸಂಭಂದಿಸಿದ ಹಬ್ಬ. ಇಲ್ಲಿ ಆ ಮನೆಯ ಹಿರಿಯ ಹೆಣ್ಣು ಮಗಳೇ ನಿರ್ವಹಿಸುವ ಹಬ್ಬ. ನಮ್ಮಲ್ಲಿ ಹೆಣ್ಣು ಮಕ್ಕಳಿಗೆ ಬಹಳ ಪ್ರಾಮುಖ್ಯತೆ. ಅದರಂತೆ ಭೂಮಿಯನ್ನು ತಾಯಿ ಎಂದು ಗೌರವ ಕೊಡುವ ಮನಸು ನಮ್ಮದು. ಹಾಗಾಗಿ ವರುಷವಿಡೀ ಉತ್ತಿ ಬಿತ್ತಿ ಅಗೆದು ಕೆಲಸ ಮಾಡಿದ ರೈತ ಹಾಗೂ ದಣಿದ ಭೂಮಿಗೆ ವರುಷದ ನಾಲ್ಕು ದಿನಗಳ ಕಾಲ ವಿಶ್ರಾಂತಿಯ ಕಾಲ. ಇದು ಯಾವಾಗಲೂ ಬರುವುದು ತುಳು ತಿಂಗಳ ಪೊನ್ನಿ( ಪೊಯಿಂತೆಲ್) ಯ ೨೭ ರಿಂದ ಕುಂಭ ಸಂಕ್ರಮಣ ದವರೆಗಿನ ದಿನಗಳಲ್ಲಿ. ಅಂದರೆ ಫೆಬ್ರವರಿ ತಿಂಗಳಿನ 9 ರಿಂದ 12 ರವರೆಗೆ. ಕೆಲವರು ಇದನ್ನು 3 ದಿನಗಳ ಆಚರಣೆ ಹಾಗೂ ಇನ್ನೂ ಕೆಲವರು 4 ದಿನಗಳ ಕಾಲ ಈ ಹಬ್ಬವನ್ನು ಆಚರಿಸುತ್ತಾರೆ. ಶ್ರಮಿಕ ವರ್ಗದವರೇ ಹೆಚ್ಚಾಗಿ ಈ ಹಬ್ಬವನ್ನು ಸಂಭ್ರಮಿಸುತ್ತಾರೆ.

ಕೆಡ್ಡಸವೆಂದರೆ ಭೂಮಿತಾಯಿ ಋತುಮತಿಯಾಗುವ ದಿನಗಳು. ಮುಂದಿನ ಸೃಷ್ಟಿಗೆ ಸಿದ್ಧಳಾಗುತ್ತಾಳೆ ಎಂಬ ಸಂಕೇತ. ಕೆಡ್ಡಸ ಕಳೆದ ನಂತರ ಬೆಳೆ ಕಟಾವಿಗೆ ಸಿದ್ಧವಾಗುತ್ತದೆ. ಹಾಗಾಗಿ ಕೃಷಿಕರ ಒಂದು ವಿಶ್ರಾಂತಿಯ ಅಗತ್ಯವನ್ನು ಈ ಹಬ್ಬ ಪೂರೈಸುತ್ತದೆ. ಈ ನಾಲ್ಕು ದಿನಗಳು ಭೂಮಿ ತಾಯಿಗೆ ವಿಶೇಷ ಆರೈಕೆ ಮಾಡಲಾಗುತ್ತದೆ. ಮೊದಲ ದಿನ ಮನೆಯ ಗಂಡಸರು ಕತ್ತಿ , ಹಾರೆ , ನೇಗಿಲು ಮೊದಲಾದ ಕೃಷಿಗೆ ಸಂಬಂಧಿಸಿದ ಸಾಮಗ್ರಿಗಳನ್ನು ತೊಳೆದು , ಪೂಜಿಸಿ ತೆಗೆದಿಡುತ್ತಾರೆ. ಇನ್ನೂ ನಾಲ್ಕು ದಿನ ಭೂಮಿ ತಾಯಿಗೆ ಗಾಯ ಮಾಡುವಂತಿಲ್ಲ. ಅಗೆಯುವುದು , ಕಡಿಯುವುದು ಎಲ್ಲಾ ಕಾರ್ಯಗಳೂ ನಿಷಿದ್ಧ. ಮನೆಯ ಸುತ್ತಲೂ ಸ್ವಚ್ಛ ಗೊಳಿಸಿ ನವಧಾನ್ಯಗಳನ್ನು ಒಳಗೊಂಡಂತೆ ಪೌಷ್ಟಿಕ ಆಹಾರವನ್ನು ಸಿದ್ಧಗೊಳಿಸಲಾಗುವುದು. ಕುಚುಲಕ್ಕಿಯನ್ನು ಉಪ್ಪು ನೀರು ಹಾಕಿ ಬಾಣಲೆಯಲ್ಲಿ ಹುರಿದು ಕುಟ್ಟಿ ಹುಡಿ ಮಾಡ ಬೇಕು. ಅದಕ್ಕೆ ಕಾಯಿ, ಬೆಲ್ಲ ,ತುಪ್ಪ ,ಬಾಳೆಹಣ್ಣು ಮಿಶ್ರ ಮಾಡಿ ವಿಶೇಷ ತಿಂಡಿ ತಯಾರಿಸುವ ಕ್ರಮವಿದೆ. ಈ ತಿಂಡಿಯೇ ‘ನನ್ಯರಿ’. ಕುಸುಲಕ್ಕಿ ಹುರಿದು ಪುಡಿಮಾಡಿ ಹಿಂದಿನ ದಿನವೇ ಇಡಲಾಗುವುದು.

ಮಾರನೇಯ ದಿನ ಅಂದರೆ ನಡು ಕೆಡ್ಡಸದ ದಿನ ಮನೆಯ ಹಿರಿಯ ಮಹಿಳೆ ಬೆಳಗ್ಗೆ( ಸೂರ್ಯೋದಯ ಕ್ಕೆ ಮೊದಲು) ತುಳಸಿ ಕಟ್ಟೆಯ ಪಕ್ಕ ಸಗಣಿ ಸಾರಿಸಿ ಒಂದು ಬಾಳೆ ಎಲೆಯಲ್ಲಿ ಈ ಪೌಷ್ಟಿಕಾಂಶ ಪದಾರ್ಥಗಳನ್ನು ಇಟ್ಟು ಭೂಮಿ ತಾಯಿಗೆ ಸಮರ್ಪಿಸುತ್ತಾಳೆ. ಆಮೇಲೆ ಮನೆಯವರೆಲ್ಲರೂ ಬಾಳೆಹಣ್ಣಿನೊಂದಿಗೆ ಮಿಶ್ರಣ ಮಾಡಿ ನನ್ಯರಿಯನ್ನೇ ತಿಂಡಿಯಾಗಿ ಸೇವಿಸುತ್ತಾರೆ. ಕೆಲವು ಮನೆಗಳಲ್ಲಿ ಈ ದಿನ ಮಾಂಸದೂಟ ಆಗಲೇ ಬೇಕು. ಉಳಿದವರು ಬದನೆ ನುಗ್ಗೆಯ ಪದಾರ್ಥವನ್ನು ( ಸಾಂಬಾರು ) ಮಾಡಿ ಊಟಮಾಡುತ್ತಾರೆ. ಇನ್ನೊಂದು ವಿಷಯ ಏನಪ್ಪಾ ಅಂದರೆ ಕೆಡ್ಡಸ ಪದದ ಅರ್ಥ ‘ಕೇಟ’ ಎಂದರೆ ಬೇಟೆ. ಕೆಡ್ಡಸಕ್ಕೂ ಬೇಟೆಗೂ ಬಹಳ ಹತ್ತಿರದ ನಂಟು. ಕೃಷಿ ಕೈ ಸೇರುವ ಸಮಯದಲ್ಲಿ ಕಾಡು ಪ್ರಾಣಿಗಳ ಹಾವಳಿ ಬೆಳೆಗಳ ಮೇಲಾಗುತ್ತದೆ. ಕಾಡು ಹಂದಿ ಹಾಗೂ ಕಾಡು ಕೋಳಿಗಳ ಉಪದ್ರ ಹೇಳತೀರದು. ಅವುಗಳಿಂದ ಬೆಳೆಗಳ ರಕ್ಷಣೆಯೂ ಅಗತ್ಯ. ಆದುದರಿಂದ ಕೆಡ್ಡಸದ ನೆಪದಲ್ಲಿ ಕಾಡುಪ್ರಾಣಿಗಳನ್ನು ಕೊಲ್ಲುವ ಪರಿಪಾಠ ಬೆಳೆದು ಬಂದಿದೆ. ಅಲ್ಲದೆ ಬೇಟೆ ರೈತರಿಗೊಂದು ಮನರಂಜನಾ ಕಾರ್ಯಕ್ರಮವೂ ಹೌದು. ಸಿಕ್ಕಿದ ಬೇಟೆಯನ್ನು ಊರಿನವರೆಲ್ಲರೂ ಹಂಚಿ ತಿನ್ನುವ ಅಭ್ಯಾಸ.

ಇನ್ನೂ ಕೊನೆಯ ದಿನ ವಿಶೇಷವಾಗಿ ಗಮನ ಸೆಳೆಯುತ್ತದೆ. ಆ ದಿನ ಮನೆಯ ಹಿರಿಯ ಮಹಿಳೆ ಮುಂಜಾನೆ ಕೋಳಿ ಕೂಗುವ ಮೊದಲೇ ಎದ್ದು ನಿತ್ಯ ಕರ್ಮಗಳನ್ನು ಪೂರೈಸಿ ತುಳಸಿ ಕಟ್ಟೆಯ ಸುತ್ತಲೂ ಸಗಣಿ ಗುಡಿಸಿ ಶುಚಿ ಮಾಡುತ್ತಾಳೆ. ದೀಪ ಬೆಳಗುತ್ತಾಳೆ. ಒಂದು ಕಲಶದಲ್ಲಿ ನೀರು, ಬಾಳೆಎಲೆಯಲ್ಲಿ ಸೀಗೆ, ಅಂಟುವಾಳಕಾಯಿ ,ಕನ್ನಡಿ, ಬಾಚಣಿಗೆ, ಬೊಟ್ಟು, , ಕುಂಕುಮ, ಕಾಡಿಗೆ ಮುಂತಾದ ಸೌಂದರ್ಯ ಸಾಧನಗಳನ್ನು ಇಟ್ಟು ಗಿಂಡಿಯಿಂದ ಭೂಮಿಗೆ ಎಣ್ಣಿ ಬಿಟ್ಟು ಪೌಷ್ಟಿಕ ಆಹಾರವನ್ನು ಇಟ್ಟು ‌‌‌‌ ನಮಸ್ಕರಿಸುತ್ತಾಳೆ.

ಭೂಮಿ ತಾಯಿ, ಎಣ್ಣೆ ಸೀಗೆ ಸ್ನಾನ ಮಾಡಿ, ಸಿಂಗರಿಸಿಕೊಂಡು ಪೌಷ್ಟಿಕಾಂಶಭರಿತ ಆಹಾರವನ್ನು ಸ್ವೀಕರಿಸುತ್ತಾಳೆ ಎಂಬ ನಂಬಿಕೆ ನಮ್ಮ ತುಳುನಾಡಿನ ಜನತೆಯದ್ದು. ಕೆಡ್ಡಸ ವೆಂದರೆ ನಮಗೂ ಭೂಮಿತಾಯಿಗೂ ಇರುವ ಸಂಬಂಧವನ್ನು, ಆತ್ಮೀಯತೆಯನ್ನು ಗಟ್ಟಿಗೊಳಿಸುವ ಹಬ್ಬ. ಕೆಡ್ಡಸವನ್ನು ಸಂಭ್ರಮಿಸೋಣ ಅಲ್ಲವೇ?

ಬರಹ :
ಅಶ್ವಿನಿ ಮೂರ್ತಿ ಅಯ್ಯನಕಟ್ಟೆ

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

Published by
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

Recent Posts

ಕಾಂಪೌಂಡ್ ರಬ್ಬರ್ ಆಮದು ಹೆಚ್ಚಳ : 10 ವರ್ಷಗಳ ವಿವರ ಲೋಕಸಭೆಯಲ್ಲಿ ಬಹಿರಂಗ

ಕಾಂಪೌಂಡ್ ರಬ್ಬರ್ ಆಮದು ಕುರಿತು ಕಳೆದ 10 ವರ್ಷಗಳ ಅಂಕಿಅಂಶಗಳನ್ನು ಕೇಂದ್ರ ಸರ್ಕಾರ…

11 hours ago

ದಾಖಲೆಯ ಆಹಾರಧಾನ್ಯ ಉತ್ಪಾದನೆ | 10 ವರ್ಷಗಳಲ್ಲಿ 357 ಮಿಲಿಯನ್ ಟನ್

ಕಳೆದ 10 ವರ್ಷಗಳಲ್ಲಿ ದೇಶದಲ್ಲಿ 357 ಮಿಲಿಯನ್ ಟನ್ ಆಹಾರಧಾನ್ಯ ಉತ್ಪಾದನೆಯಾಗಿ ಹೊಸ…

11 hours ago

ಒಂದೇ ತೋಟದಲ್ಲಿ ಹಲವು ಬೆಳೆ – ವರ್ಷಪೂರ್ತಿ ಆದಾಯ | ಗದಗದ ರೈತ ಸಹೋದರರ ಸಮಗ್ರ ಕೃಷಿ ಮಾದರಿ

ಗದಗ ಜಿಲ್ಲೆಯ ಕುರ್ತಕೋಟಿ ಗ್ರಾಮದ ರೈತ ಸಹೋದರರು ತಮ್ಮ 10 ಎಕರೆ ಜಮೀನಿನಲ್ಲಿ…

19 hours ago

ಅಡಿಕೆ ಇಳುವರಿ ಕುರಿತು “ದ ರೂರಲ್ ಮಿರರ್.ಕಾಂ” ಸಮೀಕ್ಷೆ | ಬಹುತೇಕ ತೋಟಗಳಲ್ಲಿಅಡಿಕೆ ಇಳುವರಿ ಕುಸಿತ

ಅಡಿಕೆ ಬೆಳೆಗಾರರ ವಾಸ್ತವ ಪರಿಸ್ಥಿತಿಯನ್ನು ಅರಿಯಲು ದ ರೂರಲ್ ಮಿರರ್.ಕಾಂ ನಡೆಸಿದ ಸಮೀಕ್ಷೆಯಲ್ಲಿ…

19 hours ago

ಅಡಿಕೆ ಮಾರುಕಟ್ಟೆಯಲ್ಲಿ ಬೆಲೆ ಇಳಿಕೆ | ಮಾರ್ಚ್‌ ತಿಂಗಳ ಇಳಿಕೆಗೆ ಹಲವು ಕಾರಣ…

ಇತ್ತೀಚೆಗೆ ಅಡಿಕೆ ಮಾರುಕಟ್ಟೆಯಲ್ಲಿ ಬೆಲೆಯಲ್ಲಿ ಸ್ವಲ್ಪ ಕುಸಿತ ಕಂಡುಬರುತ್ತಿದೆ. ವ್ಯಾಪಾರಿಗಳ ನಿಧಾನ ಖರೀದಿ,…

1 day ago

ಪೂರ್ವ ಮುಂಗಾರು ಸಿಡಿಲು, ಗಾಳಿ ಮಳೆಗೆ ಮುನ್ನೆಚ್ಚರಿಕೆ ವಹಿಸಿ : ವಿಜಯನಗರ ಜಿಲ್ಲಾಧಿಕಾರಿ ಸೂಚನೆ

ಪೂರ್ವ ಮುಂಗಾರು ಅವಧಿಯಲ್ಲಿ ಗುಡುಗು-ಸಿಡಿಲು ಹಾಗೂ ಗಾಳಿ ಮಳೆಯ ಅಪಾಯ ಇರುವ ಹಿನ್ನೆಲೆಯಲ್ಲಿ…

1 day ago