ಕುಕ್ಕೆಯಲ್ಲಿ ಶೈವ-ವೈಷ್ಣವ ಚರ್ಚೆ | ವೈಖಾನಸ-ತಂತ್ರಸಾರ-ಶೈವಾಗಮದ ತಿಕ್ಕಾಟ | ಭಕ್ತರಿಗಿಲ್ಲ ತಲೆಬಿಸಿ- ಮೌನವೇಕೆ ಸಂತರು ? |

March 22, 2021
11:01 PM

ದೇವರಿಗೆ ಮೂರುಸುತ್ತು ಬಂದು ಭಕ್ತಿಯಿಂದ ಅಡ್ಡಬಿದ್ದು, ಶಿಸ್ತಿನಿಂದ ನಿಂತು ಅರ್ಚಕರು ಶುದ್ಧ ಮನಸ್ಸಿನಿಂದ, ಎಸೆಯದೇ ನೀಡುವ ಪ್ರಸಾದ ಸ್ವೀಕರಿಸಿ ಮತ್ತೊಮ್ಮೆ ದೇವರಿಗೆ ಅಡ್ಡ ಬಿದ್ದು ಬರುವ ಮುಗ್ದ ಭಕ್ತನಿಗೂ ಈಗ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಚರ್ಚೆ ಬಗ್ಗೆ ಕುತೂಹಲ ಬಂದಿದೆ. ಈ ಚರ್ಚೆಗಳು ಏಕೆ ಎಂಬುದು ಆತನಿಗೂ ತಿಳಿದಿಲ್ಲ, ಹಾಗಂತ ಆ ತಲೆಬಿಸಿಯೂ ಆತನಿಗಿಲ್ಲ, ಈಗಲೂ ಅಡ್ಡಬಿದ್ದು ಎಸೆಯದೇ ನೀಡುವ ಪ್ರಸಾದವನ್ನು ಶಾಂತ ಮನಸ್ಸಿನಿಂದ ಸ್ವೀಕರಿಸಿ ಬರುತ್ತಾನೆ. ಹಾಗಿದ್ದರೆ ಈ  ಶೈವ-ವೈಷ್ಣವ ಪೂಜಾ ವಿವಾದ , ವೈಖಾನಸ-ತಂತ್ರಸಾರ ಆಗಮ ಪೂಜಾ ಪದ್ಧತಿ ಏನಿದು ?

ಕಳೆದ ಕೆಲವು ಸಮಯಗಳಿಂದ ಕುಕ್ಕೆ ಸುಬ್ರಹ್ಮಣ್ಯದಲ್ಲಿ  ಚರ್ಚೆಗಳ ಮೇಲೆ ಚರ್ಚೆ ನಡೆಯುತ್ತಿದೆ. ಆರಂಭದಲ್ಲಿ ಸರ್ಪಸಂಸ್ಕಾರದಲ್ಲಿ ದೇವಸ್ಥಾನ ಹಾಗೂ ಸಂಪುಟ ನರಸಿಂಹ ಮಠದ ಮಧ್ಯೆ ಚರ್ಚೆ ನಡೆಯಿತು, ನಂತರ ಸುಬ್ರಹ್ಮಣ್ಯ ಮಠ ಎಂಬ ಹೆಸರಿನ ಮೇಲೆ ಚರ್ಚೆ ನಡೆಯಿತು, ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಸಂಬಂಧಿಸಿದ ಮಠಗಳು ಯಾವುದೂ ಇಲ್ಲ ಇಲ್ಲಿರುವುದು  ಸಂಪುಟ ನರಸಿಂಹ ಮಠ ಎಂಬ ವಾದವಿತ್ತು, ಅದಾದ ಬಳಿಕ ಈಗ ಆಗಮ ಪದ್ಧತಿಗಳ ಬಗ್ಗೆ ಚರ್ಚೆಯಾಗುತ್ತಿದೆ. ರಾಜ್ಯದ ನಂಬರ್‌ ವನ್‌ ದೇವಸ್ಥಾನದಲ್ಲಿ  ಕಳೆದ ಇಷ್ಟೂ ಸಮಯಗಳಿಂದ ಚರ್ಚೆಗಳು ನಡೆಯುತ್ತಿರುವಾಗಲೂ  ಹಿಂದೂ ಸಮಾಜದ ಗಣ್ಯಾತಿ ಗಣ್ಯ ಸಂತರು ,  ಗಣ್ಯಾತಿ ಗಣ್ಯ ಸಂಘಟನೆಗಳು, ಗಣ್ಯಾತಿ ಗಣ್ಯ ಹಿಂದೂ ಮುಖಂಡರು ಈ ವಿವಾದಗಳನ್ನು ಬಗೆಹರಿಸಲು ಪ್ರಯತ್ನ ಮಾಡಿದಂತೆ ಕಾಣುತ್ತಿಲ್ಲ. ಐತಿಹಾಸಿಕ ಹಿನ್ನೆಲೆಯುಳ್ಳ ದೇವಸ್ಥಾನ ಒಂದು ಕಡೆ ಇದ್ದರೆ ಇನ್ನೊಂದು ಕಡೆ ಹಿಂದೂ ಸಮಾಜಕ್ಕೆ ಮಾರ್ಗದರ್ಶನ ಮಾಡುವ ಮಠ ಇದೆ. ಮತ್ತೊಂದು ಕಡೆ ಶ್ರದ್ಧೆಯಿಂದ ನಂಬುವ ಹಾಗೂ ಅಪಾರ ಸಂಕಟಗಳಿಗೆ ಪರಿಹಾರವೇ ದೇವರು ಎಂದು ನಂಬುವ ಭಕ್ತ ಸಮೂಹ ಇದೆ. ಇಲ್ಲಿ ಆಡಳಿತಕ್ಕೋ, ಹಣದ ವಿಚಾರಕ್ಕೋ , ಅಧಿಕಾರಕ್ಕೋ, ಪ್ರತಿಷ್ಟೆಗೋ ಚರ್ಚೆ ನಡೆಯುತ್ತಿದ್ದರೆ, ಅನೇಕ ಮಾನಸಿಕ ಕ್ಲೇಶಗಳಿಗೆ ಪರಿಹಾರವೇ ದೇವರು ಎಂದು ನಂಬುವ ಹಾಗೂ ಮನ;ಶಾಸ್ತ್ರದ ಪ್ರಕಾರ ಅನೇಕ ಮಾನಸಿಕ ಕ್ಲೇಶಗಳಿಗೆ ಪರಿಹಾರ ಕೇಂದ್ರವೇ ಶ್ರದ್ಧಾ ಕೇಂದ್ರಗಳು ಎಂದು ವೈಜ್ಞಾನಿಕವಾಗಿಯೂ ಸಾಬೀತಾಗಿರುವಾಗಲೂ ಈ ವಿವಾದಗಳನ್ನು ಬಗೆಹರಿಸಲು ಮುಂದಾಗದೇ ಇರುವುದು  ಇಡೀ ಹಿಂದೂ ಸಮಾಜವನ್ನು ಕಟ್ಟಲು ಹೊರಟವರ ವೈಫಲ್ಯವೇ ? ಎಂಬ ಪ್ರಶ್ನೆ ಈಗ ದೊಡ್ಡಾಗಿದೆ.

ಅಷ್ಟಕ್ಕೂ ಈ ವಿವಾದ ಶೈವ-ವೈಷ್ಣವದ ವಿವಾದ ಅಲ್ಲ, ಹಿಂದೂ ಏಕತೆಯ ಪ್ರಶ್ನೆ ಎಂದು ಕುಕ್ಕೆ ಸುಬ್ರಹ್ಮಣ್ಯ ಹಿತರಕ್ಷಣಾ ವೇದಿಕೆ ಹೇಳಿದೆ. ಸಾರ್ವಜನಿಕ ದೇವಸ್ಥಾನಗಳಲ್ಲಿ ಆಯಾಯ ದೇವರಿಗ ಸಲ್ಲಬೇಕಾದ ರೀತಿಯಲ್ಲಿಯೇ ಪೂಜೆ ನಡೆಯಬೇಕು, ಅಂತರ್ಯಾಮಿ ಪೂಜೆ ಸಲ್ಲದು , ಪೂಜಾ ಪದ್ಧತಿಯಲ್ಲಿ ತಾರತಮ್ಯ ಸಲ್ಲದು,  ಹೀಗಾಗಿ ಇದು  ಶೈವ-ವೈಷ್ಣವ ವಿವಾದ ಅಲ್ಲ , ಹಿಂದೂ ಏಕತೆಯ ವಿಚಾರ ಎಂದು ಹೇಳಿದೆ ಹಿತರಕ್ಷಣಾ ವೇದಿಕೆ.

ಇಲ್ಲಿ ವೈಖಾನಸ ಆಗಮ ಪೂಜಾ ಪದ್ಧತಿ ಹಾಗೂ ತಂತ್ರಸಾರ, ಶೈವಾಗಮನದ ಚರ್ಚೆ ಜೋರಾಗಿದೆ. ಆಗಮ ಎಂದರೆ ಪರಂಪರೆಯಿಂದ ಬಂದ ಪೂಜೆಯ ಶಾಸ್ತ್ರ. ಆಧ್ಯಾತ್ಮಿಕ ಮತ್ತು ಧಾರ್ಮಿಕವಾದ ವಿಚಾರಗಳನ್ನು ತಿಳಿಯಲು ಹಾಗೂ ತಿಳಿಸಲು ನೆರವಾಗುವ ಶಾಸ್ತ್ರಗ್ರಂಥಗಳೇ ಆಗಮಗಳು. ಇದರಲ್ಲಿ ದೇವತಾ ಅರ್ಚನೆ, ಉತ್ಸವ, ಸಾಮಾಜಿಕ ನೀತಿನಿಯಮಗಳು ಸೇರಿದಂತೆ ವಿವಿಧ ವಿಧಾನಗಳನ್ನು ತಿಳಿಸುತ್ತವೆ. ಆಗಮ ಗ್ರಂಥಗಳು ಹಲವಿದ್ದು ಮುಖ್ಯವಾಗಿ ಶೈವ, ವೈಷ್ಣವ ಮತ್ತು ಶಾಕ್ತ ಎಂಬ ಮೂರು ವಿಭಾಗಳಾಗಿ ವಿಂಗಡಿಸಲ್ಪಟ್ಟಿವೆ. ಇದರಲ್ಲಿದೆ ಇತರ ಕೆಲವು ಆಗಮಗಳೂ ಇವೆ.

ವೈಖಾನಸವು ಹಿಂದೂ ಧರ್ಮದ ಪ್ರಮುಖ ಸಂಪ್ರದಾಯಗಳಲ್ಲಿ ಒಂದಾಗಿದೆ. ಇದು ವೈಷ್ಣವ ಆಗಮವಾಗಿ ಕಾಣುತ್ತದೆ. ಪ್ರಾಥಮಿಕವಾಗಿ ವಿಷ್ಣುವನ್ನು  ಸರ್ವೋಚ್ಚ ದೇವರಾಗಿ ಇಲ್ಲಿ ಪೂಜಿಸಲಾಗುತ್ತದೆ. ಅನುಯಾಯಿಗಳು ಮುಖ್ಯವಾಗಿ ಕೃಷ್ಣ ಯಜುರ್ವೇದ ತೈತ್ತಿರಿಯಾ ಶಾಖಾ ಮತ್ತು ವೈಖಾನಸ ಕಲ್ಪಸೂತ್ರದ ಬ್ರಾಹ್ಮಣರು. ಬಹುಶಃ ಎಂಟನೇ ಶತಮಾನದ ಶಾಸನಗಳು ವೈಖಾನಾಸರನ್ನು ದೇವಾಲಯದ ಪುರೋಹಿತರೆಂದು ಗುರುತಿಸುತ್ತವೆ, ಮತ್ತು ಹತ್ತನೇ ಶತಮಾನದ ಅಂತ್ಯದಿಂದ ದಕ್ಷಿಣ ಭಾರತದ ಶಾಸನಗಳಲ್ಲಿ ಅವರನ್ನು ಪ್ರಮುಖವಾಗಿ ಉಲ್ಲೇಖಿಸಲಾಗಿದೆ. ವೈಖಾನಸರು ವಿಷ್ಣು ದೇವಾಲಯಗಳ ಅರ್ಚಕರಾಗಿದ್ದರು.  ಇಂದು ದಕ್ಷಿಣ ಭಾರತದ ರಾಜ್ಯಗಳಾದ ತಮಿಳುನಾಡು, ಆಂಧ್ರಪ್ರದೇಶ ಮತ್ತು ಕರ್ನಾಟಕದ ಕೆಲವು ಭಾಗಗಳಲ್ಲಿನ ವೈಷ್ಣವ ದೇವಾಲಯಗಳಲ್ಲಿ ವೈಖಾನಸರು ಪ್ರಧಾನ ಅರ್ಚಕರಾಗಿದ್ದಾರೆ.

ಇನ್ನೊಂದು ಶೈವಾಗಮನ. ಶೈವಾಗಮಗಳು ಕ್ರಿ.ಶ. 8-9 ನೇ ಶತಮಾನದವೆಂದು ಹೇಳುತ್ತಾರೆ. ಇವು ಶೈವ ಸಿದ್ಧ್ದಾಂತವನ್ನು ತಿಳಿಸುತ್ತದೆ. ಶಿವ ಅಥವಾ ರುದ್ರನ ಆರಾಧನೆ ಇಲ್ಲಿ ಪ್ರಮುಖವಾಗುತ್ತದೆ, ಆದರೆ ಸರ್ವ ದೇವರೂ ಇಲ್ಲಿ ಆರಾಧನೆಗೊಳ್ಳುತ್ತಾರೆ.

ಕುಕ್ಕೆ ಸುಬ್ರಹ್ಮಣ್ಯದಲ್ಲಿ  ಇನ್ನೊಂದು ಅಂಶವೆಂದರೆ ಇಲ್ಲಿ ತುಳು ಸ್ಮಾರ್ತ ಬ್ರಾಹ್ಮಣರ ಪೂಜಾ ಪದ್ಧತಿಯೂ ಕಾಣುತ್ತದೆ. ಇಲ್ಲಿ ಸ್ಥಾನಿಕ ಬ್ರಾಹ್ಮಣರಿಂದಲೂ ದೇವರಿಗೆ ಪೂಜೆ ನಡೆಯುತ್ತಿತ್ತು ಎನ್ನುವುದು  ಮತ್ತೊಂದು ವಾದ. ಪಂಚದ್ರಾವಿಡ ಬ್ರಾಹ್ಮಣರ ವರ್ಗಕ್ಕೆ ಸೇರಿದ ಸ್ಥಾನಿಕ ಬ್ರಾಹ್ಮಣರ ಕುಲದೈವ ಶ್ರೀ ಸುಬ್ರಹ್ಮಣ್ಯ ದೇವರು ಎಂಬುದು ಈಗ ವಾದ. ಹೀಗಾಗಿ ಶೈವಾಗಮನದ ಮೂಲಕವೇ ಪೂಜೆಗಳು ನಡೆಯಬೇಕು ಎಂಬುದು  ಈಗಿನ ವಾದ.

ಕುಕ್ಕೆ ಸುಬ್ರಹ್ಮಣ್ಯದಲ್ಲಿ ದೇವಸ್ಥಾನಕ್ಕೆ ಸಂಬಂಧಿಸಿ ಹಲವು ಬಾರಿ ದೈವಜ್ಞರ ಮೂಲಕ ಅಷ್ಟಮಂಗಲ ಪ್ರಶ್ನೆ ಚಿಂತನೆಗಳು ನಡೆದಿವೆ. ಪ್ರತೀ ಬಾರಿ ಪ್ರಶ್ನೆ ಚಿಂತನೆ ನಡೆದ ಬಳಿಕ ಎಲ್ಲಾ ಕಾರ್ಯಗಳೂ ಪೂರ್ತಿಯಾಗಿಲ್ಲ ಎನ್ನುವುದು ಒಂದು ಆರೋಪ. ಅನೇಕ ವರ್ಷಗಳ ಹಿಂದೆ ನಡೆದ ಪ್ರಶ್ನೆ ಚಿಂತನೆಯ ಪ್ರತಿಯ ಪುಟವೊಂದು ಸಾಮಾಜಿಕ ಜಾಲತಾಣದಲ್ಲಿ  ಹರಿದಾಡಿತು ಅದರ ಪ್ರತಿ ಇಲ್ಲಿದೆ..

 

ವೈಷ್ಣವ-ಶೈವಾಗಮನದ ಪೂಜಾ ಪದ್ಧತಿ ಹೇಗೆಯೇ ಇರಲಿ ಭಕ್ತರಿಗಂತೂ ಈ ಗೊಂದಲಗಳಿಂದ ಮುಕ್ತಿ ಸಿಗುವಂತೆ ಸಮಾಜಕ್ಕೆ ಮಾರ್ಗದರ್ಶನ ಮಾಡುವ ಮಂದಿ ಮಾಡಬೇಕಿದೆ. ಧಾರ್ಮಿಕ ಕ್ಷೇತ್ರವೆಂಬ ಬ್ಯುಸಿನೆಸ್‌ ಕೇಂದ್ರವಾಗುವ ಬದಲಾಗಿ ಭಕ್ತರಿಗೆ ಹ್ಯಾಪಿನೆಸ್‌ ತರುವ ಕ್ಷೇತ್ರವಾಗಲು ಪ್ರಯತ್ನ ಮಾಡಬೇಕಿದೆ. ಅದು ಯಾರು….?

ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಒಂದು ವರ್ಷದಲ್ಲಿ 10 ಲಕ್ಷ ಮನೆಗಳಿಗೆ ಸೌರ ಫಲಕ
March 14, 2025
6:57 AM
by: The Rural Mirror ಸುದ್ದಿಜಾಲ
ನಂದಿನಿ ಹಾಲಿನ ದರ ಏರಿಕೆಗೆ ಕರ್ನಾಟಕ ರಾಜ್ಯ ಹೋಟೆಲ್‌ಗಳ ಸಂಘ ವಿರೋಧ
March 14, 2025
6:54 AM
by: The Rural Mirror ಸುದ್ದಿಜಾಲ
ಹೆಚ್ಚುತ್ತಿರುವ ಸೈಬರ್ ಅಪರಾಧ ಪ್ರಕರಣಗಳು | ಒಂದು ವರ್ಷದಲ್ಲಿ 22 ಸಾವಿರ ಸೈಬರ್ ಪ್ರಕರಣ ದಾಖಲು |
March 14, 2025
6:51 AM
by: The Rural Mirror ಸುದ್ದಿಜಾಲ
ಬೆಳ್ಳಿ ಧರಿಸುವುದು ಎಲ್ಲಾ ರಾಶಿಯವರಿಗೆ ಉತ್ತಮವೇ…? | ಯಾವೆಲ್ಲಾ ರಾಶಿಗಳಿಗಳಿಗೆ ಹಾನಿ..?
March 14, 2025
6:37 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror