ಮುಂಗಾರು ಮಳೆ ಆರಂಭವಾಯಿತು. ಈ ಬಾರಿ ನಿರೀಕ್ಷೆಗೂ ಮುನ್ನವೇ ಮುಂಗಾರು ಬಂದಿದೆ. ಮುಂಗಾರು ಆರಂಭದ ಹೊತ್ತು ಎಲ್ಲರಿಗೂ ಸಂತಸ. ಹಿತವಾದ ಮಳೆಯು ಮನಸ್ಸಿಗೆ ನೀಡುವ ಮುದವೇ ಬೇರೆ. ಈ ಹಿತವಾದ ಮಳೆಗೆ ಪರಿಸರ ವೀಕ್ಷಣೆಯ ಖುಷಿಯೇ ಬೇರೆ. ಸುಮ್ಮನೆ ಕುಳಿತು ಹಾಡುಗಳನ್ನು ಕೇಳುತ್ತಿರುವುದೇ ಒಂದು “ಪರಿಸರ ಧ್ಯಾನ”. ಈ ಹಿತವಾದ ಮಳೆಯ ಹಾಡುಗಳು ಎಷ್ಟೋ ಗೆದ್ದಿವೆ, ಅದಕ್ಕೆ ಕಾರಣವೂ ಅದೇ ಮಳೆ..!. ಅಂತಹ ಹಿತವಾದ ಮಳೆಯ ನಡುವೆ “ಮತ್ತದೇ ಬೇಸರ…” ಹಾಡಿಗೆ ಮಳೆಯ ಹಿನ್ನೆಲೆಯಲ್ಲಿ ಬೆರಳುಗಳ ಚಲನೆಯಿಂದಲೇ ನೃತ್ಯ ಮಾಡಿದ್ದಾರೆ ಕಲಾವಿದೆ ವಿದುಷಿ ಮಂಜುಳಾ ಸುಬ್ರಹ್ಮಣ್ಯ.…..ಮುಂದೆ ಓದಿ….

ಮಂಜುಳಾ ಸುಬ್ರಹ್ಮಣ್ಯ ಅವರು ಸಾಂಪ್ರದಾಯಿಕ ಶಾಸ್ತ್ರೀಯ ನೃತ್ಯ ಹಾಗೂ ರಂಗಭೂಮಿ ಕ್ಷೇತ್ರಗಳಲ್ಲಿ ಕೆಲಸ ಮಾಡಿದವರು. ಹಲವಾರು ವೇದಿಕೆಗಳಲ್ಲಿ ವೈಯುಕ್ತಿಕ ಹಾಗೂ ತಮ್ಮ ತಂಡದೊಂದಿಗೆ ನೃತ್ಯ, ನೃತ್ಯ ರೂಪಕ, ದೃಶ್ಯ ರೂಪಕ, ನಾಟಕ ಪ್ರದರ್ಶನಗಳನ್ನು ನೀಡುತ್ತಾ ತಮ್ಮ ಸೃಜನಶೀಲತೆಯಿಂದ ರಂಗಭೂಮಿ ಹಾಗೂ ನಾಟ್ಯ ಕ್ಷೇತ್ರಕ್ಕೆ ಕೊಡುಗೆಯನ್ನು ನೀಡಿದ್ದಾರೆ. ಕೇರಳದ ಸಮರ ಕಲೆ ಕಳರಿ ಪಯ್ಯಟ್ಟುವನ್ನು ಕಲಿತಿರುತ್ತಾರೆ. ಮಂಜುಳಾ ಅವರು ದೂರದರ್ಶನದಲ್ಲಿ ಭರತನಾಟ್ಯದ ‘ಬಿ’ ಗ್ರೇಡ್ ಕಲಾವಿದೆ ಹಾಗೂ ನಾಟಕದಲ್ಲಿ ಆಕಾಶವಾಣಿಯ ‘ಬಿ’ ಗ್ರೇಡ್ ಕಲಾವಿದೆಯಾಗಿದ್ದಾರೆ. ನಟಿಯಾಗಿ, ನಿರ್ದೇಶಕಿಯಾಗಿ, ನೃತ್ಯ ಸಂಯೋಜಕಿಯಾಗಿ, ಸಂಗೀತ ನಿರ್ದೇಶಕಿಯಾಗಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಇವರ ಸಂಶೋಧನಾ ಪ್ರವೃತ್ತಿಯನ್ನು ಗುರುತಿಸಿ ಕೇಂದ್ರ ಸರಕಾರದ ಸಂಸ್ಕೃತಿ ಇಲಾಖೆಯ ಸಚಿವಾಲಯವು ಜೂನಿಯರ್ ಫೆಲೋಶಿಪ್ ನೀಡಿ ಪ್ರೋತ್ಸಾಹಿಸಿದೆ.
ಈ ಬಾರಿಯ ಮೊದಲ ಮಳೆಗೆ “ಮತ್ತದೇ ಬೇಸರ…” ಹಾಡಿನ ಜೊತೆಗೆ ಮಳೆಯ ಹಿನ್ನೆಲೆಯಲ್ಲಿ ತನ್ನ ಹಸ್ತ ಹಾಗೂ ಬೆರಳುಗಳ ಚಲನೆಯಿಂದಲೇ ನೃತ್ಯ ಮಾಡಿದ್ದಾರೆ. ಬಹಳ ಸುಂದರವಾಗಿ ಮೂಡಿಬಂದಿದೆ. ಅದರ ವಿಡಿಯೋ ಇಲ್ಲಿದೆ…
ಹಿತವಾದ ಮಳೆಗೆ ಸಾಕಷ್ಟು ಹಾಡುಗಳು ಕ್ಲಿಕ್ ಆಗಿವೆ. ಈ ಹಾಡಿಗೆ ಹಸ್ತ ಹಾಗೂ ಬೆರಳುಗಳ ಚಲನೆಯಿಂದಲೇ ನೃತ್ಯ ಮಾಡಿರುವುದು ಇನ್ನಷ್ಟು ಸೊಗಸಾಗಿದೆ. ಕನ್ನಡದ ಅದೆಷ್ಟೋ ಹಾಡುಗಳಿ ಮಳೆಗೆ ಸಂಬಂಧಿಸಿದ್ದು ಇದೆ. ಅಂದರೆ ಮಳೆಯೇ ಸೊಗಸು ಕವಿಗೆ. ಸಿನಿಮಾದಲ್ಲೂ ಮಳೆ ಹಾಡು ಕ್ಲಿಕ್ ಆಗಿರುವುದು ಹೆಚ್ಚು. ಭಾವನೆಗಳನ್ನೂ ಮಳೆಯ ಹಾಡಿನ ಮೂಲಕ ದಾಟಿಸುವ ಕೆಲಸವೂ ಸುಲಭವಾಗಿದೆ. ಭುವಿಗೆ ಇಳಿಯುವ ಮೊದಲ ಮಳೆಯಲ್ಲಿ ಅದೇನೋ ಮಾಂತ್ರಿಕ ಶಕ್ತಿಯಿದೆ. ಪ್ರತಿಬಾರಿ ಮಳೆಗಾಲ ಬಂದಾಗ ಈ ಹಾಡುಗಳನ್ನು ನೆನಪಾಗುತ್ತದೆ.
ಸ್ವಾತಿ ಮುತ್ತಿನ ಮಳೆ ಹನಿಯೇ, ಮುಂಗಾರು ಮಳೆಯೇ, ಮುತ್ತು ಮುತ್ತು ನೀರಾ ಹನಿಯಾ, ಬಂದ ಬಂದ ಮೇಘರಾಜ, ಎಲ್ಲೋ ಮಳೆಯಾಗಿದೆ ಇಂದು, ಮಳೆ ಬರುವ ಹಾಗಿದೆ, ಮೊದಲ ಮಳೆಯಂತೆ, ಮಳೆಯಲಿ ಜೊತೆಯಲಿ… ಹೀಗೇ ಹಲವು ಹಾಡುಗಳು “ಮಳೆ ಹಾಡು”ಗಳು ಕ್ಲಿಕ್ ಆಗಿವೆ.