ಅಡಿಕೆ ವ್ಯಾಪಾರದಲ್ಲಿ ಸಂಭವಿಸಿರುವ ದೊಡ್ಡ ಮಟ್ಟದ ತೆರಿಗೆ ವಂಚನಾ ಪ್ರಕರಣವೊಂದನ್ನು ಕೇಂದ್ರ ಸರಕಾರದ ಸರಕು ಮತ್ತು ಸೇವಾ ತೆರಿಗೆ ಗುಪ್ತಚರ ನಿರ್ದೇಶನಾಲಯ (DGGI) ಪತ್ತೆಹಚ್ಚಿದೆ. ಮೀರತ್ ವಲಯದಲ್ಲಿ ಅಡಿಕೆ ಸಾಗಣೆ ಮತ್ತು ವಿತರಣೆಯ ಹೆಸರಿನಲ್ಲಿ ನಡೆದಿರುವ ₹250 ಕೋಟಿ ಮೊತ್ತದ ಜಿಎಸ್ಟಿ ತಪ್ಪಿಸುವ ಜಾಲವನ್ನು ಡಿಜಿಜಿಐ ಅಧಿಕಾರಿಗಳು ಭೇದಿಸಿದ್ದು, ಇದಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಲಾಗಿದೆ.
ಅಧಿಕಾರಿಗಳ ಪ್ರಕಾರ, ಅಡಿಕೆ ಸಾಗಣೆಗಾಗಿ ನಕಲಿ ದಾಖಲೆಗಳು, ಬೋಗಸ್ ಕಂಪನಿಗಳು, ಅಸಲಿ ಅಲ್ಲದ ಇನ್ವಾಯ್ಸ್ಗಳನ್ನು ಬಳಸಿಕೊಂಡು ಜಿಎಸ್ಟಿ ತಪ್ಪಿಸುವ ಜಾಲವನ್ನು ಮಾಡಲಾಗಿತ್ತು. ವ್ಯಾಪಾರ ಜಾಲವು ಹಲವು ಜಿಲ್ಲೆಗಳ ಮೂಲಕ ವಿಸ್ತರಿಸಿಕೊಂಡಿದ್ದು, ಮೀರತ್ ವಲಯ ಪ್ರಮುಖ ಕೇಂದ್ರವಾಗಿತ್ತು ಎಂದು ತಿಳಿದುಬಂದಿದೆ.
ಡಿಜಿಜಿಐ ದಾಳಿ ವೇಳೆ ಮಹತ್ವದ ಸಾಕ್ಷ್ಯ ವಶಪಡಿಸಿಕೊಂಡಿದ್ದು, ಡಿಜಿಜಿಐ ನಡೆಸಿದ ದಾಳಿ ವೇಳೆ ಲೆಕ್ಕಪತ್ರಗಳು, ವ್ಯಾಪಾರ ದಾಖಲೆಗಳು, ಡಿಜಿಟಲ್ ಸಾಕ್ಷ್ಯಗಳು, ಅನುಮಾನಾಸ್ಪದ ವಿತರಣಾ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಜಾಲವು ಇನ್ನಷ್ಟು ದೊಡ್ಡ ಮಟ್ಟದಲ್ಲಿ ಕಾರ್ಯನಿರ್ವಹಿಸಿರುವ ಸಾಧ್ಯತೆ ಇರುವುದರಿಂದ ತನಿಖೆಯನ್ನು ವಿಸ್ತರಿಸಲಾಗುತ್ತಿದೆ. ಭಾರತದಾದ್ಯಂತ ಸುಮಾರು ₹5,000 ಕೋಟಿ ಮೌಲ್ಯದ ಅಡಿಕೆಯನ್ನು ಪಾನ್ ಮಸಾಲಾ ತಯಾರಕರಿಗೆ ಸಾಗಿಸಿದೆ ಎಂದು ಆರೋಪಿಸಲಾಗಿದೆ.
ಅಡಿಕೆ ಮಾರುಕಟ್ಟೆ ಮತ್ತು ಕೃಷಿಕರ ಬದುಕಿಗೆ ಅತ್ಯಂತ ಮುಖ್ಯವಾದ ಬೆಳೆ ಅಡಿಕೆ. ಆದರೆ ಇಂತಹ ವಂಚನಾ ಚಟುವಟಿಕೆಗಳು ವ್ಯಾಪಾರದ ನಂಬಿಕೆಗೆ ಧಕ್ಕೆ, ಮಾರುಕಟ್ಟೆಯಲ್ಲಿ ಅಸ್ಥಿರತೆ, ಕೃಷಿಕರ ಆದಾಯಕ್ಕೆ ಪರೋಕ್ಷ ಹೊಡೆತ ಉಂಟು ಮಾಡುತ್ತದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಈ ಪ್ರಕರಣವು ಅಡಿಕೆ ವ್ಯಾಪಾರದಲ್ಲಿ ನಡೆಯುತ್ತಿರುವ ಅಕ್ರಮ ವ್ಯವಹಾರಗಳ ಮೇಲೆ ಬೆಳಕು ಚೆಲ್ಲಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಬಂಧನಗಳ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ….
ಭಾರತದಲ್ಲಿ 10 ಕ್ಯಾನ್ಸರ್ ಪ್ರಕರಣಗಳಲ್ಲಿ 4 ತಡೆಗಟ್ಟಬಹುದು | WHO–IARC ಅಧ್ಯಯನ ವರದಿ




