ಸುಮಾರು ಒಂದು ತಿಂಗಳ ತಡವಾಗಿ ಆಗಮಿಸಿರುವ ಮುಂಗಾರು ಇದೀಗ ಮಲೆನಾಡಿನಲ್ಲಿ ಚುರುಕುಗೊಂಡಿದೆ. ಘಟ್ಟದ ತಪ್ಪಲು ಪ್ರದೇಶಗಳಲ್ಲಿ ಮಳೆ ಸುರಿಯುತ್ತಿದೆ. ದಕ್ಷಿಣ ಕನ್ನಡ, ಉಡುಪಿ, ಕೊಡಗು ಸೇರಿದಂತೆ ಮಲೆನಾಡು ಭಾಗದಲ್ಲಿ ಮುಂಗಾರು ಚುರುಕುಗೊಂಡಿದ್ದು, ರೈತರಲ್ಲಿ ಹೊಸ ಭರವಸೆ ಮೂಡಿಸಿದೆ.
ಕೊಡಗಿನ ಕಾವೇರಿ ನದಿ ಪಾತ್ರ ಸೇರಿದಂತೆ ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ನಿರಂತರ ಮಳೆಯಾಗುತ್ತಿದ್ದು, ಕಾಫಿ, ಭತ್ತ, ಕರಿಮೆಣಸು ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆಯುವ ರೈತರಿಗೆ ಇದು ಸಂತಸದ ಸುದ್ದಿಯಾಗಿದೆ. ಸಾಮಾನ್ಯವಾಗಿ ಕೊಡಗು ಜಿಲ್ಲೆಯಲ್ಲಿ ಜೂನ್ ಮೊದಲ ವಾರದಲ್ಲೇ ಮುಂಗಾರು ಆರಂಭವಾಗಿ ಕೃಷಿ ಚಟುವಟಿಕೆಗಳಿಗೆ ವೇಗ ಸಿಗುತ್ತದೆ. ಆದರೆ ಈ ವರ್ಷ ಮುಂಗಾರು ತಡವಾದ ಹಿನ್ನೆಲೆಯಲ್ಲಿ ರೈತರು ಆತಂಕದಲ್ಲಿದ್ದರು. ಬಿತ್ತನೆ, ನಾಟಿ ಹಾಗೂ ತೋಟಗಾರಿಕಾ ಬೆಳೆಗಳ ನಿರ್ವಹಣೆಯೂ ವಿಳಂಬವಾಗಿತ್ತು. ಇದೀಗ ಸುಮಾರು ಒಂದು ತಿಂಗಳ ಬಳಿಕ ಮುಂಗಾರು ಬಿರುಸುಗೊಂಡಿರುವುದರಿಂದ ಕೃಷಿ ಚಟುವಟಿಕೆಗಳು ಚುರುಕುಗೊಳ್ಳುವ ನಿರೀಕ್ಷೆ ಮೂಡಿದೆ. ಮಳೆ ಮುಂದುವರಿದರೆ ಜಲಾಶಯಗಳ ಒಳಹರಿವು ಹೆಚ್ಚುವುದರ ಜೊತೆಗೆ ಕಾವೇರಿ ನದಿಯ ಹರಿವಿನಲ್ಲಿಯೂ ಏರಿಕೆ ಕಾಣುವ ಸಾಧ್ಯತೆಯಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಶಿರಾಡಿ, ಸುಳ್ಯ, ಸುಬ್ರಹ್ಮಣ್ಯ, ಧರ್ಮಸ್ಥಳ, ಪುತ್ತೂರು ಸೇರಿದಂತೆ ವಿವಿದೆಡೆ ಮಳೆಯಾಗುತ್ತಿದೆ. ಉಡುಪಿ ಜಿಲ್ಲೆಯಲ್ಲೂ ಮಳೆಯಾಗುತ್ತಿದೆ. ಮಲೆನಾಡಿನ ತಪ್ಪಲು ಪ್ರದೇಶದ ಶಿರಾಡಿ ಘಾಟಿ ಸೇರಿದಂತೆ ಕಾಡಂಚಿನ ಪ್ರದೇಶಗಳಲ್ಲಿ ಮಳೆಗಾಲದ ಸೊಬಗು ಆರಂಭವಾಗಿದೆ.
ಕೃಷಿ ತಜ್ಞರ ಪ್ರಕಾರ, ಮುಂದಿನ ದಿನಗಳಲ್ಲಿಯೂ ಸಮರ್ಪಕ ಪ್ರಮಾಣದ ಮಳೆ ಮುಂದುವರಿದರೆ ಭತ್ತದ ನಾಟಿ, ಕಾಫಿ ತೋಟಗಳ ಬೆಳವಣಿಗೆ ಹಾಗೂ ಕರಿಮೆಣಸು ಸೇರಿದಂತೆ ಮಳೆಆಧಾರಿತ ಬೆಳೆಗಳಿಗೆ ಅನುಕೂಲಕರ ವಾತಾವರಣ ನಿರ್ಮಾಣವಾಗಲಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ
ತಡವಾದರೂ ಸಮಯಕ್ಕೆ ಬಂದ ಮಳೆ : ಈ ವರ್ಷದ ಮುಂಗಾರು ಆರಂಭದಲ್ಲಿ ಕಂಡುಬಂದ ವಿಳಂಬದಿಂದ ಮಲೆನಾಡು ಮತ್ತು ಕರಾವಳಿ ರೈತರು ತೀವ್ರ ಆತಂಕದಲ್ಲಿದ್ದರು. ವಿಶೇಷವಾಗಿ ಕಾಫಿ, ಕರಿಮೆಣಸು ಹಾಗೂ ಅಡಿಕೆ ತೋಟಗಳಲ್ಲಿ ಮಣ್ಣಿನ ತೇವಾಂಶ ಕಡಿಮೆಯಾಗಿದ್ದು, ನಿರ್ವಹಣಾ ವೆಚ್ಚ ಹೆಚ್ಚುವ ಸಾಧ್ಯತೆ ಎದುರಾಗಿತ್ತು.
ಆದರೆ ಜೂನ್ ಅಂತ್ಯದ ವೇಳೆಗೆ ಮುಂಗಾರು ಚುರುಕುಗೊಂಡಿರುವುದು ಕೃಷಿ ದೃಷ್ಟಿಯಿಂದ ಇನ್ನೂ ಅನುಕೂಲಕರ ಬೆಳವಣಿಗೆಯಾಗಿದೆ. ಭತ್ತದ ನಾಟಿಗೆ ಇನ್ನೂ ಅವಕಾಶವಿದ್ದು, ಕಾಫಿ ಗಿಡಗಳ ಹೊಸ ಚಿಗುರು ಬೆಳವಣಿಗೆ ಹಾಗೂ ಕರಿಮೆಣಸು ಬಳ್ಳಿಗಳ ಚೇತರಿಕೆಗೆ ಈ ಮಳೆ ನೆರವಾಗಲಿದೆ. ಅಡಿಕೆ ತೋಟಗಳಲ್ಲೂ ಮಣ್ಣಿನ ತೇವಾಂಶ ಸುಧಾರಿಸುವ ಸಾಧ್ಯತೆಯಿದೆ.
ಆದರೂ, ನಿರಂತರ ಅತಿವೃಷ್ಟಿ ಉಂಟಾದರೆ ಭೂಕುಸಿತ, ನೀರು ನಿಲ್ಲುವಿಕೆ, ಕಾಫಿಯಲ್ಲಿ ರೋಗ, ಅಡಿಕೆಯಲ್ಲಿ ಕೊಳೆರೋಗ (ಮಹಾಳಿ), ಕರಿಮೆಣಸಿನಲ್ಲಿ ಶಿಲೀಂಧ್ರ ರೋಗಗಳಂತಹ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆಯೂ ಇದೆ. ಆದ್ದರಿಂದ ರೈತರು ಮಳೆ ನಡುವಿನ ಬಿಡುವಿನ ಅವಧಿಯಲ್ಲಿ ತೋಟಗಳ ಸ್ವಚ್ಛತೆ, ನೀರು ಹರಿದು ಹೋಗುವ ವ್ಯವಸ್ಥೆ ಹಾಗೂ ಅಗತ್ಯ ಸಸ್ಯರೋಗ ನಿರ್ವಹಣಾ ಕ್ರಮಗಳನ್ನು ಕೈಗೊಳ್ಳುವುದು ಸೂಕ್ತ ಎಂದು ಕೃಷಿ ತಜ್ಞರು ಸಲಹೆ ನೀಡಿದ್ದಾರೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ
After nearly a month-long delay, the southwest monsoon has become active across the Malnad and coastal districts of Karnataka, including Kodagu, Dakshina Kannada, and Udupi. The rainfall has brought much-needed relief to farmers, improved prospects for paddy, coffee, pepper, and arecanut cultivation, and is expected to enhance river flows and reservoir inflows if it continues over the coming days.

