NETTARU……ನೆಟ್ಟಾರು…ನೆಟ್ಟಾರು… | ಹಿರಿಯ ಪತ್ರಕರ್ತ ಶಿವಸುಬ್ರಹ್ಮಣ್ಯ ಕಲ್ಮಡ್ಕ ಬರೆಯುತ್ತಾರೆ…. |

July 28, 2022
9:14 AM
ಕಳೆದ ಎರಡು ದಿನಗಳಿಂದ ದಕ್ಷಿಣ ಕನ್ನಡ ಜಿಲ್ಲೆ, ಸುಳ್ಯ ಅದರಲ್ಲೂ ಬೆಳ್ಳಾರೆ, ನೆಟ್ಟಾರು ಹೆಸರುಗಳು ಸದ್ದು ಮಾಡುತ್ತಿವೆ. ಪ್ರತೀ ಮನಸ್ಸಿನಲ್ಲೂ ನೋವು ಇದೆ. ಈ ಎಲ್ಲದರ ನಡುವೆ ಪರಿಸ್ಥಿತಿಯ ಬಗ್ಗೆ ಹಿರಿಯ ಪತ್ರಕರ್ತ ಶಿವಸುಬ್ರಹ್ಮಣ್ಯ ಕಲ್ಮಡ್ಕ ಬರೆದಿದ್ದಾರೆ…

ಕಲ್ಮಡ್ಕ- ಬಾಳಿಲ- ಬೆಳ್ಳಾರೆ- ನೆಟ್ಟಾರು … ಇಲ್ಲಿ ಓಡಾಡಿ ಬೆಳೆದವನು ನಾನು. ರಂಗಚಟುವಟಿಕೆ, ಕವನ ಬರೆಯುವುದು, ಹೊಳೆಯಲ್ಲೇ ಈಜುವುದು, ಗುಡ್ಡ ಹತ್ತುವುದು, ಪುಸ್ತಕ ಓದುವ ಹವ್ಯಾಸದ ಜತೆಗೆ ನೆಂಟರ ಮನೆ, ಟೆನ್ನಿಸ್ ಬಾಲ್ ಕ್ರಿಕೆಟ್‌ ಆಡಲು ಬಾಲ್ಯದಲ್ಲಿ ಇದುವೇ ನಮಗೆ ಜಗತ್ತು. ರಜೆ ಬಂತೆಂದರೆ ನೆಟ್ಟಾರಲ್ಲಿ ಇಳಿದು ಕೋಡಿಬೈಲು ಸತ್ಯನ ಮನೆಗೆ. ಅಲ್ಲೇ ಮೂರ್ನಾಲ್ಕು ದಿನ ಮೊಕ್ಕಾಂ. ಪಕ್ಕದಲ್ಕೇ ನೆಂಟರ ಮನೆ ಚಾವಡಿಬಾಗಿಲು ಎಂಬಲ್ಲಿಗೂ ಭೇಟಿ.

ನೆಟ್ಟಾರು ಅಜ್ಜ ಅಲ್ಲೇ ಇದ್ದರೂ ಅವರನ್ನು ಭೇಟಿ ಮಾಡಲು ಆಗ ಭಯ. ಅವರಿಗೆ ಮಂಡೆ ಸರಿ ಇಲ್ಲ ಎಂಬ ವದಂತಿ ಹಬ್ಬಿತ್ತು. ಒಬ್ಬ ಮಹಾನ್ ಚಿಂತಕನ ಒಡನಾಟ ಬಾಲ್ಯದಲ್ಲಿ ತಪ್ಪಿತಲ್ಲ ಎಂಬ ವಿಷಾದ ಈಗಲೂ ಇದೆ.

ನೆಟ್ಟಾರು ಕಟ್ಟದಲ್ಲಿ ( ವೆಂಟೆಡ್ ಡ್ಯಾಮ್) ಮೊಸಳೆ ಇದೆಯಂತೆ ಎಂಬ ಮಾತೇ ಬೆವರು ಇಳಿಸುತ್ತಿತ್ತು. ನೆಂಟರ ಮನೆಯಿಂದ ನೆಟ್ಟಾರಿಗೆ ನಡೆದೇ ಬಂದು, ಬಸ್ಸಿಗೆ ಕಾಯೋದು. ಬಸ್ ಬರದೇ ಇದ್ದಾಗ ನಡೆದೇ ಬೆಳ್ಳಾರೆಗೆ.‌ ಅಲ್ಲೂ ಕಾದು ಬಸ್ ಬಾರದೇ ಇದ್ದರೆ ಆಟೋದಲ್ಲಿ ಬಾಳಿಲಕ್ಕೆ. ಅಲ್ಲಿಂದ ಮನೆಗೆ ಪಾದಯಾತ್ರೆ!

ಕಾಲ ಬದಲಾಗಿದೆ. ಎಲ್ಲ ಕಡೆ ಬೈಕ್, ಕಾರು ಓಡಾಟ ಜೋರಾಗಿದೆ. ಹೊಸಪೀಳಿಗೆ ಬಿರುಗಾಳಿಯಂತೆ ಕಾಣುತ್ತಿದ್ದಾರೆ. ಅವರ ಹವ್ಯಾಸಗಳು ಯಾವುವು ತಿಳಿಯುತ್ತಿಲ್ಲ. ಜನಸಂಖ್ಯೆಯೂ ದುಪ್ಪಟ್ಟಾಗಿರುವುದರಿಂದ ಈಗ ರ‌್ಯಾಲಿ, ಸಮಾವೇಶ ಗಳಲ್ಲಿ ಜನಸಾಗರ ಇರುತ್ತದೆ. ಜನಾರ್ಧನ ಪೂಜಾರಿ, ಎ.ಕೆ.ಸುಬ್ಬಯ್ಯ, ಕರಂಬಳ್ಳಿ, ರಾಮ ಭಟ್ ಮೊದಲಾದವರು ಸೀಮಿತ ಸಂಖ್ಯೆಯ ಜನರನ್ನು ಉದ್ದೇಶಿಸಿ ಭಾಷಣ ಮಾಡಿದ್ದನ್ನೂ ನೋಡಿದ್ದೇನೆ. ಪೂಜಾರಿಯವರು ಕಲ್ಮಡ್ಕದಲ್ಲಿ ಸೇರಿದ್ದ ಸುಮಾರು ಮೂವತ್ತು ಮಂದಿಯನ್ನು ಉದ್ದೇಶಿಸಿ ಮಾಡಿದ ಭರ್ಜರಿ ಭಾಷಣವನ್ನು ವಿಧಿವಿಲಾಸ ಹೋಟೇಲ್ ಪಕ್ಕ ನಿಂತು ನೋಡಿದ ನೆನಪು ಇನ್ನೂ ಇದೆ.

ನೆಟ್ಟಾರು ಈಗ ತುಂಬ ನೆನಪಾಗುತ್ತಿದೆ. ಅಲ್ಲಿಯ ಯುವಕ ನಮ್ಮನ್ನು ಅಗಲಿದ್ದಾನೆ. ಸಂಘ ಸಂಸ್ಥೆಯೇ ಇರಲಿ, ಯಾವುದೇ ಪಕ್ಷಗಳೇ ಇರಲಿ, ಸಾಮಾಜಿಕ ಚಟುವಟಿಕೆಯಲ್ಲಿ ನಿರತರಾದವರ ಹತ್ಯೆ ನಡೆದರೆ , ಆ ಘಟನೆ ಸ್ಥಳಿಯ ಪರಿಸರದ ಜನರ ನೆಮ್ಮದಿಯ ಜೀವನಕ್ಕೆ ಭಂಗ ತರುವಂತಾದ್ದು.

ವೈಮನಸ್ಸೇ ತುಂಬಿದರೆ ನೆಟ್ಟಾರಿನ ಆಚೆ ಮಾಡಾವು, ತಿಂಗಳಾಡಿ, ಪರ್ಪುಂಜ, ದರ್ಬೆ, ನೆಟ್ಟಾರಿನ ಈಚೆ ಬೆಳ್ಳಾರೆ, ಪೆರುವಾಜೆ, ಅಯ್ಯನಕಟ್ಟೆ, ಬಾಳಿಲ, ನಿಂತಿಕಲ್ಲು, ಎಣ್ಮೂರು, ಮುಪ್ಪೇರಿಯ, ಪಂಜ, ಕರಿಕಳ, ಏನೆಕಲ್ಲು, ಹರಿಹರ ಪಲ್ಲತಡ್ಕ, ಗುತ್ತಿಗಾರು, ಕೊಲ್ಲಮೊಗ್ರ…. .ಸಮೀಪದಲ್ಲೇ ಇರುವ ಕಲ್ಮಡ್ಕ, ಕುಕ್ಕುಜಡ್ಕ, ಚೊಕ್ಕಾಡಿ, ಪಂಬೆತ್ತಾಡಿ, ಕೋಟೆ ಮುಂಡುಗಾರು, ಮುರುಳ್ಯ ಈ ಪ್ರದೇಶಗಳೂ ಬೂದಿ ಮುಚ್ಚಿದ ಕೆಂಡ ಆಗುವುದರಲ್ಲಿ ಸಂಶಯವೇ ಇಲ್ಲ. ಈಗಲೇ ಎಚ್ಚೆತ್ತುಕೊಳ್ಳಬೇಕು. ಕಾನೂನು ಸುವ್ಯವಸ್ಥೆ ಇನ್ನೂ ಗಟ್ಟಿಯಾಗಬೇಕು.

ಬರಹ :
ಶಿವಸುಬ್ರಹ್ಮಣ್ಯ ಕಲ್ಮಡ್ಕ

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ರಬ್ಬರ್ ತೋಟ ಹಸಿರಾಗಿರಬಹುದು… ಆದರೆ ಕಾಡಿಗೆ ಪರ್ಯಾಯವಲ್ಲ…! ಮಲೇಷ್ಯಾ ಅಧ್ಯಯನ ವರದಿ
July 27, 2026
6:55 AM
by: ದ ರೂರಲ್ ಮಿರರ್.ಕಾಂ
ಅಡುಗೆ ಎಣ್ಣೆ ಆಮದು 7% ಏರಿಕೆ – ಭಾರತ ಇನ್ನೂ ಆಮದು ಅವಲಂಬಿತ
July 27, 2026
6:47 AM
by: ದ ರೂರಲ್ ಮಿರರ್.ಕಾಂ
ಕೇರಳದಲ್ಲಿ ಪ್ರತಿವರ್ಷ ₹1,200 ಕೋಟಿ ಮೌಲ್ಯದ ಹಲಸು ವ್ಯರ್ಥ..! ಮೌಲ್ಯವರ್ಧನೆಗೆ ಸರ್ಕಾರ ಮುಂದಾಗಲಿ ಎಂಬ ಒತ್ತಾಯ
July 27, 2026
6:33 AM
by: ದ ರೂರಲ್ ಮಿರರ್.ಕಾಂ
ಅವೈಜ್ಞಾನಿಕ ಮಳೆ ವರದಿ ಶೈಕ್ಷಣಿಕ ವಲಯಕ್ಕೆ ತೊಂದರೆ – ಹವಾಮಾನ ಮುನ್ಸೂಚನೆ ಕುರಿತು ಎಸ್.ಎಲ್. ಭೋಜೆಗೌಡ ಕಳವಳ
July 26, 2026
3:04 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror