ಮನ – ಮನೆ – ಮನಸ್ಸಿನ ವಾತಾವರಣ…. : ಈ ಬಗ್ಗೆ ಮಾಧ್ಯಮಗಳು ಹೆಚ್ಚು ಗಮನಹರಿಸಬೇಕಾಗಿದೆ..

June 18, 2024
2:42 PM

ರಾಜ್ಯದಾದ್ಯಂತ ಉತ್ತಮ ಮಳೆಯಾಗುತ್ತಿದೆ(Rain). ಕೆರೆಕಟ್ಟೆಗಳು, ನದಿ ಕಾಲುವೆಗಳಿಗೆ ನೀರು ಹರಿಯುತ್ತಿದೆ. ಮುಂದಿನ ಕೆಲವು ತಿಂಗಳುಗಳು ಹೀಗೆ ಮಳೆ ಮುಂದುವರಿದರೆ ಕಳೆದ ಬಾರಿಯ ಬರಗಾಲದ ಛಾಯೆ(Drought) ಮರೆಯಾಗಿ, ಕೃಷಿ ಕ್ಷೇತ್ರ(Agricultural sector) ಒಂದಷ್ಟು ಉತ್ತಮ ಬೆಳವಣಿಗೆ ಕಾಣುತ್ತದೆ. ಇದು ರೈತರ(Farmer) ಮತ್ತು ಕೃಷಿ ಅವಲಂಬಿತರ ಹಿತದೃಷ್ಟಿಯಿಂದ ಹಾಗೂ ರಾಜ್ಯದ ಅಸಂಖ್ಯಾತ ಜನ ಮತ್ತು ಸರ್ಕಾರದ ಹಿತ ದೃಷ್ಟಿಯಿಂದ ಅತ್ಯುತ್ತಮ ಬೆಳವಣಿಗೆ….

Advertisement

ನಿಜವಾಗಲೂ ಇಡೀ ಆಡಳಿತ ವ್ಯವಸ್ಥೆ ಮತ್ತು ಅದಕ್ಕೆ ಪೂರಕವಾದ ಎಲ್ಲಾ ಕ್ಷೇತ್ರಗಳು ಈ ಬಗ್ಗೆ ಸಾಕಷ್ಟು ಗಮನಹರಿಸಿ ಒಳ್ಳೆಯ ಕೆಲಸ ಮಾಡಬೇಕಿದೆ. ಬಿತ್ತನೆ ಬೀಜ ಮತ್ತು ರಸಗೊಬ್ಬರಗಳಿಗೆ ಹಾಗು ಹಣಕಾಸು ಸಾಲ ಸೌಲಭ್ಯಗಳಿಗೆ ತೊಂದರೆ ಆಗದಂತೆ ನೋಡಿಕೊಳ್ಳಬೇಕಿದೆ. ಆದರೆ ದುರಾದೃಷ್ಟವಶಾತ್ ಕಳೆದ ಕೆಲವು ವಾರಗಳಿಂದ ಚುನಾವಣಾ ರಾಜಕೀಯ, ತದನಂತರದಲ್ಲಿ ನೇಹಾ ಕೊಲೆ, ಪ್ರಜ್ವಲ್ ವಿಕೃತ ಕಾಮ, ದರ್ಶನ್ ಕ್ರೌರ್ಯ, ಈಗ ಯಡಿಯೂರಪ್ಪನವರ ಫೋಕ್ಸೋ ಹೀಗೆ ಆಡಳಿತ, ಮಾಧ್ಯಮ ಮತ್ತು ಜನರ ಮನಸ್ಸಿನಲ್ಲಿ ಬಹುತೇಕ ಇದೇ ವಿಷಯ ತಲೆಯಲ್ಲಿ ತುಂಬಿಕೊಂಡಿದೆ……..

ಎಲೆಕ್ಟ್ರಾನಿಕ್ ಮಾಧ್ಯಮಗಳು ಮತ್ತು ಪತ್ರಿಕೆಗಳಲ್ಲಿ ಯಾವ ವಿಷಯ ಬ್ರೇಕಿಂಗ್ ನ್ಯೂಸ್ ಮತ್ತು ಲೀಡ್ ಆಗುತ್ತದೆಯೋ ಅದು ಹೆಚ್ಚು ವ್ಯಾಪಕವಾಗಿ ಜನರ ಮನಸ್ಸಿನಲ್ಲಿ ಸುಳಿದಾಡುತ್ತಿರುತ್ತದೆ. ಬೆಳಗಿನ ವಾಯುವಿಹಾರವೇ ಇರಲಿ, ಹೋಟೆಲ್ಗಳೇ ಇರಲಿ, ವಿಶ್ರಾಂತಿ ಮತ್ತು ಹರಟೆ ಕಟ್ಟೆಗಳೇ ಇರಲಿ, ಮೊಬೈಲಿನ ಆತ್ಮೀಯ ಜೊತೆಗಾರರೇ ಇರಲಿ ಎಲ್ಲಾ ಕಡೆಯೂ ಈ ವಿಷಯಗಳೇ ಪ್ರಮುಖವಾಗಿ ಸ್ಥಾನ ಪಡೆದು ನಿಜಕ್ಕೂ ಅಭಿವೃದ್ದಿಯ, ನೆಮ್ಮದಿಯ ಮೂಲ ವಿಷಯಗಳು ಮೂಲೆಗುಂಪಾಗುತ್ತವೆ…..

ಈ ಸಮಾಜದಲ್ಲಿ, ಆಡಳಿತದಲ್ಲಿ, ಮಾಧ್ಯಮಗಳಲ್ಲಿ, ಜನರ ಮನಸ್ಸಿನಲ್ಲಿ, ಯಾವ ವಿಷಯ ಹೆಚ್ಚು ಪ್ರಾಮುಖ್ಯತೆ ಪಡೆಯಬೇಕು, ಯಾವ ನಿಟ್ಟಿನಲ್ಲಿ ಕೆಲಸ ಕಾರ್ಯಗಳು ಆಗಬೇಕು, ಯಾವ ದೃಷ್ಟಿಕೋನದಿಂದ ಅಭಿವೃದ್ಧಿ ಹೊಂದಬೇಕು ಈ ವಿಷಯಗಳು ಹೆಚ್ಚು ಹೆಚ್ಚು ಸಾರ್ವಜನಿಕ ಚರ್ಚೆಗೆ ಬರದೇ, ಈ ರೀತಿಯ ಕೆಲವು ಪ್ರಖ್ಯಾತ ವ್ಯಕ್ತಿಗಳ ದುಷ್ಕೃತ್ಯಗಳೇ ಮುಖ್ಯ ವಾಹಿನಿಯಲ್ಲಿ ಹರಿದಾಡುವಾಗ ಯುವ ಜನಾಂಗ ಮತ್ತು ಸಾಮಾನ್ಯ ಜನ ಇದರ ಪ್ರಭಾವಕ್ಕೆ ಒಳಗಾಗಿ ನೈಜ, ಕ್ರಿಯಾತ್ಮಕ ಭಾವನೆಗಳನ್ನು ನಿಧಾನವಾಗಿ ಮರೆಯುತ್ತಾರೆ. ಇಡೀ ವಾತಾವರಣ ಕಲುಷಿತವಾಗಿದೆಯೇನೋ ಎಂಬ ಭಾವನೆ ಸಾಮಾನ್ಯವಾಗಿ ಎಲ್ಲರಲ್ಲೂ ಉಂಟಾಗುತ್ತದೆ……

ಶಿಕ್ಷಣ, ಮಾಧ್ಯಮ, ಹಿರಿಯರ ಹಿತನುಡಿಗಳು ನಿಜವಾಗಲೂ ಸಂಸ್ಕೃತಿಯ ವಾಹಕಗಳು. ಸಾಂಸ್ಕೃತಿಕ ವಾತಾವರಣ ಅತ್ಯಂತ ಮನೋಲ್ಲಾಸದ, ಅರಿವಿನ, ಜ್ಞಾನದ ನೆಲೆಯಲ್ಲಿ ಸಂಚರಿಸುತ್ತಾ ಪ್ರಜ್ಞಾವಸ್ಥೆಯಲ್ಲಿ ಚಲಿಸಿದರೆ ಉತ್ತಮ ಸಮಾಜ ನಿರ್ಮಾಣವಾಗುತ್ತದೆ. ಅದನ್ನು ಹೊರತುಪಡಿಸಿ ಈ ರೀತಿಯ ಮಾಲಿನ್ಯವನ್ನೇ ಹೆಚ್ಚು ಹೆಚ್ಚು ಚರ್ಚಾ ರೂಪದ ಪ್ರಚಾರದಲ್ಲಿರಿಸಿದರೆ, ಇಡೀ ವಾತಾವರಣವೇ ಅದರ ಪ್ರತಿಬಿಂಬವಾಗುತ್ತದೆ..

ಕ್ರೀಡೆ ಸಾಹಿತ್ಯ ಸಂಗೀತ ವಿಜ್ಞಾನ ಲಲಿತ ಕಲೆಗಳು ಸಮಾಜ ಸೇವೆ ಸಾಹಸ ಮುಂತಾದ ಕ್ಷೇತ್ರಗಳಲ್ಲಿ ಸಾಕಷ್ಟು ಹೋರಾಟಗಳು, ಸಾಧನೆಗಳು, ನಿರಂತರವಾಗಿ ನಡೆಯುತ್ತಿವೆ. ನಮ್ಮ ಮಕ್ಕಳು ಮತ್ತು ಯುವಜನರಿಗೆ ಈ ವಿಷಯಗಳು ನಿರಂತರವಾಗಿ ತಲುಪುತ್ತಲೇ ಇರಬೇಕು.. ಕೇವಲ ಮನೆಯಲ್ಲಿ, ಶಾಲೆಯಲ್ಲಿ, ಮಾಧ್ಯಮಗಳಲ್ಲಿ ಮಾತ್ರವಲ್ಲ, ಎಲ್ಲ ಕಡೆಯೂ ಸಾಮಾಜಿಕ ಪರಿಸರ ಒಳ್ಳೆಯದನ್ನೇ, ಸಾಧನೆಗಳನ್ನೇ, ಸೇವೆಗಳನ್ನೇ ಹೆಚ್ಚು ಹೆಚ್ಚು ಸುದ್ದಿ – ಚರ್ಚೆ ಮಾಡುತ್ತಿದ್ದರೆ, ಅದರ ಪ್ರಭಾವವು ಎಲ್ಲಾ ಕಡೆ ಪಸರಿಸುತ್ತದೆ..

ಸಾಂಸ್ಕೃತಿಕ ನಾಯಕರಾಗಿ ಬಸವಣ್ಣನವರನ್ನು ಸರ್ಕಾರ ಅಧಿಕೃತವಾಗಿ ಘೋಷಿಸಿರುವ ಈ ಸಂದರ್ಭದಲ್ಲಿ ಆ ವಿಷಯ ಹೆಚ್ಚು ಹೆಚ್ಚು ಜನರಿಗೆ ತಲುಪಬೇಕು. ಬಸವ ತತ್ವಗಳು, ಬೌದ್ಧ ತತ್ವಗಳು, ಗಾಂಧಿ ಚಿಂತನೆಗಳು, ಅಂಬೇಡ್ಕರ್ ಚಿಂತನೆಗಳು, ವಿವೇಕಾನಂದರ ವಿಚಾರಗಳು, ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಬಲಿದಾನಗಳು, ಪ್ರತಿನಿತ್ಯ ಕನಿಷ್ಠ ಮಕ್ಕಳ ಕಿವಿಗೆ ಬೀಳುವಂತಾದರೂ ಆಗಬೇಕು. ಅದನ್ನು ಹೊರತುಪಡಿಸಿ ವಿಕೃತಗಳೇ ಮಕ್ಕಳಿಗೆ ತಿಳಿಯುತ್ತಿದ್ದರೆ ಅವರು ಜೀವಪರ ನಿಲುವುಗಳನ್ನು ಹೊಂದುವುದಾದರೂ ಹೇಗೆ.. ಆದ್ದರಿಂದ ನಾವುಗಳು ಸಹ ಆದಷ್ಟೂ ಒಳ್ಳೆಯ ಮನಸ್ಸಿನ, ಒಳ್ಳೆಯ ವಿಷಯಗಳನ್ನು ಮನ, ಮನೆ, ಶಾಲೆ, ಗೆಳೆಯರು, ವಾಕಿಂಗ್, ಮೊಬೈಲ್ ಮುಂತಾದ ಎಲ್ಲಾ ಕಡೆ ಚರ್ಚಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಆಗ ನಿಧಾನವಾಗಿ ನಮ್ಮ ಸಾಂಸ್ಕೃತಿಕ ವಾತಾವರಣ ಉತ್ತಮಗೊಳ್ಳುತ್ತದೆ. ಇದನ್ನು ದಯವಿಟ್ಟು ಪ್ರಯತ್ನಿಸೋಣ..

ಬರಹ :
ವಿವೇಕಾನಂದ. ಎಚ್. ಕೆ. 

Advertisement

Advertisement

ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ವಿವೇಕಾನಂದ ಎಚ್‌ ಕೆ

ಸಾಮಾಜಿಕ ಕಾರ್ಯಕರ್ತ ( ಪ್ರಬುದ್ಧ ಮನಸ್ಸು, ಪ್ರಬುದ್ಧ ಸಮಾಜ,ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ ಮನಸ್ಸುಗಳ ಅಂತರಂಗದ ಚಳವಳಿಯನ್ನು  ಜ್ಞಾನ ಭಿಕ್ಷಾ ಪಾದಯಾತ್ರೆಯ ಮೂಲಕ ನಡೆಸುತ್ತಿರುವ ಸಾಮಾಜಿಕ ಕಾರ್ಯಕರ್ತ)

ಇದನ್ನೂ ಓದಿ

ಯೇನೆಕಲ್ಲು ಬಚ್ಚನಾಯಕ ನಮ್ಮ ಕಾರ್ಣಿಕದ ಆರಾಧ್ಯ ಶಕ್ತಿ
March 31, 2025
8:32 PM
by: ದ ರೂರಲ್ ಮಿರರ್.ಕಾಂ
ಸಾಗರ ತಾಲೂಕಿನ ನೀಚಡಿಯಲ್ಲೊಂದು ವಿಶಿಷ್ಟ “ಕೆರೆ ಹಬ್ಬ”
March 24, 2025
7:25 AM
by: ಪ್ರಬಂಧ ಅಂಬುತೀರ್ಥ
ನಭೋಮಂಡಲಕ್ಕೆ ಇಣುಕುನೋಟ | ಗಗನಯಾತ್ರಿಗಳನ್ನು ಸ್ವಾಗತಿಸೋಣ…|
March 18, 2025
9:52 PM
by: ಟಿ ಆರ್ ಸುರೇಶ್ಚಂದ್ರ ತೊಟ್ಟೆತ್ತೋಡಿ
ಸುನಿತಾ ವಿಲಿಯಮ್ಸ್ ಈ ಸಮಾಜಕ್ಕೆ ಸ್ಫೂರ್ತಿ ಏಕೆ…?
March 17, 2025
10:34 AM
by: ವಿವೇಕಾನಂದ ಎಚ್‌ ಕೆ

You cannot copy content of this page - Copyright -The Rural Mirror

Join Our Group