“ಕೀಬೋರ್ಡ್‌ ವಾರಿಯರ್‌” ಅಲ್ಲ ಇದು MOJO | ಸಾಮಾಜಿಕ ಕಾಳಜಿ ಹಾಗೂ ಸಾಮಾಜಿಕ ಜವಾಬ್ದಾರಿ | ಗ್ರಾಮೀಣ ಭಾಗಕ್ಕೂ ತಲಪುತ್ತಿರುವ MOJO |

August 21, 2022
3:03 PM

ಜಗತ್ತು ಬಹಳ ವೇಗವಾಗಿ ಬೆಳೆಯುತ್ತಿದೆ. ಮೊಬೈಲ್‌ ಫೋನು ಹಾಗೂ ಇಂಟರ್ನೆಟ್‌ ಇದ್ದರೆ ಕ್ಷಣ ಮಾತ್ರದಲ್ಲಿ ತನ್ನೂರಿನ ಸಮಸ್ಯೆಯನ್ನು ಸಂಬಂಧಿತ ವ್ಯಕ್ತಿಗಳಿಗೆ  ಸಾಮಾನ್ಯ ವ್ಯಕ್ತಿಗಳಿಂದಲೂ ತಕ್ಷಣದಲ್ಲಿ ತಲುಪಿಸಲು ಸಾಧ್ಯವಿದೆ. ಇದನ್ನೇ ಅಂದವಾಗಿಯೂ ಸಮಾಜಕ್ಕೆ ನೀಡಲು ಸಾಧ್ಯವಿದೆ. ಆಡಳಿತಕ್ಕೂ ಅಧಿಕಾರಿಗಳಿಗೂ ತಲುಪಿಸಲು ಸಾಧ್ಯವಿದೆ. ಅದು ಗೌರವಯುತವಾಗಿರಬೇಕು. ಅದು MOJO (Mobile Journalism). ಆದರೆ ಅದೇ ಪತ್ರಿಕೋದ್ಯಮ ಕೆಲವರಿಗೆ ಕಿರಿಕಿರಿಯಾಗುತ್ತದೆ. ಆರೋಗ್ಯಕರ ಅಂತ ಅನಿಸದೇ ಇರಬಹುದು.ಅದು ಸಹಜ ಕೂಡಾ. ಅದಕ್ಕೆ ಯಾರೇನೂ ಮಾಡಲು ಸಾಧ್ಯವಿಲ್ಲ. ಅಂತಹದ್ದೇ ಒಂದು ಬೆಳವಣಿಗೆ “ಕೀಬೋರ್ಡ್‌ ವಾರಿಯರ್“.

Advertisement
Advertisement
Advertisement

ಪತ್ರಿಕೆ ಎಂದರೆ, ಬರವಣಿಗೆ ಎಂದರೆ ಗ್ರಾಮೀಣ ಭಾಗದಿಂದ ತೊಡಗಿ ನಗರದವರೆಗಿನ ಒಳ್ಳೆಯ ಸಂಗತಿಗಳನ್ನು, ಜನರ ಸಮಸ್ಯೆಗಳನ್ನು, ಜನರ ನಾಡಿಮಿಡಿತವನ್ನು ಆಡಳಿತಕ್ಕೆ ತಲುಪಿಸಬೇಕು. ಜನರ ಸಮಸ್ಯೆ ಸರಿಯಾಗಬೇಕು. ಅದಿಲ್ಲದೇ ಹೋದರೆ “ಗುಮಾಸ್ತ”ನ ಕೆಲಸ ಮಾಡಬಹುದು, ಅಂದರೆ ಬಂದದ್ದನ್ನು ಹಾಗೇ ಬರೆದು ಕಳಿಸಬಹುದು….. ಹೀಗೆಂದು ಪತ್ರಿಕೋದ್ಯಮದ ಆರಂಭದ ತರಗತಿಗಳಲ್ಲಿ ಹೇಳುತ್ತಿದ್ದರು ಅಂದು.  ಈಚೆಗೆ ಪತ್ರಿಕೆ ಉದ್ಯಮವಾದ ಬಳಿಕ ಅನೇಕರಿಗೆ  ಮಾಧ್ಯಮವೂ ಖರೀದಿಯ ವಿಷಯವಾಗಿದೆ. ಹೀಗಾಗಿ ಇಂದು ನೇರವಾಗಿ ಸಮಸ್ಯೆಗಳನ್ನು ಹೇಳುವ ಪತ್ರಕರ್ತರು, ಮಾಧ್ಯಮಗಳು ವಿರೋಧವಾಗಿ ಕಾಣುತ್ತವೆ. ಜನಪರವಾಗಿರುವುದೇ ಸಮಸ್ಯೆಯಾಗುತ್ತದೆ. ಇಂತಹ ಸಮಯದಲ್ಲಿ ಜನರು ಈಗಲೂ ಅಂತಹ ಪತ್ರಕರ್ತರ ಜೊತೆ ಇರುತ್ತಾರೆ ಎನ್ನುವುದು  ಸಮಾಧಾನ. ಸುಳ್ಯದಲ್ಲೂ ಅಂತಹದ್ದೇ ಒಂದು ಘಟನೆ ನಡೆಯಿತು.

Advertisement

ಸುಳ್ಯ ನಗರದ ಸಮಸ್ಯೆಯೊಂದನ್ನು  ಆರ್‌ ಜೆ ತ್ರಿಶೂಲ್‌ ಗೌಡ ಕಂಬಳ ಪೇಸ್‌ ಬುಕ್‌ ಮೂಲಕ ಅಂದರೆ ಮೊಜೋ(MOJO) ಮೂಲಕ ಆಡಳಿತಕ್ಕೆ ತಿಳಿಸುವ ಪ್ರಯತ್ನ ಮಾಡಿದರು. ಸುಳ್ಯದ ಅಷ್ಟೂ ಜನ ಅದಕ್ಕೆ ಸ್ಪಂದಿಸಿದರು. ಅದಕ್ಕೆ  ಕೀಬೋರ್ಡ್‌ ವಾರಿಯರ್‌ ಎನ್ನುವ ಬಿರುದಿನ ಮೂಲಕ ಚರ್ಚೆ ಆರಂಭವಾಯಿತು.  ಕೊನೆಗೆ ಅನೇಕರು ಸಿಟ್ಟಾಗಿ ಕಮೆಂಟ್‌ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ಇದು ಪೊಲೀಸ್‌ ಠಾಣೆ ಮೆಟ್ಟಿಲೇರಿತು. ಸಹಜವಾಗಿಯೇ ಪೊಲೀಸ್‌ ಠಾಣೆಯ ಪ್ರಕ್ರಿಯೆಯಂತೆ ಆರ್‌ ಜೆ ತ್ರಿಶೂಲ್‌ ಅವರು ಠಾಣೆಗೆ ತೆರಳಿ ಘಟನೆಯನ್ನು ವಿವರಿಸಿದರು. ಆದರೆ, ಪೇಸ್‌ ಬುಕ್‌ ಅಥವಾ ಸಾಮಾಜಿಕ ಜಾಲತಾಣದ  ಮೂಲಕ ಯಾವುದೇ ವ್ಯಕ್ತಿ ತಾನು ಪೋಸ್ಟ್‌ ಮಾಡಿರುವ ಸಂಗತಿಗಳಿಗೆ ಮಾತ್ರವೇ ಜವಾಬ್ದಾರನೇ ಹೊರತು, ಅದಕ್ಕೆ ವ್ಯಕ್ತಿಗಳು ನೀಡಿರುವ ಪ್ರತಿಕ್ರಿಯೆಗಳಿಗೆ ಜವಾಬ್ದಾರನಲ್ಲ… ಹೀಗೆಂದು ಪಕ್ಷದ ಐಟಿ ಸೆಲ್‌ನ ಪ್ರಮುಖರೊಬ್ಬರ ಪ್ರಕರಣದಲ್ಲಿ ನ್ಯಾಯಾಯಲ ಅಭಿಪ್ರಾಯಪಟ್ಟಿತ್ತು.

Advertisement

ಪೊಲೀಸ್‌ ಠಾಣೆಗೆ ತೆರಳಿದ ಬಳಿಕ ಆರ್‌ ಜೆ ತ್ರಿಶೂಲ್‌ ಜೊತೆ ಮಾತನಾಡಿದಾಗ “ಯಾವ ವ್ಯಕ್ತಿಗಳ ಬಗ್ಗೆಯೂ ನಮಗೆ ದ್ವೇಷವಿಲ್ಲ, ಜನರ ಸಮಸ್ಯೆಯನ್ನು ಬೆಳಕಿಗೆ ತಂದಿದ್ದೇವೆ.ಅದನ್ನು ಮುಂದುವರಿಸುತ್ತೇವೆ ಕೂಡಾ. ವೈಯಕ್ತಿಕವಾಗಿ ಯಾವ ಸಿಟ್ಟು ಕೂಡಾ ನಮಗಿಲ್ಲ. ಸಾಮಾಜಿಕ ಕಾಳಜಿಯನ್ನು ಮುಂದುವರಿಸುತ್ತೇವೆ. ಪೊಲೀಸ್‌ ಠಾಣೆಯ ಸಹಜ ಪ್ರಕ್ರಿಯೆಯನ್ನು ಮಾಡಿದ್ದೇನೆಯೇ ಹೊರತು ಅದರಲ್ಲಿ ಬೇರೇನೂ ಇಲ್ಲ” ಎಂದು ಹೇಳಿದ್ದಾರೆ.

ಕೀಬೋರ್ಡ್‌ ವಾರಿಯರ್‌ ಎನ್ನುವುದು  ಜನರ ಪರವಾದ ಭಾಷೆ. ಜಾಲತಾಣಗಳಲ್ಲಿ ತನ್ನ ಸಮಸ್ಯೆಗಳ ಬಗ್ಗೆ, ಜನರ ಸಮಸ್ಯೆಗಳ ಬಗ್ಗೆ  ಆಕ್ರಮಣಕಾರಿ  ಪೋಸ್ಟ್‌ ಮಾಡುವ ವ್ಯಕ್ತಿ ಎಂದು ಹೇಳಲಾಗುತ್ತದೆ.  ಹಿಂದೆಲ್ಲಾ ಅರ್ಜಿ ಬರೆದು ಇಲಾಖೆಗಳಿಗೆ ನೀಡಲಾಗುತ್ತಿತ್ತು. ಅಕ್ಷರ ತಿಳಿಯದ ಮಂದಿ ಹೆಬ್ಬೆಟ್ಟು ಮೂಲಕ ಸಹಿ ಹಾಕಿದರು.  ಕಾಲ ಅಪ್ಡೇಟ್‌ ಆದ ಬಳಿಕ ಅರ್ಜಿಯ ಬದಲಾಗಿ ಮೈಲ್‌, ಟೈಪ್‌, ಆಪ್‌ ಗಳ ಮೂಲಕ ಅರ್ಜಿಗಳು ಬಂದವು. ಸಹಿ ಬದಲಾಗಿ ಥಂಬ್‌ ವ್ಯವಸ್ಥೆ ಬಂತು. ಈಚೆಗೆ ವ್ಯಾಟ್ಸಪ್‌, ಪೇಸ್‌ ಬುಕ್‌ ಮೂಲಕವೂ ದೂರು ನೀಡುವುದು, ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು  ಆರಂಭವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದ ಬಳಿಕ ಪೇಸ್‌ಬುಕ್‌, ಟ್ವಿಟ್ಟರ್‌, ಇನ್ಟಾಗ್ರಾಂ ಸೇರಿದಂತೆ ಹಲವು ನವಮಾಧ್ಯಮಗಳು ಪರಿಚಯವಾಗಿ ಈ ಮೂಲಕವೇ ಅಭಿವೃಧ್ಧಿ ಪರವಾದ ಆಡಳಿತ ಮಾಡಿದರು ಈ ದೇಶದ ಹೆಮ್ಮೆಯ ಪ್ರಧಾನಿಗಳು. ಈ ಕಾರಣಕ್ಕಾಗಿಯೇ ಸುಳ್ಯದ ಮಂಡೆಕೋಲಿನ ಆನೆ ಹಾವಳಿಯ ಬಗ್ಗೆ ಶಾಲಾ ಬಾಲಕಿಯೊಬ್ಬಳು ಬರೆದ ಪತ್ರಕ್ಕೆ ಪ್ರಧಾನಿ ಕಚೇರಿಯಿಂದ ಪ್ರತಿಕ್ರಿಯೆ ಬಂದಿತು. ಕುಕ್ಕೆ ಸುಬ್ರಹ್ಮಣ್ಯದಲ್ಲಿನ ಬಿ ಎಸ್‌ ಎನ್‌ ಎಲ್‌ ಸಮಸ್ಯೆಗೆ ಪರಿಹಾರವೂ ಸಿಕ್ಕಿತು. ಇದೆಲ್ಲಾ ಕೀಬೋರ್ಡ್‌ ವಾರಿಯರ್‌ ಪರಿಣಾಮ. ಇಂದು ಪ್ರತೀ ವಿಷಯಕ್ಕೂ ಹೇಗೆ ವ್ಯಾಟ್ಸಪ್‌ ಗುಂಪುಗಳು ರಚನೆಯಾಗುವ ಮೂಲಕ ಹೇಗೆ ಇಮೆಂಟ್‌ಗಳನ್ನು ಪ್ರಭಾವಿಯಾಗಿ ಮಾಡಲಾಗುತ್ತದೋ ಹಾಗೆ. ಅಂತಹ ಗುಂಪುಗಳಲ್ಲೀ ಕೀಬೋರ್ಡ್‌ ಬಹಳ ಕೆಲಸ ಮಾಡುತ್ತದೆ.

Advertisement

ಇದೇ ವೇಗದಲ್ಲಿ ಮಾಧ್ಯಮಗಳೂ ಬದಲಾದವು. ಪ್ರತೀ ಮಾಧ್ಯಮಗಳೂ ವೆಬ್‌ ಆವೃತಿ ಆರಂಭ ಮಾಡಿದರು, ಸಾಮಾಜಿಕ ಜಾಲತಾಣಗಳಲ್ಲೂ ಸಕ್ರಿಯವಾದವು. ಈ ಮೂಲಕವೂ ಜನಪರವಾಗಿ ಕೆಲಸ ಮಾಡಿದವು. ಜನರ ಅಭಿಪ್ರಾಯಗಳನ್ನೂ ಪಡೆದುಕೊಂಡವು. ಜಾಹೀರಾತು ಮಾತ್ರವೇ ನಂಬಿದ್ದ ಮಾಧ್ಯಮಗಳು ಯಾರ, ಯಾವ ಹಂಗೂ ಇಲ್ಲದೆಯೇ ಯೂಟ್ಯೂಬ್‌ ಮೂಲಕವೂ ಆದಾಯದ ದೃಷ್ಟಿಯನ್ನೂ ನೋಡಿದವು. ಇದು ಭ್ರಷ್ಟಾಚಾರವಲ್ಲ, ನೈತಿಕವಾಗಿ ಆದಾಯ ಪಡೆಯುವ ಮಾರ್ಗ. ಈಚೆಗೆ ಗ್ರಾಮೀಣ ಭಾಗದವರೆಗೂ ನವಮಾಧ್ಯಮಗಳು ಬಂದವು. ವೆಬ್‌ ಪತ್ರಿಕೆಗಳು, ಡಿಜಿಟಲ್‌ ಮೀಡಿಯಾಗಳು ತಾಲೂಕುಗಳಲ್ಲಿ ಸೃಷ್ಟಿಯಾದವು. ಇದನ್ನು ಆಧುನಿಕವಾಗಿ ಮೊಜೋ (MOJO-Mobile Journalism) ಎಂದು ಕರೆಯುತ್ತಾರೆ. ಇದರಲ್ಲಿ ಡಿಜಿಟಲ್‌ ಮಾಧ್ಯಮ, ವೆಬ್‌, ಪೇಸ್‌ಬುಕ್‌ ಪೇಜ್‌ ಬರಹ, ಯೂಟ್ಯೂಬ್‌ ಸೇರಿದೆ.  ಈಗಾಗಲೇ ವಿದೇಶಗಳಲ್ಲಿ ಮೊಜೋ ಬಹಳ ವೇಗವಾಗಿ ಬೆಳೆಯುತ್ತಿದೆ.

ಭಾರತದಲ್ಲೂ ಮೊಜೋ ಬೆಳೆಯುತ್ತಿದೆ. ಇಲ್ಲೂ ಇದನ್ನೂ ಅನೇಕರು ಉದ್ಯಮ ಮಾಡಿಕೊಂಡವರು ಇದ್ದಾರೆ. ಪಕ್ಷಗಳ ಪರವಾಗಿ, ಜನಪ್ರತಿನಿಧಿಗಳ ಪರವಾಗಿ ಕೆಲಸ ಮಾಡುವ ತಂಡವಿದೆ. ಸಾಮಾಜಿಕ ಜಾಲತಾಣ ನಿರ್ವಹಣೆಗೆಂದೇ ವ್ಯಕ್ತಿಗಳನ್ನು ನೇಮಿಸಿದ ಜನಪ್ರತಿನಿಧಿಗಳು ಇದ್ದಾರೆ. ಇದೆಲ್ಲಾ ಆಧುನಿಕ ಮಾಧ್ಯಮಗಳ ವೇಗ. ಆದರೆ ಗ್ರಾಮೀಣ ಭಾಗದಲ್ಲಿ, ಜನರ ಪರವಾಗಿ ಮಾತನಾಡುವ ಮಾಧ್ಯಮಗಳು, ವ್ಯಕ್ತಿಗಳು ಇರುವುದು  ಜನರಿಗೆ ನೀಡುವ ಗೌರವವಾಗಿದೆ. ಜಾಹೀರಾತು ಇಲ್ಲದೆಯೇ ಸಾಮಾಜಿಕ ಕಾಳಜಿಯಿಂದ ಧೈರ್ಯವಾಗಿ ಸಮಸ್ಯೆಗಳನ್ನು ಬರೆಯುವ ಮೊಜೋ ಗಳು ಇವೆ. ಹೀಗಾಗಿ ಅನೇಕ ಸಮಸ್ಯೆಗಳೂ ಹೊರಜಗತ್ತಿಗೆ ಈಚೆಗೆ ಬೆಳಕಿಗೆ ಬರುತ್ತಿವೆ. ಪತ್ರಿಕೆಗಳಲ್ಲಿ ಬರುವುದಕ್ಕಿಂತ ಮುನ್ನವೇ ಮೊಜೋ ಮೂಲಕ ಹೊರಜಗತ್ತಿಗೆ ತಿಳಿಯುತ್ತದೆ. ಪತ್ರಿಕೆಗಳು, ದೃಶ್ಯ ಮಾಧ್ಯಮಗಳೂ ಈಗ ಅಷ್ಟೇ ಸಮರ್ಥವಾಗಿ, ಜವಾಬ್ದಾರಿಯುತವಾಗಿ ಅಂತಹ ಸುದ್ದಿಗಳನ್ನೂ ಮಾಡುತ್ತವೆ. ಎಲ್ಲರೂ ಪ್ರಾಮಾಣಿಕ ಪತ್ರಕರ್ತರೇ ಆಗಿರುತ್ತಾರೆ. ಆದರೆ ಜನಪರವಾಗಿ ಬರೆಯುವ, ಮಾತನಾಡುವ ಪತ್ರಕರ್ತ , ಪತ್ರಿಕೆಗಳು ಅನೇಕರಿಗೆ ಸಹಜವಾಗಿಯೇ ಆರೋಗ್ಯಕರ ಪತ್ರಿಕೋದ್ಯಮ ಅಂತ ಅನಿಸುವುದಿಲ್ಲ, ಅದು ಜನರಿಗೆ ಮಾತ್ರವೇ ನಮ್ಮಜೊತೆ ಇರುವ ಮಾಧ್ಯಮ, ಆರೋಗ್ಯಕರ , ಜನಪರ ಅಂತ ಅನಿಸುತ್ತದೆ. ಅಧಿಕಾರದಲ್ಲಿ ಇರುವವರಿಗೆ ಹೇಗೆ ಜವಾಬ್ದಾರಿಯ ಅರಿವು ಇರಬೇಕೋ ಹಾಗೆ.

Advertisement

ಇಂದಿನ ವ್ಯವಸ್ಥೆಯಲ್ಲಿ ಆಗಬೇಕಾದ್ದು ಕೂಡಾ ಅದೇ. ಯಾವುದೋ ಆಡಳಿತದ ಪರ, ಪಕ್ಷದ ಪರವಾಗಿ, ತಿಳಿದೂ ಮೌನವಾಗಿದ್ದು ವಾಟ್ಸಪ್‌ ಮೂಲಕ ಬಂದಿರುವ ಹೇಳಿಕೆಗಳನ್ನು ಮಾತ್ರವೇ  ಹಾಕಿಕೊಂಡಿರುವ ಮಾಧ್ಯಮಗಳಿಂದ ಜನರಿಗೆ, ಅದರಲ್ಲೂ ಗ್ರಾಮೀಣ ಜನರಿಗೆ ನ್ಯಾಯ ಸಿಗಲು ಸಾಧ್ಯವಿಲ್ಲ. ಇದು ಡಿಜಿಟಲ್‌ ಪತ್ರಿಕೋದ್ಯಮದ ಕಾಲ. ನೈತಿಕವಾಗಿ ಇಲ್ಲಿಯೂ ಏನೂ ಆದಾಯ ಇಲ್ಲದೆಯೇ , ಸಾಮಾಜಿಕ ಕಾಳಜಿಯ ಕಾರಣದಿಂದ ನೈತಿಕವಾಗಿ ಜನಪರವಾಗಿರುವ ಪತ್ರಕರ್ತರಿಗೆ ಯಾವತ್ತೂ ಬೆಂಬಲ ಇರಬೇಕು, ಅಂತಹವರನ್ನು ಮಾನಸಿಕವಾಗಿ ಕುಗ್ಗಿಸುವುದನ್ನು ಸಮಾಜವೂ ಸಹಿಸಬಾರದು. ಜನಪರವಾಗಿ ಇರುವ ಮಾಧ್ಯಮಗಳು , ವ್ಯಕ್ತಿಗಳ, ಪತ್ರಕರ್ತರ ಹತ್ತಿಕ್ಕಿದರೆ, ಧ್ವನಿ ಅಡಗಿಸಿದರೆ ಅದರಿಂದ ನಷ್ಟ ಈ ಸಮಾಜಕ್ಕೆ ಅಷ್ಟೇ.

 

Advertisement

 

Advertisement
Advertisement

Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

ಇದನ್ನೂ ಓದಿ

ಭಾರತದಲ್ಲಿ ಸಮುದ್ರ ಜಲಕೃಷಿ ಚಟುವಟಿಕೆ ಉತ್ತೇಜನ | ಸಮುದ್ರ ಮೀನಿನ ಕೃಷಿಯಲ್ಲಿ ಹೊಸ ಸಾಧನೆ ಮಾಡಿದ ಸಿಎಂಎಫ್​ಆರ್​ಐ
April 24, 2024
9:33 PM
by: The Rural Mirror ಸುದ್ದಿಜಾಲ
ಪ್ಯಾರೀಸ್‌ನಲ್ಲಿ ಕ್ರೀಡೆಗಳ ಮಹಾಸಂಗಮ ಒಲಿಂಪಿಕ್ಸ್‌ಗೆ ಕೆಲವೇ ದಿನ ಬಾಕಿ | ಕೈಬೀಸಿ ಕರೆಯುತ್ತಿದೆ ಪ್ಯಾರಿಸ್‌ | ಒಲಿಂಪಿಕ್ಸ್‌ನಲ್ಲಿರಲಿದೆ ನೂರಾರು ವಿಶೇಷ
April 24, 2024
9:02 PM
by: The Rural Mirror ಸುದ್ದಿಜಾಲ
ಹೊಸ ಬೆಳೆ | ರೈತರು ಚಿಂತನೆ ಮಾಡಬೇಕಾದ್ದೇನು…? ಕರಾವಳಿ, ಮಲೆನಾಡಿನಲ್ಲಿ ಉತ್ಪತ್ತಿ ನೀಡುವ “ಪರ್ಯಾಯ ಬೆಳೆಯ ಅಗತ್ಯವಿದೆ” |
April 24, 2024
2:57 PM
by: ಪ್ರಬಂಧ ಅಂಬುತೀರ್ಥ
ಪ್ಯಾಕೆಟ್ ಹಿಟ್ಟು ಆರೋಗ್ಯಕ್ಕೆ ಒಳ್ಳೆಯದೆ ಅಥವಾ ಹಾನಿಕರವೇ? ಪ್ಯಾಕೆಟ್ ಹಿಟ್ಟು ಉಪಯೋಗಿಸಿದರೆ ಏನಾಗುತ್ತದೆ ತಿಳಿದುಕೊಳ್ಳಿ..
April 24, 2024
2:32 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror