ಉಪ ಲೋಕಾಯುಕ್ತರಾದ ಕೆ.ಎನ್.ಫಣೀಂದ್ರ ಅವರು ಅಗಿಲೆಯಲ್ಲಿರುವ ಕಸ ವಿಲೇವಾರಿ ಘಟಕಕ್ಕೆ ಭೇಟಿ ನೀಡಿ ವೀಕ್ಷಣೆ ಮಾಡಿ ಹಸಿಕಸ ಮತ್ತು ಒಣ ಕಸವನ್ನು ಪ್ರತ್ಯೇಕವಾಗಿ ವಿಂಗಡಣೆ ಮಾಡಿ ಶೇಖರಣೆ ಮಾಡುವುದರ ಜೊತೆಗೆ ವೈಜ್ಞಾನಿಕವಾಗಿ ಕಸ ವಿಲೇವಾರಿಗೆ ಕ್ರಮವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಹಸಿ ಕಸವನ್ನು ಶೇಖರಣೆ ಮಾಡುವ ಸ್ಥಳದಿಂದ ಕೊಳಕು ನೀರು ಹರಿದು ಹೋಗಲು ಚರಂಡಿ ಮಾಡಬೇಕು ಅದಕ್ಕೆ ಮುಚ್ಚಿರಬೇಕು ಚರಂಡಿ ಸ್ವಚ್ಛತೆಗಾಗಿ ಒಂದೆರಡು ಕಡೆ ಮುಚ್ಚಳ ತೆಗೆದು ಸ್ವಚ್ಛತೆ ಮಾಡುವಂತೆ ನಿರ್ಮಾಣ ಮಾಡಬೇಕು ಎಂದು ತಿಳಿಸಿದರಲ್ಲದೆ, ಕೊಳಕು ನೀರು ಹರಿದು ಒಂದು ಕಡೆ ಶೇಖರಣೆ ಆಗುವಂತೆ ಒಂದು ದೊಡ್ಡ ಹೊಂಡ ನಿರ್ಮಾಣ ಮಾಡಬೇಕು ಈ ಕೊಳಚೆ ನೀರು ಸಂಸ್ಕರಣೆ ಮಾಡಿ ಕೃಷಿ ಚಟುವಟಿಕೆಗೆ ಬಳಕೆ ಆಗುವಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದ್ದಾರೆ. ಈ ಘಟಕದಲ್ಲಿ ಉತ್ಪಾದನೆ ಆಗುವ ಗೊಬ್ಬರವನ್ನು ಸ್ಥಳೀಯ ರೈತರು ಬಳಕೆ ಮಾಡಿಕೊಳ್ಳಲು ಅನುಕೂಲವಾಗುವಂತೆ ರೈತರು ಸಂಪರ್ಕ ಮಾಡುವ ಸ್ಥಳಗಳಲ್ಲಿ ದರ ಮತ್ತು ಗೊಬ್ಬರದ ದಾಸ್ತಾನು ಬಗ್ಗೆ ಫಲಕಗಳಲ್ಲಿ ಅಳವಡಿಸುವಂತೆ ಸೂಚಿಸಿದರು. ಕಸವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡದಿರುವುದರಿಂದ ಸುತ್ತಮುತ್ತಲಿನ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತದೆ ಈ ನಿಟ್ಟಿನಲ್ಲಿ ಅಧಿಕಾರಿಗಳು ಎಚ್ಚೆತ್ತುಕೊಂಡು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಪರಿಸರ ಇಲಾಖೆ ಅಧಿಕಾರಿಗಳು ಸರ್ವೆ ಮಾಡಿ ವರದಿ ನೀಡುವಂತೆ ಸೂಚಿಸಿದ ಉಪ ಲೋಕಾಯುಕ್ತರು ನಗರ ಸಭೆ ಆರೋಗ್ಯ ಅಧಿಕಾರಿಗಳು ಸ್ಥಳೀಯರಿಂದ ಮಾಹಿತಿ ಪಡೆಯಲು ನಿರ್ದೇಶನ ನೀಡಿದರು.