ವರ್ಷದ ಹಿಂದೆ ಅಡಿಕೆ ಹಳದಿ ಎಲೆ ರೋಗದ ನಿಯಂತ್ರಣಕ್ಕಾಗಿ ರೋಗ ನಿರೋಧಕ ತಳಿ ಅಭಿವೃದ್ಧಿ ಪಡಿಸ ಬೇಕು ಎಂಬ ನಮ್ಮಗಳ ಬೇಡಿಕೆಯನ್ನು ಸಂಶೋಧನಾಲಯವೂ ಮಾನ್ಯ ಮಾಡಿತ್ತು.ಅದಕ್ಕಾಗಿ ಸೂಕ್ತ ಯೋಜನೆಯನ್ನೂ ರೂಪಿಸಿತ್ತು.ಯೋಜನೆಯ ಯಶಸ್ಸು ವಿಜ್ಞಾನಿಗಳೊಂದಿಗೆ ಕೃಷಿಕರೂ ಒಡಗೂಡಿದರೆ ಮಾತ್ರ ಸಿಗುವಂತಿತ್ತು.ಅದಕ್ಕಾಗಿ ಕೃಷಿಕರ ಸಭೆಯನ್ಬು ಮರ್ಕಂಜ ಮತ್ತು ಕಲ್ಲುಗುಂಡಿಯಲ್ಲಿ ನಡೆಸಲಾಯ್ತು. ………ಮುಂದೆ ಓದಿ……..
ಯೋಜನೆಯ ವಿವರ ಕೇಳಿದಾಗ ಇದರ ಅನುಷ್ಟಾನ ಸಾಧ್ಯತೆ ಇರುವುದು ಸಂಪಾಜೆ ಮತ್ತು ಚೆಂಬು ಗ್ರಾಮಗಳಲ್ಲಿ ಮಾತ್ರ ಎಂಬ ತೀರ್ಮಾನಕ್ಕೆ ನಾವೆಲ್ಲರೂ ಬಂದಿದ್ದೆವು.ಏಕೆಂದರೆ ಸಂದೇಹಾತೀತವಾಗಿ ನೈಸರ್ಗಿಕವಾದ ಹಳದಿ ಎಲೆ ರೋಗ ತಡೆ ಗಿಡ ಅಲ್ಲಷ್ಟೇ ಗುರುತಿಸ ಬಹುದು .ಅದೇ ಗಿಡಗಳನ್ಬು ವೈಜ್ಞಾನಿಕ ಮಾನದಂಡಗಳಿಗೆ ಅನುಗುಣವಾಗಿ ಅಭಿವೃದ್ಧಿ ಪಡಿಸುವುದು ನಮ್ಮ ಯೋಜನೆ. ಒಮ್ಮೆ ಹಳದಿ ಎಲೆ ರೋಗ ತಡೆ ಗಿಡ ಬಿಡುಗಡೆ ಗೊಂಡರೆ ಅದಕ್ಕೆ ಬರಬಹುದಾದ ಬೇಡಿಕೆ ಎಷ್ಟಿರ ಬಹುದೆಂಬ ಅಂದಾಜೂ ಇತ್ತು.ಪ್ರಥಮಹಂತದಲ್ಲಿ ಹತ್ತು ಸಾವಿರದಷ್ಟಾದರೂ ಹಳದಿ ಎಲೆ ರೋಗ ತಡೆ ಗಿಡಗಳು ಕೃಷಿಕರಿಗೆ ಬಿಡುಗಡೆ ಆದರಷ್ಟೇ ಬೇಡಿಕೆಯನ್ನು ನಿಯಂತ್ರಿಸಲು ಸಾಧ್ಯ ಎಂಬುದು ನಮ್ಮ ಊಹೆಯಾಗಿತ್ತು.ಆ ಕಾರಣಕ್ಕೆ ಬೃಹತ್ ಗಾತ್ರದಲ್ಲೇ ಯೋಜನೆಯ ಅನುಷ್ಟಾನ ಆಗಬೇಕು ಎಂಬುದು ನಮ್ಮ ಅಪೇಕ್ಷೆಯಾಗಿತ್ತು.ಸಂಶೋಧನಾಲಯಕ್ಕೆ ಸಾಕಷ್ಟು ಹಣಕಾಸಿನ ಬೆಂಬಲ ಸಿಕ್ಕರೆ ಮಾತ್ರ ಇದು ಸಾಧ್ಯ ಅಂತ ನಮಗೆ ಮಾಹಿತಿ ಸಿಕ್ಕಿತ್ತು.
ನನ್ನಲ್ಲೊಂದು ಮೌಢ್ಯ ಇತ್ತು. ಸ್ವಾರ್ಥ ಇಲ್ಲದ ,ಸಮಾಜಮುಖಿಯಾದ ಕೆಲಸಕ್ಕೆ ಯಾವುದೇ ಅಡ್ಡಗಾಲೂ ಬೀಳದು ಅಂತ.ಅಡಿಕೆ ಕೃಷಿ ಎಲ್ಲರಿಗೂ ಸೇರಿದ್ದು.ಎಲ್ಲ ಪಕ್ಷೀಯರಲ್ಲೂ ಅಡಿಕೆ ಕೃಷಿಕರು ಇದ್ದಾರೆ. ಎಲ್ಲಾ ಪಕ್ಷದವರೂ ಹಳದಿ ಎಲೆ ರೋಗದಿಂದ ಪೀಡಿತರಾಗಿದ್ದಾರೆ ಮತ್ತು ಬಸವಳಿದಿದ್ದಾರೆ. ಆದ್ದರಿಂದ ಸರ್ವ ಪಕ್ಷೀಯರ ಬೆಂಬಲ ಈ ಯೋಜನೆಗೆ ನಿಶ್ಚಿತ ಅಂತ ಭ್ರಮಿಸಿದ್ದೆ.ಏನಾದರೂ ಸಂದೇಹ ಇದ್ದರೆ ಯೋಜನೆಯ ಯಶಸ್ಸಿನ ಬಗ್ಗೆ ಮಾತ್ರ ಇರುವಂತಹದ್ದು. ಅದನ್ಜು ವೈಜ್ಞಾನಿಕ ಮಾಹಿತಿಗಳ ಮುಖಾಂತರ ಬಗೆಹರಿಸಿಕೊಳ್ಳಬಹುದು ಎಂಬ ಹುಂಬ ವಿಶ್ವಾಸ ನನ್ನಲ್ಲಿತ್ತು. ಕಲ್ಲುಗುಂಡಿಯಲ್ಲಿ ನಡೆದಿದ್ದ ಸಭೆಯಲ್ಲಿ ಎಲ್ಲ ಪಕ್ಷೀಯರೂ ಇದ್ದರು.ಪ್ರತಿಯೋರ್ವರೂ ತಮ್ಮ ಬೆಂಬಲವನ್ನೂ ಸೂಚಿಸಿದರು.ಸಭೆಯ ಮುಕ್ತಾಯದ ಬಳಿಕ ಅನೌಪಚಾರಿಕ ಮಾತುಕತೆಗಳು ನಡೆದಿದ್ದವು. ಆಗ ನಾನು ಹೇಳಿದ್ದೆ.’ ರಾಜಕೀಯವನ್ನು ದೂರ ಇಟ್ಟು ಯೋಜನೆಯನ್ನು ಮುನ್ನಡೆಸುವ ಯತ್ನ ಮಾಡೋಣ’ ಅಂತ.
ಅಲ್ಲಿನ ಕಾಂಗ್ರೆಸ್ ಪಕ್ಷದ ನೇತಾರರು ಉತ್ತರಿಸಿದರು,’ ರಾಜಕೀಯ ದೂರ ಇಟ್ಟರೆ ಸರಕಾರದಿಂದ ಯಾವುದೇ ನೆರವೂ ಸಿಗದು.ಆದ್ದರಿಂದ ನೇರವಾಗಿ ಭಾಜಪದ ಹೆಸರಲ್ಲೇ ಮುನ್ನಡೆಯಿರಿ.ಇದು ಪಕ್ಷದ ಕಾರ್ಯಕ್ರಮವೇ ಆಗಲಿ.ಅವರುಗಳು ರಾಜಕೀಯ ಲಾಭ ತೆಗೆದುಕೊಳ್ಳಲಿ.ಆದರೂ ಈ ಹಳದಿ ಎಲೆ ರೋಗಕ್ಕೊಂದು ಪರಿಹಾರ ಸಿಕ್ಕಲಿ.’
ಮುಂದುವರೆದು ಹೇಳಿದರು,’ ಅಲ್ಲೋರ್ವರು ಬಲಿಷ್ಟರಿದ್ದಾರೆ.ರಾಮಚಂದ್ರನಂತಹವರು.ಅವರನ್ನು ಒಪ್ಪಿಸಿದರೆ ಮತ್ತೆಲ್ಲಾ ಸುಲಭವಾದೀತು.ಅವರನ್ನು ಮಾತನಾಡಿಸಿ’ ಅಂತ. ಬಲಿಷ್ಟರೊಡನೆ ಮಾತುಕತೆಗೆ ಸಮಯಾವಕಾಶ ಕೇಳಿದೆ.ದಿನ,ಸಮಯ ನಿರ್ಧಾರವಾಯ್ತುಸುಳ್ಯದಲ್ಲಿ ಮಾತುಕತೆ ನಡೆಯಿತು. ಬೇರಾರೂ ಇಲ್ಲ.ನಾವು ಮೂವರು ಮಾತ್ರ.ಬಲಿಷ್ಟರು ಸಂಪೂರ್ಣ ಸಹಕಾರದ ಭರವಸೆ ನೀಡಿದರು.ಅವರಿಗಿದ್ದ ಏಕೈಕ ಸಂದೇಹ ಎಂದರೆ ತಮ್ಮ ಮಾತನ್ನು ತೋಟಗಾರಿಕಾ ಸಚಿವರು ಎಷ್ಟರ ಮಟ್ಟಿಗೆ ಮಾನ್ಯ ಮಾಡ್ತಾರೆ ಎಂಬುದು ಮಾತ್ರ ಆಗಿತ್ತು.
ಸುಳ್ಯದ ಶಾಸಕರಿಗೆ ನಮ್ಮೆದುರಲ್ಲೇ ಫೋನ್ ಮಾಡಿದರು.ತೋಟಗಾರಿಕಾ ಸಚಿವರೊಡನೆ ಮಾತುಕತೆಗೆ ಸಮಯಾವಕಾಶ ನಿಗದಿಸಲು ಸೂಚಿಸಿದರು.ಐದು ನಿಮಿಷದ ಒಳಗಡೆ ಶಾಸಕರು ಉತ್ತರಿಸಿ ಮುಂದಿನ ಬುಧವಾರ ತೋಟಗಾರಿಕಾ ಸಚಿವರೊಡನೆ ಸುಳ್ಯದ ಕೃಷಿಕರ ತಂಡದೊಡನೆ ಭೇಟಿಯನ್ನು ನಿಗದಿಸಲಾಗಿದೆ ಎಂದರು.ಯಾರೆಲ್ಲ ಹೋಗುವುದು,ಹೇಗೆ ,ಯಾವಾಗ ಹೋಗುವುದು ಎಂಬುದನ್ನು ಮುಂದಕ್ಕೆ ನಿರ್ಧರಿಸೋಣ ಎಂಬಲ್ಲಿಗೆ ನಮ್ಮ ಅಂದಿನ ಸಭೆ ಮುಕ್ತಾಯ ಕಂಡಿತ್ತು.
ಮುಂದಿನ ಬುಧವಾರ ಕಳೆಯಿತು.ಸುಳ್ಯದ ಪ್ರಸಿದ್ದ ವಾರ ಪತ್ರಿಕೆಯ ಮುಖಾಂತರ ಮಾಹಿತಿ ಸಿಕ್ಕಿತು. ಸುಳ್ಯದ ಸುಮಾರು ಹತ್ತು ಜನ ಕೃಷಿಕರ ತಂಡ ಹಿಂದಿನ ಬುಧವಾರ ಶಾಸಕರೊಡಗೂಡಿ ತೋಟಗಾರಿಕಾ ಸಚಿವರನ್ನು ಭೇಟಿಯಾಗಿದ್ದರು.ಭೇಟಿಯಲ್ಲಿ ಕೃಷಿಕರ ತಂಡ ಸಚಿವರ ಜೊತೆ ಅಡಿಕೆಯ ಹಳದಿ ಎಲೆ ರೋಗ ಪೀಡಿತ ಕೃಷಿಕರುಗಳಿಗೆ ಆರ್ಥಿಕ ಪರಿಹಾರ ಒದಗಿಸಲು ನೂರು ಕೋಟಿ ರುಪಾಯಿಯ ಬೇಡಿಕೆ ಮುಂದಿಟ್ಟಿತ್ತು.ಹಳದಿ ಎಲೆ ರೋಗ ತಡೆ ಗಿಡಗಳ ಬಗೆಗೆ ಬೇಡಿಕೆ ಮುಂದೆ ಇಟ್ಟಿರಲಿಲ್ಲ. ಅಲ್ಲಿಗೆ ಈ ಪ್ರಯತ್ನ ಕೊನೆಗೊಂಡಿತು.ಆ ತಂಡ ಮುಂದಿಟ್ಟಿದ್ದ ನೂರು ಕೋಟಿ ರೂಪಾಯಿಯ ಮನವಿಯನ್ನು ಅವರುಗಳು ಹೊರಗಡೆಗೆ ಹೋದಕೂಡಲೇ ಮಾನ್ಯ ತೋಟಗಾರಿಕಾ ಸಚಿವರು ಏನು ಮಾಡಿದರು ಗೊತ್ತುಲ್ಲ, ಏಕೆಂದರೆ, ಮತ್ತೆಂದೂ ಅದರ ಬಗ್ಗೆ ಯಾರೂ ಮಾತನಾಡಲಿಲ್ಲ….!
ಕರ್ನಾಟಕದ ಬಹುತೇಕ ಭಾಗಗಳಲ್ಲಿ ಸದ್ಯ ಬಿಸಿಲು ಹಾಗೂ ಅಲ್ಲಲ್ಲಿ ಮೋಡದ ವಾತಾವರಣ ಮುಂದುವರಿಯುವ…
ಇಂಪೀರಿಯಲ್ ಕಾಲೇಜ್ ಲಂಡನ್ನ ಅಧ್ಯಯನದ ಪ್ರಕಾರ, precision fermentation ಮೂಲಕ ತಯಾರಿಸುವ ಹಾಲಿಗೆ…
ಅಡಿಕೆ ಧಾರಣೆ ಏರಿಳಿತ ಅಡಿಕೆ ಬೆಳೆಗಾರರನ್ನು ಚಿಂತೆಗೀಡು ಮಾಡುತ್ತಿದೆ. ಇದಕ್ಕೆ ಭಾರತ ಮಾತ್ರವಲ್ಲ…
ವಾಯುಭಾರ ಕುಸಿತಗಳು ಚಂಡಮಾರುತವಾಗಿ ಬಲಗೊಳ್ಳಲು ಸಮುದ್ರದ ಉಷ್ಣತೆ ಮಾತ್ರವಲ್ಲದೆ ತೇವಾಂಶ, ವಿಂಡ್ ಶಿಯರ್…
ಕರ್ನಾಟಕದ ಕರಾವಳಿ ಹಾಗೂ ಮಲೆನಾಡಿನಲ್ಲಿ ಮುಂದಿನ ಕೆಲವು ದಿನ ಬಿಸಿಲಿನ ವಾತಾವರಣ ಹೆಚ್ಚಾಗುವ…
2025-26ರಲ್ಲಿ ಕ್ಯಾಂಪ್ಕೊ ₹3,735 ಕೋಟಿ ವಹಿವಾಟು ಮತ್ತು ₹49.62 ಕೋಟಿ ಲಾಭ ದಾಖಲಿಸಿದ್ದು,…