ಅಕ್ವಡಕ್ಟ್ ಇಂಜಿನಿಯರಿಂಗ್ ತಂತ್ರಜ್ಞಾನದ ಮೂಲಕ ಆರೋಗ್ಯ, ಸುರಕ್ಷತೆ, ಪರಿಸರ ಸ್ನೇಹಿ ಮಾದರಿಯಲ್ಲಿ ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆ ಜಾರಿ ಮಾಡಿರುವ ಹಿನ್ನೆಲೆಯಲ್ಲಿ ರಾಜ್ಯ ಜಲಸಂಪನ್ಮೂಲ ಇಲಾಖೆ ವ್ಯಾಪ್ತಿಯ ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತಕ್ಕೆ 2025 ನೇ ಸಾಲಿನ ಪ್ರತಿಷ್ಠಿತ ಐಐಎನ್ ಪ್ಲಾಟಿನಮ್ ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ. ಮೂಲಸೌಕರ್ಯ ಕ್ಷೇತ್ರದಲ್ಲಿ ಕೌಶಲ್ಯ ಅಭಿವೃದ್ಧಿ, ತಂತ್ರಜ್ಞಾನ ಆವಿಷ್ಕಾರಕ್ಕೆ ಆದ್ಯತೆ ನೀಡುವ ಉದ್ದೇಶದಿಂದ ರೂಪಿತವಾಗಿರುವ ಇನ್ಫ್ರಾಸ್ಟ್ರಕ್ಚರ್ ಸ್ಕಿಲ್ ಡೆವಲಪ್ಮೆಂಟ್ ಅಕಾಡೆಮಿ ಸಂಸ್ಥೆಯು ವಿಜೆಎನ್ಎಲ್ ಗೆ ನವದೆಹಲಿಯಲ್ಲಿ ಈ ಪ್ರಶಸ್ತಿ ನೀಡಿದೆ.
ವಿಜೆಎನ್ಎಲ್ ವ್ಯವಸ್ಥಾಪಕ ನಿರ್ದೇಶಕರಾದ ಸಣ್ಣಚಿತ್ತಯ್ಯ ಹಾಗೂ ಅಧಿಕಾರಿಗಳ ತಂಡ ಜಲಸಂಪನ್ಮೂಲ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಪ್ರಶಸ್ತಿ ಫಲಕದೊಂದಿಗೆ ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದರು. ಈ ಯೋಜನೆಯಲ್ಲಿ ಅವಳಿ ತೊಟ್ಟಿಗಳು, ಸರ್ವೀಸ್ ರಸ್ತೆಗಳ ಸಮನ್ವಯತೆಯಿಂದ ಕಾರ್ಯಾಚರಣೆ ದಕ್ಷತೆಗಾಗಿ ಹೊಸ ವಿನ್ಯಾಸವನ್ನು ರೂಪಿಸಲಾಗಿದೆ.