ಬೆಂಗಳೂರು ನಗರದಲ್ಲಿ ಕೇವಲ 8 ತಿಂಗಳಿನಲ್ಲಿ 50ಕ್ಕೂ ಹೆಚ್ಚು ಸರ್ಕಾರಿ ಅಧಿಕಾರಿಗಳು ಬಲೆಗೆ ಬಿದ್ದಿರುವುದು, ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ಎಷ್ಟರ ಮಟ್ಟಿಗೆ ಬೇರೂರಿಗೆ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದು ಲೋಕಾಯುಕ್ತ ವಿಶೇಷ ನ್ಯಾಯಾಲಯ ಕಿಡಿಕಾರಿದೆ. ಈ ಬಗ್ಗೆ ಕನ್ನಡಪ್ರಭ ದಿನಪತ್ರಿಕೆ ವರದಿ ಮಾಡಿದೆ.
ವೈದ್ಯರ ಪತ್ನಿಯಿಂದ 25,000 ರೂ. ಲಂಚ ಪಡೆಯುವಾಗ ಸಿಕ್ಕಿಬಿದ್ದ ವಾಣಿಜ್ಯ ತೆರಿಗೆಗಳ ಜಂಟಿ ಆಯುಕ್ತ ಡಾ. ಎಸ್. ರಾಮಾನುಜ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ತಿರಸ್ಕರಿಸುವಾಗ ನ್ಯಾಯಾಲಯ ಈ ಅಭಿಪ್ರಾಯಗಳನ್ನು ನೀಡಿದೆ. ಲಂಚ ನೀಡದೆ ಯಾವುದೇ ಕೆಲಸವನ್ನು ಸರ್ಕಾರಿ ಕಚೇರಿಗಳಿಂದ ಮಾಡಿಸಿಕೊಳ್ಳಲು ಸಾಧ್ಯವಿಲ್ಲ ಎಂಬಂತಹ ಭಾವನೆ ಮೂಡತೊಡಗಿದೆ. ಕೆಲ ವ್ಯಕ್ತಿಗಳು ಇಂತಹ ಭ್ರಷ್ಟ್ರ ಅಧಿಕಾರಿಗಳ ಕುರಿತು ಸಹಾನುಭೂತಿ ವ್ಯಕ್ತಪಡಿಸುತ್ತಾರೆ. ಏಕೆಂದರೆ ಅಧಿಕಾರಿಕ್ಕೆ ಬಂದ ವ್ಯಕ್ತಿ ಕೂಡ ಲಂಚ ಕೊಟ್ಟೇ ಸ್ಥಾನ ಗಿಟ್ಟಿಸಿಕೊಂಡಿರುತ್ತಾನೆ. ಆದರೆ, ತಮ್ಮ ಜೀವನೋಪಾಯಕ್ಕಾಗಿ ಹೆಣಗಾಡುತ್ತಿರುವ ಮಧ್ಯಮ ವರ್ಗದ, ಬಡ ಮತ್ತು ಅಸಹಾಯಕ ಜನರು ಇಲ್ಲಿ ಬಲಿಪಶುಗಳಾಗುತ್ತಿದ್ದಾರೆ. ವ್ಯವಸ್ಥೆಯಲ್ಲಿ ಇವರು ಭರವಸೆ ಕಳೆದುಕೊಳ್ಳುತ್ತಿದ್ದಾರೆ. ಇದನ್ನು ನಾವು ಯೋಚಿಸುತ್ತಿಲ್ಲ. ಬೇರೆ ರೀತಿಯಲ್ಲಿ ಹೇಳುವುದಾದರೆ, ಭ್ರಷ್ಟಾಚಾರದ ಕ್ಯಾನ್ಸರ್ ಎಂಬ ಬೀಜವು ಸಾಂವಿಧಾನಿಕ ಉದ್ದೇಶವನ್ನೇ ಕೊಲ್ಲುತ್ತಿದೆ. ಆದ್ದರಿಂದ, ನಾವೆಲ್ಲರೂ ಆತ್ಮಾವಲೋಕನ ಮಾಡಿಕೊಳ್ಳುವ ಮತ್ತು ಈ ಪಿಡುಗನ್ನು ಕೊನೆಗಾಣಿಸುವ ಜವಾಬ್ದಾರಿಯನ್ನು ಅರಿತುಕೊಳ್ಳುವ ಸಮಯ ಇದಾಗಿದೆ ಎಂದು ನ್ಯಾಯಾಲಯ ತಿಳಿಸಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ.




