ಅನುಕ್ರಮ

ಬದುಕು ಪುರಾಣ | ವಿಶ್ವದ ಮೊದಲ ಪತ್ರಕರ್ತ!

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail
ನಾರದ ನಿತ್ಯ ಸಂಚಾರಿ. ‘ಧರ್ಮ’ದ ಕಾವಲುಗಾರ. ಲೋಕದ ಆಗುಹೋಗುಗಳ ಸಂವಹನಕಾರ. ದೇವತೆಗಳು, ದಾನವರು ಆಳುವ ಕ್ಷೇತ್ರಕ್ಕೆ ಅವನಿಗೆ ಮುಕ್ತ ಪ್ರವೇಶ. ‘ನಾರಾಯಣ ಸ್ಮರಣೆ’ ಬದುಕಿನ ಮಂತ್ರ. ಲೋಕದ ಹಿತಾಕಾಂಕ್ಷಿ. ಒಳಿತನ್ನು ಬಯಸುವ ಸಮ್ಮನಸ್ಸಿಗ. ಅಧರ್ಮವನ್ನು ಎತ್ತಿ ತೋರಿಸುವ, ಅಲ್ಲಿ ಧರ್ಮ ಸ್ಥಾಪನೆಗಾಗಿ ಯುಕ್ತಿಯನ್ನು ಹೆಣೆಯುವ ಬುದ್ಧಿಮತ್ತೆ ಹೊಂದಿದಾತ. ‘ನಾರದನು ದೇವತೆಗಳ ಸಂದೇಶವಾಹಕ, ಸಂವಹನಕಾರ, ಆತ ವಿಶ್ವದ ಮೊದಲ ಪತ್ರಕರ್ತ!’, ಹಿಂದೊಮ್ಮೆ ನಾರದ ಜಯಂತಿ ಸಂದರ್ಭದಲ್ಲಿ ಮಿಂಚಿದ ಮಾತಿದು.  …..ಮುಂದೆ ಓದಿ….
ಪತ್ರಕರ್ತರೂ ನಿತ್ಯ ಸಂಚಾರಿಗಳು. ಕಾಲಿಗೆ ಚಕ್ರ ಕಟ್ಟಿಕೊಂಡು ಓಡಾಡುತ್ತಾ ಇರುವುದು ವೃತ್ತಿ ಕಾಯಕ. ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗಗಳ ಕಾವಲುಗಾರರು. ಲೋಕದ ವಿದ್ಯಮಾನಗಳಿಗೆ ಅವರದು ತೆರೆದ ನಯನ.  ಪಕ್ಷಾತೀತವಾಗಿರಬೇಕು. ವ್ಯಕ್ತಿನಿಷ್ಠತೆಯನ್ನು ಹೊಂದಿರಬಾರದು. ತಪ್ಪನ್ನು ಎತ್ತಿ ತೋರಿಸುವ, ಒಳಿತನ್ನು ಶ್ಲಾಘಿಸುವ ಮನಃಸ್ಥಿತಿಯಿರಬೇಕು. ಸಮಾಜದೊಳಗಿನ ಉತ್ತಮ ವಿಚಾರಗಳಿಗೆ ಕನ್ನಡಿಯಾಗಬೇಕು. ವರದಿಗಳು, ಲೇಖನಗಳು ಸಮಾಜದ ಹಿತಕ್ಕೆ ಪೂರಕವಾಗಿರಬೇಕು.
ಆದರೆ ವರ್ತಮಾನದ ಬದುಕಿನಲ್ಲಿ ‘ನಾರದ’ನ ಸ್ಥಾನ-ಮಾನವನ್ನು ನಂನಮ್ಮ ವ್ಯಕ್ತಿತ್ವ ಮತ್ತು ಬೌದ್ಧಿಕ ಪಕ್ವತೆ (ಅಪಕ್ವತೆ) ಅನುಸಾರ ಹಿಂಜಿದ್ದೇವೆ. ನಾರದನೆಂದರೆ ‘ನೆಗೆಟಿವ್’ ಭಾವ ಬರುವಂತೆ ಚಿತ್ರಿಸಿದ್ದೇವೆ. ಕೆಲವೊಂದು ವ್ಯಕ್ತಿಗಳ ವ್ಯಕ್ತಿತ್ವಕ್ಕೆ ‘ನಾರದ’ನನ್ನು ಹೊಸೆಯುತ್ತೇವೆ. ಅಂದು ನಾರದನ ಕೆಲಸ ಏನಿತ್ತೋ ಅದರಲ್ಲಿತ್ತು, ಲೋಕ ಕ್ಷೇಮ. ನಾವು ಗ್ರಹಿಸುವ ನಾರದನ ಚಿತ್ರಣ ನಮ್ಮ ವಿಕಾರ ಮನಸ್ಸಿನ ಸಾಕಾರ!
‘ಪತ್ರಕರ್ತ ಹೇಗಿರಬೇಕು ಎಂದರೆ ನಾರದನಂತಿರಬೇಕು’ – ಬಹುಶಃ ಈ ಕಾಲಘಟ್ಟದ ಗ್ರಹಿಕೆ ಬದಲಾಗಬಹುದೇನೋ. ನಾರದನ ತಿರುಗಾಟದಲ್ಲಿ ಉದ್ದೇಶವಿತ್ತು. ಸದುದ್ದೇಶದ ಜತೆಗೆ ದುರುದ್ದೇಶವೂ ಇತ್ತು. ಯಾವುದು ದುರುದ್ದೇಶ? ಪರಸ್ಪರ ‘ಕಿವಿಕಚ್ಚಿ’ ದ್ವೇಷವನ್ನು ಹೆಚ್ಚಿಸುವುದು. ಪರಿಣಾಮ, ಧರ್ಮಕ್ಕೆ ಜಯ. ಅಧರ್ಮದ ನಾಶ. ಆದರೆ ಈಗ? ಧರ್ಮ, ಅಧರ್ಮದ ಪ್ರಶ್ನೆಯಿಲ್ಲ. ಕಿವಿಕಚ್ಚುವುದು  ಅರ್ಹತೆ!
ಬೆರಳಿನ ತುದಿಯಲ್ಲಿ ಮಾಹಿತಿಗಳು ಗೂಡುಕಟ್ಟಿರುವಾಗ, ಒಂದು ಕ್ಲಿಕ್ಕಿನಲ್ಲಿ ಅಂಗೈಯಲ್ಲಿ ಪ್ರಪಂಚ  ಕಾಣುತ್ತಿರುವಾಗ ‘ಕ್ಷೇತ್ರ ಭೇಟಿ’ ಯಾಕೆಂಬ ಪ್ರಶ್ನೆ? ಜಾಲತಾಣಗಳು ಮಾಹಿತಿಗಳನ್ನು ಸುರಿಯುತ್ತವೆ. ಅಲ್ಲಿಂದ ಬೇಕಾದುದನ್ನು, ಬೇಕಾದಷ್ಟು ಆಯ್ದುಕೊಳ್ಳಬಹುದು. ಸಮುದ್ರದಿಂದ ಒಂದು ಬೊಗಸೆ ನೀರನ್ನು ‘ನಂನಮ್ಮ ಬೌದ್ಧಿಕ ಪಾತ್ರೆಗನುಸಾರ’ ಹಿಡಿದಿಟ್ಟಂತೆ.  ಆ ಮಾಹಿತಿಗಳನ್ನು ಜ್ಞಾನವನ್ನಾಗಿ ಪರಿವರ್ತಿಸಿ ಬರೆಯುವ ಬರಹಗಳು ಸತ್ವಪೂರ್ಣ.
“ಒಳ್ಳೆಯ ಲೇಖಕ ಎಂದರೆ ಹೊಸ ವಿಷಯಗಳನ್ನು ಅರ್ಥವಾಗುವಂತೆಯೂ, ತಿಳಿದ ವಿಷಯವನ್ನು ಹೊಸದಾಗಿ ಹೇಳಬಲ್ಲವನು.” ಡಾ.ಯಂಡಮೂರಿ ವೀರೇಂದ್ರನಾಥ ಅಭಿಮತ.
“ನಾರದನಂತೆ ಪತ್ರಕರ್ತರು ಸುದ್ದಿಯನ್ನು ಮಾತ್ರ ನೀಡಬೇಕು, ಅಭಿಪ್ರಾಯಗಳನ್ನಲ್ಲ. ನಾರದನು ದೇವತೆಗಳು ಹಾಗೂ ರಾಕ್ಷಸರ ಜತೆಗೆ ಮಾಹಿತಿ ಹಂಚಿಕೊಂಡರೂ ಮಾನವ ಜನಾಂಗಕ್ಕೆ ಒಳಿತಾಗುವಂತೆ ಮಾಡುತ್ತಿದರು.” ಒಮ್ಮೆ ಸಚಿವರೊಬ್ಬರು ಸಮಯೋಚಿತವಾಗಿ ಹಂಚಿಕೊಂಡ ಮಾತುಗಳು ಅಕ್ಷರಶಃ ಸತ್ಯ. ಕೆಲವು ಪತ್ರಿಕಾಗೋಷ್ಠಿಗಳು ಸಲಹಾ ಸಮಿತಿಯ ಸಭೆಗಳಾಗಿ ಬದಲಾಗುತ್ತವೆ! ಉತ್ತರ ಬೇಕೋ, ಬೇಡವೋ ಪ್ರಶ್ನೆಗಳ ಸುರಿಮಳೆ! ತಾನು ಸುದ್ದಿ ನೀಡುವ ಪತ್ರಿಕಾ ಪ್ರತಿನಿಧಿಯೆನ್ನುವುದನ್ನು ಮರೆತಿರುತ್ತಾನೆ. ಗೋಷ್ಠಿಯಲ್ಲಿ ತನಗೆ ಅರ್ಥವಾಗದಿದ್ದ ವಿಚಾರಗಳನ್ನು ಸಂಘಟಕರಲ್ಲಿ ವಿನಂತಿಸಿ ಪರಿಹರಿಸಿಕೊಳ್ಳಬಹುದು. ತಂತಮ್ಮ ಆಭಿಪ್ರಾಯಗಳನ್ನು  ಪತ್ರಿಕಾಗೋಷ್ಠಿಯಲ್ಲಿ ಹೇಳುವುದು ಯಾ ಹೇರುವುದು ಸೌಜನ್ಯವಲ್ಲ.
ನಾರದ ಜಗಳಗಂಟ! ಒಬ್ಬರ ವಿಷಯ ಇನ್ನೊಬ್ಬರಲ್ಲಿ ಆಡಿ ಮನಸ್ತಾಪವನ್ನು ಸೃಷ್ಟಿಸುವುದು. ಹೌದು, ಅಲ್ಲಿ ‘ಧರ್ಮಕ್ಕೆ ಜಯ’ ಒದಗಿಸುವ ಉದ್ದೇಶ. ಉದಾ: ದೇವರಾಜ ದೇವೇಂದ್ರನ ವಿಚಾರವನ್ನು ದಾನವರಲ್ಲಿ ಅರುಹುವುದು. ಇದರಿಂದ ಸ್ವರ್ಗಲೋಕಕ್ಕೆ ದಾನವರ ಲಗ್ಗೆ. ಯುದ್ಧದಲ್ಲಿ ದೇವೇಂದ್ರನ ಸೋಲು. ತ್ರಿಮೂರ್ತಿಗಳಲ್ಲೊಬ್ಬರಲ್ಲಿ ದೂರು. ಅವರಿಂದ ದಾನವರ ನಿಗ್ರಹ. ಲೋಕ ನೆಮ್ಮದಿ. ಈಗ ಹಾಗಲ್ಲವಲ್ಲಾ. ಇದು ಪ್ರಜಾಪ್ರಭುತ್ವ ರಾಷ್ಟ್ರ. ಇಲ್ಲಿ ದೇವತೆಗಳನ್ನು, ದಾನವರನ್ನು ಹುಡುಕಬೇಕಾಗಿಲ್ಲ. ಇಬ್ಬರೂ ನಮ್ಮೊಳಗಿದ್ದಾರೆ!  ಅವರಿವರ ಸುದ್ದಿಗಳನ್ನು ಹೇಳುತ್ತಾ ದಿನ ಕಳೆಯುವ ಮಂದಿಗೆ ಹೊತ್ತು ಹೊತ್ತಿಗೆ ಹೊಟ್ಟೆ ತಂಪಾದರಾಯಿತು.
ಒಮ್ಮೆ ರಾಜಕೀಯ ಕ್ಷೇತ್ರದೊಳಗೆ ಇಣುಕಿ. ಪಕ್ಷ ಯಾವುದೇ ಇರಲಿ. ಹುದ್ದೆ, ಸ್ಥಾನಮಾನ ಏನೂ ಇಲ್ಲದೆ ಪಕ್ಷಗಳ ಹಿಂದೆ ಅಡ್ಡಾಡಿಕೊಂಡು, ಒದ್ದಾಡಿಕೊಂಡು, ಅವರಿವರ ಸುದ್ದಿಯನ್ನು ತಮಗೆ ಬೇಕಾದಂತೆ ತಿರುಚುವ ಮಂದಿಗಳ ಗಡಣ.  ಇವರಿಗೆ ತಾವಾಡುವ ಮಾತು, ನಡೆದುಕೊಳ್ಳುವ ರೀತಿಯಿಂದಾಗುವ ಪರಿಣಾಮದ ಘೋರತೆಯು ಬೇಕಾಗಿಲ್ಲ. ಇಂತಹ ‘ನಾರದ’ರ ಅವಶ್ಯಕತೆ ನಾಯಕನಿಗಿರುತ್ತದೆ. ಇದು ನಾಯಕರಿಗೆ ವರವೂ ಹೌದು, ಶಾಪವೂ ಹೌದು.
ಇಬ್ಬರು ಸ್ನೇಹಿತರನ್ನು ಪರಸ್ಪರ ಛೂ ಬಿಟ್ಟು ಖುಷಿಯನ್ನು ಅನುಭವಿಸುವ, ಕುಟುಂಬದೊಳಗೆ ಹುಳಿಯನ್ನು ಹಿಂಡುವ, ಬಾಂಧವ್ಯಗಳನ್ನು ಹಾಳು ಮಾಡುವ, ಬಡವ-ಬಲ್ಲಿದನೆಂಬ ಕಂದಕವನ್ನು ಸೃಷ್ಟಿಸುವವರ ವ್ಯಕ್ತಿತ್ವಗಳನ್ನು ಗ್ರಹಿಸಿದರೆ ಅಂದು ಅಧರ್ಮದ ನಾಶಕ್ಕೆ ಮುಂದಾದ ನಾರದರು ಎಲ್ಲಿ? ನಾವೆಲ್ಲಿ? ಹೋಲಿಕೆ ಅಸಾಧ್ಯ.
ಯಕ್ಷಗಾನ ಪ್ರದರ್ಶನಗಳಲ್ಲಿ ‘ನಾರದ’ನ ಪ್ರವೇಶವಾದಾಗ ‘ಇನ್ನು ಕಲಹ ಗ್ಯಾರಂಟಿ’ ಎಂದು ಊಹಿಸುತ್ತೇವೆ. ಶ್ರೀಕೃಷ್ಣ ಪಾರಿಜಾತ ಪ್ರಸಂಗ. ನಾರದ ಮಹರ್ಷಿಯು ದೇವಲೋಕದಿಂದ ಒಂದು ಪಾರಿಜಾತ ಹೂವನ್ನು ತಂದು ರುಕ್ಮಿಣಿಗೆ ಮುಡಿಸುವಂತೆ ಒತ್ತಾಯಿಸುತ್ತಾನೆ. ಈ ಸುದ್ದಿಯು ಸಖಿಯ ಮೂಲಕ ಸತ್ಯಭಾಮೆಗೆ ತಿಳಿಯುತ್ತದೆ. ಆಕೆ ಮುನಿಸುಗೊಂಡು ರಾದ್ಧಾಂತವಾಗುತ್ತದೆ. ಮೂಡಿದ ಕ್ಲೇಷವನ್ನು ಪರಿಹರಿಸಲು ಶ್ರೀಕೃಷ್ಣನಿಗೆ ಸಾಕೋಸಾಕಾಯಿತು. ಮೇಲ್ನೋಟಕ್ಕೆ ಇಲ್ಲಿ ಜಗಳ ಕಂಡು ಬರುತ್ತದೆ. ಇದು ನರಕಾಸುರನ ವಧೆಗೆ ಬೀಜಾಂಕುರ. ನರಕನನ್ನು ಕೊಲ್ಲಲು ಶ್ರೀಕೃಷ್ಣ, ಸತ್ಯಭಾಮೆಯರು ತೆರಳುತ್ತಾರೆ. ನಾರದರಲ್ಲಿ ಉದ್ದೇಶವಿತ್ತು. ಆಧುನಿಕ ನಾರದರಲ್ಲಿ ಕುತಂತ್ರಗಳ ಸರಮಾಲೆ.
ಗ್ರಾಮೀಣ ಪತ್ರಿಕೋದ್ಯಮ ವಿಭಾಗದಲ್ಲಿ ಒಂದು ಲೇಖನಕ್ಕೆ ಪ್ರಶಸ್ತಿ ಬಂದಿತ್ತು. ಪತ್ರಿಕೆಯಲ್ಲಿ ಸುದ್ದಿಯಾಯಿತು. ನಾನು ಆಪ್ತರೆಂದು ನಂಬಿದ ವ್ಯಕ್ತಿ ‘ನಿಮಗೂ ಪ್ರಶಸ್ತಿ ಬಂತಾ? ಪ್ರಶಸ್ತಿ ಬರಲು ಎಷ್ಟು ಕೊಟ್ರಿ, ಯಾರನ್ನು ಹಿಡಿದ್ರಿ’ ಪ್ರಶ್ನೆಗಳ ಮಾಲೆಯನ್ನು ಮುಖಕ್ಕೆ ಹಿಡಿದರು. ಅವರ ಅಧಿಕ ಉತ್ಸಾಹಕ್ಕೆ ಮುಗುಳ್ನಕ್ಕು ಸುಮ್ಮನಾದೆ. ಮುಗುಳ್ನಗುವನ್ನೇ ಸತ್ಯವೆಂದು ಗ್ರಹಿಸಿದ ಅವರು ಸಿಕ್ಕಸಿಕ್ಕವರಲ್ಲೆಲ್ಲಾ ಪ್ರಸ್ತಾಪಿಸಬೇಕೇ? ಸಂಬಂಧಿಯೋರ್ವರಲ್ಲಿ ‘ಅವರು ಹಣ ಕೊಟ್ಟು ಪ್ರಶಸ್ತಿ ಪಡೆದರು’ ಎಂದು ಕಿವಿ ಕಚ್ಚಿದ್ದರು. ಬಳಿಕ ಆತನಿಂದ ಸಾಮಾಜಿಕ ಅಂತರ ಅಲ್ಲ, ಶಾಶ್ವತ ಅಂತರವನ್ನು ಪಡೆದೆ. ಪ್ರಶಸ್ತಿ, ಸಂಮಾನಗಳು ಮಾನ ಕಳೆದುಕೊಂಡಿರುವ ಕಾಲಘಟ್ಟದಲ್ಲಿ ಸಂಶಯ ಸಹಜ.
ಒಮ್ಮೆ ಹೀಗಾಯಿತು. ಒಂದು ಸಂಸ್ಥೆಯ ಹಿರಿಯರೊಬ್ಬರಿಂದ ಮೇಲಿಂದ ಮೇಲೆ ಅವಮಾನ, ನೋವು ಅನುಭವಿಸಿದ್ದೆ. ಹೊಟ್ಟೆಪಾಡಿಗಾಗಿ ಕಂಠತ್ರಾಣ, ಸೊಂಟತ್ರಾಣವು ಕೊಡುವ ನೋವನ್ನು ಅನುಭವಿಸದೆ ವಿಧಿಯಿಲ್ಲ. ಇದನ್ನು ತುಂಬಾ ಆಪ್ತರಾದವರೊಬ್ಬರಲ್ಲಿ (ಇವರು ಅವರಿಗೂ ಆಪ್ತರು) ಹಂಚಿಕೊಂಡಿದ್ದೆ. ಅವರು ನೇರವಾಗಿ ಅಂದೇ ಆ ಹಿರಿಯರಿಗೆ ತಮ್ಮದೇ ಶೈಲಿಯಲ್ಲಿ ಕಿವಿ ಊದಿದರು! ಅಂದಿನಿಂದ ಅವರ ಮಾತಿನ ವರಸೆ, ವ್ಯವಹಾರ ಶೈಲಿಯಲ್ಲಿ ಬದಲಾವಣೆಯನ್ನು ಗಮನಿಸಿದೆ. ಆಗಾಗ ಕೊಂಕು, ಗೇಲಿಗಳು ತೇಲಿ ಬರುತ್ತಿದ್ದುವು. ಕ್ರಮೇಣ ವಿಚಾರವು ಮರೆವಿಗೆ ಜಾರಿತು. ಆಪ್ತನೆನ್ನುವ ವಿಶ್ವಾಸದಿಂದ ನೋವನ್ನು ಹಂಚಿಕೊಂಡರೆ ಮಾಡಿದ್ದು ದ್ರೋಹ. ಇದು ನನ್ನೊಬ್ಬನ ಕತೆಯಲ್ಲ. ಎಲ್ಲರ ಬದುಕಿನಲ್ಲೂ ಇಂತಹ ಮಂದಿ ಪ್ರವೇಶಿಸಿರುತ್ತಾರೆ.
ಈಗಂತೂ ನವಮಾಧ್ಯಮಗಳ ಪ್ರಪಂಚ. ಮೊಬೈಲಿನಲ್ಲಿ ಧ್ವನಿಯನ್ನು ದಾಖಲಿಸುವ ವ್ಯವಸ್ಥೆಯಿದೆ. ಒಂದು ಸೆಕೆಂಡಿನಲ್ಲಿ ಮಾತು ಎಲ್ಲೆಲ್ಲೋ ಹರಿದಾಡುತ್ತವೆ. ಇದನ್ನೇ ದಂಧೆಯನ್ನಾಗಿ ಮಾಡಿ ಬದುಕುವವರಿದ್ದಾರೆ. ಫೋನಿನಲ್ಲೂ ಮಾತನಾಡುವಾಗಲೂ ಎಚ್ಚರ ಬೇಕು. ವಿಶ್ವಾಸ, ನಂಬುಗೆಯ ಸೋಗಿನಡಿ ನಯವಾಗಿ ಮಾತನಾಡಿ, ಅದನ್ನು ಧ್ವನೀಕರಿಸಿ ‘ಇಕ್ಕಟ್ಟಿಗೆ ಸಿಲುಕಿಸಿ’ ಸಂತೋಷ ಅನುಭವಿಸುವ ಆತ್ಮಗಳಿಂದ ದೂರವಿದ್ದಷ್ಟೂ ಕ್ಷೇಮ. ನವಮಾಧ್ಯಮಗಳು ಒಂದೆಡೆ ಹೊಸ ಬದುಕಿನ ಸೃಷ್ಟಿಗೆ ಸಹಕರಿಸಿದರೆ, ಮತ್ತೊಂದೆಡೆ ಬದುಕನ್ನು ಹೊಸಕಿ ಹಾಕುತ್ತವೆ.
ಕಟೀಲು ದಶಾವತಾರ ಮೇಳದ ಹಾಸ್ಯ ಕಲಾವಿದ ರವಿಶಂಕರ ವಳಕ್ಕುಂಜರು ಯಕ್ಷಗಾನ ಪ್ರಸಂಗಗಳಲ್ಲಿ ಬರುವ ನಾರದ ಪಾತ್ರದ ವಾಚಿಕ ಸಾಹಿತ್ಯವನ್ನು ‘ಯಕ್ಷಗಾನ ಪ್ರಸಂಗಗಳಲ್ಲಿ ನಾರದ’ ಪುಸ್ತಕದಲ್ಲಿ  ಹಿಡಿದಿಟ್ಟಿದ್ದಾರೆ. ಪುಸ್ತಕದಲ್ಲಿ ಕಟೀಲಿನ ವಿದ್ವಾನ್ ಶ್ರೀಹರಿನಾರಾಯಣದಾಸ ಆಸ್ರಣ್ಣರು ತಮ್ಮ ನಲ್ನುಡಿಯಲ್ಲಿ ಉಲ್ಲೇಖಿಸಿದ ಮಾತುಗಳು ಹೀಗಿವೆ. “ಪುರಾಣಗಳಲ್ಲಿ ಉತ್ತುಂಗಕ್ಕೇರಿದ ನಾರದ, ವಾಡಿಕೆಯಲ್ಲಿ ಮಾತ್ರ ಹಿಯಾಳಿಕೆಯ ಪಾತ್ರಧಾರಿಯಾಗಿದ್ದಾನೆ. ನಾರದನ ಕುರಿತಾಗಿ ಒಂದು ಪ್ರಕರಣವನ್ನು ತಿಳಿಯದವನ ಬಾಯಲ್ಲಿ ‘ನಾರದೋ ಕಲಹಪ್ರಿಯಃ’ ಎನ್ನುವ ಮಾತು ಗಟ್ಟಿಯಾಗಿದೆ. ಎಲ್ಲಿಯಾದರೂ ಒಬ್ಬನಿಂದ ಜಗಳ ಆರಂಭವಾದರೆ, ಅವ ನಾರದನೆಂಬ ಉಪನಾಮದಿಂದ ಕರೆಯಲ್ಪಡುತ್ತಾನೆ. ನಮ್ಮ ಧಾರ್ಮಿಕ ಜ್ಞಾನ ಅಲ್ಲಿಯ ವರೆಗೆ ತಲಪಿದೆ.”
ನಾರದ ಯಾರು? : ಸ್ವಯಂಭೂ ಮನ್ವಂತರದಲ್ಲಿ ಬ್ರಹ್ಮನ ಹತ್ತು ಮಂದಿ ಪುತ್ರರಲ್ಲಿ ಕೊನೆಯವನು. ಬ್ರಹ್ಮನ ಜಂಘೆಯಿಂದ ಜನಿಸಿದ. ಮರೀಚಿ, ಅತ್ರಿ, ಅಂಗೀರಸ, ಪುಲಸ್ತ್ಯ, ಪುಲಹ, ಕೃತು, ಭೃಗು, ವಸಿಷ್ಠ.. ಇವರೆಲ್ಲ ಸಹೋದರರು.
ಈತ ದೇವರ್ಷಿ. ಬ್ರಹ್ಮಚಾರಿ. ಮಹತಿ ವೀಣೆಯನ್ನು ಮೀಟುತ್ತಾ, ಹರಿನಾಮಸ್ಮರಣೆಯನ್ನು ಮಾಡುತ್ತಾ ಮೂರ್ಲೋಕಗಳಲ್ಲೂ ಸಂಚಾರ. ದಕ್ಷನ ಮಕ್ಕಳಿಗೆ ಜ್ಞಾನವನ್ನು ಉಪದೇಶಿಸಿ, ಅವರು ಸೃಷ್ಟಿ ಕಾರ್ಯದಿಂದ ವಿಮುಖರಾಗುವಂತೆ ಮಾಡಿದ ಕಾರಣ, ‘ನಿನಗೆ ಎಲ್ಲಿಯೂ ನೆಲೆಯಿಲ್ಲದಾಗಲಿ. ನೀನು ಕಲಹಪ್ರಿಯನಾಗಿ ಅಲೆಯುತ್ತಿರು’- ದಕ್ಷನ ಶಾಪ.
ದೇವಲೋಕದಲ್ಲಿ ಮಹಾಭಾರತ ಕತೆಯ ಪ್ರಚಾರಕ. ವಾಲ್ಮೀಕಿ ಮಹರ್ಷಿಗೆ ರಾಮಾಯಣ ಕಥಾಸಾರವನ್ನು ಹೇಳಿ, ರಾಮಾಯಣ ರಚಿಸಲು ಕಾರಣನಾದ. ಮುಂದೆ ಬ್ರಹ್ಮದೇವನ ಅನುಗ್ರಹದಿಂದ ವಾಲ್ಮೀಕಿ ಮಹರ್ಷಿಯಿಂದ ರಾಮಾಯಣ ಕಾವ್ಯ ರೂಪುಗೊಂಡಿತು.
ಪಾಂಡವರು ದ್ರೌಪದಿಯನ್ನು ವಿವಾಹವಾಗುತ್ತಾರೆ. ಅವಳನ್ನು ಹೇಗೆ ನಡೆಸಿಕೊಳ್ಳಬೇಕೆಂದು ನಾರದು ಅವರ ಬದುಕಿಗೆ ನಿಯಮವನ್ನು ರೂಪಿಸಿದ. ಮುಂದೆ ಧರ್ಮರಾಯನಿಗೆ ರಾಜಸೂಯ ಯಾಗವನ್ನು ಮಾಡುವಂತೆ ಸೂಚಿಸಿದ.
ರಾಮಾಯಣ, ಮಹಾಭಾರತ, ಭಾಗವತ ಅಲ್ಲದೆ ಅನೇಕ ಪುರಾಣಗಳಲ್ಲಿ ನಾರದ ಮಹರ್ಷಿಯ ಪ್ರವೇಶಗಳು ಗೋಚರವಾಗುತ್ತದೆ. ಧರ್ಮ ಶಿಥಿಲವಾಗಲು ಕಾರಣರಾದವರ ಬದುಕಿಗೆ ಈತ ಜಗಳ ಕಂಟಕನಾಗಿ ಕಂಡರೆ, ಸು-ಮನಸಿಗರಿಗೆ ಈತ ಹರಿದಾಸ.
ಧರ್ಮದ ಸ್ಥಾಪನೆಯೇ ಬದುಕಿನ ಮೂಲೋದ್ದೇಶ. ಆದರೆ ನಾರದ ಮಹರ್ಷಿಯ ಪ್ರವೇಶ ಆಯಿತು ಎಂದಾಗ ‘ಏನೋ ರಾದ್ಧಾಂತ’ವಾಗುತ್ತದೆ ಎಂದು ನಂಬಿದವರೇ ಹೆಚ್ಚು. ಆ ನಂಬುಗೆಯೇ ಎಷ್ಟೋ ಬಾರಿ ಸತ್ಯವಾಗಿದೆ ಕೂಡಾ!
“ನಾರದ' ಶಬ್ದದ ನಿಷ್ಪತ್ತಿ ಹೀಗಿದೆ
ಅರಾಃ ಅಂದರೆ ದೋಷ. ಹಾಗಾಗಿ ಅರಿ ಎಂದರೆ ದೋಷ ಇದ್ದವ ಎಂದರ್ಥ. ನ+ಅರಾಃ – ದೋಷಗಳೇ ಇಲ್ಲದವುಗಳು. ಅಂತಹ ದೋಷವಿಲ್ಲದ ಗುಣಗಳನ್ನು ‘ದದಾತಿ’ ಕೊಡುವವನು ನಾರದರು. ಅಥವಾ ದೋಷಗಳೇ ಇಲ್ಲದ ಗುಣಗಳನ್ನು ಹೊತ್ತವ ಭಗವಾನ್ ವಾಸುದೇವ – ನಾರ. ಆ ನಾರವನ್ನು ನಮಗೆ ಕೊಡುವವ ಅಂದರೆ ಅವನ ಮನೆಗೆ ದಾರಿ ತೋರಿಸುವವ ಈ ನಾರದ ಎಂದು ಶಾಬ್ದಿಕ ಅರ್ಥ.” (ಕಮಲಾದೇವಿಪ್ರಸಾದ ಆಸ್ರಣ ಕಟೀಲು – ಯಕ್ಷಗಾನ ಪ್ರಸಂಗಗಳಲ್ಲಿ ‘ನಾರದ’ ಕೃತಿಯಲ್ಲಿ)
https://theruralmirror.com/epaper/narada-and-journalist/
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ನಾ.ಕಾರಂತ ಪೆರಾಜೆ

ಪತ್ರಕರ್ತ , ಕಲಾವಿದ , ಅಂಕಣಕಾರ ನಾ.ಕಾರಂತ ಪೆರಾಜೆ ಅವರು ಪ್ರಸ್ತುತ ಅಡಿಕೆ ಪತ್ರಿಕೆಯ ಸಹಾಯಕ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಕರ್ತರಾಗಿ, ಕಲಾವಿದರಾಗಿ, ಅಂಕಣಕಾರರಾಗಿ ಗುರುತಿಸಿಕೊಂಡಿರುವ ನಾ.ಕಾರಂತ ಅವರು ತಾಳಮದ್ದಳೆಯಲ್ಲಿ ಅರ್ಥದಾರಿಯಾಗಿ ಹಾಗೂ ವಿವಿಧ ಮೇಳಗಳಲ್ಲಿ ವೇಷಧಾರಿಯೂ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಪುತ್ತೂರು ತಾಲೂಕಿನ 17ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

Published by
ನಾ.ಕಾರಂತ ಪೆರಾಜೆ

Recent Posts

ಹವಾಮಾನ ವರದಿ | 09-06-2025 | ಜೂನ್ 10 ರಿಂದ ಮಳೆಯ ಪ್ರಮಾಣ ಹೆಚ್ಚಾಗುವ ನಿರೀಕ್ಷೆ ಇದೆ | ಮುಂದಿನ 10 ದಿನಗಳವರೆಗೂ ಉತ್ತಮ ಮಳೆ ಸಾಧ್ಯತೆ|

ಅರಬ್ಬಿ ಸಮುದ್ರದ ಮೇಲ್ಮೈ ಸುಳಿಗಾಳೀಯು ಪಶ್ಚಿಮಾಭಿಮುಖವಾಗಿ ಚಲಿಸುತ್ತಿದ್ದು, ಇದೇ ಸಂದರ್ಭದಲ್ಲಿ ಬಂಗಾಳಕೊಲ್ಲಿಯಲ್ಲೂ ಸಣ್ಣ…

2 hours ago

ಅಡಿಕೆಯ ಮೌಲ್ಯವರ್ಧಿತ ಉತ್ಪನ್ನಗಳು

ಭಾರತದಲ್ಲಿ ಉತ್ಪಾದನೆ ಆಗುತ್ತಿರುವ ಒಟ್ಟು ಅಡಿಕೆಯ ಪ್ರಮಾಣ ಸುಮಾರು ಹದಿನಾರು ಲಕ್ಷ ಟನ್,…

3 hours ago

ವಿಶ್ವದ ಅತೀ ಎತ್ತರದ ಚೆನಾಬ್ ರೈಲ್ವೆ ಸೇತುವೆ ನಿರ್ಮಾಣ | ಬೆಂಗಳೂರಿನ ಜಿ.ಮಾಧವಿ ಲತಾ ಪ್ರಮುಖ ಪಾತ್ರ | ಭೂತಾಂತ್ರಿಕ ಸಲಹೆಗಾರರಾಗಿ 17 ವರ್ಷಗಳ ಕಾಲ ಕೊಡುಗೆ

1,486 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಚೆನಾಬ್ ಸೇತುವೆಯನ್ನು ಸರ್ಕಾರವು "ಇತ್ತೀಚಿನ ಇತಿಹಾಸದಲ್ಲಿ…

6 hours ago

ಇಂದಿನಿಂದ ಕರಾವಳಿ-ಮಲೆನಾಡು ಜಿಲ್ಲೆಗಳಲ್ಲಿ ಮಳೆ

ರಾಜ್ಯದ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಇಂದಿನಿಂದ ಮಳೆ ಆರಂಭವಾಗಲಿದೆ. ಅಲ್ಲಲ್ಲಿ ಸಾಧಾರಣ…

6 hours ago

ಮೃಗಶಿರ ನಕ್ಷತ್ರಕ್ಕೆ ಸೂರ್ಯನ ಪ್ರವೇಶ | ಈ ಮೂರು ರಾಶಿಗಳ ಅದೃಷ್ಟ..!

ಹೆಚ್ಚಿನ ಮಾಹಿತಿಗಾಗಿ ರಾಯರ ಪರವ ಭಕ್ತರಾದ ಜ್ಯೋತಿಷಿಗಳನ್ನು ಸಂಪರ್ಕತೆ 9535156490

7 hours ago

ಬದುಕು ಪುರಾಣ | ಅಂದು ಒಬ್ಬ ಬಕಾಸುರ.. ಇಂದು?

ಭೋಜನವೆಂದರೆ ಉದರಾಗ್ನಿಯನ್ನು ತಣಿಸುವ ಯಜ್ಞ. ಉದರಾಗ್ನಿಗೆ ಖಾದ್ಯಗಳೇ ಆಜ್ಯಗಳು. ಯಜ್ಞವೆಂದಾಗ ಶ್ರದ್ಧೆ, ಭಕ್ತಿ ಮತ್ತು…

1 day ago