ಮಂಡ್ಯ ಮೈಷುಗರ್ ಕಾರ್ಖಾನೆಯಲ್ಲಿ ಪ್ರಸಕ್ತ ಸಾಲಿನ ಕಬ್ಬು ಅರೆಯುವ ಪ್ರಕ್ರಿಯೆ ಜೂನ್ 30ರಿಂದ ಆರಂಭವಾಗಲಿದೆ. ಈ ಬಾರಿ 4.50 ಲಕ್ಷ ಟನ್ ಕಬ್ಬು ಅರೆಯುವ ಗುರಿ ಹೊಂದಿದ್ದು, ಈಗಾಗಲೇ 4.53 ಲಕ್ಷ ಟನ್ ಕಬ್ಬಿಗೆ ರೈತರೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ್ ಹೇಳಿದ್ದಾರೆ.
ಮಂಡ್ಯ ನಗರದ ಮೈಷುಗರ್ ಕಾರ್ಖಾನೆ ಆವರಣದಲ್ಲಿ ನಡೆದ ರೈತರೊಂದಿಗಿನ ಸಭೆಯಲ್ಲಿ ಅವರು ಮಾತನಾಡಿ, ಸಕ್ಕರೆ ಕಾರ್ಖಾನೆ ಆರಂಭಿಸಲು ಯಾವುದೇ ತೊಂದರೆಯಿಲ್ಲ. ಕಳೆದ ಬಾರಿಯಂತೆ ಸರ್ಕಾರದ ನೆರವು ಪಡೆಯದೇ ಈ ಬಾರಿಯೂ ಕಬ್ಬು ಅರೆಯುತ್ತೇವೆ. ಪ್ರತಿದಿನ ಕಾರ್ಖಾನೆಯಲ್ಲಿ ಐದು ಸಾವಿರ ಟನ್ ಕಬ್ಬು ಅರೆಯುವ ಸಾಮರ್ಥ್ಯವಿದ್ದು, ಕನಿಷ್ಟ 4 ಸಾವಿರ ಟನ್ ಕಬ್ಬು ಅರೆಯುತ್ತೇವೆ ಎಂದು ಸಭೆಗೆ ತಿಳಿಸಿದರು. ಎರಡು ದಶಕಗಳ ಇತಿಹಾಸದಲ್ಲೇ ಮೊದಲ ಬಾರಿಗೆ ಕಳೆದ ವರ್ಷ ಕಾರ್ಖಾನೆ ಲಾಭಾಂಶ ಕಂಡಿದೆ. 2 ಲಕ್ಷ ಟನ್ ಕಬ್ಬು ಅರೆದು ಪ್ರತಿ ಟನ್ಗೆ 122ನಂತೆ 2.44 ಕೋಟಿ ಲಾಭ ಗಳಿಸಿದೆ. ಕಳೆದ ವರ್ಷ ಆಗಸ್ಟ್ 5ರಂದು ಮೈಷುಗರ್ ಸಕ್ಕರೆ ಕಾರ್ಖಾನೆಯಲ್ಲಿ ಕಬ್ಬು ನುರಿಯುವ ಕಾರ್ಯ ಪ್ರಾರಂಭವಾಗಿ 25000 ಮೆಟ್ರಿಕ್ ಟನ್ ಕಬ್ಬಿನ ಗುರಿಯ ಪೈಕಿ 2,01,900 ಮೆಟ್ರಿಕ್ ಟನ್ ಕಬ್ಬು (ಶೇ 97.5) ನುರಿಸಲಾಗಿದೆ ಎಂದು ತಿಳಿಸಿದರು.