ತಿರುವು

ಈಗ ಮನಸುಗಳಿಗೇ ಒಂದು ಬ್ರಹ್ಮಕಲಶ ಯಾಕಾಗಬೇಕು…?

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ದೇವಸ್ಥಾನಗಳಿಗೆ ಅಥವಾ ಶಕ್ತಿ ಕೇಂದ್ರಗಳಿಗೆ ಪ್ರತೀ 12 ವರ್ಷಗಳಿಗೊಮ್ಮೆ ಬ್ರಹ್ಮಕಲಶವಾಗಬೇಕು ಎನ್ನುತ್ತವೆ ಧಾರ್ಮಿಕ ನಿಯಮಗಳು. ಧಾರ್ಮಿಕ ನಿಯಮಗಳ ಹಿಂದೆಯೂ ಒಂದು ವಿಜ್ಞಾನ ಇದೆ ಎಂದು ನಾವೆಲ್ಲಾ ನಂಬಿದ್ದೇವೆ. ಅಲ್ಲಿ ಕ್ಷಯವಾಗುತ್ತಿರುವ ಅಥವಾ ಅಜೀರ್ಣವಾಗುವ ಶಕ್ತಿ ಕೇಂದ್ರವನ್ನು ಪುನರುಜ್ಜೀವನ ಮಾಡುವುದು ಅಥವಾ ಶಕ್ತಿಯ ಉದ್ದೀಪನ ಮಾಡುವುದುಈ ಬ್ರಹ್ಮಕಲಶದ ಉದ್ದೇಶ. ಹೀಗಾಗಿ ಎಲ್ಲಾ ಕ್ಷೇತ್ರದಲ್ಲೂ ಬ್ರಹ್ಮಕಲಶದ ಕೆಲಸ ನಡೆಯುತ್ತದೆ. ಎಲ್ಲಾ ಕಡೆಯು ಪೂಜೆ ಎನ್ನುವ ಪ್ರಕ್ರಿಯೆ ಆರಂಭವಾಗುವುದು “ಆಗಮಾರ್ಥಂ ತು ದೇವಾನಾಂ ಗಮನಾರ್ಥಂ ತು ರಕ್ಷಸಾಮ್..” ಎನ್ನುವ ಗಂಟಾನಾದನೊಂದಿಗೆ. ಇಲ್ಲಿ ದೇವತೆಗಳೇ ಇರಲಿ…. ರಕ್ಕಸರು ದೂರವಾಗಲಿ ಎನ್ನುತ್ತಾ ಆತ್ಮದಿಂದ ದೇವರನ್ನು ಕರೆತಂದು ಪೂಜೆ ನಡೆಯುತ್ತದೆ. ಅಂದರೆ ಪ್ರತೀ ದಿನವೂ ಆತ್ಮದ ಸ್ವಚ್ಛತೆ ನಡೆಯುತ್ತದೆ. ಇಡೀ ಸಮಾಜದ ದೃಷ್ಟಿಯಿಂದ ಕ್ಷೇತ್ರದ ಶಕ್ತಿಯ ಸ್ವಚ್ಛತೆ, ಉದ್ದೀಪನ ಬ್ರಹ್ಮಕಲಶದ ಮೂಲಕ ನಡೆಯುತ್ತದೆ. ಈಗ ಸಮಾಜಕ್ಕೂ ಈ ಪ್ರಕ್ರಿಯೆ ನಡೆಯಬೇಕು.

Advertisement

ದೇವಾಲಯದಲ್ಲಿ ಬಿಂಬ ಇರುತ್ತದೆ, ಅದಕ್ಕೊಂದು ವೈಜ್ಞಾನಿಕವಾದ ಆಧಾರಗಳು ಇರುತ್ತದೆ, ಸೂಕ್ತವಾದ ವಾಸ್ತು ವ್ಯವಸ್ಥೆ ಇರುತ್ತದೆ. ಇದೆಲ್ಲಾ ವೈಜ್ಞಾನಿಕವಾದ ಆಧಾರದಿಂದ ನಡೆಯುತ್ತದೆ. ಸೂಕ್ಷ್ಮವಾಗಿ ಗಮನಿಸಿದರೆ ಇಲ್ಲೆಲ್ಲಾ ಶಕ್ತಿಯ ಸಂಚಯನ ಇರುತ್ತದೆ. ಹೀಗಾಗಿಯೇ ಬ್ರಹ್ಮಕಲಶದ ನಂತರ ದೇವಸ್ಥಾನದ ಒಳಗೆ ಅನೇಕ ಸಮಯಗಳವರೆಗೆ ಒಂದು ನೆಮ್ಮದಿ, ಶಾಂತಿ ಇರುತ್ತದೆ. ಭೇಟಿ ನೀಡುವ  ಪ್ರತಿಯೊಬ್ಬ ಭಕ್ತನಿಗೂ ನೆಮ್ಮದಿ, ಮಾನಸಿಕ ಶಾಂತಿ ಸಿಗುತ್ತದೆ. ನೂರಾರು ಜನರು ಅವರವರ ಸಂಕಷ್ಟ ಹೇಳಿಕೊಂಡು ದೇವಸ್ಥಾನಕ್ಕೆ ಬರುತ್ತಾರೆ. ಅವರಿಗೆಲ್ಲಾ ನೆಮ್ಮದಿಯೂ, ಶಾಂತಿಯೂ ಸಿಗಬೇಕು.  ಹೀಗಾಗಿಯೇ ಆಗಾಗ ಶಕ್ತಿಯ ಸಂಚಯನವಾಗಬೇಕು, ಪ್ರತೀ 12 ವರ್ಷಗಳಿಗೊಮ್ಮೆ ಬ್ರಹ್ಮಕಲಶವಾಗಬೇಕು.

ದೇವಸ್ಥಾನಗಳಿಗೆಲ್ಲಾ ನಾವೆಲ್ಲಾ ಹೋಗುತ್ತಲೇ ಇರುತ್ತೇವೆ. ಅಲ್ಲಿಗೆ ಹೋದರೂ ನಮ್ಮೊಳಗಿನ ಮನಸ್ಸುಗಳು ಋಣಾತ್ಮಕವಾಗಿಯೇ ಯೋಚಿಸುತ್ತದೆ. ಒಂದು ಕ್ಷೇತ್ರದ ಪಾಸಿಟಿವ್‌ ಶಕ್ತಿ ಹಾಗೂ ನಮ್ಮೊಳಗಿನ ಋಣಾತ್ಮಕ ಶಕ್ತಿ. ಇದೆರಡೂ ಸಂಘರ್ಷ. ದೇವರು ಎಲ್ಲರಿಗೂ ಒಳ್ಳೆಯದು ಮಾಡುವ ಭಾವ ಉಳ್ಳವನು ಎಂದು ಯೋಚಿಸಿಕೊಂಡರೆ, ನಾವು ನನಗೆ ಮಾತ್ರಾ ಒಳ್ಳೆಯದು ಮಾಡು ಎಂದು ಯೋಚಿಸುವ ಸಂಕುಚಿತ ಭಾವ. ದೇವಸ್ಥಾನದಲ್ಲೂ ನಮ್ಮ ಜಗಳ ನಿಲ್ಲದು, ಅಹಂಕಾರಗಳನ್ನು ಕೆಳಗೆ ಇಳಿಸುವುದಿಲ್ಲ..!. ಟೀಕೆಗಳು, ನಾವೇ ಶ್ರೇಷ್ಟರು ಎನ್ನುವ ಮನಸ್ಥಿತಿ ಹೆಚ್ಚಾಗಿದೆ. ನೂರಾರು ಜನರು ಬರುವ ಕ್ಷೇತ್ರಗಳಲ್ಲಿ ಇಂದು ಋಣಾತ್ಮಕ ಭಾವವೇ ಹೆಚ್ಚಾಗಿರುವುದು ಸತ್ಯವೇ ಹೌದು. ಹೀಗಾಗಿ ಇಂದು ಯಾವುದೇ ಪ್ರಮುಖ ಕ್ಷೇತ್ರಗಳನ್ನು ಗಮನಿಸಿ, ಅದರಲ್ಲೂ ಈಚೆಗೆ ಗಮನಿಸಿ ವಿವಾದಗಳ ಕೇಂದ್ರಗಳು. ಯಾವುದೇ ಪ್ರಮುಖ ಕ್ಷೇತ್ರಗಳಲ್ಲಿ ಅಲ್ಲೊಂದು ವಿವಾದ ಇಲ್ಲದೇ ಇರುವುದೇ ಇಲ್ಲ. ಅದು ವಾಸ್ತವ ಸಂಗತಿ, ಬದಲಾಗಬೇಕಾದ ಸಂಗತಿಯೇ ಇರಲಿ, ಸಣ್ಣ ಕಾರಣಕ್ಕಾದರೂ ವಿವಾದಗಳು ಅಲ್ಲಿದೆ. ಇದರಿಂದ ನಿಧಾನವಾಗಿ ಆ ಕ್ಷೇತ್ರದ ಶಕ್ತಿಯ ಕ್ಷಯವಾಗುವುದು ಇರುತ್ತದೆ. ಅಂದರೆ ಈ ಸಮಾಜದಲ್ಲಿ ಅಷ್ಟೊಂದು ಋಣಾತ್ಮಕ ಮನಸ್ಸುಗಳು ಹೆಚ್ಚಾಗಿವೆ. ಧರ್ಮದ ಹೆಸರಿನಲ್ಲಿ ಆಟಗಳು ಕೂಡಾ ಅದೇ ಕ್ಷೇತ್ರದಲ್ಲಿ ನಡೆಯುವುದು ಕಣ್ಣು ಮುಂದೆ ಕಾಣುತ್ತದೆ. ಧರ್ಮ,ಧಾರ್ಮಿಕ ಆಚರಣೆಗಳು ಮಾರಾಟದ ವಸ್ತು, ಶೊಕಿಯ ವಸ್ತು. ಹೀಗಾಗಿ ಮನುಷ್ಯನಿಗೆ ಆಂತರಿಕ ನೆಮ್ಮದಿ, ಶಾಂತಿ, ಅನುಭೂತಿ ಯಾವುದೂ ಅಲ್ಲಿ ಸಿಗುವುದು ಕಡಿಮೆಯಾಗಿದೆ. ಬ್ರಹ್ಮಕಲಶವಾದ ಕ್ಷೇತ್ರದಲ್ಲಿಇಂದಿಗೂ ತಕ್ಷಣದ ಕೆಲವು ಸಮಯದ ಕಾಲ ನೆಮ್ಮದಿ, ಖುಷಿಯನ್ನು ಕಾಣುವುದು ಈ ಕಾರಣದಿಂದ. ಇದಕ್ಕಾಗಿ ದೇವಸ್ಥಾನಗಳ ಬ್ರಹ್ಮಕಲಶದ ಜೊತೆಗೇ ಮನಸ್ಸುಗಳಿಗೂ ಬ್ರಹ್ಮಕಲಶ ನಡೆಯಬೇಕು.

ಇಂತಹ ಒಂದು ಪ್ರಕ್ರಿಯೆ ಪ್ರತೀ ವ್ಯಕ್ತಿಯ ಒಳಗೆ ನಡೆಯಬೇಕು ಇಂದು. ಶುದ್ದೀಕರಣದ ಕೆಲಸ ನಡೆಯಬೇಕು. ಡಿಜಿಟಲ್‌ ಯುವ ಆರಂಭವಾಗಿ ಅನೇಕ ಸಮಯವಾದರೂ ವೇಗ ಪಡೆದು ಸುಮಾರು 15 ವರ್ಷವಾಗಿದೆ. ಡಿಜಿಟಲ್‌ ಯುವ ಬಂದ ಬಳಿಕ ಪ್ರತೀ ವ್ಯಕ್ತಿಯೂ ಡಿಜಿಟಲ್‌ ಒಳಗೆ ಇಳಿದಿದ್ದಾನೆ. ಅದರೊಳಗೆ ಹೋಗುತ್ತಾ ಮಾನಸಿಕವಾಗಿ ಸಣ್ಣದಾಗುತ್ತಾ ಹೋಗಿದ್ದಾನೆ , ಆರ್ಥಿಕವಾಗಿ ದೊಡ್ಡದಾಗುತ್ತಾ ಸಾಗಿದ್ದಾನೆ. ಹೀಗಿರುವಾಗ ಕೊರೋನಾ ಎನ್ನುವ ರಕ್ಕಸ ವಕ್ಕರಿಸಿದ. ಆ ರಕ್ಕಸ ಕೊಡುಗೆಯಾಗಿ ನೀಡಿದ ಅಂಶಗಳಲ್ಲಿ ಕೆಲವು ಇನ್ನೂ ಮನಸ್ಸಿನೊಳಗೆ ಉಳಿದುಕೊಂಡಿದೆ. ಅದರ ನಂತರ ಮತ್ತಷ್ಟು ಅಂತರ್ಜಾಲದ ಒಳಗೆ ಇಳಿದಿದ್ದಾನೆ. ಎರಡು ವರ್ಷ ಅದರೊಳಗೆ ಸುತ್ತಾಡಿದ. ಆ ಬಳಿಕ ಮನುಷ್ಯನ ಮನಸ್ಸು ಮತ್ತಷ್ಟು ಶಿಥಿಲವಾಗಿದೆ. ಅವನಿಗೆ ಈಗ ಆಂತರಿಕವಾಗಿ ನೆಮ್ಮದಿ ಇಲ್ಲ, ಅಷ್ಟೇ ಅಲ್ಲ ಸಮಾಜಕ್ಕೂ ನೆಮ್ಮದಿ ಇಲ್ಲ. ಅಶಾಂತಿಯ, ಅಂಧಕಾರದ, ಅಸೂಯೆಯೇ ವಕ್ಕರಿಸಿದೆ. ಹೀಗಾಗಿಯೇ ಇಂದು ಮನಸ್ಸಿಗೊಂದು ಬ್ರಹ್ಮಕಲಶದ ಅವಶ್ಯಕತೆ ಇದೆ.

ಕೊರೋನಾ ನಂತರ ಮನುಷ್ಯ ಸ್ವಾರ್ಥಿಯಾಗಿದ್ದಾನೆ. ಅದರ ಹಿಂದೆ ಜೊತೆಯಾಗಿದ್ದವರೆಲ್ಲಾ ಕೊರೋನಾ ನಂತರ ಬದಲಾಗಿದ್ದಾರೆ. ಲಾಭದ ದೃಷ್ಟಿ ಹೆಚ್ಚಾಗಿದೆ. ಹಣವೇ ಎಲ್ಲವೂ ಎಂಬುದು ತಲೆಯೊಳಗೆ ಕುಳಿತಿದೆ. ಕೊರೋನಾ ಕಲಿಸಿದ ಪಾಠಗಳಲ್ಲಿ ಸ್ವಾರ್ಥವೂ ಒಂದು. ತಾನು-ತನ್ನದು ಹಾಗೂ ತನ್ನವರು ಇಷ್ಟೇ ಇಂದಿನ ಜಗತ್ತಾಗಿದೆ. ಆಗ ಏನಾಯಿತೆಂದರೆ, ಹೊರಗಿನ ಓಡಾಟವಿಲ್ಲ, ನಾಲ್ಕು ಜನರೊಂದಿಗೆ ಬೆರೆತು ಮಾತನಾಡುವ,  ಸಮಾಜದ ಕಷ್ಟಗಳಿಗೆ, ಆಗುಹೋಗುಗಳಿಗೆ ಸ್ಪಂದಿಸುವ ಗುಣವೇ ಇಲ್ಲವಾಯಿತು. ತಾನೊಬ್ಬನೇ ಹೇಗಾದರೂ ಬದುಕಿದರಾಯಿತು ಎಂದು ಕೊರೋನಾ ನಿಯಮಗಳು ಹೇಳಿದವು. ಒಬ್ಬನೇ ಇರುವುದನ್ನು ಅದು ಹೇಳಿಕೊಟ್ಟಿತು. ಅದು ಅಭ್ಯಾಸವಾದ ಬಳಿಕ ಅದೇ ಇಷ್ಟವಾಯಿತು. ಹೀಗಾಗಿ ಮನಸ್ಸಿನಲ್ಲಿದ್ದ, ವ್ಯಕ್ತಿಯ ಒಳಗಿದ್ದ ಸಂವೇದನೆಯೇ ಸತ್ತು ಹೋಗಿದೆ. ಎಲ್ಲೇ ಏನೇ ಆಗಲಿ ಸ್ಪಂದಿಸಬೇಕಾಗಿಲ್ಲ ಎನ್ನುವುದು ಸಹಜವಾಗಿದೆ.  ಸಾಧ್ಯವಾದರೆ ಗಹಗಹಿಸಿ ಒಳಗೇ ನಕ್ಕರು ಹೆಚ್ಚು ಖುಷಿ. ಪಕ್ಕದಲ್ಲಿಯೇ ಗಂಭೀರವಾದ ಸಮಸ್ಯೆಯಾದರೂ ಇನ್ನಷ್ಟು ಅದರೊಳಗೆ ಇರುವ ಕ್ರೌರ್ಯವನ್ನೋ, ಸೋಲನ್ನೋ ನೋಡುವುದರಲ್ಲಿ ಹೆಚ್ಚು  ಖುಷಿ. ಅಂದರೆ ಮನಸ್ಸು ಸಂವೇದನೆಯನ್ನು ಕಳೆದುಕೊಂಡಿದೆ ಬಿಟ್ಟಿದೆ. ಹೀಗಾಗಿ ಈಗ ಬ್ರಹ್ಮಕಲಶ ಅಂದರೆ ಶಕ್ತಿಯ, ಚೈತನ್ಯದ ಪುನರ್‌ ಸ್ಥಾಪನೆಯಾಗಬೇಕು.

Advertisement

ಈ ಸಂವೇದನೆ ಕಳೆದುಕೊಂಡದ್ದರ ಪರಿಣಾಮ ಏನು? ಲಾಭದ ದೃಷ್ಟಿಯೇ ಮುಖ್ಯವಾಗಿ, ಜೊತೆಗೇ ಮಾತನಾಡುತ್ತಿದ್ದರೂ ಆ ಮಾತಿನಲ್ಲಿ ಏನು ಲಾಭ ಎನ್ನುವುದು ಹೆಚ್ಚು ಮಹತ್ವ ಪಡೆಯಿತು. ಯಾವುದಾದರೂ ಸಹಾಯ ಮಾಡಿದರೂ ಅದರಿಂದ ಏನು ಲಾಭ ಎನ್ನುವುದೇ ಮುಖ್ಯವಾಯಿತು. ಅನಗತ್ಯವಾದ ಸ್ನೇಹವೇ ಕಡಿಮೆಯಾಯಿತು. ಅವನೊಬ್ಬ ದುಡಿಯುತ್ತಾನೆ, ಅವನಿಗೆಷ್ಟು ಆದಾಯ ಬರುತ್ತದೆ ಎನ್ನುವ ಮತ್ಸರ ಸದ್ದಿಲ್ಲದೆ ಒಳಗೆ ಸೇರಿಕೊಂಡಿತು.  ಅನಗತ್ಯವಾಗಿ ಇನ್ನೊಬ್ಬನನ್ನು ಕಾಲೆಳೆಯುವುದು, ಟೀಕಿಸುವುದು, ಮತ್ಸರ, ಉಡಾಫೆ, ಅಸೂಯೆ ಹೆಚ್ಚಾದವು. ಲಾಭವಿಲ್ಲದೆ ಯಾವ ಕೆಲಸವೂ ಮಾಡಲಾರರು ಎನ್ನುವುದು ಒಂದು ನಿಯಮವೇ ಆಗಿ ಹೋಯಿತು. ಇಡೀ ದಿನ ಜೊತೆಗೇ ಇದ್ದು ಸಂಜೆ ಸದ್ದಿಲ್ಲದೇ ವಂಚನೆ ಮಾಡುವ ಪ್ರವೃತಿ ಹೆಚ್ಚಾಗಿದೆ. ಅನಗತ್ಯವಾಗಿ ಯಾರನ್ನೋ ವಿವಾದಕ್ಕೆ ದೂಡಿ ಅಂದ ನೋಡುವುದು ಹಾಗೂ ತುಳಿಯುವುದು ಖುಷಿಯಾಗಿ ಕಂಡಿತು. ಉದ್ದೇಶಪೂರ್ವಕವಾಗಿಯೇ ಟೀಕಿಸುವುದು ಹವ್ಯಾಸವಾಯಿತು. ಜೊತೇ ಇದ್ದು ವಿವಾದ ಸೃಷ್ಟಿಸುಂತೆ ಮಾಡಿ ಆ ಕಡೆಯಲ್ಲಿ ಆತನ ವಿರೋಧಿ ಮನಸ್ಥಿತಿ ಎಂದು ಅಲ್ಲೊಂದು ಗುಂಪುಗಾರಿಕೆ ಮಾಡುವುದು ಕೂಡಾ ನಡೆದೇ ಹೋಯ್ತು. ಈಗೀಗ  ಹಣದ ಮದವೂ ಏರಲು ಪ್ರಾರಂಭವಾಯಿತು. ಎಲ್ಲವೂ ಹಣದಿಂದಲೇ ಸಾಧ್ಯ ಎನ್ನುವುದೂ ಹೆಚ್ಚಾಯಿತು. ಹೀಗಾಗಿ ಮನುಷ್ಯ ಮನುಷ್ಯರ ನಡುವೆಯೇ ವಿಶ್ವಾಸದ ಕೊರತೆ ದೊಡ್ಡದಾಗಿ ಈಗ ಕಾಣುತ್ತಿದೆ. ಇಂತಹ ಮನಸ್ಥಿತಿ ದೂರವಾಗಲು ಈಗ ಬ್ರಹ್ಮಕಲಶವೇ ಮುಖ್ಯವಾಗಿದೆ.ಆದರೆ ಇದು ದೇವಸ್ಥಾನದ ಮಾದರಿಯಲ್ಲದ, ಆಂತರಿಕ ಬ್ರಹ್ಮಕಲಶ.

ಅಂದರೆ, ಈಗ ಯಾವ ರೀತಿಯ ಬ್ರಹ್ಮಕಲಶ..?. ಮನಸ್ಸಿಗೆ ಈಗ ಮೊದಲಾಗಿ ಆಗಬೇಕಾದ ಕಲಶಗಳಲ್ಲಿಅಹಂಕಾರವನ್ನು ತೊಳೆಯುವ, ಹಣದ ದಾಹ, ಹಣದ ಮದವನ್ನು ತೊಳೆಯುವ ಕೆಲಸ. ಸ್ನೇಹದ ಹಸ್ತವನ್ನು ಚಾಚುವ, ಮುಕ್ತವಾಗಿ ಸ್ವೀಕರಿಸುವ, ಒಪ್ಪುವ ಮನಸ್ಥಿತಿಯ ಬೆಳಕು ಹಚ್ಚಬೇಕಾಗಿದೆ.  ಅವನೂ ನನ್ನಂತೆ ಬದುಕಲಿ ಎನ್ನುವ ಮನಸ್ಥಿತಿ ಕಲಶ ಪ್ರತಿಷ್ಟಾಪನೆಯಾಗಬೇಕು.ಸಕಾರಾತ್ಮಕ ಸಲಹೆಗಳು, ಸಕಾರಾತ್ಮವಾದ ದೀಪವನ್ನು ಹಚ್ಚಿಕೊಳ್ಳುವ ಕೆಲಸ ಆಗಬೇಕು. ಅದಕ್ಕಾಗಿಯೇ ಇದಕ್ಕಾಗಿಯೇ ಮನಸ್ಸಿಗೊಂದು ಬ್ರಹ್ಮಕಲಶವಾಗಬೇಕು.

ಅನೇಕ ಬಾರಿ ಕೊರೋನಾ ನಂತರ ಇಂತಹ ಮನಸ್ಥಿತಿಯನ್ನು ನಿರೀಕ್ಷೆ ಮಾಡದ, ಇಂದಿಗೂ ಅಪ್ಡೇಟ್‌ ಆಗದ ಮನಸ್ಸುಗಳು ಹತಾಶರಾಗಿರುವುದು ಕಣ್ಣ ಮುಂದಿದೆ. ಅಂತಹವರೆಲ್ಲಾ ನೋಡುತ್ತಾ ಕುಳಿತು ಮೌನಕ್ಕೆ ಜಾರಿದ್ದಾರೆ. ಕೆಲವು ಮಂದಿ ಅನಗತ್ಯವಾಗಿ ಆಕ್ರೋಶ ವ್ಯಕ್ತಪಡಿಸುತ್ತಾರೆ. ಆದರೆ ಇಂತಹದ್ದಕ್ಕೆಲ್ಲಾ ಆಕ್ರೋಶಗಳು ಪರಿಹಾರವಲ್ಲ, ಮೌನವೇ ಪರಿಹಾರ ಎನ್ನುವುದು ಅರ್ಥವಾಗುವ ವೇಳೆ ಸಮಾಜದ ಮುಂದೆ ವಿಪರೀತ ಡ್ಯಾಮೇಜ್‌ ಆಗಿರುತ್ತದೆ…!.

ಸಮಾಜದ ಚೈತನ್ಯ ಮತ್ತೆ ಹೆಚ್ಚಾಗಲು, ಜನರ ನಡುವೆ ಸ್ನೇಹ, ನಂಬಿಕೆ ಹೆಚ್ಚಾಗಲು ಈಗ ಮನಸ್ಸುಗಳಿಗೆ ಬ್ರಹ್ಮಕಶಲದ ಅವಶ್ಯತೆ ಇದೆ.”ಆಗಮಾರ್ಥಂತು ದೇವಾನಾಂ ಗಮಾನಾರ್ಥಂತು ರಾಕ್ಷಸಾಂ ಕುರ್ವೇಘಂಟಾರವಂ ತತ್ರ ದೇವತಾಹ್ವಾನ ಲಾಂಛನಂ” ಎನ್ನುತ್ತ ಆತ್ಮವನ್ನು ಹೊರತಂದು ಅದಕ್ಕೆ ಅಭಿಷೇಕ, ಅರ್ಚನೆ, ಆರತಿಯನ್ನು ಮಾಡಿ ಮತ್ತೆ ಪುನಃ ಅದೇ ಜಾಗದಲ್ಲಿಡಬೇಕು. ಪ್ರತೀ ದಿನ ಮನಸ್ಸನ್ನು ಸ್ವಚ್ಚತೆ ಮಾಡಿ ಪೂಜಿಸಿ ಒಳಗೆ ಭಗವಂತನನ್ನು ಒಳಗೆ ಪ್ರತಿಷ್ಟಾಮಿಸಬೇಕು. ಹೀಗೇ ವಿಶ್ವಾಸಪೂರ್ಣ ಸಮಾಜವನ್ನು ಕಟ್ಟಬೇಕು. ಇದಕ್ಕಾಗಿಯೇ ಒಂದಾಗುವ ಮೂಲಕ ಕೊರೋನಾ ನಂತರದ ಜೀವನಕ್ಕೊಂದು ತಿರುವು ಈಗಲಾದರೂ ಸಿಗಬೇಕಿದೆ.

Advertisement
/**/
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

Published by
ಮಹೇಶ್ ಪುಚ್ಚಪ್ಪಾಡಿ

Recent Posts

ಮಕ್ಕಳ ಪುಟ | ನಿಮ್ಮ ಚಿತ್ರ -ನಮ್ಮ ಬೆಳಕು | ಎಂ ಜಿ ಸಿದ್ದೇಶ ರಾಮ

ಎಂ ಜಿ ಸಿದ್ದೇಶ ರಾಮ, 5 ನೇ ತರಗತಿ‌ ಎಂ ಜಿ ಸಿದ್ದೇಶ…

3 hours ago

ಮಕ್ಕಳ ಪುಟ | ನಿಮ್ಮ ಚಿತ್ರ -ನಮ್ಮ ಬೆಳಕು | ಸಾನ್ವಿ ದೊಡ್ಡಮನೆ

ಸಾನ್ವಿ ದೊಡ್ಡಮನೆ, 8 ನೇ ತರಗತಿ, ಕ್ನನಾಯ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆ…

3 hours ago

ಸಂಶೋಧನಾ ಕಾರ್ಯಕ್ಕೆ ರಾಜ್ಯ ಸರ್ಕಾರದಿಂದ ಪ್ರೋತ್ಸಾಹ

ದೇಶದಲ್ಲಿಯೇ ಅತ್ಯುನ್ನತ ಶೈಕ್ಷಣಿಕ ಹಾಗೂ ಸಂಸ್ಥೆಗಳು ಕರ್ನಾಟಕದಲ್ಲಿದ್ದು, ಅವುಗಳ ಅಭಿವೃದ್ದಿ ಹಾಗೂ ಸಂಶೋಧನಾ…

4 hours ago

ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆ | ಪ್ರವಾಹ ಮತ್ತು ಭೂಕುಸಿತದಿಂದ ತೀವ್ರ ಪರಿಣಾಮ

ಹಿಮಾಚಲ ಪ್ರದೇಶದಲ್ಲಿ ಮಾನ್ಸೂನ್ ಆಗಮನದ ನಂತರ, ಭಾರೀ ಮಳೆಯಾಗುತ್ತಿದ್ದು, ಪ್ರವಾಹ ಮತ್ತು ಭೂಕುಸಿತದ…

5 hours ago

ಜಾತಿಯ ಶುದ್ಧತೆ ಮತ್ತು ನೈತಿಕ ಮುಕ್ತತೆ ಎರಡು ಜೊತೆಯಲ್ಲಿ ಸಾಧ್ಯವಿಲ್ಲ

ಹಿರಿಯ ತಲೆಮಾರಿನವರಿಗೆ ಅಸಹ್ಯವೆನಿಸುವ ಲೈಂಗಿಕ ವರ್ತನೆಗಳಲ್ಲಿ ಮುಂದುವರೆಯಲು ಹೊಸ ತಲೆಮಾರಿನ ಯುವ ಜನರಿಗೆ…

5 hours ago

ಗ್ರಾಮೀಣ ಭಾಗಕ್ಕೂ ತಲುಪಿದ ಆಧುನಿಕ ಸಂಸ್ಕೃತಿ | ಕುಕ್ಕೆ ಸುಬ್ರಹ್ಮಣ್ಯದ ವಿದ್ಯಾರ್ಥಿಗಳ ವಿಡಿಯೋ ವೈರಲ್ | ಸೋಶಿಯಲ್‌ ಮೀಡಿಯಾದಲ್ಲಿ ಹಲವರಿಂದ ಅಸಮಾಧಾನ |

ನಗರದಲ್ಲಿ ಮಾತ್ರಾ ಕಂಡುಬರುತ್ತಿದ್ದ ಸಂಸ್ಕೃತಿಯೊಂದು ಈಗ ಗ್ರಾಮೀಣ ಭಾಗಕ್ಕೂ ತಲಪಿದೆ. ಅದರಲ್ಲೂ ಕುಕ್ಕೆ…

6 hours ago