ಬೆಂಗಳೂರಿನ ಲಾಲ್ ಬಾಗ್ ನಲ್ಲಿರುವ ಡಾ. ಎಂ.ಎಚ್ ಮರೀಗೌಡ ಸಭಾಂಗಣದಲ್ಲಿ ಮೂರು ದಿನಗಳ ಕಾಲ ಸಾವಯವ ಮಾವು ಮತ್ತು ಹಲಸು ಮೇಳವನ್ನು ಹಮ್ಮಿಕೊಳ್ಳಲಾಗಿದೆ.
ತೋಟಗಾರಿಕ ಇಲಾಖೆ ಹಾಗೂ ಜೈವಿಕ ಕೃಷಿ ಸೊಸೈಟಿ ಗಳ ಸಹಯೋಗದಲ್ಲಿ ನಡೆಯುತ್ತಿರುವ ಈ ಮೇಳದಲ್ಲಿ ಮಾವು ಹಾಗೂ ಹಲಸಿನ ವಿಶೇಷ ತಳಿಗಳನ್ನು ಪ್ರದರ್ಶನಕ್ಕೀಡಲಾಗಿದೆ, ರಾಜ್ಯದ ವಿವಿಧ ಭಾಗಗಳಲ್ಲಿ ಬೆಳೆದ ಸಾವಯವ ಮಾವು ಹಾಗೂ ಹಲಸಿನ ಹಣ್ಣುಗಳು ರೈತರಿಂದ ನೇರವಾಗಿ ಗ್ರಾಹಕ ಕೈ ಸೇರುತ್ತಿವೆ.ರಸಪೂರಿ, ಬಾದಾಮಿ, ತೋತಾಪುರಿ, ಮಲ್ಲಿಕ ಸೇರಿದಂತೆ ಸ್ವಾದಭರಿತ ಮಾವಿನ ಹಣ್ಣುಗಳು ಪ್ರದರ್ಶನಕ್ಕೆ ಆಗಮಿಸಿದ ಜನರ ಗಮನಸೆಳೆಯುತ್ತಿವೆ. ಮಾವು ಹಲಸು ಸೇರಿದಂತೆ ಸಿರಿಧ್ಯಾನ ಮತ್ತು ಸಾವಯವ ತರಕಾರಿಗಳನ್ನು ಪ್ರದರ್ಶನದಲ್ಲಿ ಇರಿಸಲಾಗಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಖರೀದಿಸುತ್ತಿದ್ದಾರೆ.
ಪ್ರದರ್ಶನದಲ್ಲಿ ಮಾತನಾಡಿದ ತೋಟಗಾರಿಕ ಹಾಗೂ ರೇಷ್ಮೆ ಇಲಾಖೆ ಕಾರ್ಯದರ್ಶಿ ಡಾ. ಶಮ್ಲಾ ಇಕ್ಬಾಲ್, ಬೆಂಗಳೂರಿನ ಗ್ರಾಹಕರಿಗಾಗಿ ವಿಶೇಷವಾಗಿ ಹಳ್ಳಿಗಳಿಂದ ಸಾವಯವ ಉತ್ಪನ್ನಗಳನ್ನು ತಂದು ಪ್ರದರ್ಶನದಲ್ಲಿ ಇರಿಸಲಾಗಿದೆ, ಜನರಿಂದ ಉತ್ತಮ ಸ್ಪಂದನೆ ದೊರೆತಿದೆ ಎಂದರು.
ಇಂದಿನಿಂದ ಮೂರು ದಿನಗಳ ಕಾಲ ಮಾವು-ಹಲಸು ಮೇಳ : ಮೈಸೂರಿನಲ್ಲಿ ಇಂದಿನಿಂದ ಮೂರು ದಿನಗಳ ಕಾಲ ಮಾವು-ಹಲಸು ಮೇಳ ಪ್ರಾರಂಭಗೊಂಡಿದೆ. ತೋಟಗಾರಿಕೆ ಇಲಾಖೆ ವತಿಯಿಂದ ಮೈಸೂರಿನ ಕುಪ್ಪಣ್ಣ ಪಾರ್ಕ್ನಲ್ಲಿ ಆಯೋಜಿಸಿರುವ ಮಾವು-ಹಲಸು ಮೇಳಕ್ಕೆ ಶಾಸಕ ಕೆ.ಹರೀಶ್ ಗೌಡ ಚಾಲನೆ ನೀಡಿದರು. ಇಲ್ಲಿ ಒಟ್ಟು 49 ಮಳಿಗೆಗಳನ್ನು ತೆರೆಯಲಾಗಿದೆ. ಈ ಮಳಿಗೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಮಾವು ಬೆಳೆದಿರುವ ರೈತರು, ಮಾವು-ಹಲಸಿನ ಹಣ್ಣುಗಳನ್ನು ಮಾರಾಟ ಮಾಡುತ್ತಿದ್ದಾರೆ. ಮೈಸೂರು, ಮಂಡ್ಯ, ಚಾಮರಾಜನಗರ, ರಾಮನಗರ, ಧಾರವಾಡ ಜಿಲ್ಲೆಗಳ ರೈತರು ಮೇಳದಲ್ಲಿ ಭಾಗವಹಿಸಿದ್ದಾರೆ. ಮೇಳದಲ್ಲಿ ರಸಪೂರಿ, ಮಲ್ಲಿಕಾ, ಮಲ್ಗೋವಾ, ಬಾದಾಮಿ ಸೇರಿದಂತೆ ಹತ್ತಾರು ಬಗೆಯ ಮಾವುಗಳು ಲಭ್ಯವಿದೆ.