ವ್ಯಕ್ತಿ ಮತ್ತು ವ್ಯಕ್ತಿತ್ವ

October 3, 2025
3:19 PM
ವ್ಯಕ್ತಿತ್ವವೆಂಬುದು ಇನ್ನೊಬ್ಬರ ಯೋಚನೆಯ ಅಭಿಪ್ರಾಯವಲ್ಲ. ಸ್ವಪ್ರಜ್ಞೆಯ ಶಾಸ್ತ್ರ ಸಮ್ಮತವಾದ ಅನುಸರಣೀಯ ನಡೆಯ ಅನಾವರಣ

ನಾವು ದೈನಂದಿನ ಜೀವನದಲ್ಲಿ ಅನೇಕ ಜನರನ್ನು ನೋಡುತ್ತೇವೆ, ಅವರ ಬಗ್ಗೆ ಅನೇಕ ಮಾತುಗಳನ್ನು ಕೇಳುತ್ತೇವೆ. ಆದರೆ “ಅವನು ಹೀಗೆ ಅಂತೆ, ಅವನು ಹೀಗೆ ಹೇಳಿದ್ದಾನೆ” ಎಂಬ ಮೂರನೆಯವರ ಮಾತಿನ ಆಧಾರದಲ್ಲಿ ವ್ಯಕ್ತಿಯ ವ್ಯಕ್ತಿತ್ವವನ್ನು ಅಳೆಯುವುದು ತಪ್ಪು. ಯಾವುದೇ ವ್ಯಕ್ತಿಯ ಮಾತು ಕ್ಷಣಿಕ, ಅದು ಪರಿಸ್ಥಿತಿ, ಮನಸ್ಥಿತಿ, ಕಾಲದ ಒತ್ತಡಗಳಿಂದ ಬದಲಾಗಬಹುದು. ಆದರೆ ವ್ಯಕ್ತಿತ್ವವು ದೀರ್ಘಕಾಲದ ಸಂಸ್ಕಾರ, ಆಚಾರ, ಮೌಲ್ಯ, ದೃಷ್ಟಿಕೋನಗಳ ಮೇಲೆ ರೂಪುಗೊಂಡಿರುತ್ತದೆ.

Advertisement
Advertisement

ಶಾಸ್ತ್ರೀಯ ದೃಷ್ಟಾಂತ, ಭಗವದ್ಗೀತೆಯ ದ್ವಿತೀಯ ಅಧ್ಯಾಯದಲ್ಲಿ ಶ್ರೀಕೃಷ್ಣನು ಅರ್ಜುನನಿಗೆ “ಸ್ಥಿತಪ್ರಜ್ಞ”ನ ಲಕ್ಷಣಗಳನ್ನು ವಿವರಿಸುತ್ತಾನೆ.

“प्रजहाति यदा कामान् सर्वान्पार्थ मनोगतान् । आत्मन्येवात्मना तुष्टः स्थितप्रज्ञस्तदोच्यते ॥” “ಪ್ರಜಹಾತಿ ಯದಾ ಕಾಮಾನ್ ಸರ್ವಾನ್ ಪಾರ್ಥ ಮನೋಗತಾನ್ । ಆತ್ಮನ್ಯೇವಾತ್ಮನಾ ತುಷ್ಟಃ ಸ್ಥಿತಪ್ರಜ್ಞಸ್ತದೋಚ್ಯತೇ ॥”

ಮನಸ್ಸಿನಲ್ಲಿರುವ ಎಲ್ಲಾ ಕಾಮನೆಗಳನ್ನು ತ್ಯಜಿಸಿ, ಆತ್ಮನಲ್ಲೇ ತೃಪ್ತಿ ಹೊಂದಿರುವವನನ್ನು ಸ್ಥಿತಪ್ರಜ್ಞನೆಂದು ಕರೆಯುತ್ತಾರೆ.
ಇದು ವ್ಯಕ್ತಿಯ ಸ್ಥಿರತೆ. ಅನುದ್ವೇಗಿಕವಾಗಿ ಯಾರ ಮಾತುಗಳನ್ನಾದರೂ ತನ್ನ ಸ್ವಂತ ವಿವೇಚನೆಯಲ್ಲಿ ಅಳೆದು ತೂಗಿ ನಿರ್ಧಾರಕ್ಕೆ ಬರುವುದು.

“दुःखेष्वनुद्विग्नमनाः सुखेषु विगतस्पृहः । वीटरागभयक्रोधः स्थितधीर्मुनिरुच्यते ॥”  “ದುಃಖೇಷ್ವನುದ್ವಿಗ್ನಮನಾಃ ಸುಖೇಷು ವಿಘತಸ್ಪೃಹಃ । ವೀತರಾಗಭಯಕ್ರೋಧಃ ಸ್ಥಿತಧೀರ್ಮುನಿರುಚ್ಯತೇ ॥”

ದುಃಖದಲ್ಲಿ ಮನಸ್ಸು ಅಲುಗಾಡದವನು, ಸುಖದಲ್ಲಿ ಅತಿಯಾದ ಆಸಕ್ತಿ ತೋರದವನು, ರಾಗ–ಭಯ–ಕ್ರೋಧಗಳನ್ನು ಜಯಿಸಿರುವವನು ಸ್ಥಿರಚಿತ್ತನು.
ವ್ಯಕ್ತಿತ್ವವನ್ನು ಅಳೆಯುವುದಾದರೆ ಅದು ಮಾತಿನ ಆಧಾರದ ಮೇಲೆ ಅಲ್ಲ, ಆದರೆ ಅವನ ನಡವಳಿಕೆ, ಪ್ರತಿಕ್ರಿಯೆಗಳ ಸಮತೋಲನ, ಧರ್ಮಬದ್ಧತೆಗಳ ಆಧಾರದ ಮೇಲೆ ಎಂಬುದಾಗಿ ಸ್ಪಷ್ಟವಾಗುತ್ತದೆ.

ಪ್ರಸ್ತುತ ವಾಸ್ತವಿಕತೆಗೆ ಅನ್ವಯ, ಇಂದಿನ ಸಮಾಜದಲ್ಲಿ ನಾವು ವ್ಯಕ್ತಿಯ ಬಗ್ಗೆ ಅಭಿಪ್ರಾಯಗಳನ್ನು ರೂಪಿಸುವುದು ಹೆಚ್ಚಾಗಿ ಸೋಶಿಯಲ್ ಮೀಡಿಯಾ, ಗಾಸಿಪ್, ಅಥವಾ ಇತರರಿಂದ ಕೇಳಿದ ಮಾತುಗಳ ಆಧಾರದ ಮೇಲೆ.  ಒಂದು ತಪ್ಪಾದ ಹೇಳಿಕೆ ಅಥವಾ ತಾತ್ಕಾಲಿಕ ಪ್ರತಿಕ್ರಿಯೆ ಆ ವ್ಯಕ್ತಿಯ ಸಂಪೂರ್ಣ ವ್ಯಕ್ತಿತ್ವವೆಂದು ಭಾವಿಸಲಾಗುತ್ತದೆ.

ಉದಾಹರಣೆಯಾಗಿ ಒಬ್ಬ ವ್ಯಾಪಾರಿ ಮಾರ್ಕೆಟ್‌ನಲ್ಲಿ ತೀವ್ರ ಸ್ಪರ್ಧೆಯಲ್ಲಿದ್ದಾನೆ.  ಅವನ ಬಗ್ಗೆ ಕೆಲವರು “ಇವನು ಹೆಚ್ಚು ಲಾಭಾಸಕ್ತ” ಎಂದು ಮಾತಾಡಬಹುದು. ಆದರೆ ನಿಜವಾದ ವ್ಯಕ್ತಿತ್ವವು ಏನೆಂದರೆ, ಗ್ರಾಹಕರಿಗೆ ಗುಣಮಟ್ಟದ ವಸ್ತು ಕೊಡುವುದೇ ಅಥವಾ ಮೋಸ ಮಾಡುವುದೇ?, ಉದ್ಯೋಗಿಗಳಿಗೆ ನ್ಯಾಯವಾದ ವೇತನ ನೀಡುತ್ತಾನೆಯೇ?, ಸಂಕಷ್ಟದಲ್ಲಿ ಗ್ರಾಹಕರೊಂದಿಗೆ ನಿಂತುಕೊಳ್ಳುತ್ತಾನೆಯೇ? ಇವುಗಳಿಂದಲೇ ಅವನ ವ್ಯಕ್ತಿತ್ವವನ್ನು ಅಳೆಯಬಹುದು.

ಕುಟುಂಬ ಜೀವನದಲ್ಲಿ ಮನೆಯೊಳಗೆ ತಂದೆ ಮಗುವಿಗೆ ಕೆಲವೊಮ್ಮೆ ಗದರಿಸಬಹುದು. ಹೊರಗಿನವರಿಗೆ “ಇವನು ಕೋಪಿಷ್ಠ” ಎಂದು ತೋರಬಹುದು. ಆದರೆ ಮಗು ತಪ್ಪು ಮಾಡದಂತೆ ಮಾಡುವ ಉದ್ದೇಶದಿಂದ, ಪ್ರೀತಿಯ ನೆಲೆಯಲ್ಲಿ ಗದರಿಸಿದ್ದರೆ , ಅದು ಅವನ ಕರ್ತವ್ಯನಿಷ್ಠ ವ್ಯಕ್ತಿತ್ವದ ಪ್ರತಿಫಲ. ಮನೆತನವನ್ನು ಕಾಪಾಡುವ ಬಗೆ, ಬಲ–ದುರ್ಬಲತೆಗಳನ್ನು ಸಹಿಸುವ ಬಗೆ – ಇವುಗಳೇ ನಿಜವಾದ ವ್ಯಕ್ತಿತ್ವ.

ರಾಜಕೀಯ ನಾಯಕನೊಬ್ಬ ಬೃಹತ್ ಸಭೆಯಲ್ಲಿ ಕಟುವಾಗಿ ಮಾತನಾಡಬಹುದು. ತಕ್ಷಣದ ಪ್ರತಿಕ್ರಿಯೆಯಿಂದ “ಇವನು ಅಹಂಕಾರಿ” ಎಂದು ನಿರ್ಧರಿಸಲಾಗುತ್ತದೆ. ಆದರೆ, ನಿರ್ಣಯ ಮಾಡುವಾಗ, ಜನಸೇವೆಗೆ ಕೈಗೊಂಡ ತ್ಯಾಗ, ಕಷ್ಟದ ಸಮಯದಲ್ಲಿ ಜನರೊಂದಿಗೆ ನಿಂತಿರುವ ಶಕ್ತಿ – ಇವೇ ಅವನ ವ್ಯಕ್ತಿತ್ವವನ್ನು ತೋರಿಸುತ್ತವೆ. ಉದಾಹರಣೆಗೆ, ವಿಪತ್ತು ಬಂದಾಗ ಅವನ ಕಾರ್ಯನಿಷ್ಠೆ ಮತ್ತು ತುರ್ತು ನಿರ್ಧಾರಗಳ ಧೈರ್ಯವೇ ವ್ಯಕ್ತಿತ್ವದ ಮೌಲ್ಯವನ್ನು ಸಾರುತ್ತವೆ.

ಸಾಮಾಜಿಕ ಹಿತಾಸಕ್ತಿ ಕಾರ್ಯದಲ್ಲಿ ಒಬ್ಬರು ಸಾರ್ವಜನಿಕವಾಗಿ ಹೆಚ್ಚು ಮಾತಾಡದೇ ಹಿಂಬದಿಯಲ್ಲಿ ಶ್ರಮಿಸುತ್ತಾರೆ. ಹೊರಗಿನಿಂದ ನೋಡಿದರೆ  “ಇವರು ಗಮನಾರ್ಹರಾಗಿಲ್ಲ” ಎಂಬ ಅಭಿಪ್ರಾಯ ಮೂಡಬಹುದು. ಆದರೆ ದೀನರಿಗೆ ನೆರವಾಗುವುದು, ಸಾರ್ವಜನಿಕ ಹಿತದಾಯಕ ಕಾರ್ಯದಲ್ಲಿ ತೊಡಗುವುದು – ಇವುಗಳೇ ಅವರ ನಿಜವಾದ ವ್ಯಕ್ತಿತ್ವ.

“ಆಚಾರಃ ಪರಮೋ ಧರ್ಮಃ” (ಆಚಾರವೇ ಪರಮ ಧರ್ಮ) – ಈ ನಿಟ್ಟಿನಲ್ಲಿ ಸಮಾಜ ಸೇವೆಯ ಆಚಾರವೇ ವ್ಯಕ್ತಿತ್ವದ ಮೌಲ್ಯ. ಸ್ನೇಹ ಸಂಬಂಧದಲ್ಲಿಯೂ ಕೂಡ, ಒಮ್ಮೆ ಕಠಿಣವಾಗಿ ಹೇಳಿದ ಮಾತಿನಿಂದ ಸ್ನೇಹಿತನನ್ನು ನಿರಾಕರಿಸಬಾರದು; ದೀರ್ಘಕಾಲದ ಪ್ರಾಮಾಣಿಕತೆ, ನಂಬಿಕೆ, ಸಹಾನುಭೂತಿಯೇ ಅವನ ವ್ಯಕ್ತಿತ್ವವನ್ನು ತೋರಿಸುತ್ತದೆ.

ಇಂದಿನ ಡಿಜಿಟಲ್ ಯುಗದಲ್ಲಿ ಮಾತು ಮತ್ತು ಇಮೇಜ್ ಹೆಚ್ಚು ವೇಗವಾಗಿ ಹರಡುತ್ತದೆ. ಒಂದು ಟ್ವೀಟ್, ಒಂದು ವೀಡಿಯೋ, ಒಂದು ತಪ್ಪಾದ ಪದ – ಇವುಗಳಿಂದಲೇ ವ್ಯಕ್ತಿಯ ಬಗ್ಗೆ ತೀರ್ಪು ಕೊಡಲಾಗುತ್ತದೆ. ಆದರೆ , ಶಾಸ್ತ್ರ ಹೇಳುವುದೇನಂದರೆ, ವ್ಯಕ್ತಿಯನ್ನು ತೀರ್ಮಾನಿಸಬೇಕಾದರೆ ಅವನ ದೀರ್ಘಕಾಲದ ನಡವಳಿಕೆಯ ಆಧಾರದಲ್ಲಿ ಮಾತ್ರ ನಿರ್ಣಯಿಸಬೇಕು.

ಆದುದರಿಂದ ಮಾತುಗಳು ನೆರಳು, ನಡವಳಿಕೆಯೇ ನಿಜವಾದ ರೂಪ. ಇತರರ ಅಭಿಪ್ರಾಯಗಳ ಆಧಾರದಲ್ಲಿ ವ್ಯಕ್ತಿಯನ್ನು ನಿರ್ಣಯಿಸುವ ಬದಲು, ಅವರ ಪ್ರತಿದಿನದ ನಡವಳಿಕೆಯನ್ನು ಗಮನಿಸಬೇಕು, ಅವರ ಸುಖ–ದುಃಖ, ಲಾಭ–ನಷ್ಟಗಳಲ್ಲಿ ತೋರಿಸುವ ಸಮತೋಲನವನ್ನು ಪರಿಶೀಲಿಸಬೇಕು ಮತ್ತು ಅವರ ಆಚಾರ–ವಿಚಾರ, ಮೌಲ್ಯ–ದೃಷ್ಟಿಕೋನಗಳನ್ನು ಅರಿಯಬೇಕು. ಹೀಗಾಗಿಯೇ ಗೀತೆಯ ಸಂದೇಶ ನಮಗೆ ಸಾರ್ವಕಾಲಿಕವಾದದ್ದಾಗಿದೆ.

“यः सर्वत्रानभिस्नेहस्तत्तत्प्राप्य शुभाशुभम् ।नाभिनन्दति न द्वेष्टि तस्य प्रज्ञा प्रतिष्ठिता ॥”  “ಯಃ ಸರ್ತ್ವತ್ರಾನಭಿಸ್ನೇಹಸ್ತತ್ತತ್ ಪ್ರಾಪ್ಯ ಶುಭಾಶುಭಮ್ । ನಾಭಿನಂದತಿ ನ ದ್ವೇಷ್ತಿ ತಸ್ಯ ಪ್ರಜ್ಞಾ ಪ್ರತಿಷ್ಠಿತಾ ॥”

ಯಾವನು ಸುಖ–ದುಃಖ, ಲಾಭ–ನಷ್ಟಗಳಲ್ಲಿ ಸಮತೋಲನದಿಂದಿರುವನೋ, ಅವನ ಪ್ರಜ್ಞೆ ಸ್ಥಿರವಾಗಿರುತ್ತದೆ.  ವ್ಯಕ್ತಿತ್ವವೆಂಬುದು ಇನ್ನೊಬ್ಬರ ಯೋಚನೆಯ ಅಭಿಪ್ರಾಯವಲ್ಲ. ಸ್ವಪ್ರಜ್ಞೆಯ ಶಾಸ್ತ್ರ ಸಮ್ಮತವಾದ ಅನುಸರಣೀಯ ನಡೆಯ ಅನಾವರಣ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ.

Advertisement
Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಕುಮಾರಸುಬ್ರಹ್ಮಣ್ಯ ಮುಳಿಯಾಲ

ಕುಮಾರ ಸುಬ್ರಹ್ಮಣ್ಯ ಮುಳಿಯಾಲ ಅವರು, ಬೆಂಗಳೂರಿನ ಬಯೋ ಕ್ರಾಸ್ ಕೆಮ್, ಎಲ್ಎಲ್ ಪಿ  ಎಂಬ ಔಷಧಿ ಕಂಪೆನಿಯಲ್ಲಿ ಮಾರಾಟ ಮತ್ತು ಮಾರುಕಟ್ಟೆ ವಿಭಾಗದ ನಿರ್ದೇಶಕ. ದ.ಕ. ಜಿಲ್ಲೆಯ ಪುತ್ತೂರಿನ ಸಮೀಪ ಹಿಂದಾರು ಎಂಬಲ್ಲಿ ಅಡಿಕೆ , ತೆಂಗು, ಕರಿಮೆಣಸು ಕೃಷಿ ಭೂಮಿ ಹೊಂದಿದ್ದಾರೆ. ಮೂಲತಃ ಅಡ್ಯನಡ್ಕ ಸಮೀಪದ ಮುಳಿಯಾಲದವರಾಗಿದ್ದು ಕೃಷಿ ಭೂಮಿ ಹೊಂದಿದ್ದು, ಕೃಷಿ ಚಿಂತನೆಗಳನ್ನು ಹೊಂದಿದ್ದಾರೆ.

ಇದನ್ನೂ ಓದಿ

ಅಂಕಗಳಾಚೆಗೂ ಒಂದು ಲೋಕವಿದೆ : ಇದು ಮಕ್ಕಳಿಗೆ ಬದುಕನ್ನು ಕಲಿಸುವ ಶಿಕ್ಷಣ
January 29, 2026
9:31 PM
by: ಮಹೇಶ್ ಪುಚ್ಚಪ್ಪಾಡಿ
ಸರ್ಕಾರಿ ಶಾಲೆ ಮಕ್ಕಳಿಗೆ ಚೆಸ್ ಪಾಠ | ದ.ಕ ದಲ್ಲಿ “ಚೆಸ್ ಇನ್ ಸ್ಕೂಲ್” ಆರಂಭ | ಗ್ರಾಮೀಣ ಮಕ್ಕಳಿಗೆ ಬೌದ್ಧಿಕ ಅವಕಾಶ
January 29, 2026
2:18 PM
by: ದ ರೂರಲ್ ಮಿರರ್.ಕಾಂ
ಕೊಳೆ ರೋಗ ನಿಯಂತ್ರಣಕ್ಕೂ ತೆರಿಗೆ…? ಮೈಲುತುತ್ತಿಗೆ ಸುಂಕ – ಅಡಿಕೆ ರೈತನಿಗೆ ಮತ್ತೊಂದು ಹೊರೆ..!
January 29, 2026
7:39 AM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ
ದೇಶದಲ್ಲಿ ರಬಿ ಋತು ಬಿತ್ತನೆ ದಾಖಲೆ ಹೆಚ್ಚಳ | 660.48 ಲಕ್ಷ ಹೆಕ್ಟೇರ್‌ಗೆ ಏರಿದ ಒಟ್ಟು ವಿಸ್ತೀರ್ಣ
January 29, 2026
7:18 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror