MIRROR FOCUS

ಭೂದೇವಿಯ ಮಕುಟದ ಮಣಿಯೇ…..| ತುಳುನಾಡಿನಲ್ಲಿ ಕೆಡ್ಡಸದ ಸಂಭ್ರಮ | ಸೃಷ್ಟಿಗೆ ಸಿದ್ಧವಾಗುತ್ತಿದೆ ಭೂಮಿ….!

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail
ಕೆಡ್ಡಸ ಹಬ್ಬದ ಶುಭಾಶಯಗಳು…
ನಾವು ಎಷ್ಟೇ ಒತ್ತಡಗಳಲ್ಲಿದ್ದರೂ , ಸಂಕಷ್ಟಗಳಲ್ಲಿದ್ದರೂ ಹಬ್ಬಗಳೆಂದರೆ ಏನೋ ಚೈತನ್ಯ , ಉಲ್ಲಾಸ ಮನಸಿನಲ್ಲಿ ಗರಿಗೆದರುತ್ತದೆ.
ನಾವು ಕರಾವಳಿಗರು  ಹಲವು ಹಬ್ಬಗಳನ್ನು ಆಚರಿಸುತ್ತೇವೆ. ಅವುಗಳಲ್ಲಿ  ಹೆಚ್ಚಿನವು ಕೃಷಿಗೆ ಸಂಬಂಧ ಪಟ್ಟ ಹಬ್ಬಗಳು.  ಹಬ್ಬಕ್ಕೂ ಪ್ರಕೃತಿಗೂ ನೇರಾನೇರ ಸಂಬಂಧ ಇಲ್ಲಿನ ವಿಶೇಷ.
ಅವುಗಳಲ್ಲಿ ಮುಖ್ಯವಾದ ಹಬ್ಬಗಳಲ್ಲಿ ಒಂದು ಈ ಕೆಡ್ಡಸ. ಕೆಡ್ಡಸವನ್ನು ಭೂಮಿ ತಾಯಿಯ ಮಿಯಾದ ಹಬ್ಬವೆನ್ನುತ್ತಾರೆ.  ನಮಗೆ ಹಾಗೂ ಭೂಮಿ ತಾಯಿಗೆ ನೇರವಾಗಿ ಸಂಭಂದಿಸಿದ ಹಬ್ಬ. ಇಲ್ಲಿ ಆ ಮನೆಯ ಹಿರಿಯ ಹೆಣ್ಣು ಮಗಳೇ ನಿರ್ವಹಿಸುವ ಹಬ್ಬ. ನಮ್ಮಲ್ಲಿ ಹೆಣ್ಣು ಮಕ್ಕಳಿಗೆ ಬಹಳ ಪ್ರಾಮುಖ್ಯತೆ.  ಅದರಂತೆ ಭೂಮಿಯನ್ನು ತಾಯಿ ಎಂದು ಗೌರವ ಕೊಡುವ ಮನಸು ನಮ್ಮದು.  ಹಾಗಾಗಿ ವರುಷವಿಡೀ ಉತ್ತಿ ಬಿತ್ತಿ ಅಗೆದು ಕೆಲಸ ಮಾಡಿದ ರೈತ ಹಾಗೂ  ದಣಿದ ಭೂಮಿಗೆ  ವರುಷದ  ನಾಲ್ಕು ದಿನಗಳ ಕಾಲ ವಿಶ್ರಾಂತಿಯ ಕಾಲ. ಇದು ಯಾವಾಗಲೂ ಬರುವುದು ತುಳು ತಿಂಗಳ ಪೊನ್ನಿ( ಪೊಯಿಂತೆಲ್) ಯ 27 ರಿಂದ ಕುಂಭ ಸಂಕ್ರಮಣ ದವರೆಗಿನ ದಿನಗಳಲ್ಲಿ. ಅಂದರೆ  ಫೆಬ್ರವರಿ ತಿಂಗಳಿನ  9 ರಿಂದ 12  ರವರೆಗೆ.  ಕೆಲವರು ಇದನ್ನು 3 ದಿನಗಳ  ಆಚರಣೆ  ಹಾಗೂ ಇನ್ನೂ ಕೆಲವರು 4 ದಿನಗಳ ಕಾಲ ಈ ಹಬ್ಬವನ್ನು ಆಚರಿಸುತ್ತಾರೆ.  ಶ್ರಮಿಕ ವರ್ಗದವರೇ  ಹೆಚ್ಚಾಗಿ  ಈ ಹಬ್ಬವನ್ನು ಸಂಭ್ರಮಿಸುತ್ತಾರೆ.
ಕೆಡ್ಡಸವೆಂದರೆ ಭೂಮಿತಾಯಿ ಋತುಮತಿಯಾಗುವ ದಿನಗಳು.   ಮುಂದಿನ ಸೃಷ್ಟಿಗೆ ಸಿದ್ಧಳಾಗುತ್ತಾಳೆ ಎಂಬ ಸಂಕೇತ. ಕೆಡ್ಡಸ ಕಳೆದ ನಂತರ ಬೆಳೆ ಕಟಾವಿಗೆ ಸಿದ್ಧವಾಗುತ್ತದೆ. ಹಾಗಾಗಿ  ಕೃಷಿಕರ ಒಂದು ವಿಶ್ರಾಂತಿಯ ಅಗತ್ಯವನ್ನು ಈ ಹಬ್ಬ ಪೂರೈಸುತ್ತದೆ. ಈ ನಾಲ್ಕು ದಿನಗಳು ಭೂಮಿ ತಾಯಿಗೆ ವಿಶೇಷ ಆರೈಕೆ ಮಾಡಲಾಗುತ್ತದೆ.  ಮೊದಲ ದಿನ ಮನೆಯ ಗಂಡಸರು ಕತ್ತಿ , ಹಾರೆ , ನೇಗಿಲು ಮೊದಲಾದ ಕೃಷಿಗೆ ಸಂಬಂಧಿಸಿದ ಸಾಮಗ್ರಿಗಳನ್ನು ತೊಳೆದು , ಪೂಜಿಸಿ ತೆಗೆದಿಡುತ್ತಾರೆ. ಇನ್ನೂ ನಾಲ್ಕು ದಿನ ಭೂಮಿ ತಾಯಿಗೆ ಗಾಯ ಮಾಡುವಂತಿಲ್ಲ. ಅಗೆಯುವುದು , ಕಡಿಯುವುದು ಎಲ್ಲಾ ಕಾರ್ಯಗಳೂ ನಿಷಿದ್ಧ.  ಮನೆಯ ಸುತ್ತಲೂ ಸ್ವಚ್ಛ ಗೊಳಿಸಿ  ನವಧಾನ್ಯಗಳನ್ನು   ಒಳಗೊಂಡಂತೆ ಪೌಷ್ಟಿಕ ಆಹಾರವನ್ನು ಸಿದ್ಧಗೊಳಿಸಲಾಗುವುದು.  ಕುಚುಲಕ್ಕಿಯನ್ನು ಉಪ್ಪು ನೀರು ಹಾಕಿ ಬಾಣಲೆಯಲ್ಲಿ ಹುರಿದು ಕುಟ್ಟಿ ಹುಡಿ ಮಾಡ ಬೇಕು. ಅದಕ್ಕೆ ಕಾಯಿ, ಬೆಲ್ಲ ,ತುಪ್ಪ ,ಬಾಳೆಹಣ್ಣು ಮಿಶ್ರ ಮಾಡಿ ವಿಶೇಷ ತಿಂಡಿ ತಯಾರಿಸುವ  ಕ್ರಮವಿದೆ. ಈ ತಿಂಡಿಯೇ ‘ನನ್ಯರಿ’. ಕುಸುಲಕ್ಕಿ ಹುರಿದು ಪುಡಿಮಾಡಿ ಹಿಂದಿನ ದಿನವೇ ಇಡಲಾಗುವುದು.  ಮಾರನೇಯ ದಿನ ಅಂದರೆ ನಡು ಕೆಡ್ಡಸದ ದಿನ ಮನೆಯ ಹಿರಿಯ ಮಹಿಳೆ ಬೆಳಗ್ಗೆ   ತುಳಸಿ ಕಟ್ಟೆಯ ಪಕ್ಕ ಸಗಣಿ ಸಾರಿಸಿ ಒಂದು ಬಾಳೆ ಎಲೆಯಲ್ಲಿ ಈ ಪೌಷ್ಟಿಕಾಂಶ ಪದಾರ್ಥಗಳನ್ನು ಇಟ್ಟು ಭೂಮಿ ತಾಯಿಗೆ ಸಮರ್ಪಿಸುತ್ತಾಳೆ.  ಆಮೇಲೆ ಮನೆಯವರೆಲ್ಲರೂ ಬಾಳೆಹಣ್ಣಿನೊಂದಿಗೆ ಮಿಶ್ರಣ ಮಾಡಿ ನನ್ಯರಿಯನ್ನೇ ತಿಂಡಿಯಾಗಿ ಸೇವಿಸುತ್ತಾರೆ.   ಕೆಲವು ಮನೆಗಳಲ್ಲಿ  ಈ ದಿನ ಮಾಂಸದೂಟ ಆಗಲೇ ಬೇಕು. ಉಳಿದವರು ಬದನೆ  ನುಗ್ಗೆಯ ಪದಾರ್ಥವನ್ನು  ( ಸಾಂಬಾರು )  ಮಾಡಿ ಊಟಮಾಡುತ್ತಾರೆ. ಇನ್ನೊಂದು ವಿಷಯ ಎನಪ್ಪಾ ಅಂದರೆ  ಕೆಡ್ಡಸ ಪದದ ಅರ್ಥ ‘ಕೇಟ’ ಎಂದರೆ ಬೇಟೆ. ಕೆಡ್ಡಸಕ್ಕೂ ಬೇಟೆಗೂ ಬಹಳ ಹತ್ತಿರದ ನಂಟು. ಕೃಷಿ ಕೈ ಸೇರುವ ಸಮಯದಲ್ಲಿ ಕಾಡು ಪ್ರಾಣಿಗಳ ಹಾವಳಿ ಬೆಳೆಗಳ ಮೇಲಾಗುತ್ತದೆ. ಕಾಡು ಹಂದಿ ಹಾಗೂ ಕಾಡು ಕೋಳಿಗಳ ಉಪದ್ರ ಹೇಳತೀರದು. ಅವುಗಳಿಂದ ಬೆಳೆಗಳ ರಕ್ಷಣೆಯೂ ಅಗತ್ಯ. ಆದುದರಿಂದ ಕೆಡ್ಡಸದ ನೆಪದಲ್ಲಿ ಕಾಡುಪ್ರಾಣಿಗಳನ್ನು ಕೊಲ್ಲುವ ಪರಿಪಾಠ ಬೆಳೆದು ಬಂದಿದೆ. ಅಲ್ಲದೆ ಬೇಟೆ   ರೈತರಿಗೊಂದು ಮನರಂಜನಾ ಕಾರ್ಯಕ್ರಮವೂ ಹೌದು.  ಸಿಕ್ಕಿದ ಬೇಟೆಯನ್ನು ಊರಿನವರೆಲ್ಲರೂ ಹಂಚಿ ತಿನ್ನುವ ಅಭ್ಯಾಸ.
ಇನ್ನೂ ಕೊನೆಯ ದಿನ ವಿಶೇಷವಾಗಿ ಗಮನ ಸೆಳೆಯುತ್ತದೆ. ಆ ದಿನ ಮನೆಯ ಹಿರಿಯ ಮಹಿಳೆ ಮುಂಜಾನೆ ಕೋಳಿ ಕೂಗುವ ಮೊದಲೇ ಎದ್ದು  ನಿತ್ಯ ಕರ್ಮಗಳನ್ನು ಪೂರೈಸಿ ತುಳಸಿ ಕಟ್ಟೆಯ ಸುತ್ತಲೂ ಸಗಣಿ ಗುಡಿಸಿ ಶುಚಿ ಮಾಡುತ್ತಾಳೆ.  ದೀಪ ಬೆಳಗುತ್ತಾಳೆ.   ಒಂದು ಕಲಶದಲ್ಲಿ ನೀರು, ಬಾಳೆಎಲೆಯಲ್ಲಿ  ಸೀಗೆ, ಅಂಟುವಾಳಕಾಯಿ ,ಕನ್ನಡಿ, ಬಾಚಣಿಗೆ, ಬೊಟ್ಟು, ,  ಕುಂಕುಮ, ಕಾಡಿಗೆ ಮುಂತಾದ ಸೌಂದರ್ಯ ಸಾಧನಗಳನ್ನು ಇಟ್ಟು ಗಿಂಡಿಯಿಂದ  ಭೂಮಿಗೆ ಎಣ್ಣಿ ಬಿಟ್ಟು   ಪೌಷ್ಟಿಕ ಆಹಾರವನ್ನು ಇಟ್ಟು ‌‌‌‌  ನಮಸ್ಕರಿಸುತ್ತಾಳೆ.   ಭೂಮಿ ತಾಯಿ, ಎಣ್ಣೆ ಸೀಗೆ ಸ್ನಾನ ಮಾಡಿ, ಸಿಂಗರಿಸಿಕೊಂಡು ಪೌಷ್ಟಿಕಾಂಶಭರಿತ ಆಹಾರವನ್ನು ಸ್ವೀಕರಿಸುತ್ತಾಳೆ ಎಂಬ  ನಂಬಿಕೆ ನಮ್ಮ ತುಳುನಾಡಿನ ಜನತೆಯದ್ದು. ಕೆಡ್ಡಸ ವೆಂದರೆ  ನಮಗೂ ಭೂಮಿತಾಯಿಗೂ ಇರುವ ಸಂಬಂಧವನ್ನು, ಆತ್ಮೀಯತೆಯನ್ನು ಗಟ್ಟಿಗೊಳಿಸುವ ಹಬ್ಬ.  ಕೆಡ್ಡಸವನ್ನು ಸಂಭ್ರಮಿಸೋಣ ಅಲ್ಲವೇ?
# ಅಶ್ವಿನಿ ಮೂರ್ತಿ ಅಯ್ಯನಕಟ್ಟೆ.
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

Published by
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

Recent Posts

ಜಾನುವಾರುಗಳನ್ನು ಅರಣ್ಯದಲ್ಲಿ ಮೇವು | ಆದೇಶವನ್ನು ಹಿಂಪಡೆಯುವಂತೆ ರೈತರು ಒತ್ತಾಯ

ರೈತರ ಜಾನುವಾರುಗಳನ್ನು ಅರಣ್ಯದಲ್ಲಿ ಮೇಯಿಸುವ ವಿಚಾರವಾಗಿ ಹೊರಡಿಸಿದ ಆದೇಶವನ್ನು ಹಿಂಪಡೆಯುವಂತೆ ಒತ್ತಾಯಿಸಿ ಶಿವಮೊಗ್ಗ…

4 hours ago

ರಾಜ್ಯದಲ್ಲಿ ಅರಣ್ಯ ಇಲಾಖೆಯಿಂದ 11.50 ಕೋಟಿ ಸಸಿ ನೆಡುವ ಗುರಿ

ಪ್ರಕೃತಿ ಮತ್ತು ಪರಿಸರ ಉಳಿಸುವ ನಿಟ್ಟಿನಲ್ಲಿ ರಾಜ್ಯದಲ್ಲಿ ಒಟ್ಟು 11 ಕೋಟಿ 50…

4 hours ago

ರಾಮನ ಆದರ್ಶ ಸರ್ವಕಾಲಿಕ : ರಾಘವೇಶ್ವರ ಶ್ರೀ

ರಾಮ ಎಂದರೆ ಧರ್ಮ; ಸಮಾಜದ ಪ್ರತಿಯೊಬ್ಬರು ರಾಮನ ಅನುಶಾಸನಕ್ಕೆ ಒಳಪಡಬೇಕು ಎಂಬ ಭಾವದಿಂದ…

6 hours ago

ಕೇಂದ್ರ ಸರ್ಕಾರದಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಕ್ಯಾನ್ಸರ್ ಡೇ ಕೇರ್ ಸೆಂಟರ್ ಮಂಜೂರು

ಕ್ಯಾನ್ಸರ್‌ ರೋಗಿಗಳ ಅನುಕೂಲ ಹಾಗೂ ಆರೈಕೆ ಮೂಲಸೌಕರ್ಯವನ್ನು ಬಲಪಡಿಸುವ ಉದ್ದೇಶದಿಂದ ಪ್ರಧಾನಮಂತ್ರಿ ನರೇಂದ್ರ…

6 hours ago

ರಾಜ್ಯದಲ್ಲಿ ರಸಗೊಬ್ಬರ ಕೊರತೆ ನೀಗಿಸಲು ಅಗತ್ಯ ಕ್ರಮ

ಕೇಂದ್ರ ಸರ್ಕಾರದಿಂದ ಕಳೆದ ಮೂರು ವರ್ಷಗಳಲ್ಲಿ ಆರಂಭಿಕ ಶುಲ್ಕನ್ನು ಪರಿಗಣಿಸದೇ ಯೂರಿಯಾ ಸೇರಿದಂತೆ…

6 hours ago

2025ರ ನಾಗರಪಂಚಮಿಯಲ್ಲಿ ಈ ರಾಶಿಗಳಿಗೆ ಅದೃಷ್ಟ! :ನಾಗದೇವರ ಕೃಪೆಗಾಗಿ ಹೀಗೆ ಮಾಡಿ…

ನಾಗರಪಂಚಮಿ, ಶ್ರಾವಣ ಮಾಸದ ಶುಕ್ಲ ಪಕ್ಷದ ಪಂಚಮಿ ತಿಥಿಯಂದು ಆಚರಿಸಲಾಗುವ ಪವಿತ್ರ ಹಬ್ಬವಾಗಿದೆ.…

11 hours ago