ದೇಶದಲ್ಲಿ ಮೆಕ್ಕೆಜೋಳ ಉತ್ಪಾದನೆ ಹೆಚ್ಚಳ ಮತ್ತು ಅಭಿವೃದ್ದಿಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದ್ದು, ಕನಿಷ್ಠ ಬೆಂಬಲ ಬೆಲೆ ಮೂಲಕ ರೈತರ ಹಿತರಕ್ಷಣೆ ಮಾಡಲಾಗಿದೆ ಎಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವ ಶಿವರಾಜ್ ಸಿಂಗ್ ಚೌವ್ಹಾಣ್ ಹೇಳಿದ್ದಾರೆ.
ಭಾರತೀಯ ವಾಣಿಜ್ಯ ಮತ್ತು ಕೈಗಾರಿಕಾ ಮಹಾ ಒಕ್ಕೂಟ- ಫಿಕಿ, ದೆಹಲಿಯಲ್ಲಿ ಆಯೋಜಿಸಿದ್ದ 11ನೇ ಮೆಕ್ಕೆಜೋಳ ಸಮಾವೇಶ ಉದ್ದೇಶಿಸಿ ಅವರು, 2026ರ ವೇಳೆಗೆ ಪೆಟ್ರೋಲ್ ಮತ್ತು ಡೀಸೆಲ್ನಲ್ಲಿ ಕನಿಷ್ಠ ಶೇಕಡ 20ರಷ್ಟು ಎಥೆನಾಲ್ ಮಿಶ್ರಣ ಮಾಡುವ ಗುರಿಯಿಂದಾಗಿ ರೈತರ ಆದಾಯ ಹೆಚ್ಚಳವಾಗುತ್ತಿದೆ ಎಂದರು. 1990ರ ದಶಕದಲ್ಲಿ ದೇಶದಲ್ಲಿ ಕೇವಲ 10 ದಶಲಕ್ಷ ಟನ್ ಮೆಕ್ಕೆಜೋಳ ಉತ್ಪಾದನೆಯಾಗುತ್ತಿದ್ದು, ಇದೀಗ ಈ ಪ್ರಮಾಣ 42 ದಶಲಕ್ಷ ಟನ್ಗೆ ಏರಿಕೆಯಾಗಿದೆ. ಪ್ರತಿ ಹೆಕ್ಟೇರ್ಗೆ ಸರಾಸರಿ 3.7 ಟನ್ ಉತ್ಪಾದನೆಯಾಗುತ್ತಿದೆ. 2047ರ ವೇಳೆಗೆ ಒಟ್ಟು 86 ದಶಲಕ್ಷ ಟನ್ ಉತ್ಪಾದನೆಯಾಗುವ ಗುರಿಯಿದೆ ಎಂದರು. ಭಾರತೀಯ ಕೃಷಿ ಸಂಶೋಧನಾ ಮಂಡಳಿ -ICAR, ಮೆಕ್ಕೆಜೋಳದ ವಿವಿಧ ತಳಿಗಳನ್ನು ಅಭಿವೃದ್ಧಿಪಡಿಸಿದ್ದು, ಗುಣಮಟ್ಟದ ಇಳುವರಿ ಹೆಚ್ಚಳಕ್ಕೆ ನೆರವಾಗಿದೆ ಎಂದು ತಿಳಿಸಿದರು.