ಭೂಕುಸಿತಗಳಿಗೆ ಕಾರಣ ಏನು..? | 100 ಎಕ್ರೆಗೆ ಜಾಗಕ್ಕೆ 10 ಎಕ್ರೆ ಕಾಡು ಇದ್ದರೇ ಎಲ್ಲದಕ್ಕೂ ಪರಿಹಾರ | ಭೂವಿಜ್ಞಾನಿ ಮಧುರಕಾನನ ಗಣಪತಿ ಭಟ್‌ ಜೊತೆ ಮಾತುಕತೆ |

July 24, 2024
5:17 PM
ಇಂದು ಅಂತರ್ಜಲಮಟ್ಟ ಕುಸಿತ, ಭೂಕುಸಿತದಂತಹ ಸಮಸ್ಯೆಗಳು ನಡೆಯುತ್ತಿದೆ. ಇದಕ್ಕೆ ಕಾರಣಗಳೇನು ಎಂಬುದರ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ಎಲ್ಲಾ  ಸಮಸ್ಯೆಗಳಿಗೆ ಪರಿಹಾರ ಕಾಡು ಉಳಿಸುವುದು ಹಾಗೂ ಬೆಳೆಸುವುದು.  ನೀರಿನ ಸಹಜ ಹರಿವಿನ ವಿರುದ್ಧವಾದ ಕೆಲಸಗಳೂ ಪ್ರಕೃತಿಯ ಮೇಲೆ ಪರಿಣಾಮ ಬೀರುತ್ತದೆ. ಸಣ್ಣ ತಡೆಗಳ ಮೂಲಕ ನೀರು ಇಂಗಿಸಬಹುದು, ಆದರೆ ಭಾರೀ ತಡೆಯಾದರೆ ಅಪಾಯವೂ ಇದೆ. ಇಂದಿನ ಹಲವು ಸಮಸ್ಯೆಗಳಿಗೆ ಇದು ಕೂಡಾ ಕಾರಣವಾಗಿದೆ ಎನ್ನುತ್ತಾರೆ. ಮಾನವ ನಿರ್ಮಿತವಾದ ಹಲವು ಕೆಲಸಗಳು ಭೂಕುಸಿತಗಳಿಗೆ ಕಾರಣವಾಗಿದೆ ಎನ್ನುತ್ತಾರೆ ಮಧುರಕಾನನ ಗಣಪತಿ ಭಟ್.

ಅಂತರ್ಜಲ ಮಟ್ಟ ಕುಸಿತವಾಗುತ್ತಿರುವ ಆತಂಕ ಒಂದು ಕಡೆ, ಅರಣ್ಯ ನಾಶದ ಕೂಗು ಇನ್ನೊಂದು ಕಡೆ, ಭೂಕುಸಿತ ಸದ್ದು ಮತ್ತೊಂದಿಷ್ಟು ಕಡೆ…!. ಇದಕ್ಕೆಲ್ಲಾ ಕಾರಣ ಏನು ಎಂದು ಸೂಕ್ಷ್ಮವಾಗಿ ಗಮನಿಸಿದರೆ ತಿಳಿಯುತ್ತದೆ, ಕಾರಣ ಪರಿಸರ ನಾಶ… ಆದರೆ ಭೂವಿಜ್ಞಾನಿಗಳು, ಭೂರಚನೆಗಳ ಬಗ್ಗೆ ಅಧ್ಯಯನ ಮಾಡಿದವರು ಏನು ಹೇಳುತ್ತಾರೆ..? ಮುಂದೇನು ಮಾಡಬಹುದು..? ಏನು ಮಾಡಬೇಕು…? ಈ ಬಗ್ಗೆ ದ ರೂರಲ್‌ ಮಿರರ್.ಕಾಂ ಮಧುರಕಾನನ ಗಣಪತಿ ಭಟ್‌ ಅವರನ್ನು ಮಾತನಾಡಿಸಿದೆ… 

Advertisement
Advertisement
Advertisement

ಮಧುರಕಾನ ಗಣಪತಿ ಭಟ್‌ ಅವರು ಜಿಯೋಲಾಜಿಸ್ಟ್‌ ಆಗಿ ಕಳೆದ 37 ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಅಂತರ್ಜಲ ಸಂಶೋಧನೆ, ಭೂಮಿಯ ಒಳಪದರಗಳ ಬಗ್ಗೆ ಅಧ್ಯಯನ ಹಾಗೂ ಮಾಹಿತಿಯನ್ನು ನೀಡಬಲ್ಲವರು. ಕೇರಳ, ಕರ್ನಾಟಕ, ತಮಿಳುನಾಡು ಸೇರಿದಂತೆ ಬೇರೆ ಬೇರೆ ರಾಜ್ಯಗಳಲ್ಲಿ ಕೆಲಸ ಮಾಡಿದ್ದಾರೆ. ಪುತ್ತೂರಿನಲ್ಲಿ ವಾಸವಾಗಿರುವ ಅವರು ಉತ್ತಮ ಕೃಷಿಕನೂ ಹೌದು. ಅಡಿಕೆ, ಭತ್ತ, ಹಣ್ಣುಗಳ ಕೃಷಿ ಮಾಡುತ್ತಾರೆ. ಸಾಹಿತ್ಯದ ಕಡೆ ಆಸಕ್ತಿ ಹೊಂದಿದ್ದು ಕವನ ಸಂಕಲನವೂ ಪ್ರಕಟಗೊಂಡಿದೆ. ಉತ್ತಮ ಕವಿತೆಗಳನ್ನೂ ಬರೆಯುತ್ತಾರೆ.

Advertisement
ಮಧುರಕಾನನ ಗಣಪತಿ ಭಟ್

ಈ ವಾರದ ಅತಿಥಿಯಾಗಿ ಮಧುರಕಾನ ಗಣಪತಿ ಭಟ್‌ ಅವರ ಜೊತೆ ಅಂತರ್ಜಲಮಟ್ಟ ಕುಸಿತ, ಭೂಕುಸಿತಗಳಿಗೆ ಕಾರಣ ಹಾಗೂ ಜಲಮರುಪೂರಣದ ಬಗ್ಗೆ ದ ರೂರಲ್‌ ಮಿರರ್.ಕಾಂ ಜೊತೆ ಮಾತನಾಡಿದ್ದಾರೆ. ಈಗಿನ ಎಲ್ಲಾ ಸಮಸ್ಯೆಗಳಿಗೂ ಕಾಡು ಉಳಿಸುವುದು ಹಾಗೂ ಬೆಳೆಸುವುದೇ ಪರಿಹಾರ ಎನ್ನುವ ಅವರು ನೀರಿನ ಸಹಜ ಹರಿವಿನ ವಿರುದ್ಧವಾದ ಕೆಲಸಗಳೂ ಪ್ರಕೃತಿಯ ಮೇಲೆ ಪರಿಣಾಮ ಬೀರುತ್ತದೆ. ಸಣ್ಣ ತಡೆಗಳ ಮೂಲಕ ನೀರು ಇಂಗಿಸಬಹುದು, ಆದರೆ ಭಾರೀ ತಡೆಯಾದರೆ ಅಪಾಯವೂ ಇದೆ. ಇಂದಿನ ಹಲವು ಸಮಸ್ಯೆಗಳಿಗೆ ಇದು ಕೂಡಾ ಕಾರಣವಾಗಿದೆ ಎನ್ನುತ್ತಾರೆ. ಮಾನವ ನಿರ್ಮಿತವಾದ ಹಲವು ಕೆಲಸಗಳು ಭೂಕುಸಿತಗಳಿಗೆ ಕಾರಣವಾಗಿದೆ ಎನ್ನುತ್ತಾರೆ… ಅವರ ಜೊತೆಗಿನ ಮಾತುಕತೆ ಇಲ್ಲಿದೆ….

ಈಚೆಗೆ ಅಂತರ್ಜಲಮಟ್ಟ ಕುಸಿತವಾದ್ದು ಹೌದು, ಹಾಗಂತ ಎಲ್ಲಾ ಕಡೆಯೂ ಕುಸಿತವಾಗಿಲ್ಲ.ಪ್ರತೀ ವರ್ಷ ಸರಿಯಾದ ಮಳೆ ಬಂದರೆ ಕುಸಿತ ಕಾಣದು, ಬಾರದೇ ಇದ್ದರೆ ಕುಸಿತವಾಗಬಹುದು. ಕರಾವಳಿ, ಮಲೆನಾಡಲ್ಲಿ ಅಷ್ಟೊಂದು ಪ್ರಮಾಣದಲ್ಲಿ ಅಂತರ್ಜಲಮಟ್ಟ ಕುಸಿತವಾಗಿಲ್ಲ. ದೊಡ್ಡ ಪಟ್ಟಣದಲ್ಲಿ ಕುಸಿತವಾಗುತ್ತದೆ, ನೀರಿನ ಅತೀವ ಬಳಕೆಯೇ  ಇದಕ್ಕೆ ಕಾರಣ.
ರಾಜ್ಯದ ಕೋಲಾರ, ಬೆಂಗಳೂರು ಮೊದಲಾದ ಕಡೆ ತುಂಬಾ ವರ್ಷಗಳಿಂದ ಅಗಾಧ ಪ್ರಮಾಣದಿಂದ ನೀರಿನ ಬಳಕೆಯಾಗುತ್ತಿದೆ. ಆದರೆ ಅದೇ ಪ್ರಮಾಣದಲ್ಲಿ ಜಲಮರುಪೂರಣ ಆಗಿಲ್ಲ.ಹೀಗಾಗಿ ತೀರಾ ಕುಸಿತ ಆಗಿದೆ. ಅದೇ ಮಡಿಕೇರಿ-ಮಲೆನಾಡು ತಪ್ಪಲಲ್ಲಿ ಅಷ್ಟೊಂದು ಪ್ರಮಾಣದಲ್ಲಿ ಕುಸಿತ ಆಗಿಲ್ಲ.  300-350  ಅಡಿಯಲ್ಲಿದೆ ನೀರಿದೆ, ಶೇ.20 ರಷ್ಟು ಕಡೆ 500 ಅಡಿ ಆಳಕ್ಕೆ ನೀರು ಇಳಿಕೆಯಾಗಿದೆ. ಕೆಲವು ನೀರಿನ ಗ್ಯಾಪ್‌ಗಳು ಖಾಲಿಯಾಗಿದೆ, ನೀರು ಕಡಿಮೆ ಆಗಿದೆ. ಇದಕ್ಕಾಗಿ ಜಲಮರುಪೂರಣ ಅಗತ್ಯ ಇದೆ. ಮರುಪೂರಣದಲ್ಲಿ ಕೆಲವು ವಿಷಯ ಗಮನಿಸಬೇಕು, ಇದಕ್ಕಾಗಿ ತಜ್ಞರ ಸಲಹೆಯನ್ನು ಪಡೆಯಬೇಕು.
ಮಲೆನಾಡು ಭಾಗದಲ್ಲಿ ಹಲವು ಕಡೆ ಕೊಳವೆಬಾವಿಗೆ ಅಟೋ ರೀಚಾರ್ಜ್‌ ಆಗುತ್ತದೆ. ಕೆಲವು ಕಡೆ ಆಗುವುದಿಲ್ಲ. ಅಂತಹ ಕಡೆ ಮರುಪೂರಣ ಅಗತ್ಯ ಇದೆ. ಅಟೋ ರೀಜಾರ್ಜ್‌ ಆಗುವ ಕಡೆ ಜಲಮರುಪೂರಣ ಅಗತ್ಯ ಇರುವುದಿಲ್ಲ. ಸರಿಯಾಗಿ ಮಳೆ ಬಂದರೆ ಸಮಸ್ಯೆ ಆಗುವುದಿಲ್ಲ. ಮಳೆ ಬರಬೇಕಾದರೆ ಏನು ಮಾಡಬೇಕು, ಅದನ್ನೇ ನಾವೆಲ್ಲರೂ ಮಾಡಬೇಕು.
ದ ಕ ಜಿಲ್ಲೆಯಲ್ಲಿ ಅಂತರ್ಜಲ ಬಳಕೆ ಡಿಸೆಂಬರ್ ನಿಂದ ಆರಂಭವಾಗುತ್ತದೆ, ಮಾರ್ಚ್‌ ವೇಳೆ ಮಳೆಯಾದರೆ ಅಂತರ್ಜಲ ಬಳಕೆ ಕಡಿಮೆಯಾಗುತ್ತದೆ. ಕೆಲವು ಕಡೆ ಸುಮಾರು 4 ತಿಂಗಳು ಅಂತರ್ಜಲ ಬಳಕೆಯಾಗುತ್ತದೆ.ಬಯಲು ಸೀಮೆಯಲ್ಲಿ ಮಳೆ ಕಡಿಮೆಯಾಗಿರುವುದೇ ನೀರಿನ ಸಮಸ್ಯೆಗೆ ಕಾರಣ. ಮೊದಲು ಮರ ಇದ್ದವು ಆಗ ಉತ್ತಮ ಮಳೆಯಾಗಿ ನೈಸರ್ಗಿಕವಾಗಿ ಮರುಪೂರಣ ಆಗುತ್ತಿತ್ತು. ಕಳೆದ ಸುಮಾರು 20-25 ವರ್ಷಗಳಲ್ಲಿ ಕಾಡು ನಾಶವಾಗುತ್ತಾ ಬಂದಿದೆ. ಈಗ ಮಲೆನಾಡಲ್ಲೂ ಈ ಪ್ರಕ್ರಿಯೆ ಆರಂಭವಾಗುತ್ತಿದೆ. ಹೊಸ ಯೋಜನೆಗಳಿಗೆ ಕಾಡು ನಾಶವಾಗಿದೆ ,ಇದೇ ಸಮಸ್ಯೆಯಾಗಿ ಮುಂದೆ ಕಾಡಲಿದೆ. ಪರಿಸರದ ಮರ ನಾಶವಾಗಿದೆ -ಇದುವರೆಗೆ ಇದನ್ನು ತಡೆಯಲು ಆಗಿಲ್ಲ, ಇದೇ ನೀರಿನ ಕೊರತೆಗೆ ಕಾರಣ.
ಜಲಮರುಪೂರಣಕ್ಕೆ ಈಗ ಇರುವ ಸುಲಭ ಮಾರ್ಗ ಸಾಧ್ಯವಾದಷ್ಟು ಗಿಡಗಳನ್ನು ನೆಡಬೇಕು. ಕಾಡು ಬೆಳೆಸಬೇಕು-ಮರ ಉಳಿಸಬೇಕು. ಮರದಿಂದ ಮರುಪೂರಣ ಆಗುವುದು ಹೆಚ್ಚು. ಒಂದು ಮರ ವಿಶಾಲವಾಗಿರುತ್ತದೆ. ಮಳೆ ನೀರು ಎಲೆಗೆ ಬಿದ್ದು ಅದು ನಿಧಾನವಾಗಿ ಅಂದರೆ ಒಂದು ಎಲೆಗೆ ನೀರು ಬಿದ್ದು ಅದು ಸಣ್ಣ ಕಣವಾಗಿ ಭೂಮಿಗೆ ಬಿದ್ದು ಭೂಮಿಯಲ್ಲಿ ಇಂಗಲು ಕಾರಣವಾಗುತ್ತದೆ. ಭೂಮಿ ಒಂದು ಉತ್ತಮ ಪಿಲ್ಟರ್‌ ಆಗಿ ಕೆಲಸ ಮಾಡುತ್ತದೆ, ಪಿಲ್ಟರ್‌ ಮಾಡಿದ ಶುದ್ಧವಾದ ನೀರನ್ನು ಮಾತ್ರವೇ ಭೂಮಿ ಒಡಲಲ್ಲಿ ಸೇರಿಸಿಕೊಳ್ಳುತ್ತದೆ. ಮರಗಳು , ಕಾಡು ಇದ್ದಾಗ ಈ ವ್ಯವಸ್ಥೆ ಉತ್ತಮವಾಗುತ್ತದೆ.  ಹೀಗಾಗಿ ನೈಸರ್ಗಿಕವಾದ ಈ ಪ್ರಕ್ರಿಯೇ ಬಹುದೊಡ್ಡ ವ್ಯವಸ್ಥೆ.
ನೀರು ಇಂಗಲು ಹರಿಯುವ ನೀರಿನ ವೇಗ ಕಡಿಮೆ ಮಾಡುವುದು ಕೂಡಾ ಸಹಜವಾದ ಒಂದು ಪ್ರಕ್ರಿಯೆ.ಅದಕ್ಕಾಗಿಯೇ ಅಲ್ಲಲ್ಲಿ ನೀರು ಹೊಳೆಯಲ್ಲಿ ನಿಲ್ಲುತ್ತದೆ, ಮರಳು ಶೇಖರಗೊಂಡು ಹರಿಯುವ ನೀರಿನ ವೇಗ ಕಡಿಮೆಯಾಗುತ್ತದೆ. ಅಂದರೆ ಪ್ರಕೃತಿಯ ಸಹಜವಾದ ಕೆಲಸಗಳು ಅದರ ಪಾಡಿಗೆ ನಡೆಯುತ್ತದೆ. ಮರಲೂ ಉತ್ತಮ ಪಿಲ್ಟರ್‌ ಆಗಿ ಕೆಲಸ ಮಾಡಿ ಭೂಮಿಗೆ ನೀರನ್ನು ಸೇರಿಸುತ್ತದೆ. ಮನುಷ್ಯ ಹಸ್ತಕ್ಷೇಪ ಹೆಚ್ಚಾದಾಗ ಪ್ರಕೃತಿ ತನಗೆ ಬೇಕಾದ ಹಾಗೆಯೇ ಮಾಡಿಕೊಳ್ಳುತ್ತದೆ.
ಮಳೆ ನೀರನ್ನು ಹಾಗೆಯೇ ಭೂಮಿಗೆ ನೀಡಬಾರದು. ಒಮ್ಮೆ ಅಂತರ್ಜಲ ಕಲುಷಿತವಾದರೆ ನಮಗೆ ಸರಿ ಮಾಡಲು ಆಗುವುದಿಲ್ಲ ಅಂತರ್ಜಲ, ಸಂಸ್ಕರಿಸಿಯೇ ಭೂಮಿಗೆ ಬಿಡಬೇಕು. ನೇರವಾಗಿ ಮಳೆ ನೀರು ನೀಡಲೇಬಾರದು.  ಶುದ್ದೀಕರಣ ಮಾಡಿಯೇ ಮರುಪೂರಣ ಮಾಡಬೇಕು.ಭೂಮಿಯ ಒಡಲು ಪರಿಶುದ್ಧ ನೀರನ್ನು ಸ್ವೀಕರಿಸುವುದು. ಅದು ಅದರ ಗುಣ.
ಗಿಡಗಳನ್ನು ಬೆಳೆಸುವುದುರಿಂದಲೇ ನೀರನ್ನು ಇಂಗಿಸುವ ಕೆಲಸ ಮಾಡುತ್ತದೆ, ಅಂದರೆ ಕೃಷಿ ಮಾಡಬೇಕು ಅಥವಾ ಗಿಡಗಳನ್ನು ನೆಡಬೇಕು. ರಬ್ಬರ್‌ ಕೂಡಾ ನೀರಿಂಗಿಸುವ ಕೆಲಸ ಮಾಡುತ್ತದೆ, ಹಾಗಾಗಿ ಯಾವ ಕೃಷಿಯಲ್ಲಿಯೂ ಸಮಸ್ಯೆಯೂ ಇಲ್ಲ. 
ಮರುಪೂರಣಕ್ಕೆ ಸಹಜ ಕ್ರಿಯೆಗೆ ಮೊದಲ ಆದ್ಯತೆ ನೀಡಿದರ ಪಿಲ್ಟರ್‌ಗಳ ಮೂಲಕ, ಕೃಷಿ ಬೆಳವಣಿಗೆ ಮೂಲಕ ಹಾಗೂ ಸಹಜ ನೀರಿನ ಹರಿಯುವ ನೀರಿನ ವೇಗಕ್ಕೆ ತಡೆಯೊಡ್ಡುವ ಮೂಲಕವೂ ನೀರು ಇಂಗಿಸಬೇಕು.
ಒಂದು ಭೂಮಿಯನ್ನು ಕಾಡು ತೆಗೆದು ಕೃಷಿ ಮಾಡಿದರೆ ಕನಿಷ್ಟ 1 ಎಕ್ರೆ ಕಾಡು ಉಳಿಸಿಕೊಳ್ಳಬೇಕು. 100 ಎಕ್ರೆ ಕೃಷಿ ಭೂಮಿಗೆ ಕನಿಷ್ಟ 10 ಎಕ್ರೆ ಕಾಡು ಉಳಿಸಿಕೊಳ್ಳಬೇಕು. ಇದು ಎಲ್ಲದರಕ್ಕೂ ಪರಿಹಾರ. ಕಾಡು ಇದ್ದರೆ ನೀರು ಇಂಗುತ್ತದೆ, ನೀರಿನ ಬಳಕೆಗೂ ಉತ್ತಮವಾಗುತ್ತದೆ. 

Advertisement
ಭೂಕುಸಿತಗಳು ಮಣ್ಣಿನ ಗುಣಮಟ್ಟದ ಮೇಲೆ ನಿರ್ಧಾರವಾಗುತ್ತದೆ. ಮೆದು ಮಣ್ಣು ಇರುವಲ್ಲಿ, ಸಾಕಷ್ಟು ಪ್ರಮಾಣದ ನೀರು ಬಿದ್ದಾಗ ಮಣ್ಣು ಒದ್ದೆಯಾಗಿ ಜಾರುತ್ತದೆ. ಮಾನವ ನಿರ್ಮಿತ ಕಾರ್ಯಗಳೇ ಇದಕ್ಕೆ ಕಾರಣ, ಮಣ್ಣಿನ ತರಗತಿ ಗಮನಿಸಿಯೇ ಕೆಲಸ ಮಾಡಬೇಕು
.

ಯಾವತ್ತೂ ನೀರಿಗೆ ಒಂದು ಗುಣ ಇರುತ್ತದೆ. ಅದು ಸಹಜ ಹರಿವಿಗೇ ಆದ್ಯತೆ ನೀಡುತ್ತದೆ. ನೀರಿನ ಹರಿವಿಗೆ ಸಂಪೂರ್ಣ ತಡೆಯಾಗಬಾರದು, ಇದು ಅಪಾಯವೂ ಆಗಿದೆ. ಅದಕ್ಕೆ ಸಂಪೂರ್ಣ ತಡೆಯಾದರೆ ಅದು ಬೇರೆ ದಾರಿ ಮಾಡಿ ಅದೇ ದಾರಿಯಾಗಿ ಹೋಗಬಹುದು. ಭೂಮಿಯ ಒಳಗಡೆಯೂ ಈ ಪ್ರಕ್ರಿಯೆ ನಡೆಯುತ್ತದೆ.  ಎಲ್ಲೆಲ್ಲಾ ಓಡಾಡುತ್ತದೆ ನೀರು, ಸಂಪೂರ್ಣವಾಗಿ ನೀರನ್ನು ಕಟ್ಟಿ ಬೇರೆಡೆಗೆ ತಿರುಗಿಸುವುದು ಸಾಧ್ಯವೇ ಇಲ್ಲ, ಮಾನವ ಬಲದಿಂದ ನಡೆದರೂ ಅದೆಲ್ಲಾ ತಾತ್ಕಾಲಿಕ. ಇದರಿಂದ ಸಂಪೂರ್ಣವಾಗಿ ಕುಸಿಯಲೂ ಬಹುದು. 
ನೀರನ್ನು ಮಳೆ ಬರುವ ಸಂದರ್ಭದಲ್ಲಿ ಯಾವುದಾದರು ರೀತಿಯಲ್ಲಿ ಸಂಗ್ರಹ ಮಾಡಬಹುದಾದರೆ ಅಗತ್ಯವಾಗಿ ಮಾಡಬೇಕು.ಇದಕ್ಕಾಗಿ ಸರ್ಕಾರದ ಯೋಜನೆಗಳು ಇದೆ, ಸರ್ಕಾರವೇ ಇದಕ್ಕೆ ಆದ್ಯತೆ ನೀಡಬೇಕು, ಸಾಮಾನ್ಯ ರೈತರೂ ಅಳವಡಿಕೆ ಮಾಡುವ ಹಾಗೆ ಯೋಜನೆ ಮಾಡಬೇಕು. ಆದಷ್ಟು ಕಡಿಮೆ ನೀರು ಬಳಕೆ ಮಾಡುವ ಕೃಷಿ, ನಗರದಲ್ಲಿ ಅತೀ ಕಡಿಮೆ ನೀರು ಬಳಕೆ ಮಾಡುವ ಮನಸ್ಥಿತಿ, ಅಗತ್ಯ ಇರುಷ್ಟೇ ನೀರಿನ ಬಳಕೆ ಮಾಡುವುದರಿಂದ ನೀರಿನ ಉಳಿವು, ಪರಿಸರದ ಉಳಿವು ಸಾಧ್ಯವಿದೆ. ಇಂದಿನ  ಸಮಸ್ಯೆಗೆ ಉತ್ತಮ ಪರಿಹಾರವೂ ಸಾಧ್ಯವಿದೆ.

Today, issues such as declining groundwater levels and landslides are prevalent. There is ongoing debate about the reasons behind these problems. The key solution to address all these issues is to conserve and expand forests. Additionally, human activities that disrupt the natural flow of water have a negative impact on the environment. While water can navigate through minor obstructions, larger blockages pose a significant threat. It is believed that these blockages contribute to many of the current environmental challenges. Ganapathi Bhat Madhurakanana from Puttur asserts that numerous human interventions are accountable for causing landslides.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

ಇದನ್ನೂ ಓದಿ

ಮಹಿಳೆಯರಿಗೆ ಕೌಶಲ್ಯ ತರಬೇತಿ ಕಾರ್ಯಾಗಾರ | ಮಹಿಳೆಯರಿಗೆ ಆರ್ಥಿಕ ಸ್ವಾವಲಂಬನೆ ಹೇಗೆ..?
October 18, 2024
6:58 AM
by: ದ ರೂರಲ್ ಮಿರರ್.ಕಾಂ
ಭೂಮಿ ಹುಣ್ಣಿಮೆ | ಅನ್ನದಾತರಿಂದ ಹೊಲ ಗದ್ದೆಗಳಲ್ಲಿ ವಿಶೇಷ ಪೂಜೆ |
October 18, 2024
6:50 AM
by: The Rural Mirror ಸುದ್ದಿಜಾಲ
ಕೊಪ್ಪಳದಲ್ಲಿ ಮಳೆಯಿಂದ ದ್ರಾಕ್ಷಿ ಬೆಳೆ ನಾಶ | ಸಂಕಷ್ಟಕ್ಕೆ ಸಿಲುಕಿದ ರೈತರು
October 18, 2024
6:39 AM
by: ದ ರೂರಲ್ ಮಿರರ್.ಕಾಂ
6 ಜಿ ತಂತ್ರಜ್ಞಾನದತ್ತ ಮುನ್ನುಗ್ಗುತ್ತಿರುವ ಭಾರತ | ಹಳ್ಳಿಗಳಿಗೂ ವೇಗ ಇಂಟರ್ನೆಟ್‌ ಏಕೆ ಅಗತ್ಯ..? | ಬಿಎಸ್‌ಎನ್‌ಎಲ್‌ ಒಳಗೆ ಕೆಲಸ ಹೇಗೆ ನಡೆಯುತ್ತಿದೆ…?
October 18, 2024
6:32 AM
by: ವಿಶೇಷ ಪ್ರತಿನಿಧಿ

You cannot copy content of this page - Copyright -The Rural Mirror