ಕೃಷಿ ಎಂದರೆ ಕೇವಲ ಬೆಳೆಯುವುದು ಮಾತ್ರವಲ್ಲ, ಕೃಷಿ ಉತ್ಪನ್ನಗಳಿಗೆ ಸೂಕ್ತ ಧಾರಣೆ , ಸರಿಯಾದ ಮಾರುಕಟ್ಟೆ ವ್ಯವಸ್ಥೆಯವರೆಗೂ ಇದೆ. ಕೃಷಿ ಉತ್ಪನ್ನ ಸರಿಯಾಗಿ ಮಾರುಕಟ್ಟೆ ಪ್ರವೇಶಿಸಿದರೆ ಮಾತ್ರವೇ ರೈತನಿಗೂ ಆದಾಯ, ರೈತನ ಯಶಸ್ಸು. ಒಂದು ವೇಳೆ ಮಾರುಕಟ್ಟೆಯೇ ಸಮಸ್ಯೆಯಾದರೆ ರೈತರು ಏನು ಮಾಡಬಹುದು..? ಸೋಲಬೇಕಾಗಿಲ್ಲ, ರೈತನೇ ಮಾರುಕಟ್ಟೆಗೆ ಇಳಿಯಬೇಕು ಎನ್ನುವುದಕ್ಕೆ ಉದಾಹರಣೆ ಕಾಸರಗೋಡು ಜಿಲ್ಲೆಯ ಕುಂಬಳೆ ಬಳಿಯ ಎಡನಾಡು ಗ್ರಾಮದ ಕೃಷ್ಣಪ್ರಸಾದ್ ಅವರು ಮಾದರಿ. ಅವರೇ ಹೇಳುವ ಹಾಗೆ, “ಕೃಷಿ ಎನ್ನುವುದು ಉದ್ಯೋಗವಾದರೆ, ಕೃಷಿಕ ಎಂದರೆ ಅನ್ನದಾತನಾದರೆ ಮಾರುಕಟ್ಟೆ ಮಾಡುವುದು ಕೂಡಾ ಅವನ ಹಕ್ಕು. ಹೀಗಾಗಿ ತೋಟದಲ್ಲಿ ಸೊಳ್ಳೆ ಕಡಿಯುವಾಗ ಇಲ್ಲದ ಸ್ವಾಭಿಮಾನ ರಸ್ತೆ ಬದಿಯಲ್ಲಿ ನಿಂತು ನಮ್ಮದೇ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡುವಾಗಲೂ ನಿಲ್ಲುವಾಗ ಏಕೆ..?” ಎನ್ನುತ್ತಾರೆ. ಅವರೊಂದಿಗಿನ ಮಾತುಕತೆ ಇಲ್ಲಿದೆ………..ಮುಂದೆ ಓದಿ…..
ಕೃಷ್ಣಪ್ರಸಾದ್ ಅವರು ಓದಿದ್ದು ಎಲ್ಎಲ್ಬಿ. ಕೆಲವು ಸಮಯ ವಕೀಲ ವೃತ್ತಿಯನ್ನೂ ಕಾಸರಗೋಡಿನಲ್ಲಿ ಮಾಡುತ್ತಿದ್ದರು. ಈ ವೃತ್ತಿಯ ಜೊತೆಗೆ ಕೃಷಿಯನ್ನೂ ಮಾಡುತ್ತಿದ್ದರು. ಪರಂಪರಾಗತವಾಗಿ ಬಂದಿರುವ ಅಡಿಕೆ, ತೆಂಗು ಅವರ ಮುಖ್ಯಕೃಷಿಯಾಗಿತ್ತು. ಉಪಬೆಳೆಯಾಗಿ ಜಾಯಿಕಾಯಿ ಬೆಳೆದಿದ್ದರು.2021 ರ ಫೆಬ್ರವರಿ ಸಮಯದಲ್ಲಿ ಕಾಸರಗೋಡು ಕೃಷಿ ಇಲಾಖೆಯ ಅಧಿಕಾರಿ ಪಪ್ಪಾಯಿ ಕೃಷಿ ಮಾಡಲು ಕೃಷ್ಣಪ್ರಸಾದ್ ಅವರನ್ನು ಪ್ರೇರೇಪಿಸಿದರು, ಅದಕ್ಕೆ ಪೂರಕವಾಗಿ ಬೆಂಬಲಿಸಿದರು.ಸುಮಾರು 150 ಗಿಡಗಳನ್ನು ಮನಸ್ಸಿಲ್ಲದ ಮನಸ್ಸಿನಲ್ಲಿ ಪಪ್ಪಾಯಿ ಕೃಷಿ ಮಾಡಿದರು. ಆಗ ಅವರು ಮಾರುಕಟ್ಟೆಯ ಬಗ್ಗೆ ಯೋಚನೆ ಮಾಡಲಿಲ್ಲ. ಗಿಡ ಚೆನ್ನಾಗಿ ಬೆಳೆಯಿತು, ಜನವರಿ ವೇಳೆಗೆ ಇಳುವರಿಯೂ ಬಂತು. ಮಾರುಕಟ್ಟೆಗೆ ಹೋದಾಗ ಧಾರಣೆ ಇಲ್ಲ…!, ಕೇಳುವವರೇ ಇಲ್ಲದ ಸ್ಥಿತಿ. ಅಂತೂ ಅಂಗಡಿಗಳಿಗೆ ಕೊಟ್ಟಾಗ ಹಣ ಇಲ್ಲ..!, ಇಂದು.. ನಾಳೆ ಎನ್ನುವ ಉತ್ತರ. ಇದೇ ಸವಾಲಾಯಿತು. ಪಪ್ಪಾಯಿ ಹಣ್ಣು ಆರಂಭವಾಗಿದೆ. ಮಾರುಕಟ್ಟೆ ಸಾಧ್ಯವಿಲ್ಲ. ಇಂತಹ ಪರಿಸ್ಥಿತಿ ಕೃಷಿಕರನ್ನು ಸಹಜವಾಗಿಯೇ ಕಂಗೆಡಿಸುತ್ತದೆ. ಕೃಷಿಯೇ ಬೇಡ ಎನ್ನುವ ಮನಸ್ಥಿತಿ ಇಲ್ಲಿ ಆರಂಭವಾಗುತ್ತದೆ. ಆದರೆ ಕೃಷ್ಣ ಪ್ರಸಾದ್ ಅವರು ಇದನ್ನೇ ಸವಾಲಾಗಿ ಸ್ವೀಕರಿಸಿದರು, ತಾವೇ ಸ್ವತ: ಪಪ್ಪಾಯಿ ಮಾರಾಟಕ್ಕೆ ಇಳಿದರು. ಯಶಸ್ಸೂ ಆದರು. ಸವಾಲು ಗೆದ್ದರು. ಇದಕ್ಕಾಗಿ ಕೃಷ್ಣಪ್ರಸಾದ್ ಅವರು ಇತರ ಕೃಷಿಕರಿಗೂ ಮಾದರಿ.
ಪಪ್ಪಾಯಿ ಇಳುವರಿ ಬರಲು ಆರಂಭವಾದ ತಕ್ಷಣವೇ ಮಾರಾಟವೂ ಅಗತ್ಯ. ದೀರ್ಘ ಕಾಲದ ದಾಸ್ತಾನು ಸಾಧ್ಯವಿಲ್ಲ. ಹೀಗಾಗಿ ಕೃಷ್ಣಪ್ರಸಾದ್ ಅವರಿಗೆ ಮಾರಾಟವೂ ಅನಿವಾರ್ಯವಾಯಿತು. ಮಾರುಕಟ್ಟೆಯಲ್ಲಿ ಧಾರಣೆ ಇಲ್ಲದಾಗ, ಹಣವೂ ಸಿಗದಾಗ ಮಾಡಿರುವ ಕೃಷಿಯಲ್ಲಿ ಆದಾಯ, ಕನಿಷ್ಟ ಬಂಡವಾಳ ಸಿಗಬೇಕಾದರೆ ಮಾರಾಟಕ್ಕೆ ಬೇಕಾದ ವ್ಯವಸ್ಥೆ ಅಗತ್ಯವಾಯಿತು. ಆಗ ತಾವೇ ರಸ್ತೆ ಬದಿ ನಿಂತು ನಮ್ಮದೇ ಕೃಷಿ ಉತ್ಪನ್ನವನ್ನು ಏಕೆ ಮಾರಾಟ ಮಾಡಬಾರದು ಎಂದು ನಿರ್ಧರಿಸಿ ರಸ್ತೆ ಬದಿಗೆ ಸ್ಕೂಟರ್ನಲ್ಲಿ ಬಂದು ನಿಂತರು. ಬದಿಯಡ್ಕ-ಕುಂಬಳೆ ರಸ್ತೆಯ ಸೀತಾಂಗೋಳಿ ಬಳಿಯ ಕುಳ್ಳಂಬೆಟ್ಟು ಎಂಬಲ್ಲಿ ಮಾವಿನ ಮರ ಅಡಿಯಲ್ಲಿ ಸ್ಕೂಟರ್ ನಲ್ಲಿ ಪಪ್ಪಾಯಿ ಜೊತೆಗೆ ಬಂದಿ ನಿಂತರು. ಆರಂಭದಲ್ಲಿ ಯಾರೂ ವಾಹನ ನಿಲ್ಲಿಸಿಲ್ಲ. ಕೊನೆಗೆ ಆ ದಿನ ಒಬ್ಬ ಬಂದು, ವಿಚಾರಿಸಿದ, ಅಲ್ಲಿಂದ ವ್ಯಾಪಾರ ಆರಂಭ…ಈಗ ಕಾರಿನಲ್ಲಿ ಬಂದು ವ್ಯಾಪಾರ…
ಕೃಷಿ ಸವಾಲು, ಕೃಷಿ ಕಷ್ಟ, ಕೃಷಿ ಇನ್ನು ಸಾಧ್ಯವೇ ಇಲ್ಲ ಎನ್ನುವ ನೆಗೆಟಿವ್ ಪಟ್ಟಿಗಳ ನಡುವೆ ಕೃಷ್ಣಪ್ರಸಾದ್ ಅವರು ಇತರೆಲ್ಲಾ ಕೃಷಿಕರೆಲ್ಲರ ನಡುವೆ ಮಾದರಿಯಾಗಿದ್ದಾರೆ. ಕೃಷಿ ಉಳಿಯುವುದು ಹಾಗೂ ಬೆಳೆಯುವುದು ಇಂತಹ ಪ್ರಯತ್ನಗಳ ಮೂಲಕ. ಕೃಷಿ ಮಾಡಿ, ಫಲ ಬರುವಷ್ಟರಲ್ಲಿ ಮಾನಸಿಕವಾಗಿ ಕುಗ್ಗದೆ ಇನ್ನಷ್ಟು ಬೆಳೆಸಿ, ಪರ್ಯಾಯ ಮಾರ್ಗವನ್ನು ತಾವೇ ಕಂಡುಕೊಳ್ಳುವ ಮೂಲಕ ಯಶಸ್ಸು ಸಾಧಿಸಬಹುದು. ಹೀಗಾಗಿ ಕೃಷಿಕ ಕೃಷ್ಣಪ್ರಸಾದ್ ಅವರು ಕೃಷಿಕ ವಲಯಕ್ಕೆ ಸ್ಫೂರ್ತಿ.
ಮೇ 15 ರ ಸುಮಾರಿಗೆ ಮುಂಗಾರು ಅಂಡಮಾನ್ ಸಮುದ್ರ ಪ್ರವೇಶಿಸುವ ಸಾಧ್ಯತೆ ಇದೆ.…
ರಾಜ್ಯದ ಹಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯ ಮುನ್ಸೂಚನೆ ಮುಂದುವರಿದಿದೆ. ಮೇ 20-25ರೊಳಗೆ…
ಕರ್ನಾಟಕದಲ್ಲಿ 14.05.2026ರ ಬೆಳಿಗ್ಗೆ 8 ಗಂಟೆವರೆಗಿನ ಹವಾಮಾನ ಮುನ್ಸೂಚನೆಯ ಪ್ರಕಾರ ಕರಾವಳಿ, ಮಲೆನಾಡು…
ರಾಜ್ಯದ ಬಹುತೇಕ ಭಾಗಗಳಲ್ಲಿ ಬಿಸಿಲು ಮುಂದುವರಿದರೂ ಸಂಜೆ, ರಾತ್ರಿ ಗುಡುಗು ಸಹಿತ ಮಳೆಯ…
‘ರೋಸ್ಟೆಡ್ ಅಡಿಕೆ’ ವರ್ಗೀಕರಣ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಅಲಹಾಬಾದ್ ಹೈಕೋರ್ಟ್ ಆದೇಶಕ್ಕೆ ತಾತ್ಕಾಲಿಕ…
ರಾಜ್ಯದ ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳಲ್ಲಿ ಸಂಜೆ ಮತ್ತು ರಾತ್ರಿ ಗುಡುಗು ಸಹಿತ…