ಜೈ ಜವಾನ್ ಜೈ ಕಿಸಾನ್ ನಾಯಕನ ಜನುಮದಿನವಿಂದು

October 2, 2021
7:30 AM

ಜಗತ್ತು ಯಾವತ್ತೂ ಬೆಲೆ ಕೊಡುವುದು, ತಲೆ ಬಾಗುವುದು ಪ್ರಾಮಾಣಿಕರಿಗೆ. ಒಂದೊಮ್ಮೆ ಕಣ್ಣಿಗೆ ಮಣ್ಣೆರಚಿ ನಾಯಕನಾಗ ಬಹುದು ಆದರೆ ಅದು ಅಲ್ಪ ಕಾಲದ ಯಶಸ್ಸು ಅಷ್ಟೇ.

Advertisement

ದೇಶದ ಏಳಿಗೆಗಾಗಿ ಒಬ್ಬ ವ್ಯಕ್ತಿ ಎಷ್ಟೆಲ್ಲಾ ತ್ಯಾಗ ಮಾಡಬಹುದೋ ಅದೆಲ್ಲವನ್ನೂ ಮಾಡಿದವರು ಲಾಲ್ ಬಹಾದ್ದೂರ್ ಶಾಸ್ತ್ರಿಯವರು. ಮನಗೆದ್ದು ಊರುಗೆಲ್ಲುವ ಅಪ್ರತಿಮ ಸಾಹಸಿ. ಸಾಹಸ ,ಸಹನೆ, ಚಾತುರ್ಯ, ಬುದ್ಧಿವಂತಿಕೆ ಕೌಶಲ್ಯಗಳಲ್ಲಿ ಯಾರಿಗೂ ಇವರು ಕಮ್ಮಿಯಿರಲಿಲ್ಲ. ಈ ಎಲ್ಲಾ ಗುಣಗಳು ಒಂದೆರಡು ದಿನಗಳಲ್ಲಿ ಬೆಳೆಸಿಕೊಂಡಂತಹ ಗುಣಗಳಲ್ಲ. ಅವರು ಬೆಳೆದು ಬಂದ ಪರಿಸರ ಹಾಗೂ ಪರಿಸ್ಥಿತಿಯ ಪರಿಣಾಮವಾಗಿ ಮೈಗೂಡಿಸಿಕೊಂಡ ಗುಣಗಳು.
ಅವರು 2 ಅಕ್ಟೋಬರ್ 1904 ರಂದು ಕಾಶಿಯ ಬಳಿಯಿರುವ ಮೊಘಲ್ ಸರಾಯ್ ಎಂಬ ಊರಿನಲ್ಲಿ ಜನಿಸಿದರು. ತಂದೆ ಶಾರದಾ ಪ್ರಸಾದ್, ತಾಯಿ ರಾಂ ದುಲಾರಿ..

ಅಧ್ಯಾಪನ, ಗುಮಾಸ್ತರಾಗಿ ಅಪ್ಪ ದುಡಿಯುತ್ತಿದ್ದರು. ಒಂದು ವರ್ಷವಿರುವಾಗಲೇ ತಂದೆಯನ್ನು ಕಳೆದುಕೊಂಡರು. ಮುಂದೆ ಅಜ್ಜನೇ ಇವರ ಜವಾಬ್ದಾರಿ ಯನ್ನು ತೆಗೆದುಕೊಂಡು ಕಾಶಿಯಲ್ಲಿ ಓದಿಸಿದರು.

ದೇಶದಲ್ಲಿ ನಡೆಯುತ್ತಿದ್ದ ಸ್ವಾತಂತ್ರ್ಯ ಹೋರಾಟದಲ್ಲಿ ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದರು. ಬ್ರಿಟಿಷ್ ಸರ್ಕಾರದ ವಿರುದ್ಧ ಗಾಂಧೀಜಿಯವರು ಮಾಡುತ್ತಿದ್ದ ಉಪ್ಪಿನ ಸತ್ಯಾಗ್ರಹದಲ್ಲೂ ಪಾಲ್ಗೊಂಡು ಜೈಲು ಸೇರಿದ್ದರು. ಮುಂದೆ ದೇಶಕ್ಕೆ ಸ್ವಾತಂತ್ರ್ಯ ಬಂದ ಮೇಲೆ ದೇಶದ ಆಡಳಿತ ಚುಕ್ಕಾಣಿ ಹಿಡಿದವರಲ್ಲಿ ಇವರು ಪ್ರಮುಖರು.

ದೇಶದ ನಾಯಕನಿಗೆ ಇರಲೇ ಬೇಕಾದ ಗುಣಗಳು ನಿಷ್ಠೆ ಮತ್ತು ದಕ್ಷತೆ. ಎಂತಹ ಕಠಿಣ ಸಮಯದಲ್ಲೂ ಕೂಡ ತಮ್ಮ ಗುರಿಯನ್ನು ಬಿಟ್ಟು ಕೊಡದ ನಿಶ್ಚಲತೆ ಲಾಲ್ ಬಹಾದ್ದೂರ್ ರವರದು. ಮಗಳ ಸಾವು, ಮಗನ ಅನಾರೋಗ್ಯ, ಬಡತನ ಯಾವುದೂ ಅವರನ್ನು ಅಡ್ಡ‌ ಹಾದಿ ಹಿಡಿಯುವಂತೆ ಮಾಡಲಿಲ್ಲ. ರಾಜಕೀಯ ಜೀವನದಲ್ಲಿ ಮುಂದೆ ಮಂತ್ರಿ ಯಾದಾಗ, ಆಮೇಲೆ ಭಾರತದ ಪ್ರಧಾನ ಮಂತ್ರಿಯಾದಾಗಲೂ ವೈಭವದ ಜೀವನಕ್ಕೆ ಮನಸೋಲಲಿಲ್ಲ. ದೇಶದ ಆರ್ಥಿಕ ವ್ಯವಸ್ಥೆ ಹೀನಾಯ ಸ್ಥಿತಿಗೆ ತಲುಪಿದಾಗ ವಾರದ ಒಂದು ಹೊತ್ತು ಉಪವಾಸ ಮಾಡುವ ನಿರ್ಧಾರ ಕೈಗೊಂಡರು, ಅಲ್ಲದೆ ದೇಶವಾಸಿಗಳಲ್ಲೂ ಮನವಿ ಮಾಡಿದರು. ಅದಕ್ಕೆ ದೇಶದ‌ಜನತೆ ಸ್ಪಂದಿಸಿದರು‌. ಪ್ರತಿ ಸೋಮವಾರದಂದು ಉಪವಾಸ‌ ಮಾಡಲು ಇಡೀ ದೇಶವೇ ಕೈ ಜೋಡಿಸಿತು. ಗೃಹವಿಲ್ಲದ ಗೃಹ ಮಂತ್ರಿ ಬಹುಶಃ ಇವರೊಬ್ಬರೇ.

ಭ್ರಷ್ಟಾಚಾರ ತಡೆಗೆ ಮೊದಲ ಬಾರಿಗೆ ಒಂದು ಸಮಿತಿಯನ್ನು ಇವರು ರಚಿಸಿದರು. ಮಹಿಳಾ ಕಂಡಕ್ಟರ್ ರನ್ನು ಇವರೇ ನೇಮಿಸಿದ್ದು. ಹೀಗೆ ಹಲವು ಮೊದಲುಗಳಿಗೆ ಕಾರಣರಾದ ಹೆಮ್ಮೆಯ ಭಾರತಾಂಭೆಯ ಪುತ್ರರಿವರು. ಲಾಲ್ ಬಹಾದ್ದೂರ್ ಜೀಯವರು ಒಳ್ಳೆಯ ಓದುಗರಾಗಿದ್ದರು. ಮೇಡಂ ಕ್ಯೂರಿಯವರ ಆತ್ಮ ಕಥೆಯನ್ನು ಹಿಂದಿಗೆ ಅನುವಾದಿಸಿದರು. ನಮ್ಮ ದುರದೃಷ್ಟ. ಒಬ್ಬ ಪ್ರಾಮಾಣಿಕ ದೇಶ ನಾಯಕನನ್ನು ಉಳಿಸಿಕೊಳ್ಳುವ ಸೌಭಾಗ್ಯ ನಮಗಿರಲಿಲ್ಲ.
ಜೈ ಜವಾನ್ ಜೈ ಕಿಸಾನ್ ಎಂಬ ಧ್ಯೇಯ ವಾಕ್ಯದಂತೆ ನಡೆದವರು.

ಮಾತು, ಮನಸ್ಸು ಕೆಲಸ ಮೂರನ್ನು ಶುದ್ಧ ವಾಗಿಟ್ಟುಕೊಂಡ ನಾಯಕನ ಅಂತ್ಯ ಸಂಶಯಾಸ್ಪದ ರೀತಿಯಲ್ಲಿ ಆದದ್ದು ಭಾರತೀಯರ ದೌಭಾಗ್ಯವೂ ಹೌದು ದುರಂತವೂ ಹೌದು. ಕೇವಲ‌ 17 ತಿಂಗಳ ಪ್ರಧಾನ ಮಂತ್ರಿ ಪಟ್ಟದಲ್ಲಿದ್ದರು ಯಾರಿಂದಲೂ ಮಾಡಲಾಗದ ಸಾಧನೆಗಳನ್ನು ಮಾಡಿ ಇತಿಹಾಸದ ಪುಟದಲ್ಲಿ ಅಚ್ಚಳಿಯದ ನೆನಪಾಗಿ ಕಾಡುವವರು. ಇಂದು ನಮ್ಮ ನೆಚ್ಚಿನ ಲಾಲ್ ಬಹಾದ್ದೂರ್ ಶಾಸ್ತ್ರಿ ಯವರ ಜನುಮದಿನ. ಮನಃಪೂರ್ವಕವಾಗಿ ನಮಿಸೋಣ.

# ಅಶ್ವಿನಿಮೂರ್ತಿ ಅಯ್ಯನಕಟ್ಟೆ

Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

ಇದನ್ನೂ ಓದಿ

ಹೊಸರುಚಿ | ಗುಜ್ಜೆ ಮಂಚೂರಿ – ಕರಾವಳಿಯ ಸಾಂಪ್ರದಾಯಿಕ ರುಚಿಗೆ ಚೈನೀಸ್ ಟ್ವಿಸ್ಟ್
April 20, 2026
9:40 PM
by: ದ ರೂರಲ್ ಮಿರರ್.ಕಾಂ
ಗ್ರಾಮೀಣ ಮೌಲ್ಯಗಳು ಮತ್ತು ನಗರ ಜೀವನ – ಸಮತೋಲನವೇ ನಿಜವಾದ ಮಾರ್ಗ!
April 18, 2026
7:28 AM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ
ಹೊಸರುಚಿ – ಎಳೆಯ ಹಲಸಿನ ಕಾಯಿ ಬಾಲ್ : ಕರಕರಾ, ರುಚಿಕರ ಮತ್ತು ಆರೋಗ್ಯಕರ ಸ್ನ್ಯಾಕ್
April 11, 2026
6:16 PM
by: ದಿವ್ಯ ಮಹೇಶ್
ಕುಟುಂಬದಲ್ಲೇ ಆರೋಗ್ಯದ ಬೀಜ – ಕುಟುಂಬದಲ್ಲಿ ಆರೋಗ್ಯಕರ ಅಭ್ಯಾಸಗಳ ಬೆಳವಣಿಗೆ
April 10, 2026
6:11 PM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ

You cannot copy content of this page - Copyright -The Rural Mirror