ರೂರಲ್ ಮಿರರ್ ಡಿಜಿಟಲ್ ಪತ್ರಿಕೆಯನ್ನು ಓದುತ್ತಿದ್ದೆ. ಗುತ್ತಿಗಾರಿನಲ್ಲಿ ನಡೆದ ಅಡಿಕೆ ಎಲೆ ಚುಕ್ಕಿ ರೋಗ ಕಾರಣ ಮತ್ತು ಪರಿಹಾರ ಈ ಬಗ್ಗೆ ವಿಜ್ಞಾನಿ ಡಾ.ಭವಿಷ್ಯ ಅವರ ಭಾಷಣದ ಧ್ವನಿಮುದ್ರಿಕೆಯನ್ನು ಪ್ರಕಟಿಸಿದ್ದರು. ಒಂದು ಗಂಟೆಯಿಂದ ಜಾಸ್ತಿ ಹೊತ್ತು ಬಹಳ ಸುಂದರ ವಿವರಣೆಯ ಮೂಲಕ ವಿಷಯವನ್ನು ಪ್ರಸ್ತುತಪಡಿಸಿದ್ದರು. ವಿಜ್ಞಾನಿಯೊಬ್ಬರು ಈ ರೀತಿ ಮಾತನಾಡಬಲ್ಲರೇ? ಎಂದು ಆಶ್ಚರ್ಯ ಚಕಿತನಾಗಿದ್ದೆ. ಕೆಲ ದಿನದ ಹಿಂದೆ ನಾನು ಬರೆದ ಲೇಖನ ಅಡಿಕೆ ಕೃಷಿಕರಾದ ನಾವು ಆತ್ಮಾವಲೋಕನ ಮಾಡಿಕೊಳ್ಳಬೇಡವೇ? ಎಂಬುದಕ್ಕೆ ಪೂರಕವಾಗಿತ್ತು ಅವರ ಮಾತುಗಳು.
20 ವರ್ಷಗಳಿಗಿಂತ ಮೊದಲು ಅನೇಕ ಬಾರಿ ವಿಜ್ಞಾನಿಗಳೊಡನೆ ಸಂವಾದ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದೆ. ಅಲ್ಲೆಲ್ಲ ಕೇಳಿದ ಮಾತುಗಳಿಗೂ ಇವರ ಮಾತುಗಳಿಗೂ ಅಜಗಜಾಂತರ ವ್ಯತ್ಯಾಸಗಳನ್ನು ಕಂಡೆ. ಸಾವಯವ ಶಬ್ದವನ್ನು ಬಳಸದೆ ಸಾವಯವಕ್ಕೆ ಪೂರ್ತಿ ಒತ್ತು ಕೊಟ್ಟಂತೆ ಕಂಡಿತು. 16 ಬಗೆಯ ಲವಣಾಂಶದ ಕೊರತೆಯೇ ಅಧಿಕ ಇಳುವರಿಗೆ ಮಾರಕ ಎಂಬ ಪುಂಕಾನುಪುಂಕ ಮಾಹಿತಿಗಳಿಗೆ ಸಂಪೂರ್ಣ ಭಿನ್ನ ಅಭಿಪ್ರಾಯವನ್ನು ಪ್ರಸ್ತುತಪಡಿಸಿದ್ದರು. ಲವಣಾಂಶಗಳ ವಿವೇಚನಾ ರಹಿತ ಬಳಕೆಯೇ ಎಲ್ಲಾ ರೋಗಗಳ ಮೂಲ ಎಂಬುದನ್ನು ಒತ್ತಿ ಹೇಳಿದ್ದರು. ಸುಲಭವೆಂದು ಬಳಸುವ ಸಂಕೀರ್ಣ ಗೊಬ್ಬರಗಳು ಜೀವನವನ್ನೇ ಸಂಕೀರ್ಣಗೊಳಿಸಬಹುದು ಎಂಬುದನ್ನು ಸುಂದರ ವಿಶ್ಲೇಷಣೆಯೊಂದಿಗೆ ತಿಳಿಸಿದ್ದರು. ಆದರೂ ನನ್ನ ಮನಸ್ಸಿನಲ್ಲಿ ಎದ್ದ ಕೆಲ ಪ್ರಶ್ನೆಗಳನ್ನು ಮುಂದಿರಿಸುವೆ.
1) ನಮ್ಮ ಅಡಿಕೆ ಕೃಷಿಗೆ ಶತಮಾನಗಳ ಇತಿಹಾಸ. ಬಳಸುತ್ತಿದ್ದುದು ಹೆಚ್ಚೆಂದರೆ ಹಟ್ಟಿಗೊಬ್ಬರ ಮಾತ್ರ.ಅದನ್ನು ಬಳಸುತ್ತಿರಬೇಕಾದರೆ ಮಹಾಳಿಯ ಹೊರತಾಗಿ ಹೆಚ್ಚಿನ ರೋಗಲಕ್ಷಣಗಳನ್ನು ಕಾಣುತ್ತಿರಲಿಲ್ಲ. ಪೋಷಕಾಂಶಗಳ ನಿರ್ವಹಣೆಯ ಬಗ್ಗೆ ಮಾತನಾಡುವಾಗ ಹಟ್ಟಿ ಗೊಬ್ಬರದ ಬಗ್ಗೆ ಚಕಾರ ಎತ್ತಲಿಲ್ಲ ಕಾರಣವೇನು?.
2) ಪೋಷಕಾಂಶಗಳ ವಿವೇಚನಾ ರಹಿತ ಬಳಕೆಯೇ ಖಾಯಿಲೆಗಳ ಮೂಲ ಎಂದು ಹೇಳುವಾಗ, ಒಂದು ಎಕರೆಯಲ್ಲಿ ಒಂದು ಮರಕ್ಕೋ ಎರಡು ಮರಕ್ಕೋ ಮುಂಡುಸಿರಿ ಬಂದರೆ, ಓರೆಗಂಟು ಬಂದರೆ ಆ ಮರಕ್ಕೆ ಮಾತ್ರ ಪೋಷಕಾಂಶಗಳನ್ನು ಬಳಸಬೇಕೆ ವಿನಃ ಇನ್ನುಳಿದ 500ಕ್ಕೂ ಬಳಸುವ ಅಗತ್ಯವಿದೆಯೇ?. 3) ಮನೆಯ ಸದಸ್ಯನೋರ್ವನಿಗೆ ನ್ಯೂನತೆಯನ್ನು ಕಂಡರೆ ಪ್ರತಿಯೊಬ್ಬರಿಗೂ ಔಷಧಿ ಕೊಡುವ ಕ್ರಮವಿದೆಯೇ? 4) ಹಾಗೆ ಪ್ರತಿಮರಕ್ಕೂ ಅನಗತ್ಯವಾಗಿ ಕೊಡುವ ಕಾರಣವೇ ಅಲ್ಲವೇ ಇಂತಹ ರೋಗಗಳು ಉಲ್ಬಣವಾದದ್ದು? 5) ಆಗಸ್ಟ್ ಕೊನೆಯ ವಾರ ಅಥವಾ ಸೆಪ್ಟೆಂಬರ್ ಮೊದಲ ವಾರದಲ್ಲಿ ಶಿಲೀಂದ್ರ ನಾಶಕಗಳನ್ನು ಸಾಮೂಹಿಕವಾಗಿ ಸಿಂಪಡಿಸಿದರೆ ಮಾತ್ರ ಹದ್ದು ಬಸ್ತಿಗೆ ಬರಬಹುದು ( ಬರುತ್ತದೆ ಎಂಬುದಕ್ಕೆ ಖಾತ್ರಿ ಇಲ್ಲ ) ಎಂದಾಗ ಸಾವಿರಾರು ಎಕ್ಕರೆಗಳಲ್ಲಿ ಇದು ಸಾಧ್ಯವೇ?ಎಂಬುದು ಸಾಮೂಹಿಕ ಪ್ರಶ್ನೆ ಆಗಲಾರದೆ? ಅದೂ 60,70,80 ಅಡಿಯ ಹಳೆ ತೋಟಗಳಲ್ಲಿ! 6) ಕೃಷಿ ಪ್ರಯೋಗ ಪರಿವಾರದ ಮಿತ್ರರೊಬ್ಬರಲ್ಲಿ ಈ ಬಗ್ಗೆ ಮಾತನಾಡಿದಾಗ ಅವರು ಕೊಟ್ಟ ಮಾಹಿತಿ ಭಯಾನಕ. ತೀರ್ಥಹಳ್ಳಿ, ಕೊಪ್ಪ, ಶೃಂಗೇರಿ, ಆಗುಂಬೆ ಈ ಭಾಗದಲ್ಲಿ ಸುಮಾರು 2000 ಎಕ್ಕರೆಗಿಂತ ಜಾಸ್ತಿ ತೋಟಗಳು ಸಂಪೂರ್ಣ ನಾಶವಾಗಿದೆಯಂತೆ. ಮಾಡದ ಪರಿಹಾರಗಳೂ ಇಲ್ಲವಂತೆ. ಏನೇ ಮಾಡಿದರೂ ನಿಯಂತ್ರಣ ಇಲ್ಲ. ಇದೇ ರೀತಿ ಮುಂದುವರಿದಲ್ಲಿ ಇನ್ನು ಎರಡು ಮೂರು ವರುಷಗಳಲ್ಲಿ ಅಡಿಕೆ ಕೃಷಿ ಚರಿತ್ರೆಯ ಪುಟಗಳಿಗೆ ಸೇರಬಹುದು ಅಂತಂದರು. ಅವರ ಅಧ್ಯಯನದ ಪ್ರಕಾರ ಆರಂಭವಾದದ್ದು ಎಲ್ಲವೂ ರಾಸಾಯನಿಕ ಅತಿಯಾಗಿ ಬಳಸಿದ ತೋಟಗಳಲ್ಲಿಯೇ. ಹಬ್ಬುವಾಗ ಮಾತ್ರ ಯಾರನ್ನೂ ಬಿಡಲಿಲ್ಲ ಎಂದೂ ಮಾತು ಸೇರಿಸಿದ್ದರು. ಹಾಗಿರುವಾಗ ಪೋಷಕಾಂಶ ನಿರ್ವಹಣೆ ರಾಸಾಯನಿಕಗಳಿಂದಲೇ ಎಂಬ ಮಾತು ಬೇಕೆ?ಯಾವುದಕ್ಕೆಲ್ಲ ಔಷಧಿ ಬಿಡುತ್ತೀರಿ! ಕಾಯಿಲೆಗಳು ಹೊಸ ಹೊಸತ್ತು ಬಂದಷ್ಟು ಔಷಧಿಗಳೇ ಉದ್ಯೋಗವಾಗಬಹುದು. ಮಣ್ಣಿನ ಸಂರಕ್ಷಣೆ, ಪರಿಸರದ ಸಂರಕ್ಷಣೆ, ರೋಗನಿರೋಧಕ ಶಕ್ತಿಯನ್ನು ಜಾಸ್ತಿ ಮಾಡುವುದು ಮುಂತಾದ ದಾರಿಗಳೇ ಅಂತಿಮ ಪರಿಹಾರ ಎಂಬ ನಿಮ್ಮ ಮಾತು ಸಾರ್ವಕಾಲಿಕ ಸತ್ಯಗಳು. ಆ ದಿಕ್ಕಿನಲ್ಲಿ ಪ್ರಚಾರ ಜಾಸ್ತಿ ಆಗಲಿ.
ಕರಾವಳಿ ಜಿಲ್ಲೆಗಳ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಅಗತ್ಯ ಅನುದಾನವನ್ನು ಮುಂದಿನ ಬಜೆಟ್ನಲ್ಲಿ ನೀಡಬೇಕೆಂದು…
ಅಡಿಕೆ ಜಗಿಯುವುದು ಕೇವಲ ಸಾಂಪ್ರದಾಯಿಕ ಅಭ್ಯಾಸ ಮಾತ್ರವಲ್ಲ, ಅದು ಗಂಭೀರ ಆರೋಗ್ಯ ಅಪಾಯಗಳಿಗೆ…
ರಾಜ್ಯದಲ್ಲಿ ಹೆಚ್ಚುತ್ತಿರುವ ಮಾನವ–ವನ್ಯಜೀವಿ ಸಂಘರ್ಷ ಹಾಗೂ ಆನೆ ದಾಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು…
ದಾವಣಗೆರೆ ಜಿಲ್ಲೆಯಲ್ಲಿ 5 ಮೆಕ್ಕೆಜೋಳ ಖರೀದಿ ಕೇಂದ್ರಗಳಿಂದ 3,412 ರೈತರು 87,258 ಕ್ವಿಂಟಲ್…
ಜಲಜೀವನ್ ಮಿಷನ್ ಯೋಜನೆಯ ಕಾಮಗಾರಿಗಳನ್ನು ಆದಷ್ಟು ಶೀಘ್ರ ಪೂರ್ಣಗೊಳಿಸುವಂತೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್…
ಕರಾವಳಿ ಕರ್ನಾಟಕದ ಅಡಿಕೆ ತೋಟಗಳು ಕಾಡುಪ್ರಾಣಿಗಳ ಹಾವಳಿಯಿಂದ ಭಾರೀ ನಷ್ಟ ಅನುಭವಿಸುತ್ತಿವೆ. ಮಾನವ–ವನ್ಯಜೀವಿ…