ಕೇರಳದಲ್ಲಿ ವ್ಯಾಪಕವಾಗಿ ಬೆಳೆಯುವ, ಆದರೆ ಕರ್ನಾಟಕ ಸೇರಿದಂತೆ ಹೆಚ್ಚಿನ ಪ್ರದೇಶಗಳಲ್ಲಿ ಹೆಚ್ಚಾಗಿ ಕಡೆಗಣಿಸಲ್ಪಡುವ ಹಲಸಿನ ಹಣ್ಣು ಇದೀಗ ವೈನ್ ಪ್ರಿಯರಿಗೆ ಹೊಸ ರುಚಿಯನ್ನು ನೀಡಲು ಸಿದ್ಧವಾಗಿದೆ. ಬಾಟಲಿಯೊಳಗೆ ತುಂಬಿ ಮಾರುಕಟ್ಟಗೆ ತಲುಪುವ ಈ ಪ್ರಯೋಗಕ್ಕೆ ಕಾರಣರಾದವರು ಕೇರಳದ ಕೊಟ್ಟಾರಕ್ಕರದ ವೈನ್ ತಯಾರಕ ಥಾಮಸ್ ಪಿಒ.
ವ್ಯಾಟಿಕನ್ ನಗರದಲ್ಲಿ ಕಾರ್ಯನಿರ್ವಹಿಸುವಾಗ ವೈನ್ ತಯಾರಿಕೆಯಲ್ಲಿರುವ ಅಂತರರಾಷ್ಟ್ರೀಯ ಪರವಾನಗಿ ಪಡೆದ ಥಾಮಸ್, ಹಲಸಿನಿಂದ ವೈನ್ ತಯಾರಿಸುವ ಸಾಧ್ಯತೆಯನ್ನು ಮೊದಲೇ ಕಂಡುಹಿಡಿದಿದ್ದರು. ಅವರ ಈ ಪ್ರಯತ್ನ ಇದೀಗ ಫಲ ನೀಡುತ್ತಿದ್ದು, ಏಪ್ರಿಲ್ ವೇಳೆಗೆ BEVCO(The Kerala State Beverages (M&M) Corporation Limited) ಮಳಿಗೆಗಳು ಮೊದಲ ಬ್ಯಾಚ್ ಹಲಸಿನ ವೈನ್ ಮಾರಾಟಕ್ಕೆ ಸ್ವೀಕರಿಸಲು ಸಿದ್ಧವಾಗಿವೆ. ಈ ಬಗ್ಗೆ ಇಂಡಿಯನ್ ಎಕ್ಸ್ಪ್ರೆಸ್ ವಿಶೇಷ ವರದಿ ಪ್ರಕಟಿಸಿದೆ.
ಯುರೋಪ್ನಿಂದ ಕೇರಳಕ್ಕೆ ಹಿಂದಿರುಗಿದ ಬಳಿಕ, 2019 ರಲ್ಲಿ ಥಾಮಸ್ ಆಲ್ಕೊಹಾಲ್ರಹಿತ ವೈನ್ ತಯಾರಿಕೆಗೆ ಚಾಲನೆ ನೀಡಿದರು. ಇದಕ್ಕೆ ಅಬಕಾರಿ ಇಲಾಖೆಯ ಪರವಾನಗಿ ಅಗತ್ಯವಿರಲಿಲ್ಲ. ಬಳಿಕ ರಾಜ್ಯ ಸರ್ಕಾರವು ಸ್ಥಳೀಯ ಹಣ್ಣುಗಳಿಂದ ‘ಹಾರ್ಟಿ-ವೈನ್’ ಉತ್ತೇಜಿಸುವ ನೀತಿಯನ್ನು ಜಾರಿಗೆ ತಂದಾಗ, ಅವರು ಅಧಿಕೃತ ಪರವಾನಗಿಗೆ ಅರ್ಜಿ ಸಲ್ಲಿಸಿದರು. ರೈತರಿಗೆ ಹೆಚ್ಚುವರಿ ಆದಾಯ ಒದಗಿಸುವುದು ಮತ್ತು ಕೃಷಿ ತ್ಯಾಜ್ಯವನ್ನು ಕಡಿಮೆ ಮಾಡುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿತ್ತು.
2024 ರಲ್ಲಿ, ಹಾರ್ಟಿ-ವೈನ್ ತಯಾರಿಕೆಗೆ ಪರವಾನಗಿ ಪಡೆದ ಮೊದಲ ವ್ಯಕ್ತಿಯಾಗಿ ಥಾಮಸ್ ಗುರುತಿಸಿಕೊಂಡರು. ಕೆಲವರು ಇನ್ನೂ ಪರವಾನಗಿ ಪಡೆದಿದ್ದರೂ, ಸಂಪೂರ್ಣವಾಗಿ ವ್ಯವಹಾರಕ್ಕೆ ಇಳಿದಿರುವವರು ವಿರಳ. ಇದೀಗ ಥಾಮಸ್ ತಯಾರಿಸಿದ ಅನಾನಸ್ ಮತ್ತು ದ್ರಾಕ್ಷಿ ವೈನ್ಗಳು ಈಗಾಗಲೇ ಬೆವ್ಕೊ ಮಳಿಗೆಗಳಲ್ಲಿ ಲಭ್ಯವಿದ್ದು, ಹಲಸಿನ ವೈನ್ ಕೂಡ ಅದೇ ಮಟ್ಟದ ಯಶಸ್ಸು ಗಳಿಸಲಿದೆ ಎಂಬ ವಿಶ್ವಾಸ ಅವರದ್ದು.
ಕೇರಳದಲ್ಲಿ ಹಲಸಿನ ಹಣ್ಣು ಔಷಧೀಯ ಹಾಗೂ ಪೌಷ್ಟಿಕ ಮೌಲ್ಯ ಹೊಂದಿದ್ದರೂ, ದೀರ್ಘಕಾಲ ನಿರ್ಲಕ್ಷ್ಯಕ್ಕೆ ಒಳಗಾಗಿತ್ತು. ಚಿಪ್ಸ್ ತಯಾರಕರು ಕಡಿಮೆ ಬೆಲೆಗೆ ಖರೀದಿಸಲು ಆರಂಭಿಸಿದ ಬಳಿಕ ಮಾತ್ರ ವಾಣಿಜ್ಯ ಮಹತ್ವ ಪಡೆದಿತ್ತು. ಆದರೆ ಥಾಮಸ್, ರೈತರಿಗೆ ಪ್ರತಿ ಕೆಜಿ ಹಲಸಿನ ಹಣ್ಣಿಗೆ ₹20 ನೀಡುತ್ತಿದ್ದು, ದೊಡ್ಡ ಪ್ರಮಾಣದಲ್ಲಿ ಖರೀದಿ ಮಾಡುತ್ತಿದ್ದಾರೆ.
“ಒಂದು ಹಲಸಿನ ಹಣ್ಣು 10 ಕೆಜಿ ತೂಕವಿರಬಹುದು. ರೈತರಿಗೆ ಅದಕ್ಕೆ ₹200 ಸಿಗುತ್ತದೆ. ಇದು ಎಲ್ಲರಿಗೂ ಲಾಭದ ಕೃಷಿ,” ಎನ್ನುತ್ತಾರೆ ಥಾಮಸ್.
‘ಬರಿಕಾ’ ಹಾಗೂ ಇನ್ನೊಂದು ಸ್ಥಳೀಯ ತಳಿ ಸೇರಿ ಎರಡು ಪ್ರಮುಖ ಹಲಸಿನ ಪ್ರಭೇದಗಳನ್ನೂ ಅವರು ವೈನ್ ತಯಾರಿಕೆಗೆ ಬಳಸುತ್ತಾರೆ. ಗರಿಗರಿಯಾದ ಬರಿಕಾಗೆ ಹೆಚ್ಚು ಬೇಡಿಕೆ ಇದ್ದರೂ, ಕುದಿಸುವ ಪ್ರಕ್ರಿಯೆಯಲ್ಲಿ ಎರಡೂ ಸಮಾನವಾಗಿ ಉಪಯುಕ್ತವೆನ್ನುತ್ತಾರೆ. ಹಣ್ಣು ಮಾತ್ರವಲ್ಲದೆ, ಕಾಳುಗಳನ್ನೂ ಹಿಸುಕಿ ಬಳಕೆ ಮಾಡಲಾಗುತ್ತದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ
ಕೊಟ್ಟಾರಕ್ಕರ ಬಳಿಯ ಕೊಕ್ಕಡುವಿನಲ್ಲಿರುವ ತಮ್ಮ ದ್ರಾಕ್ಷಿತೋಟದ ಮೂಲಕ, ಸ್ಥಳೀಯ ರೈತರು ಈಗ ಸ್ವಯಂ ಪ್ರೇರಣೆಯಿಂದ ಹಣ್ಣು ಪೂರೈಕೆಗೆ ಮುಂದಾಗುತ್ತಿದ್ದಾರೆ. ತಿರುವನಂತಪುರಂ ಜಿಲ್ಲೆಯ ದಕ್ಷಿಣ ಭಾಗಗಳ ರೈತರಿಂದಲೂ ಹಲಸಿನ ಹಣ್ಣು ಸಂಗ್ರಹಿಸಲಾಗುತ್ತಿದೆ.
ಭವಿಷ್ಯದಲ್ಲಿ ಮಾವು, ಬಾಳೆಹಣ್ಣು ಸೇರಿದಂತೆ ಇನ್ನೂ 10 ವಿಧದ ಹಣ್ಣಿನಿಂದ ವೈನ್ ಉತ್ಪಾದಿಸುವ ಯೋಜನೆ ಇದೆ. ಆದರೆ ಜಾಕ್ಫ್ರೂಟ್ ವೈನ್ನ ಬಿಡುಗಡೆ ಈಗಾಗಲೇ ಅಪಾರ ಉತ್ಸಾಹವನ್ನು ಸೃಷ್ಟಿಸಿದೆ.
“ಹಲಸಿನ ಹಣ್ಣು ಔಷಧೀಯ ಮೌಲ್ಯ ಹೊಂದಿದೆ. ಅದಕ್ಕಾಗಿಯೇ ವೈನ್ ಪ್ರಿಯರು ಈ ಪ್ರಯೋಗದ ಬಗ್ಗೆ ಹೆಚ್ಚು ಕುತೂಹಲ ಹೊಂದಿದ್ದಾರೆ,” ಎಂದು ಥಾಮಸ್ ಹೇಳುತ್ತಾರೆ.
ಇದನ್ನೂ ಓದಿ…
ನಿಮ್ಮ ಅಭಿಪ್ರಾಯಗಳಿಗೆ …
2026 ರಲ್ಲಿ ಹೈಡ್ರೋಪೋನಿಕ್ ಅವಕಾಡೊ ಕೃಷಿ ಮತ್ತು ಜೇನು ಪರಾಗಸ್ಪರ್ಶದ ಸಂಯೋಜನೆ ಹೊಸ…
ಚಾಮರಾಜನಗರ ಜಿಲ್ಲೆಯಲ್ಲಿ ರೇಷ್ಮೆ ಗೂಡಿಗೆ ಕೆಜಿಗೆ 750ರಿಂದ 800 ರೂಪಾಯಿವರೆಗೆ ಬೆಲೆ ಸಿಗುತ್ತಿದೆ.…
ಕರ್ನಾಟಕದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಇವಿಎಂ ಬದಲಿಗೆ ಬ್ಯಾಲೆಟ್ ಪೇಪರ್ ಮೂಲಕ ಮತದಾನ…
ಕೇಂದ್ರ ಸರ್ಕಾರವು ರಾಜ್ಯದ ರಬ್ಬರ್ ಕೃಷಿಯನ್ನು ಈಶಾನ್ಯಕ್ಕೆ ಸ್ಥಳಾಂತರಿಸುವ ಮೂಲಕ ರಬ್ಬರ್ ಕ್ಷೇತ್ರವನ್ನು…
ಅಡಿಕೆ ಮಾರುಕಟ್ಟೆ ಎಂದರೆ ಕೇವಲ ಕೃಷಿ ಉತ್ಪನ್ನಗಳ ವಿನಿಮಯ ಕೇಂದ್ರವಲ್ಲ; ಅದೊಂದು ಸಂಕೀರ್ಣವಾದ…
ಮಿಝೋರಂ ಸರ್ಕಾರವು ಅಡಿಕೆ ಕಳ್ಳಸಾಗಣೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಘೋಷಿಸಿದೆ. ಯಾವುದೇ…