ಕೇರಳ ಸರ್ಕಾರ ಬೇಡಿಕೆ ಇರಿಸಿದ್ದ ಎರಡು ರೈಲ್ವೇ ಮಾರ್ಗದ ಪ್ರಸ್ತಾವನೆಯನ್ನು ಕರ್ನಾಟಕ ಸರ್ಕಾರ ಪರಿಸರದ ಕಾರಣದಿಂದ ತಿರಸ್ಕಾರ ಮಾಡಿದೆ. ಪರಿಸರ, ನಮ್ಮ ನೆಲ, ಜಲ ಸಂರಕ್ಷಣೆಗೆ ಆದ್ಯತೆ ನೀಡಿ ಸರ್ಕಾರ ಈ ಕ್ರಮ ಕೈಗೊಂಡಿದೆ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ.
ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹಾಗೂ ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮಾತುಕತೆ ಗೃಹ ಕಚೇರಿ ಕೃಷ್ಣಾದಲ್ಲಿ ನಡೆಯಿತು.ಕೇರಳದಿಂದ ನಾಗರಹೊಳೆ, ಬಂಡೀಪುರ ಮಾರ್ಗವಾಗಿ ರೈಲು ಮಾರ್ಗ ಹಾಗೂ ಕಾಂಞಗಾಡ್ -ಕಾಣಿಯೂರು ರೈಲು ಮಾರ್ಗದ ಪ್ರಸ್ತಾವನೆ ಇತ್ತು. ಆದರೆ ಪರಿಸರ ಸೂಕ್ಷ್ಮ ಪ್ರದೇಶ ವ್ಯಾಪ್ತಿಗೆ ಬರುವ ಈ ಎರಡೂ ರೈಲ್ವೆ ಮಾರ್ಗ ನಿರ್ಮಾಣ ಪ್ರಸ್ತಾವನೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿರಸ್ಕಾರ ಮಾಡಿದ್ದಾರೆ. ಪರಿಸರ, ಸಂಪತ್ತಿನ ರಕ್ಷಣೆ ವಿಚಾರದಲ್ಲಿ ಯಾವುದೇ ರೀತಿಯಲ್ಲಿಯೂ ರಾಜಿ ಇಲ್ಲ ಎಂದು ಅವರು ತಿಳಿಸಿದ್ದಾರೆ.
ಕಾಂಞಗಾಡ್-ಕಾಣಿಯೂರು ರೈಲು ಮಾರ್ಗವು 45 ಕಿಲೋಮೀಟರ್ ನಷ್ಟು ಮಾರ್ಗ ಬರುತ್ತದೆ. ರಾಜ್ಯದ ವ್ಯಾಪ್ತಿಯಲ್ಲಿ ಬಹುಪಾಲು ರೈಲು ಮಾರ್ಗ ಇಲ್ಲಿ ಇರುತ್ತದೆ. ಈ ಯೋಜನೆಯನ್ನು ಕೇಂದ್ರ ರೈಲ್ವೆ ಇಲಾಖೆ ತಿರಸ್ಕರಿಸಿತ್ತು. ನಂತರ ಉಭಯ ರಾಜ್ಯದವರು ಒಪ್ಪಿಗೆ ಕೊಟ್ಟರೆ ಪರಿಗಣಿಸುವುದಾಗಿ ತಿಳಿಸಿತ್ತು. ಹಾಗಾಗಿ ವಿಜಯನ್ ಬಂದು ಚರ್ಚಿಸಿದರು. ಕಾಂಞಗಾಡ್-ಕಾಣಿಯೂರು ರೈಲು ಈ ಮಾರ್ಗ ಸುಬ್ರಹ್ಮಣ್ಯ, ಸುಳ್ಯ ಭಾಗದಲ್ಲಿ ಬರುತ್ತದೆ. ಇದು ಪರಿಸರ ಸೂಕ್ಷ್ಮ ವಲಯವಾಗಿದೆ, ಹೀಗಾಗಿ ಎಚ್ಚರಿಕೆ ಅಗತ್ಯವಿದೆ. ಅದೂ ಅಲ್ಲದೆ, ನಮ್ಮ ರಾಜ್ಯದ ಪ್ರಯಾಣಿಕರಿಗೆ ಲಾಭದಾಯಕವೂ ಅಲ್ಲ. ಇನ್ನೊಂದು ಕೇರಳ ಮೈಸೂರು ರೈಲು ಮಾರ್ಗ, ನಾಗರಹೊಳೆ, ಬಂಡೀಪುರ ಪರಿಸರ ವ್ಯಾಪ್ತಿಗೆ ಬರಲಿದೆ. ಹುಲಿ ಮತ್ತು ಆನೆ ಕಾರಿಡಾರ್ ಇರುವ ಸ್ಥಳವಾಗಿದೆ. ಹಾಗಾಗಿ ಈ ಯೋಜನೆಯನ್ನು ತಿರಸ್ಕಾರ ಮಾಡಿದ್ದೇವೆ ಎಂದು ಹೇಳಿದ್ದಾರೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement


