Advertisement
ಸಂಪಾದಕೀಯ ಆಯ್ಕೆ

ಮಿಶ್ರ ಕೃಷಿಯತ್ತ ಮಲೆನಾಡಿನ ರೈತನ ಹೆಜ್ಜೆ ಅನಿವಾರ್ಯ

Share

ಮಲೆನಾಡಿನಲ್ಲಿ ಅಡಿಕೆ ಮರ ಎಂದರೆ ಕೇವಲ ಒಂದು ಸಸಿ ಅಲ್ಲ. ಅದು ಒಂದು ಕುಟುಂಬದ ಕನಸು. ತಂದೆಯ ಶ್ರಮ. ತಾಯಿಯ ಸಹಕಾರ, ಮಗುವಿನ ಭವಿಷ್ಯ. ಪ್ರತಿ ವರ್ಷ ಅಡಿಕೆ ಕೊಯ್ಲಿನ ಸಮಯ ಬಂದಾಗ ರೈತನ ಮನಸ್ಸಿನಲ್ಲಿ ಒಂದು ಭರವಸೆ ಇರುತ್ತಿತ್ತು, “ಈ ಬಾರಿ ಎಲ್ಲವೂ ಸರಿಯಾಗುತ್ತದೆ…”

ಆದರೆ, ಇತ್ತೀಚಿನ ವರ್ಷಗಳಲ್ಲಿ ಆ ಭರವಸೆಯ ಜಾಗದಲ್ಲಿ ಒಂದು ಪ್ರಶ್ನೆ ನೆಲೆಸಿದೆ, “ಮುಂದಿನ ವರ್ಷ ಏನಾಗಬಹುದು?” ಇದಕ್ಕೆ ಕಾರಣ ಇದೆ.  ಹವಾಮಾನ ಬದಲಾಗಿದೆ. ಮಳೆ ರೀತಿ ಬದಲಾಗಿದೆ, ತಾಪಮಾನ ಹಿಂದಿನಂತಿಲ್ಲ ಮಳೆ ಕೆಲವೊಮ್ಮೆ ಬರುತ್ತದೆ, ಕೆಲವೊಮ್ಮೆ ಬರುತ್ತಿಲ್ಲ. ಅಡಿಕೆ ಮರಗಳು ಹಳದಿ ಆಗುತ್ತಿವೆ. ರೋಗಗಳು ಹೆಚ್ಚುತ್ತಿವೆ. ಮಾರುಕಟ್ಟೆ ಬೆಲೆ ರೈತನ ನಿಯಂತ್ರಣದಲ್ಲಿ ಇಲ್ಲ. ಒಂದು ಕಾಲದಲ್ಲಿ ಅಡಿಕೆ ರೈತನಿಗೆ ಆತ್ಮವಿಶ್ವಾಸ ನೀಡುತ್ತಿತ್ತು. ಇಂದು ಅದೇ ಅಡಿಕೆ ರೈತನಿಗೆ ಆತಂಕ ನೀಡುತ್ತಿದೆ. ಇದು ಕೇವಲ ಒಂದು ಬೆಳೆ ಸಂಕಷ್ಟವಲ್ಲ. ಇದು ಒಂದು ಬದುಕಿನ ಸಂಕಷ್ಟ. ಈಗ ಒಂದೇ ಬೆಳೆಯ ಮೇಲೆ ಅವಲಂಬನೆ ಇಡುವುದು ಈಗ ಸುರಕ್ಷಿತ ಆಯ್ಕೆಯಂತೆ ಕಾಣುತ್ತಿಲ್ಲ. ಈ ಬದಲಾವಣೆ ರೈತನ ಮನಸ್ಸಿನಲ್ಲಿ ಪ್ರಶ್ನೆ ಮೂಡಿಸಿದೆ, “ಅಡಿಕೆ ಮಾತ್ರ ಸಾಕೇ?” ಹೀಗಾಗಿ ಮಿಶ್ರ ಬೆಳೆ ಪದ್ಧತಿಯತ್ತ ಆಯ್ಕೆ ಮಾಡಿಕೊಳ್ಳುವುದು ಸೂಕ್ತ. ಇದಕ್ಕೆ ಒಂದಿಷ್ಟು ಮಂದಿ ಮಾದರಿ ಕೃಷಿಕರೂ ಇದ್ದಾರೆ.  ಅಷ್ಟೇ ಅಲ್ಲ, ಏಕ ಬೆಳೆ ಪದ್ಧತಿ ಮಣ್ಣಿನ ಸತ್ವವನ್ನು ಕೂಡಾ ಕುಗ್ಗಿಸುತ್ತದೆ. ಒಂದೇ ರೀತಿಯ ಪೋಷಕಾಂಶಗಳನ್ನು ನಿರಂತರವಾಗಿ ಬಳಸುವುದರಿಂದ ಮಣ್ಣಿನ ಫಲವತ್ತತೆ ಕುಸಿಯುತ್ತದೆ. ಆದರೆ ಮಿಶ್ರ ಕೃಷಿಯಲ್ಲಿ ವಿವಿಧ ಬೆಳೆಗಳು ಮಣ್ಣಿನ ಸಮತೋಲನ ಕಾಪಾಡಲ್ಪಡುತ್ತದೆ. ಮಿಶ್ರ ಕೃಷಿ ಹವಾಮಾನ ಬದಲಾವಣೆಯ ಸಂದರ್ಭ ಒಂದು ರಕ್ಷಣಾ ವ್ಯವಸ್ಥೆಯಾಗಿದೆ.

ಇಂದು ಮಲೆನಾಡಿನ ತೋಟಗಳಲ್ಲಿ ಒಂದು ಹೊಸ ಬದಲಾವಣೆ ಕಾಣುತ್ತಿದೆ. ಅಡಿಕೆ ಮರದ ನೆರಳಿನಲ್ಲಿ ಈಗ ಕಾಫಿ ಬೆಳೆಯುತ್ತಿದೆ. ಕಾಳುಮೆಣಸು ಮರಕ್ಕೆ ಹತ್ತುತ್ತಿದೆ. ಲೆಮನ್ ಗ್ರಾಸ್ ಸುಗಂಧ ಹರಡುತ್ತಿದೆ. ತರಕಾರಿ ಬೆಳೆಯಲಾಗುತ್ತಿದೆ, ಬಾಳೆ ಕೃಷಿ ಕಾಣುತ್ತಿದೆ, ಹಲಸು ಸದ್ದು ಮಾಡುತ್ತಿದೆ. ಇದು ಕೇವಲ ಬೆಳೆಗಳ ಬದಲಾವಣೆ ಅಲ್ಲ, ಇದು ಮನಸ್ಥಿತಿಯ ಬದಲಾವಣೆ.

ಅಡಿಕೆ ಮರಗಳ ಮಧ್ಯೆ ಖಾಲಿ ಜಾಗ ಇತ್ತು. ವರ್ಷಗಳಿಂದ ಅದು ಖಾಲಿಯಾಗಿಯೇ ಇತ್ತು. ಆದರೆ ಇಂದು ಆ ಜಾಗ ಖಾಲಿ ಇಲ್ಲ. ಅಲ್ಲಿ ಕಾಫಿ ಬೆಳೆಯುತ್ತಿದೆ. ಅದು ಭವಿಷ್ಯದ ಭರವಸೆ ಆಗುತ್ತಿದೆ.  ಅಲ್ಲಿ ತರಕಾರಿ ಬೆಳೆಯುತ್ತಿದೆ. ಅದು ತಿಂಗಳ ಆದಾಯ ನೀಡುತ್ತಿದೆ. ಖಾಲಿಯಾಗು ಮೇಲೆ ಸಾಗುತ್ತಿದ್ದ ಮರದಲ್ಲಿ ಕಾಳುಮೆಣಸು ಹಸಿರಾಗುತ್ತಿದೆ, ಇದೂ ಆದಾಯದ ದಾರಿಯಾಗುತ್ತಿದೆ. ಅಡಿಕೆ ಮರದ ನೆರಳಲ್ಲಿ ಈಗ ಕೇವಲ ನೆರಳು ಇಲ್ಲ ಅಲ್ಲಿ ಹೊಸ ಆಶೆ ಇದೆ.

ಹೈಡ್ರೋಪೋನಿಕ್ ಅವಕಾಡೊ, ಜೇನು ಸಾಕಣೆ, ಆಗ್ರೋಫಾರೆಸ್ಟ್ರಿ ಇವುಗಳು ಈಗ ಮಲೆನಾಡಿನ ತೋಟಗಳಿಗೆ ಹೊಸ ಅರ್ಥ ನೀಡಬಹುದಾಗಿದೆ. ರೈತ ಈಗ ಕೇವಲ ಬೆಳೆಗಾರನಲ್ಲ. ಅವನು ಹೊಸ ಆಲೋಚನೆಗಳನ್ನು ಅಳವಡಿಸಿಕೊಳ್ಳುವ ಬಗ್ಗೆಯೂ ಯೋಜನೆಗಳನ್ನು ಹಾಕಿಕೊಳ್ಳಬೇಕು. ಅವನು ತನ್ನ ಬದುಕನ್ನು ಉಳಿಸಲು ಹೊಸ ಮಾರ್ಗಗಳನ್ನು ಹುಡುಕುತ್ತಿದ್ದಾನೆ. ತಂತ್ರಜ್ಞಾನಗಳ ಕಡೆಗೂ ಗಮನಿಸಬೇಕು.

ಅಡಿಕೆ ರೈತನಿಗೆ ಈಗ ಬೇಕಿರುವುದು ಭರವಸೆ. ಅಡಿಕೆ ಎಂದಿಗೂ ಮಲೆನಾಡಿನ ಭಾಗವಾಗಿಯೇ ಇರುತ್ತದೆ. ಅದು ಮಲೆನಾಡಿನ ಗುರುತು. ಆದರೆ ರೈತನ ಬದುಕು ಕೇವಲ ಅಡಿಕೆಗೆ ಸೀಮಿತವಾಗಿರಬಾರದು. ಮಿಶ್ರ ಕೃಷಿ ರೈತನಿಗೆ ಕೇವಲ ಹೆಚ್ಚುವರಿ ಆದಾಯ ಅಷ್ಟೇ ಅಲ್ಲ, ಅದು ಅವನಿಗೆ ಮನಸ್ಸಿನ ನೆಮ್ಮದಿಗೂ ಕಾರಣವಾಗುತ್ತದೆ. ಅದು ಅವನಿಗೆ ಭವಿಷ್ಯದ ಭರವಸೆ ನೀಡುತ್ತದೆ.

ಮಲೆನಾಡಿನ ತೋಟಗಳಲ್ಲಿ ಅಡಿಕೆ ಮರಗಳು ಇನ್ನೂ ನಿಂತಿವೆ. ಆ ಮರಗಳ ಕೆಳಗೆ ರೈತ ಇನ್ನೂ ಇದ್ದಾನೆ, ಒಂದಷ್ಟು ಯುವ ಕೃಷಿಕರು ಇದ್ದಾರೆ. ಸುಳ್ಯದ ಯುವ ಕೃಷಿಕ ಸುಬ್ರಹ್ಮಣ್ಯ ಪ್ರಸಾದ್‌, ಗೋವಿಂದ ಭಟ್‌, ಸುರೇಶ್‌ ಬಲ್ನಾಡು ಅವರಂತಹವರು ಅನೇಕರಿಗೆ ಪ್ರೇರಣೆಯಾಗಿದ್ದಾರೆ, ಮಾದರಿಯೂ ಆಗಿದ್ದಾರೆ.

ಅನೇಕ ಮಾದರಿ, ಭರವಸೆಗಳ ನಡುವೆಯೂ ಅನೇಕರ ರೈತರ ಕಣ್ಣುಗಳಲ್ಲಿ ಇನ್ನೂ ಆತಂಕ ಇದೆ. ಆದರೆ ಅದಕ್ಕಿಂತ ಹೆಚ್ಚು ನಿರೀಕ್ಷೆ ಇದೆ. ರೈತ ಇನ್ನೂ ನೆಲವನ್ನು ನಂಬಿದ್ದಾನೆ. ಅವನು ಇನ್ನೂ ತನ್ನ ಶ್ರಮವನ್ನು ನಂಬಿದ್ದಾನೆ.  ಹೀಗಾಗಿ ಈಗ ಅಡಿಕೆಯ ನೆರಳಲ್ಲಿ ಈಗ ಒಂದು ಹೊಸ ಭವಿಷ್ಯ ಮೊಳೆಯುತ್ತಿದೆ. ಆ ಭವಿಷ್ಯದ ಹೆಸರು ಮಿಶ್ರ ಕೃಷಿ. ಎಲ್ಲಾ ರೈತರು ಈ ಭವಿಷ್ಯದ ಕಡೆಗೂ ಯೋಚಿಸಬೇಕು. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

Arecanut farmers in the Malnad region are increasingly adopting mixed cropping systems due to climate change, disease risks, and price uncertainty. By integrating crops like coffee, pepper, banana, and vegetables, farmers are improving soil health, ensuring steady income, and reducing risk. Mixed farming is emerging as a sustainable and secure future for arecanut growers.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

Published by
ಮಹೇಶ್ ಪುಚ್ಚಪ್ಪಾಡಿ

Recent Posts

ಗೃಹ ಬಳಕೆ ಗ್ಯಾಸ್ ಕೊರತೆ ಇಲ್ಲ : ವದಂತಿಗಳಿಗೆ ಕಿವಿಗೊಡಬೇಡಿ — ಸಮಸ್ಯೆ ಇದ್ದರೆ ಈ ಸಹಾಯವಾಣಿ ಸಂಪರ್ಕಿಸಿ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗೃಹ ಬಳಕೆ ಗ್ಯಾಸ್ ಸಿಲಿಂಡರ್ ಕೊರತೆ ಇಲ್ಲ ಎಂದು…

33 minutes ago

ಪಿಎಂ ಕಿಸಾನ್‌ 22ನೇ ಕಂತು ಬಿಡುಗಡೆಗೆ ಸಿದ್ಧತೆ | 9.32 ಕೋಟಿ ರೈತರಿಗೆ ₹18,640 ಕೋಟಿ ನೇರ ನಗದು

ಪಿಎಂ ಕಿಸಾನ್ ಯೋಜನೆಯ 22ನೇ ಕಂತಿನ ಹಣವನ್ನು ಪ್ರಧಾನಿ ಮೋದಿ ಬಿಡುಗಡೆ ಮಾಡಲಿದ್ದಾರೆ.…

14 hours ago

ಮಹಿಳಾ ಕೃಷಿಕರ ಪಾತ್ರ ಬಲಪಡಿಸಲು ಜಾಗತಿಕ ಸಮ್ಮೇಳನ | ದೆಹಲಿಯಲ್ಲಿ GCWAS-2026 ಆರಂಭ

ನವದೆಹಲಿಯಲ್ಲಿ ಮಹಿಳಾ ಕೃಷಿಕರ ಪಾತ್ರ ಬಲಪಡಿಸಲು ಜಾಗತಿಕ ಸಮ್ಮೇಳನ GCWAS-2026 ಆರಂಭವಾಗಿದೆ. ನೀತಿ,…

14 hours ago

ಗೇರುಹಣ್ಣಿನ ಮೌಲ್ಯವರ್ಧನೆಗೆ ಕೈಗಾರಿಕಾ ಸಂಪರ್ಕ ಸಭೆ : ವ್ಯಾಪಾರೀಕರಣಕ್ಕೆ ಹೊಸ ವೇದಿಕೆ

ದೇಶದಲ್ಲಿ ಉತ್ಪಾದನೆಯಾಗುವ ಗೇರುಹಣ್ಣಿನ ಕೇವಲ 1% ಮಾತ್ರ ಮೌಲ್ಯವರ್ಧನೆಗೆ ಬಳಸಲಾಗುತ್ತಿರುವ ಹಿನ್ನೆಲೆ ಪುತ್ತೂರಿನಲ್ಲಿ…

23 hours ago

ದಕ್ಷಿಣ ಕನ್ನಡದಲ್ಲಿ ಹೆಚ್ಚುತ್ತಿರುವ ಕಡಲ್ಕೊರೆತ ಗಂಭೀರತೆ : ಲೋಕಸಭೆಯಲ್ಲಿ ಧ್ವನಿಯೆತ್ತಿದ ಸಂಸದ

ದಕ್ಷಿಣ ಕನ್ನಡದಲ್ಲಿ ಶೇ.48ಕ್ಕೂ ಹೆಚ್ಚು ಕರಾವಳಿ ಕಡಲ್ಕೊರೆತಕ್ಕೆ ಒಳಗಾಗುತ್ತಿರುವ ಹಿನ್ನೆಲೆಯಲ್ಲಿ ಸಂಸದ ಲೋಕಸಭೆಯಲ್ಲಿ…

23 hours ago