ಆಂಧ್ರ ಪ್ರದೇಶ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಅವರು ಕೀಟನಾಶಕಗಳು ಮತ್ತು ರಾಸಾಯನಿಕ ಗೊಬ್ಬರಗಳ ಅತಿಯಾದ ಬಳಕೆ ಕೃಷಿ ಭೂಮಿಯ ಫಲವತ್ತತೆ, ಸಾರ್ವಜನಿಕ ಆರೋಗ್ಯ ಹಾಗೂ ಕೃಷಿಯ ದೀರ್ಘಕಾಲೀನ ಸುಸ್ಥಿರತೆಗೆ ಹಾನಿಕಾರಕವಾಗಿದೆ ಎಂದು ಎಚ್ಚರಿಕೆ ನೀಡಿದ್ದಾರೆ. ಈ ಸಮಸ್ಯೆಗೆ ನೈಸರ್ಗಿಕ ಕೃಷಿಯೇ ಪರಿಣಾಮಕಾರಿ ಪರಿಹಾರ ಎಂದು ಅವರು ಪ್ರತಿಪಾದಿಸಿದ್ದಾರೆ.
ಆಂಧ್ರ ಪ್ರದೇಶದಲ್ಲಿ ನಡೆದ ರೈತ ಕಲ್ಯಾಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಈಗಾಗಲೇ ಸುಮಾರು 20 ಲಕ್ಷ ಎಕರೆ ಪ್ರದೇಶದಲ್ಲಿ ನೈಸರ್ಗಿಕ ಕೃಷಿ ಅನುಸರಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ರೈತರು ರಾಸಾಯನಿಕಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿ, ನೈಸರ್ಗಿಕ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದ್ದಾರೆ.
ಇತ್ತೀಚೆಗೆ ಗುಂಟೂರು ಪ್ರದೇಶದಿಂದ ರಫ್ತಾಗಿದ್ದ ಮೆಣಸಿನಕಾಯಿ ಸಾಗಣೆಗಳಲ್ಲಿ ಕೀಟನಾಶಕ ಅವಶೇಷಗಳು (Pesticide Residues) ಪತ್ತೆಯಾದ ಹಿನ್ನೆಲೆಯಲ್ಲಿ ಕೆಲವು ವಿದೇಶಿ ಮಾರುಕಟ್ಟೆಗಳು ಸರಕುಗಳನ್ನು ಹಿಂತಿರುಗಿಸಿವೆ ಎಂದು ಉಲ್ಲೇಖಿಸಿದ ಅವರು, ಜಾಗತಿಕ ಮಾರುಕಟ್ಟೆಯಲ್ಲಿ ಗುಣಮಟ್ಟ ಮತ್ತು ಸುರಕ್ಷತೆಗೆ ಹೆಚ್ಚಿನ ಮಹತ್ವ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ.
ನೈಸರ್ಗಿಕ ಕೃಷಿ ಉತ್ಪನ್ನಗಳಿಗೆ ವಿಶೇಷ ಮಾರುಕಟ್ಟೆ ವ್ಯವಸ್ಥೆ, ರೈತ ಬಜಾರ್ಗಳಲ್ಲಿ ಪ್ರತ್ಯೇಕ ಕೌಂಟರ್ಗಳು ಹಾಗೂ ಕೃಷಿ ವಿಶ್ವವಿದ್ಯಾಲಯಗಳ ಮೂಲಕ ಹೆಚ್ಚಿನ ಸಂಶೋಧನೆ ಮತ್ತು ಪ್ರಚಾರಕ್ಕೆ ಸರ್ಕಾರ ಒತ್ತು ನೀಡುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಇಂದು ಜಾಗತಿಕ ಮಾರುಕಟ್ಟೆಯಲ್ಲಿ ಕೇವಲ ಉತ್ಪಾದನೆ ಸಾಕಾಗುವುದಿಲ್ಲ. ಉತ್ಪನ್ನದಲ್ಲಿ ಕೀಟನಾಶಕ ಅವಶೇಷಗಳ ಪ್ರಮಾಣ ಮಾನದಂಡದೊಳಗಿರಬೇಕು. ಹೀಗಾಗಿ ಎಲ್ಲಾ ಕೃಷಿಕರೂ ಈ ಬಗ್ಗೆ ಗಮನಿಸಬೇಕು. ಅದರಲ್ಲೂ ವಿಶೇಷವಾಗಿ ರಫ್ತು ಮಾಡುವ ಕೃಷಿ ವಸ್ತುಗಳ ಕಡೆಗೆ ವಿಶೇಷ ಆದ್ಯತೆ ಬೇಕಾಗಿದೆ. ಕರಿಮೆಣಸು, ಕಾಫಿ, ಏಲಕ್ಕಿ ಬೆಳೆಗಾರರು ಈ ವಿಚಾರಕ್ಕೆಈಗ ಹೆಚ್ಚಿನ ಗಮನ ನೀಡಬೇಕಾಗಿದೆ. ಹೆಚ್ಚಿನ ರಾಸಾಯನಿಕ ಬಳಕೆಯಿಂದ ಮಣ್ಣಿನ ಸಾವಯವ ಅಂಶ ಕಡಿಮೆಯಾಗುವುದು, ಸೂಕ್ಷ್ಮಜೀವಿಗಳ ಚಟುವಟಿಕೆ ಕುಗ್ಗುವುದು ಮತ್ತು ಉತ್ಪಾದನಾ ವೆಚ್ಚ ಏರಿಕೆಯಾಗುವುದು ದೇಶದ ಹಲವು ಭಾಗಗಳಲ್ಲಿ ಕಂಡುಬರುತ್ತಿದೆ. ನೈಸರ್ಗಿಕ ಕೃಷಿಯ ಕುರಿತು ನಡೆಯುತ್ತಿರುವ ಚರ್ಚೆಯ ಕೇಂದ್ರಬಿಂದುವೂ ಇದೇ ಆಗಿದೆ.
ತಜ್ಞರ ಅಭಿಪ್ರಾಯದಂತೆ, ನೈಸರ್ಗಿಕ ಕೃಷಿಯ ಮೂಲ ಉದ್ದೇಶ ಮಣ್ಣಿನ ಆರೋಗ್ಯವನ್ನು ಸುಧಾರಿಸುವುದು ಮತ್ತು ಹೊರಗಿನ ಇನ್ಪುಟ್ಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವುದು. ಆದರೆ, ವೈಜ್ಞಾನಿಕ ನಿರ್ವಹಣೆ ಇಲ್ಲದೆ ಸಂಪೂರ್ಣ ರಾಸಾಯನಿಕ ತ್ಯಜಿಸುವುದು ಕೆಲ ಬೆಳೆಗಳಲ್ಲಿ ಸವಾಲುಗಳನ್ನು ಉಂಟುಮಾಡಬಹುದು. ಹೀಗಾಗಿ ಎಚ್ಚರಿಕೆಯ ಹೆಜ್ಜೆಯೂ ಕೃಷಿಕರಿಗೆ ಅನಿವಾರ್ಯ ಇದೆ. ಒಮ್ಮೆಲೇ ಕೃಷಿ ಪದ್ಧತಿ ಬದಲಾಯಿಸುವುದು ಕೂಡಾ ಕಷ್ಟವಿದೆ.
ಆಂಧ್ರ ಪ್ರದೇಶದ ಸಮುದಾಯ ಆಧಾರಿತ ನೈಸರ್ಗಿಕ ಕೃಷಿ (APCNF) ಕಾರ್ಯಕ್ರಮವು ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದ್ದು, 2026ರ Food Planet Prize ಪ್ರಶಸ್ತಿಯನ್ನೂ ಪಡೆದಿದೆ. ಈ ಮಾದರಿಯ ಯಶಸ್ಸು ಇತರ ರಾಜ್ಯಗಳ ಕೃಷಿ ನೀತಿಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ.
ಈ ಸುದ್ದಿಗೆ ನಿಮ್ಮ ಅಭಿಪ್ರಾಯ-ಕಮೆಂಟ್ ಮೂಲಕ ಇಲ್ಲಿ ತಿಳಿಸಿ…
Andhra Pradesh Chief Minister N. Chandrababu Naidu has said that natural farming is the best antidote to the excessive use of pesticides and chemical fertilizers. He warned that chemical-intensive agriculture harms soil health, public health, and long-term sustainability, while emphasizing the need for residue-free agricultural production and expansion of natural farming practices.
ದೇಶದ 13 ರಾಜ್ಯಗಳಿಗೆ ಐಎಂಡಿ ಭಾರೀ ಮಳೆಯ ಎಚ್ಚರಿಕೆ ನೀಡಿದ್ದು, ಕರಾವಳಿ ಕರ್ನಾಟಕ…
ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಆಡಳಿತ…
ದಿಮಾಪುರ ಕಸ್ಟಮ್ಸ್ ಜಪ್ತಿ ಮಾಡಿದ್ದ ₹2.22 ಕೋಟಿ ಮೌಲ್ಯದ 33.6 ಟನ್ ಅಡಿಕೆ…
ಕರ್ನಾಟಕದಲ್ಲಿ ಮಳೆ ಕೊರತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪೂರ್ಣಾವಧಿ ಕೃಷಿ ಸಚಿವರನ್ನು ತಕ್ಷಣ ನೇಮಿಸಬೇಕು…
ವಿಶ್ವ ಯೋಗ ದಿನದ ಅಂಗವಾಗಿ ಕ್ಯಾಂಪ್ಕೊ ಚಾಕಲೇಟ್ ಕಾರ್ಖಾನೆ ಉದ್ಯೋಗಿಗಳ ರಿಕ್ರಿಯೇಷನ್ ಸೆಂಟರ್…
ದೇಶದಲ್ಲಿ ಮುಂಗಾರು ಮಳೆ ಕೊರತೆ 40%ಕ್ಕೆ ಏರಿಕೆಯಾಗಿದ್ದು, ಪ್ರಮುಖ ಕೃಷಿ ಪ್ರದೇಶಗಳಲ್ಲಿ ಮೋಡಗಳ…