Advertisement
ಸುದ್ದಿಗಳು

ಗರ್ವಪರ್ವತ ಏರಿದವನ ಮಹಾಪತನ ಖಚಿತ – ರಾಘವೇಶ್ವರ ಶ್ರೀ

Share

ಗರ್ವಪರ್ವತವನ್ನು ಏರಿ ನಿಂತರೆ ಆತನ ಮಹಾಪತನ ನಿಶ್ಚಿತ. ಜೀವನದಲ್ಲಿ ದೈವಾನುಗ್ರಹದಿಂದ ಒಳ್ಳೆಯದಾವ ಸಂದರ್ಭದಲ್ಲಿ ಅದರ ಮದ, ದರ್ಪ, ಗರ್ವ ಬರದಂತೆ ಪದೇ ಪದೇ ಆತ್ಮಾವಲೋಕನ ಮಾಡಿಕೊಳ್ಳುತ್ತಲೇ ಇರಬೇಕು ಎಂದು ಹೊಸನಗರ ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿ ಹೇಳಿದರು.

ಮಾಣಿ ಪೆರಾಜೆಯ ಶ್ರೀರಾಮಚಂದ್ರಾಪುರ ಮಠದಲ್ಲಿ ನವರಾತ್ರ ನಮಸ್ಯಾ ಅಂಗವಾಗಿ ‘ಶ್ರೀ ಲಲಿತೋಪಾಖ್ಯಾನ’ ಪ್ರವಚನ ಮಾಲಿಕೆಯ ನಾಲ್ಕನೇ ದಿನದ ಪ್ರವಚನವನ್ನು ಶ್ರೀಗಳು ಅನುಗ್ರಹಿಸಿದರು.

ಸಮೃದ್ಧಿ, ಸಂಪತ್ತು, ಅಧಿಕಾರ ಬಂದಾಗ ನಮಗೆ ಗೊತ್ತಿಲ್ಲದಂತೆ ಅಹಂಕಾರ, ದರ್ಪ, ಗರ್ವ ಬರುತ್ತದೆ. ಇದು ಕ್ರಮೇಣ ಆತನ ಅವಸಾನಕ್ಕೆ ಕಾರಣವಾಗುತ್ತದೆ. ನಾವು ಜೀವನದಲ್ಲಿ ಏರಬೇಕು. ಆದರೆ ಅದರ ಮದ ತಲೆಗೆ ಏರದಂತೆ ಪರೀಕ್ಷೆ ಮಾಡುತ್ತಲೇ ಇರಬೇಕು. ಸೇವಕ ಎನ್ನುವ ಬದಲು ನಾಯಕ ಎನ್ನುವ ಭಾವ ಬಂದಾಗ ಆತನ ಪತನ ಆರಂಭವಾಗುತ್ತದೆ ಎಂದು ಸೂಚ್ಯವಾಗಿ ನುಡಿದರು.

ನಮ್ಮ ದೋಷ, ತಪ್ಪುಗಳನ್ನು ಹೇಳುವವರು ಬೇಕು. ಮಹಾಶಕ್ತಿ ನಮ್ಮ ಎದುರು ಇರುವಾಗ ಬಾಗಲೇಬೇಕು. ಇಲ್ಲದಿದ್ದರೆ ಅವಸಾನ ನಿಶ್ಚಿತ. ಜೀವನದಲ್ಲಿ ಪಡೆದುಕೊಳ್ಳುವುದಕ್ಕಿಂತ ಪಡೆದದ್ದನ್ನು ಉಳಿಸಿಕೊಳ್ಳುವುದು ಮುಖ್ಯ. ಗರ್ವದಿಂದ ಏನಾಗುತ್ತದೆ ಎನ್ನುವುದಕ್ಕೆ ಪುರಾಣದ ದಕ್ಷ ನಿದರ್ಶನ ಎಂದರು.

ತಪಸ್ಸಿನ ಫಲದಿಂದ ದಾಕ್ಷಾಯಿಣಿಯನ್ನು ಪುತ್ರಿಯಾಗಿ ಪಡೆದ ದಕ್ಷ ವಿನೀತನಾಗಿ ಮಗಳನ್ನು ವಿವಾಹವಾಗುವಂತೆ ಶಿವನನ್ನು ಕೋರುತ್ತಾನೆ. ಮುಂದೊಂದು ದಿನ ಶಿವನನ್ನು ತನ್ನ ಅಳಿಯ ಎಂಬ ಗರ್ವದಿಂದ ತನಗೆ ಗೌರವ ನೀಡಿಲ್ಲ ಎಂಬ ಅಹಂಕಾರದಿಂದ ತನ್ನ ಅವಸಾನ ವನ್ನು ತಾನೇ ತಂದುಕೊಂಡ. ಪ್ರತಿ ವ್ಯಕ್ತಿತ್ವದಲ್ಲಿ ಹಲವು ಮುಖಗಳಿರುತ್ತವೆ. ಶಿವ ಕೇವಲ ದಕ್ಷನ ಅಳಿಯ ಮಾತ್ರವಲ್ಲ; ಶಿವನ ಮೂರು ಸಾವಿರ ಮುಖಗಳಲ್ಲಿ ಇದು ಒಂದು ಮುಖ. ಸಭೆಗೆ ಬಂದಾಗ ಶಿವ ಎದ್ದು ನಿಲ್ಲಲಿಲ್ಲ ಎಂಬ ಕಾರಣಕ್ಕೆ ಗರ್ವದಿಂದ ದಕ್ಷ ವಿವೇಕ ಕಳೆದುಕೊಂಡ. ಅದು ಅವನ ಅವಸಾನಕ್ಕೆ ಕಾರಣವಾಯಿತು ಎಂದು ವಿಶ್ಲೇಷಿಸಿದರು.
ತಪಸ್ಸಿನಿಂದ ಪಡೆದ ಮಗಳು ಮನೆಗೆ ಬಂದಾಗ ದಕ್ಷ ಅನಾದಾರದಿಂದ ಕಾಣುತ್ತಾನೆ. ಗೌರವ ಸಿಗುತ್ತಿದ್ದ ಜಾಗದಲ್ಲಿ ಆಗುವ ಅಗೌರವ ಸಹಿಸಲು ಸಾಧ್ಯವಿಲ್ಲ. ತಂದೆಯ ಮನೆಯಲ್ಲಿ ಅನಾದಾರ ಎದುರಾದಾಗ ಹಿಂದೆ ನೀಡಿದ್ದ ಎಚ್ಚರಿಕೆಯಂತೆ, ಪ್ರಾಣಾಯಾಮದ ಬಲದಿಂದ ಯೋಗಾಗ್ನಿ ಸೃಷ್ಟಿಸಿಕೊಂಡು ಅದಕ್ಕೆ ಆಹುತಿಯಾಗುತ್ತಾಳೆ. ಶಿವನ ಸಿಟ್ಟಿಗೆ ದಕ್ಷಯಜ್ಞ ದಕ್ಷನ ಸಾವಿಗೂ ಕಾರಣವಾಯಿತು ಎಂದು ವಿವರಿಸಿದರು.

ಯೋಗಾಗ್ನಿಗೆ ದೇಹ ಸಮರ್ಪಿಸಿದ್ದ ದಾಕ್ಷಾಯಿಣಿ ಪಾರ್ವತಿಯಾಗಿ ಮತ್ತೆ ಪ್ರಕಟವಾಗುತ್ತಾಳೆ. ಶಿವಭಕ್ತಿ, ಶಿವಪ್ರೀತಿ, ಶಿವಸೇವೆಗೇ ಜೀವನವನ್ನು ಮುಡಿಪಾಗಿಟ್ಟಳು. ಸತಿಯ ವಿಯೋಗ ವೇದನೆಯಿಂದ ಶಿವನೂ ತಪಸ್ಸಿನ ಮೊರೆ ಹೋಗುತ್ತಾನೆ. ಆಗ ಪಾರ್ವತಿ ಶಿವನ ಸೇವೆಗೆ ಸಮರ್ಪಿಸಿಕೊಳ್ಳುತ್ತಾಳೆ. ತಾರಕಾಸುರ ವಧೆಗಾಗಿ ಶಿವ-ಶಿವೆಯರ ಸಂಗಮದಿಂದ ಜನಿಸುವ ಶಿವಪುತ್ರ ಜನಿಸಬೇಕು. ಈ ಮಹದುದ್ದೇಶಕ್ಕಾಗಿ ಮನ್ಮಥನ ಬಳಿಗೆ ದೇವತೆಗಳು ತೆರಳಿ ಪ್ರಾರ್ಥಿಸುತ್ತಾರೆ. ನಾರಾಯಣನ ದೃಷ್ಟಿಮಾತ್ರದಿಂದ ಸೃಷ್ಟಿಯಾದ ಮನ್ಮಥನ ಕಥೆಯನ್ನು ಹೇಳುತ್ತಾರೆ ಎಂದು ವಿವರಿಸಿದರು.

ವಸಂತ ಋತುವಿನಲ್ಲಿ ಕಬ್ಬಿನ ಬಿಲ್ಲು, ಐದು ಪುಷ್ಪಬಾಣಗಳೊಂದಿಗೆ, ಮಲಯ ಮಾರುತವೆಂಬ ರಥದಲ್ಲಿ ಶಿವನೆಡೆಗೆ ಬರುತ್ತಾನೆ. ದೇವತೆಗಳ ಕೋರಿಕೆಯಂತೆ ಶಿವ ತಪಸ್ಸು ಮಾಡುತ್ತಿದ್ದ ಜಾಗಕ್ಕೆ ತೆರಳಿ ಶಿವನಿಗೆ ಸುಕೋಮಲ ಪುಷ್ಪಬಾಣ ಪ್ರಯೋಗಕ್ಕೆ ಸಮಯ ಕಾಯುತ್ತಿರುತ್ತಾನೆ. ಇದೇ ಸಂದರ್ಭದಲ್ಲಿ ಪಾರ್ವತಿ ಮಂದಾಕಿನಿ ಕಮಲದ ಬೀಜದಿಂದ ಮಾಡಿದ ಮಾಲೆಯನ್ನು ಶಿವನಿಗೆ ಅರ್ಪಿಸುತ್ತಾಳೆ. ಇದನ್ನೇ ಸುಸಮಯ ಎಂದುಕೊಂಡು ಮನ್ಮಥ ಪುಷ್ಪಬಾಣ ಪ್ರಯೋಗಿಸುತ್ತಾನೆ. ಈ ಮೂಲಕ ತನ್ನ ವಿನಾಶವನ್ನು ತಾನೇ ತಂದುಕೊಳ್ಳುತ್ತಾನೆ ಎಂದು ಬಣ್ಣಿಸಿದರು.

ಕಾಮಬಾಣದಿಂದ ಸ್ವಲ್ಪಮಟ್ಟಿಗೆ ವಿಚಲಿತನಾದ ಶಿವ, ಇದಕ್ಕೆ ಕಾರಣನಾದ ಮನ್ಮಥನ ಮೇಲೆ ಕೋಪಗೊಂಡು ಮೂರನೇ ಕಣ್ಣು ತೆರೆದ. ಕಣ್ಣಿನಿಂದ ಹೊರಬಂದ ಕ್ರೋಧಾಗ್ನಿ ಕಾಮನನ್ನು ದಹಿಸುತ್ತದೆ. ಸರಿ ಅಥವಾ ತಪ್ಪು ಮಾಡಿದವನಿಗೆ ಮಾತ್ರವಲ್ಲದೇ ಅದಕ್ಕೆ ಕಾರಣರಾದ ಎಲ್ಲರಿಗೂ ಅದರ ಫಲ ಸಿಗುತ್ತದೆ. ತಪ್ಪು ಮಾಡಿದವನು, ಮಾಡಿಸಿದವನು, ಪ್ರೇರಣೆ ಕೊಟ್ಟವನು, ಅನುಮೋದಿಸಿದವನು ಹೀಗೆ ನಾಲ್ಕು ವಿಧದ ಮಂದಿ ಫಲ ಪಡೆಯುತ್ತಾರೆ. ದೇವತೆಗಳು ಮನ್ಮಥನಿಗೆ ಪ್ರೇರಣೆ ಕೊಟ್ಟದ್ದಕ್ಕಾಗಿ 60 ವರ್ಷಗಳ ಕಾಲ ಭಂಡಾಸುರನ ಉಪಟಳವನ್ನು ಎದುರಿಸುವ ಶಿಕ್ಷೆ ಸಿಕ್ಕಿತು. ಆತನ ವಧೆಗೆ ತ್ರಿಪುರಸುಂದರಿ ಆವೀರ್ಭವಿಸುತ್ತಾಳೆ ಎಂದು ಕಥಾಭಾಗ ಪೂರ್ಣಗೊಳಿಸಿದರು.

ಉಂಡೆಮನೆ ವಿಶ್ವೇಶ್ವರ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಭರತ್ ಶೆಟ್ಟಿ, ಉದ್ಯಮಿ ಸತ್ಯಶಂಕರ ದಂಪತಿಗಳು, ಜಿಲ್ಲಾಪಂಚಾಯತ್ ಮಾಜಿ ಉಪಾಧ್ಯಕ್ಷೆ ಶೈಲಜಾ ಭಟ್ ಕೆ.ಟಿ, ಮಾಣಿಮಠ ಸಮಿತಿ ಅಧ್ಯಕ್ಷ ಹಾರಕೆರೆ ನಾರಾಯಣ ಭಟ್, ಹವ್ಯಕ ಮಹಾಮಂಡಲ ಗೌರವ ಕಾರ್ಯದರ್ಶಿ ನಾಗರಾಜ ಭಟ್ ಪೆದಮಲೆ, ಪ್ರಧಾನ ಕಾರ್ಯದರ್ಶಿ ಉದಯಶಂಕರ ಮಿತ್ತೂರು, ವಿದ್ಯಾರ್ಥಿ ಪ್ರಧಾನರಾದ ಈಶ್ವರ ಪ್ರಸಾದ್ ಕನ್ಯಾನ, ಮಾತೃತ್ವಮ್ ಅಧ್ಯಕ್ಷೆ ಈಶ್ವರಿ ಬೇರ್ಕಡವು, ಮಾತೃವಿಭಾಗದ ಪ್ರಮುಖರಾದ ವೀಣಾ ಗೋಪಾಲಕೃಷ್ಣ ಪುಳು, ಉಪ್ಪಿನಂಗಡಿ ಮಂಡಲ ಕಾರ್ಯದರ್ಶಿ ಮಹೇಶ್ ಕುದುಪುಲ, ಮುಳ್ಳೇರಿಯಾ ಮಂಡಲ ಅಧ್ಯಕ್ಷ ಕೃಷ್ಣಮೂರ್ತಿ ಮಾಡಾವು, ಮತ್ತಿತರರು ಉಪಸ್ಥಿತರಿದ್ದರು.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಕಸದ ತೆಂಗಿನಕಾಯಿಯೂ ಈಗ ರೈತರ ಸಂಪತ್ತು…! ಭುವನೇಶ್ವರದ ‘ವೇಸ್ಟ್ ಟು ವೆಲ್ತ್’ ಮಾದರಿ

ಭುವನೇಶ್ವರದಲ್ಲಿ ಪ್ರತಿದಿನ ಸಾವಿರಾರು ತೆಂಗಿನಕಾಯಿ ತ್ಯಾಜ್ಯವನ್ನು ಕೊಕೊಪೀಟ್, ಹಗ್ಗ ಹಾಗೂ ಚಾಪೆಗಳಾಗಿ ಪರಿವರ್ತಿಸಿ…

12 hours ago

ರಾಜ್ಯದಲ್ಲಿ ಬರದ ಛಾಯೆ- ರೈತರಿಗೆ ಎಕರೆಗೆ ₹50 ಸಾವಿರ ಪರಿಹಾರ ನೀಡಿ

ರಾಜ್ಯದಲ್ಲಿ ಮಳೆಯ ಕೊರತೆಯಿಂದ ಬರದಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ರೈತರಿಗೆ ಎಕರೆಗೆ ₹50 ಸಾವಿರ…

12 hours ago

ಹುಲಿ-ಚಿರತೆ ಹಾವಳಿ ನಿಯಂತ್ರಣಕ್ಕೆ ಆಗ್ರಹ – ಚಾಮರಾಜನಗರದಲ್ಲಿ ಅರಣ್ಯ ಇಲಾಖೆ ವಿರುದ್ಧ ರೈತ ಸಂಘಟನೆಗಳ ಪ್ರತಿಭಟನೆ

ಚಾಮರಾಜನಗರ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಹುಲಿ-ಚಿರತೆ ಹಾವಳಿಯಿಂದ ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿ ರೈತ…

12 hours ago

ಮುಂಗಾರು ದುರ್ಬಲ: ಯಾದಗಿರಿ ರೈತರಿಗೆ ಕೃಷಿ ಇಲಾಖೆಯ ಮಹತ್ವದ ಸಲಹೆ

ಯಾದಗಿರಿ ಜಿಲ್ಲೆಯಲ್ಲಿ ಮುಂಗಾರು ದುರ್ಬಲವಾಗಿರುವ ಹಿನ್ನೆಲೆಯಲ್ಲಿ ತೇವಾಂಶ ಸಂರಕ್ಷಣೆ, ಬೀಜೋಪಚಾರ ಹಾಗೂ ಕಡಿಮೆ…

12 hours ago

ಬ್ರಿಟನ್‌ನಲ್ಲಿ ಉರಿ ಬಿಸಿಲು – ಎರಡು ತಿಂಗಳಲ್ಲಿ 2,700ಕ್ಕೂ ಹೆಚ್ಚು ಸಾವು..! ಹವಾಮಾನ ಬದಲಾವಣೆಯಿಂದ ಶೇ.40ಕ್ಕೂ ಹೆಚ್ಚು ಜೀವಹಾನಿ ಎಂದ ಅಧ್ಯಯನ

ಬ್ರಿಟನ್‌ನಲ್ಲಿ ಮೇ–ಜೂನ್ ಉಷ್ಣ ಅಲೆಗಳಿಂದ 2,700ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಈ ಸಾವುಗಳಲ್ಲಿ…

12 hours ago

ನೈಸರ್ಗಿಕ ಕೃಷಿಗೆ ರಾಜಸ್ಥಾನದ ದೊಡ್ಡ ಹೆಜ್ಜೆ : 32 ಸಂಸ್ಥೆಗಳೊಂದಿಗೆ ಒಪ್ಪಂದ, ರೈತರಿಗೆ ತಂತ್ರಜ್ಞಾನ – ಮಾರುಕಟ್ಟೆ ಬೆಂಬಲ

ನೈಸರ್ಗಿಕ ಕೃಷಿ ಮತ್ತು ಕೃಷಿ ತಂತ್ರಜ್ಞಾನ ಅಭಿವೃದ್ಧಿಗೆ ರಾಜಸ್ಥಾನ ಸರ್ಕಾರ 32 ಸಂಸ್ಥೆಗಳೊಂದಿಗೆ…

20 hours ago