#Opinion | ಉಳುಮೆಯ ಪಾಠ | ಭತ್ತವೆಂದರೆ ಕೇವಲ ಕೃಷಿಯಲ್ಲ, ಅದು ಬದುಕಿನ ಅನಿವಾರ್ಯತೆ |

June 30, 2023
2:13 PM
ಕೃಷಿಕ ಎ ಪಿ ಸದಾಶಿವ ಅವರು ಭತ್ತ ನಾಟಿಯ ಬಗ್ಗೆ ಕೃಷಿಕರಾಗಿ ಅನುಭವ ಹಂಚಿಕೊಳ್ಳುವ ತಮ್ಮ ಅನುಭವವನ್ನು ಇಲ್ಲಿ ಹೇಳಿದ್ದಾರೆ. ಅದರ ಯಥಾವತ್ತಾದ ರೂಪ ಇಲ್ಲಿದೆ…
ಪುತ್ತೂರು ತಾಲೂಕು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಧಿಕಾರಿ ಉಮೇಶ್ ಅವರು ದೂರವಾಣಿಸಿದರು. ನಾಳೆಯ ದಿನ ಯಾಂತ್ರಿಕೃತ ಭತ್ತ ನಾಟಿಯ ಬಗ್ಗೆ, ಚಾಪೆ ನೇಜಿ ಮಾಡುವ ಬಗ್ಗೆ ಮಾಹಿತಿ ಕಾರ್ಯಕ್ರಮವಿದೆ. ಗದ್ದೆಯ ಬಗ್ಗೆ ಅನುಭವದ ನಾಲ್ಕು ಮಾತನ್ನು ನುಡಿಯಬೇಕು ಅಂದರು. ನಿರಂತರ ಆಕಾಶವನ್ನೇ ಮಳೆಗಾಗಿ ನೋಡುತ್ತಿದ್ದ ನನಗೆ, ಒಂದು ತಿಂಗಳ ಕಾಯುವಿಕೆಯ ನಂತರದಲ್ಲಿ ಬಂದ ಮಳೆಯಿಂದಾಗಿ ಗದ್ದೆ ನಾಟಿ ಕಾರ್ಯದ ಪೂರ್ವ ತಯಾರಿಯಲ್ಲಿದ್ದಾಗ ಸ್ವಲ್ಪ ಕಿರಿಕಿರಿ ಅಂತ ಮನಸ್ಸಿಗೆ ಅನಿಸಿದರೂ ಭತ್ತದ ಮೇಲಿನ ಬತ್ತದ ಪ್ರೀತಿಯಿಂದಾಗಿ ಒಪ್ಪಿಕೊಂಡೆ. ಮುಂಚಿತವಾಗಿ ಅನೇಕ ರೈತರಿಗೆ ತಿಳಿಸಿದ್ದರೂ ಒಳಿತನ್ನು ಕೇಳುವ ನೋಡುವ ಆಸಕ್ತಿ ಇಂದು ಜನ ಮಾನಸದಲ್ಲಿ ಕಡಿಮೆಯಾದ ಕಾರಣ ಎಂದಿನಂತೆ ರೈತರ ಸಂಖ್ಯೆ ತೀರಾ ಕಡಿಮೆ ಇತ್ತು. ಈ ಎಲ್ಲಾ ಕೊರತೆಗಳ ಮಧ್ಯೆ ಗ್ರಾಮ ಅಭಿವೃದ್ಧಿ ಯೋಜನೆ ಯೊಂದು ಹೇಗೆ ಕೆಲಸ ಮಾಡುತ್ತದೆ ಎಂಬ ಅನುಭವ ನನಗಾಯಿತು.
ತೀವ್ರತರವಾದ ಕೆಲಸಗಾರರ ಸಮಸ್ಯೆಯಿಂದಾಗಿ, ಕೆಲವೊಮ್ಮೆ ಲಾಭ ಕಡಿಮೆ ಎಂಬ ಯೋಚನೆಯಿಂದಾಗಿ, ಸುಲಭದಲ್ಲಿ ಸಿಗುವಾಗ ಕಷ್ಟದ ದಾರಿ ಯಾಕೆ ಎಂಬ ಕಾರಣದಿಂದಾಗಿ, ಬೇರೆ ಮೂಲಗಳ ಆರ್ಥಿಕ ಭದ್ರತೆಯಿಂದಾಗಿ ನಾವು ಉಣ್ಣುವ ಪ್ರಧಾನ ಆಹಾರವನ್ನು ಬೆಳೆಸುವತ್ತ  ಉಪೇಕ್ಷಿಸುತ್ತಲೇ ಬಂದೆವು. ಅದರ ಪರಿಣಾಮವಾಗಿ ಅತ್ಯುತ್ತಮ ಬೈಲಗದ್ದೆಗಳೆಲ್ಲ ತೋಟಗಳಾಗಿ ಪರಿವರ್ತನೆ ಗೊಂಡವು. ಆದರೂ ಕೆಲವು,ಕಾರಣಾಂತರಗಳಿಂದ ಹಡಿಲು ಗದ್ದೆಗಳಾಗಿಯೇ ಇನ್ನೂ ಇದ್ದಾವೆ.
 ಪ್ರೀತಿಯಿಂದ ಗದ್ದೆಯನ್ನು ಉಳಿಸಿಕೊಂಡು ಬಂದವರಿಗೆ ಸಮಸ್ಯೆ ಆಗಬಾರದೆಂಬ ದೃಷ್ಟಿಯಿಂದ ಸರಕಾರಗಳು ಯಂತ್ರಧಾರ ಯೋಜನೆಯನ್ನು ಜಾರಿಗೆ ತಂದಿತು. ಉಳುಮೆಯ, ನಾಟಿ ಮಾಡುವ, ಕೊಯ್ಲು ಮಾಡುವ ಯಂತ್ರಗಳನ್ನು ಆಯ್ದ ಕೆಲವು ಸಂಸ್ಥೆಗಳ ಉಸ್ತುವಾರಿಯಲ್ಲಿ ಮುನ್ನಡೆಸುವಂತಹ ಯೋಜನೆಯನ್ನು ಹಾಕಿಕೊಂಡ ಪರಿಣಾಮ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯೂ ಅದರಲ್ಲಿ ತೊಡಗಿಗೊಂಡಿತು. ಕಳೆದ ಅನೇಕ ವರ್ಷಗಳಿಂದ ನಾನು ಕೂಡ ಅದರ ಫಲಾನುಭವಿಯೇ.
ಕೇವಲ ಯಂತ್ರವನ್ನು ಬಾಡಿಗೆ ಕೊಡುವುದಕ್ಕೆ ಮಾತ್ರ ಸೀಮಿತವಾಗದೆ ಎಲ್ಲೆಲ್ಲಿ ಹಡಿಲು ಗದ್ದೆಗಳು ಇವೆಯೋ  ಅವುಗಳ ವಾರಿಸುದಾರರನ್ನು ಸಂಪರ್ಕಿಸಿ ಹಡಿಲು ಗದ್ದೆಗಳ ಪುನರುತ್ಥಾನಕ್ಕೆ ಪ್ರೇರೇಪಿಸಿದರು. ಅಯ್ಯೋ,ಚಾಪೆ ನೇಜಿ ಮಾಡಲು ಗೊತ್ತಿಲ್ಲ, ಮಣ್ಣು ತಯಾರು ಮಾಡಲು ಜನವಿಲ್ಲ, ಯಾವಾಗ ನೇಜಿ ಹಾಕಬೇಕೆಂಬ ಅರಿವಿಲ್ಲ, ಗದ್ದೆಗೆ ನೀರು ಯಾವಾಗ ಕಟ್ಟಬೇಕು ಎಷ್ಟು ಕಟ್ಟಬೇಕು ಹೇಗೆ ಕಟ್ಟಬೇಕು ಎಂಬ ಕಾರಣಗಳನ್ನು ಹೇಳಿಕೊಂಡು ಉಪೇಕ್ಷೆ ಮಾಡುವವರನ್ನು ಮತ್ತೆ ಮತ್ತೆ ಹುರಿದುಂಬಿಸಿ ಹಡಿಲು ಗದ್ದೆಗಳ ಪುನರುಜ್ಜೀವನದಲ್ಲಿ ಸಣ್ಣಮಟ್ಟಿನ ಕ್ರಾಂತಿಯನ್ನೇ ಸಾಧಿಸಿದ್ದಾರೆ. ಕೇವಲ ರೈತರನ್ನಷ್ಟೇ ಅಲ್ಲ ಅನೇಕ ಸಂಘ ಸಂಸ್ಥೆಗಳನ್ನು ಇದರಲ್ಲಿ ಜೋಡಿಸಿದ್ದಾರೆ. ಮಾಹಿತಿ ಶಿಬಿರಗಳ ಮೂಲಕ ಪ್ರಾತ್ಯಕ್ಷಿಕಗಳ ಮೂಲಕ ಆಂದೋಲನವನ್ನೇ ನಡೆಸಿದ್ದಾರೆ.
ನಿಜವಾಗಿಯೂ ಭತ್ತವೆಂದರೆ ಕೇವಲ ಕೃಷಿಯಲ್ಲ. ಅದು ಬದುಕಿನ ಅನಿವಾರ್ಯತೆ. ಉಣ್ಣುವ ಅನ್ನಕ್ಕೆ ಕೊಡುವ ಮಾನ ಮರ್ಯಾದೆ ಮತ್ತು ಶ್ರಮಜೀವನದ  ಸಂಸ್ಕಾರ. ಭೂಮಿಗೆ ನೀರಂಗಿಸಿ ಕೊಡಲಿರುವ ದಾರಿ. ಕೇವಲ ಒಂದು ಭತ್ತದಿಂದ ಒಂದು ಗಿಡ ಹುಟ್ಟಿ, ಮತ್ತೆ ಅದು 50 ಆಗಿ, ಸಾವಿರಾರು ಭತ್ತದ ಸಮೂಹವಾಗಿ, ಅಕ್ಕಿಯಾಗಿ ರೂಪಾಂತರಗೊಂಡು ಉಣ್ಣುವ ಬಟ್ಟಲಿಗೆ ಬರುವ ಹಂತಗಳ ಬದುಕಿನ ಪಾಠಶಾಲೆ. ಅಂತಹ ಪಾಠಶಾಲೆಗಳನ್ನು ಅಲ್ಲಲ್ಲಿ ನಿರ್ಮಿಸಲೋಸುಗ ಸಮಸ್ಯೆ ಹೇಳುವವರಿಗಾಗಿ ನೇಜಿಯನ್ನು ತಯಾರು ಮಾಡಿಕೊಡುವ ವ್ಯಕ್ತಿಗಳನ್ನು ತಯಾರು ಮಾಡಿದ್ದಾರೆ. ಒಂದರ್ಥದಲ್ಲಿ ಬಾಯಿಗೆ ಅನ್ನವನ್ನೇ ಇಟ್ಟಿದ್ದಾರೆ ಜಗಿಯುವ ಕೆಲಸ ಮಾತ್ರ ರೈತರದ್ದು ಎಂಬಂತೆ.!
 32 ಮತ್ತು 24 ವರ್ಷದಿಂದ ಹಡಿಲು ಬಿದ್ದ ಗದ್ದೆಗಳನ್ನು ಪುನರುಜ್ಜೀವನಗೊಳಿಸಿದ ರೈತರುಗಳೆ ಅಲ್ಲಿ ಭಾಗಿಯಾದದ್ದು ಇದಕ್ಕೆ ಸಾಕ್ಷಿಯಾಗಿತ್ತು.
 ಗದ್ದೆಯ ಬಗ್ಗೆ ಮಾಹಿತಿ ಹಂಚುವುದಕ್ಕಾಗಿ ಹೋದ ನಾನು ಗದ್ದೆ ಸಂಸ್ಕೃತಿಯನ್ನು ಉಳಿಸಿ ಬೆಳೆಸುತ್ತಿರುವ, ಉಳಿಸುವಲ್ಲಿ ಇನ್ನಷ್ಟು ಪ್ರಯತ್ನಿಸುತ್ತಿರುವ ಮಾಹಿತಿಗಳನ್ನು ಪಡೆದುಕೊಂಡು  ಗ್ರಾಮಾಭಿವೃದ್ಧಿ ಸಂಸ್ಥೆಯನ್ನು ಮನಸಾ ಅಭಿನಂದಿಸುತ್ತಾ ಮನೆಯತ್ತ ನಿರ್ಗಮಿಸಿದೆ.
ಬರಹ :
 ಎ.ಪಿ. ಸದಾಶಿವ ಮರಿಕೆ.

Advertisement
Advertisement
Advertisement

Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಬುಧನಿಂದ ಈ 4 ರಾಶಿಯವರ ಲಕ್ ಫುಲ್ ಚೇಂಜ್, ಸಕಲ ಐಶ್ವರ್ಯ ಪ್ರಾಪ್ತಿ..!
June 3, 2025
8:10 AM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 02-06-2025 | ಸಾಮಾನ್ಯ ಮಳೆ ಮುಂದುವರಿಕೆ | ಜೂನ್ ತಿಂಗಳಲ್ಲಿ ದುರ್ಬಲ ಮುಂಗಾರು ಸಾಧ್ಯತೆ |
June 2, 2025
2:15 PM
by: The Rural Mirror ಸುದ್ದಿಜಾಲ
ಕೊರೊನಾ ಬಗ್ಗೆ ಮುನ್ನೆಚ್ಚರಿಕೆಯ ಹೊರತು ಭಯಭೀತರಾಗುವ ಅವಶ್ಯಕತೆಯಿಲ್ಲ
June 2, 2025
11:20 AM
by: The Rural Mirror ಸುದ್ದಿಜಾಲ
ಭೂಕುಸಿತ ಹಿನ್ನೆಲೆ | ಪಶ್ಚಿಮಘಟ್ಟ ಧಾರಣ ಸಾಮರ್ಥ್ಯದ ಅಧ್ಯಯನಕ್ಕೆ ಸಚಿವ  ಈಶ್ವರ್ ಖಂಡ್ರೆ ಸೂಚನೆ
June 2, 2025
7:33 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group