ಶ್ರೀ ಕೇಶವ ಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನದ ಆಶ್ರಯದಲ್ಲಿ ನಡೆಯುವ ಶ್ರೀ ಕೇಶವಕೃಪಾ ವೇದ ಯೋಗ ಕಲಾ ಶಿಬಿರವು ಎ.22 ರಿಂದ ನಡೆಯಲಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಪುರೋಹಿತ ನಾಗರಾಜ ಭಟ್ ತಿಳಿಸಿದ್ದಾರೆ.
ಸುಳ್ಯದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ನಾಗರಾಜ ಭಟ್, ವಿವಿಧ ಕಾರ್ಯಕ್ರಮಗಳಿಂದ ರಾಜ್ಯ ಹಾಗೂ ಅಂತರ್ರಾಜ್ಯಗಳಲ್ಲಿ ಜನಮೆಚ್ಚುಗೆ ಗಳಿಸಿದ ವೇದ-ಯೋಗ-ಕಲಾ ಶಿಬಿರವಾಗಿ ಇದೀಗ ಇಪ್ಪತ್ತೆರಡನೇ ವರ್ಷದ ಸಂಭ್ರಮದಲ್ಲಿದೆ. ಸಣ್ಣ ಮಕ್ಕಳ ದೊಡ್ಡ ರಜೆ ಆರಂಭವಾದೊಡನೆ ಹಲವಾರು ಶಿಬಿರಗಳು ಆರಂಭಗೊಳ್ಳುತ್ತದೆ. ನಾಟಕ ಶಿಬಿರ, ರಂಗ ತರಬೇತಿ ಶಿಬಿರ, ಚಿಣ್ಣರ ಶಿಬಿರ, ನಾಯಕತ್ವ ಶಿಬಿರ ಸೇರಿದಂತೆ ಇನ್ನಿತರ ಶಿಬಿರಗಳು ಅಲ್ಲಲ್ಲಿ ನಡೆದರೂ ಭಾರತದ ಸಾಂಸ್ಕೃತಿಕ ಮೌಲ್ಯಗಳಿಗೆ ಪ್ರಧಾನ ಭೂಮಿಕೆಗಳಾದ ವೇದ ಶಿಬಿರಗಳು ಮಾತ್ರ ಕೆಲವು ಕಡೆ ನಡೆಯುತ್ತದೆಯಷ್ಟೆ. ಅಂತಹ ವೇದ ಶಿಬಿರಗಳಲ್ಲಿ ಒಂದಾದ ಸುಳ್ಯದ ಶ್ರೀ ಕೇಶವಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನದ ಆಶ್ರಯದಲ್ಲಿ ನಡೆಯುವ ಶ್ರೀ ಕೇಶವಕೃಪಾ ವೇದ ಶಿಬಿರವು ಕಳೆದ 21 ವರ್ಷಗಳಿಂದ ಸಂಪೂರ್ಣ ಉಚಿತವಾಗಿ ವೇದ-ಯೋಗ ಹಾಗೂ ಕಲಾ ಶಿಕ್ಷಣದೊಂದಿಗೆ ಅಶನ, ವಸನ, ವಸತಿ, ಪಠ್ಯ ಪುಸ್ತಕಗಳೂ, ವ್ಯಾಸಪೀಠ ಇತ್ಯಾದಿಗಳನ್ನು ನೀಡಿ ಸಂಪೂರ್ಣ ಉಚಿತವಾಗಿ ನಡೆಸಿಕೊಂಡು ಬರುತ್ತಿದೆ.
ಇಲ್ಲಿನ ವೇದ ಶಿಬಿರದ ವಿಶೇಷತೆಯೇನೆಂದರೆ ಇಲ್ಲಿ ಬರೇ ವೇದ ಪಾಠ ಮಾತ್ರವಲ್ಲದೆ ವೇದಾಂತರ್ಗತವಾದ ಜೀವನ ದರ್ಶನವನ್ನು ಜನಮಾನಸಕ್ಕೆ ಸಮರ್ಥವಾಗಿ ತಲುಪಿಸಲು ಮಾಧ್ಯಮವಾದ ಯೋಗಾಭ್ಯಾಸ, ಭಜನೆ, ಸಂಕೀರ್ತನೆಗಳು, ಹಾಡು-ಕುಣಿತ ಮುಂತಾದವುಗಳೂ ಅಲ್ಲದೆ ಇಂದಿನ ಮಕ್ಕಳಲ್ಲಿ ರಾಷ್ಟ್ರಪ್ರೇಮದ ಭಕ್ತಿ ತರಂಗವನ್ನು ಮೂಡಿಸುವ ಹಲವಾರು ವೈವಿಧ್ಯ ಕಾರ್ಯಕ್ರಮಗಳೊಂದಿಗೆ ಮಕ್ಕಳ ಮನೋವಿಕಾಸಕ್ಕೆ ಪೂರಕವಾಗಿ ಜಾದೂ, ಮಿಮಿಕ್ರಿ, ಮುಖವಾಡ ತಯಾರಿ, ಬೊಂಬೆ ತಯಾರಿ, ಮಾತುಗಾರಿಕೆ, ಜಾನಪದ ನೃತ್ಯಗಳು, ಹಾವುಗಳ ಮಾಹಿತಿ, ಯಕ್ಷಗಾನ ರಂಗಕಲೆ, ರಂಗಪಾಠಗಳು, ರಂಗಗೀತೆ, ಚಿತ್ರಕಲೆ ಹೀಗೆ ಹಲವಾರು ವಿಷಯಗಳಲ್ಲಿ ರಾಜ್ಯದ ಸುಪ್ರಸಿದ್ಧ ಸಂಪನ್ಮೂಲ ವ್ಯಕ್ತಿಗಳಿಂದ ಶಿಕ್ಷಣ ನೀಡಲಾಗುತ್ತದೆ. ಅಲ್ಲದೇ ಈ ವರ್ಷ ಮತ್ತೂ ಒಂದು ಹೆಜ್ಜೆ ಮುಂದಡಿಯಿಟ್ಟು ಇದೇ ಶಿಬಿರದಲ್ಲಿ ಮೂರು ವರ್ಷಗಳನ್ನು ಪೂರೈಸಿದ ವಿದ್ಯಾರ್ಥಿಗಳಿಗೆ ಅಗ್ನಿಮುಖ ಪ್ರಯೋಗ ಹಾಗೂ ದುರ್ಗಾಸಪ್ತಶತೀ ಪಾಠಗಳನ್ನು ಅಳವಡಿಸಿಕೊಳ್ಳಲಾಗುತ್ತದೆ. ಋಗ್ವೇದ ಹಾಗೂ ಯಜುರ್ವೇದ ವಿಭಾಗಗಳಲ್ಲಿ ಒಟ್ಟು 6 ತರಗತಿಗಳು ನಡೆಯಲಿದ್ದು, ರಾಜ್ಯದ ಪ್ರಸಿದ್ಧ ವೇದ ವಿದ್ವಾಂಸರು, ಕಲಾ ತಜ್ಞರು, ಯೋಗ ಶಿಕ್ಷಕರು, ಅಧ್ಯಾಪಕರಾಗಿ ಭಾಗವಹಿಸಲಿದ್ದಾರೆ. ಈ ಎಲ್ಲಾ ಕಾರಣಗಳಿಂದ ಶ್ರೀ ಕೇಶವಕೃಪಾ ವೇದ ಶಿಬಿರಕ್ಕೆ ವರ್ಷದಿಂದ ವರ್ಷಕ್ಕೆ ದಾಖಲೆ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಅವಕಾಶಕ್ಕಾಗಿ ಹೆಸರು ನೋಂದಾಯಿಸುತ್ತಿದ್ದು, ಇವರೆಲ್ಲರಿಗೂ ಪ್ರವೇಶ ಪರೀಕ್ಷೆ ನಡೆಸಿ 120 ವಿದ್ಯಾರ್ಥಿಗಳಿಗಷ್ಟೇ ಅವಕಾಶ ಕಲ್ಪಿಸಲಾಗುತ್ತದೆ.ಎ.12 ಮಂಗಳವಾರವಾರ ಬೆಳಗ್ಗೆ 10.30ಕ್ಕೆ ಶಿಬಿರದ ಹಿರಿಯ ವಿದ್ಯಾರ್ಥಿ, ಮೈಸೂರಿನ ನರರೋಗತಜ್ಞರಾದ ಡಾ| ಶಾಸ್ತಾರ ಪನೆಯಾಲ ಹಾಗೂ ಸೀಮಾ ಶಾಸ್ತಾರ ದಂಪತಿಗಳು ಉದ್ಘಾಟಿಸಲಿದ್ದು, ಸರಣಿ ಶಿವಪೂಜಾ ಅಭಿಯಾನ 2021 ರ ಸಂಚಾಲಕರಾದ ಗೋಪಾಲಕೃಷ್ಣ ಭಟ್ ‘ಶಿವನಿವಾಸ’ ಇವರು ಸಭಾಧ್ಯಕ್ಷತೆಯನ್ನು ವಹಿಸಲಿದ್ದಾರೆ. ಅಂಬಿಕಾ ಪದವಿ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ವಿನಾಯಕ ಭಟ್ಟ, ಗಾಳಿಮನೆ ಇವರು ದಿಕ್ಸೂಚಿ ಉಪನ್ಯಾಸ ಮಾಡಲಿದ್ದು, ಸುಳ್ಯ ಹವ್ಯಕ ವಲಯದ ಅಧ್ಯಕ್ಷರಾದ ವಿಷ್ಣುಕಿರಣ ನೀರಬಿದಿರೆ ಇವರು ಮುಖ್ಯ ಅಭ್ಯಾಗತರಾಗಿ ಭಾಗವಹಿಸಲಿದ್ದಾರೆ. ಕೇಶವಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನದ ಗೌರವಾಧ್ಯಕ್ಷರಾದ ಗೋಪಾಲಕೃಷ್ಣ ಭಟ್ ವಗೆನಾಡು ಉಪಸ್ಥಿತರಿದ್ದು ಶುಭಾಶಂಸನೆಯನ್ನು ಮಾಡಲಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಸರಣಿಶಿವಪೂಜಾ ಅಭಿಯಾನ 2021ರ ಸಂಚಾಲಕರಾದ ಗೋಪಾಲಕೃಷ್ಣ ಭಟ್ ‘ಶಿವನಿವಾಸ’, ಶಿಬಿರ ಸಂಚಾಲಕ ವೇ| ಮೂ| ಅಭಿರಾಮ ಶರ್ಮಾ ಉಪಸ್ಥಿತರಿದ್ದರು.
ಕರಾವಳಿ ಹಾಗೂ ಮಲೆನಾಡಿನಲ್ಲಿ ಆಗಸ್ಟ್ 10ರಿಂದ ಮಳೆಯ ಪ್ರಮಾಣ ಕಡಿಮೆಯಾಗುವ ಲಕ್ಷಣಗಳು ಗೋಚರಿಸಿವೆ.…
ದೇಹ, ಮನಸ್ಸು ಮತ್ತು ಆತ್ಮದ ಸಮತೋಲನವೇ ನಿಜವಾದ ಆರೋಗ್ಯ ಎಂದು ರಾಮಚಂದ್ರಾಪುರ ಶ್ರೀ…
2050ರ ವೇಳೆಗೆ ಮಳೆಯ ತೀವ್ರತೆ ಮತ್ತು ನಗರೀಕರಣದ ಪರಿಣಾಮವಾಗಿ ಭಾರತದ ಹಲವು ಗುಡ್ಡ…
ಅಕಾಲದ ಹಸಿವು ಮತ್ತು ಅಸಮಯದ ನಿದ್ದೆ ದೇಹದ ಯಂತ್ರದಲ್ಲಿ ಸಮಸ್ಯೆಯ ಸಂಕೇತ ಎಂದು…
ಸುಳ್ಯ ತಾಲೂಕಿನ ಮಲೆನಾಡು ಭಾಗದಲ್ಲಿ ಎರಡು ದಿನಗಳ ವಿರಾಮದ ಬಳಿಕ ಮತ್ತೆ ಭಾರೀ…
ದೇಶದ ಅಡಿಕೆ ಉತ್ಪಾದನೆ ಹಾಗೂ ಬೆಳೆ ವಿಸ್ತೀರ್ಣದಲ್ಲಿ ಕರ್ನಾಟಕವೇ ಅಗ್ರಸ್ಥಾನದಲ್ಲಿದೆ ಎಂದು ಕೇಂದ್ರ…