ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿರುವ ಭಾರತೀಯ ಗಗನಯಾತ್ರಿ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಸಂವಾದದ ನಡೆಸಿದರು.
ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಿರುವ ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಬಾಹ್ಯಾಕಾಶ ನಿಲ್ದಾಣದ ಪರಿಸ್ಥಿತಿಯ ಕುರಿತು ವಿಚಾರ ವಿನಿಮಯ ಮಾಡಿಕೊಂಡರು. ಈ ವೇಳೆ ಪ್ರಧಾನಿ, ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಿ ಇತಿಹಾಸ ಸೃಷ್ಟಿಸಿರುವ ಶುಭಾಂಶು ಶುಕ್ಲಾ ಅವರನ್ನು ಅಭಿನಂದಿಸಿದರು. ” ನಿಮ್ಮ ಪ್ರಯಾಣ ಭಾರತೀಯರೆಲ್ಲರಿಗೂ ಸ್ಫೂರ್ತಿದಾಯಕವಾಗಿದೆ. ನೀವು ತಾಯ್ನಾಡಿನಿಂದ ತುಂಬಾ ದೂರವಿದ್ದು, ಭಾರತೀಯರ ಹೃದಯದಲ್ಲಿದ್ದೀರಿ. 140 ಕೋಟಿ ಭಾರತೀಯರ ಭಾವನೆಗಳು ನಿಮ್ಮೊಂದಿಗಿವೆ. ಜೊತೆಗೆ ಭಾರತೀಯರ ಉತ್ಸಾಹವು ಅಡಗಿದೆ. ಬಾಹ್ಯಾಕಾಶದಲ್ಲಿ ಭಾರತದ ಧ್ವಜವನ್ನು ಹಾರಿಸಿದ್ದಕ್ಕಾಗಿ ಮತ್ತೊಮ್ಮೆ ಅಭಿನಂದನೆಗಳು” ಎಂದು ಹೇಳಿದರು.
ಪ್ರಧಾನಿ ಅವರ ಪ್ರತಿಕ್ರಿಯೆಗೆ ಶುಭಾಂಶು ಶುಕ್ಲಾ , ತಮ್ಮ ಹಾಗೂ 140 ಕೋಟಿ ಭಾರತೀಯರ ಹಾರೈಕೆಗಾಗಿ ಧನ್ಯವಾದಗಳು, ತಾವು ಇಲ್ಲಿ ಸುರಕ್ಷಿತ ಮತ್ತು ಆರಾಮದಿಂದಿದ್ದೇನೆ. ಇದೊಂದು ಹೊಸ ಅನುಭವ. ಇದು ನನಗೆ ಮಾತ್ರವಲ್ಲದೆ, ಇಡೀ ದೇಶದ ಪಯಣವಾಗಿದೆ. ತಮ್ಮ ನಾಯಕತ್ವದಲ್ಲಿ ನಮ್ಮ ಕನಸುಗಳನ್ನು ಈಡೇರಿಸಿಕೊಳ್ಳಲು ಇಂದಿನ ಭಾರತ ಅನೇಕ ಅವಕಾಶಗಳನ್ನು ಕಲ್ಪಿಸಿಕೊಟ್ಟಿದೆ ಎಂದರು. ಬಾಹ್ಯಾಕಾಶ ಯಾನದಲ್ಲಿ ಭಾರತವನ್ನು ಪ್ರತಿನಿಧಿಸಿದ್ದಕ್ಕಾಗಿ ನನಗೆ ಹೆಮ್ಮೆಯಾಗುತ್ತಿದೆ. ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಿಂದ ಭಾರತ ಸುಂದರವಾಗಿ ಕಾಣುತ್ತಿದೆ. ಅಂತಾರಾಷ್ಟ್ರೀಯ ಬಾಹ್ಯಾಕಾಶ ಯಾನ ಕೈಗೊಳ್ಳಲು ವರ್ಷಗಳ ಕಾಲ ತರಬೇತಿ ಪಡೆದಿದ್ದು, ಸಹಕಾರಿಯಾಗಿದೆ. ಬಾಹ್ಯಾಕಾಶದಲ್ಲಿ ಗುರುತ್ವಾಕರ್ಷಣೆ ಇಲ್ಲದ ಕಾರಣ ಸಣ್ಣ ವಿಷಯಗಳು ಸಹ ಭಿನ್ನವಾಗಿವೆ. ಇಲ್ಲಿ ಮಲಗುವುದು ದೊಡ್ಡ ಸವಾಲು. ಪರಿಸರಕ್ಕೆ ಒಗ್ಗಿಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತಿದೆ ಎಂದು ತಿಳಿಸಿದರು.
ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಭೂಮಿಯನ್ನು ನೋಡಿದರೆ ವಿಭಿನ್ನವಾಗಿ ಕಾಣಿಸುತ್ತದೆ. ಭೂಮಿಯನ್ನು ಹೊರಗಿನಿಂದ ಯಾವುದೇ ಗಡಿ ಗೋಚರಿಸುವುದಿಲ್ಲ. ಯಾವುದೇ ದೇಶಗಳು ಅಸ್ತಿತ್ವದಲ್ಲಿಲ್ಲ. ನಾವೆಲ್ಲರೂ ಮಾನವೀಯತೆಯ ಭಾಗವಾಗಿದ್ದೇವೆ. ಭೂಮಿ ನಮ್ಮ ಒಂದೇ ಮನೆ. ನಾವೆಲ್ಲರೂ ಅದರಲ್ಲಿದ್ದೇವೆ ಎನ್ನುವುದು ಇಲ್ಲಿಂದ ಭಾಸವಾಗುತ್ತದೆ. ಜೊತೆಗೆ ಮೊದಲ ಬಾರಿಗೆ ಅಂತರಿಕ್ಷ ನಿಲ್ದಾಣದಿಂದ ಭಾರತವನ್ನು ನೋಡಿದಾಗ ಭಾರತ ಭವ್ಯವಾಗಿ ಹಾಗೂ ದೊಡ್ಡದಾಗಿ ಕಾಣುತ್ತಿದೆ ಎಂದು ಹೇಳಿದರು.