ಹೆಚ್ಚುತ್ತಿರುವ ವಾಯುಮಾಲಿನ್ಯ ಹಾಗೂ ತಾಪಮಾನ | ಸೋಲಾರ್‌ ಇಂಧನದ ಮೇಲೆ ಪರಿಣಾಮ ಏನು..?

December 10, 2024
7:15 AM
ಅಧ್ಯಯನದ ಪ್ರಕಾರ, 2041-2050ರ ಅವಧಿಯಲ್ಲಿ ದೇಶದ ಬಹುತೇಕ ಭಾಗಗಳಲ್ಲಿ ಸೌರ ವಿಕಿರಣದ ಇಳಿಮುಖವಾಗುವ ಸಾಧ್ಯತೆಯನ್ನು ನಿರೀಕ್ಷಿಸಲಾಗಿದೆ.

ಹೆಚ್ಚುತ್ತಿರುವ ಮಾಲಿನ್ಯ ಹಾಗೂ ತಾಪಮಾನವು ಸೌರ ಫಲಕಗಳ ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ಅಧ್ಯಯನ ವರದಿ ಎಚ್ಚರಿಸಿದೆ.2041-2050ರ ಅವಧಿಯಲ್ಲಿ ದೇಶದ ಬಹುತೇಕ ಭಾಗಗಳಲ್ಲಿ ಸೌರ ವಿಕಿರಣ ಇಳಿಮುಖವಾಗುವ ಸಾಧ್ಯತೆಯನ್ನು ಎಚ್ಚರಿಸಲಾಗಿದೆ. …..ಮುಂದೆ ಓದಿ….

Advertisement

ಭಾರತವು  ಹವಾಮಾನ ವೈಪರೀತ್ಯ ಕಡಿಮೆಗೊಳಿಸುವ ಭಾಗವಾಗಿ ಹಸಿರು ಇಂಧನದ ಕಡೆಗೆ ಗಮನಹರಿಸುತ್ತಿದೆ. 2030 ರ ವೇಳೆಗೆ 100 ಗಿಗಾ ವ್ಯಾಟ್ ಸೌರ ಶಕ್ತಿಯನ್ನು ಸ್ಥಾಪಿಸುವ ಗುರಿಯನ್ನು ಹೊಂದಿದೆ.‌ ಆದರೆ, ಈಗ ಹೆಚ್ಚುತ್ತಿರುವ ವಾಯು ಮಾಲಿನ್ಯ ಮತ್ತು ಹವಾಮಾನ ಬದಲಾವಣೆಯು ಸೌರ ಫಲಕಗಳ ದಕ್ಷತೆಯನ್ನು ಕಡಿಮೆ ಮಾಡುತ್ತದೆ ಎಂದು ಹೊಸ ಅಧ್ಯಯನವು ಹೇಳುತ್ತಿದೆ. ಹೀಗಾಗಿ ಭಾರತದ ಸೌರ ಸಾಮರ್ಥ್ಯವನ್ನು ಹೆಚ್ಚಿಸಲು ವಾಯು ಮಾಲಿನ್ಯ ಮತ್ತು ಹವಾಮಾನ ಬದಲಾವಣೆಯನ್ನು ನಿಯಂತ್ರಿಸುವುದು ಅತ್ಯಗತ್ಯ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.

ಹವಾಮಾನ ಬದಲಾವಣೆಯನ್ನು, ಹವಾಮಾನ ವೈಪರೀತ್ಯವನ್ನು ಕಡಿಮೆ ಮಾಡುವ  ಕಾರ್ಯತಂತ್ರದಲ್ಲಿ ಭಾರತವು ಸೌರ ಶಕ್ತಿಯನ್ನು ಕೂಡಾ ಆಯ್ಕೆ ಮಾಡಿಕೊಂಡಿದೆ. ಆದರೆ ಬದಲಾಗುತ್ತಿರುವ ಹವಾಮಾನ ಮತ್ತು ಹೆಚ್ಚಿನ ಮಾಲಿನ್ಯವು ಭವಿಷ್ಯದಲ್ಲಿ ಸೌರ ಫಲಕಗಳ ಪರಿಣಾಮಕಾರಿ ಕೆಲಸಗಳನ್ನು ಕಡಿಮೆ ಮಾಡುತ್ತದೆ ಎಂದು ಪರಿಸರ ಸಂಶೋಧನಾ ಪತ್ರಗಳಲ್ಲಿ ಎಚ್ಚರಿಸಲಾಗಿದೆ.

ಸೆಂಟರ್ ಫಾರ್ ಅಟ್ಮಾಸ್ಫಿಯರಿಕ್ ಸೈನ್ಸಸ್, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (IIT) ದೆಹಲಿಯ ಸಂಶೋಧಕರು  ಹವಾಮಾನ ಬದಲಾವಣೆ ಮತ್ತು ವಾಯು ಮಾಲಿನ್ಯದ  ಪರಿಣಾಮಗಳನ್ನು ವಿಶ್ಲೇಷಿಸಲು ಮಾಡಿರುವ ಅಧ್ಯಯನ ವರದಿಗಳಲ್ಲಿ   ಲಭ್ಯವಿರುವ ಜಾಗತಿಕ ಹವಾಮಾನ ಮಾದರಿಗಳಿಂದ ಡೇಟಾವನ್ನು ಬಳಸಿಕೊಂಡಿದ್ದರು.

ಮುಂದೆ 2041 ರಿಂದ 2050 ರವರೆಗಿನ ಬದಲಾವಣೆಯನ್ನು ಗಮನಿಸಲು 1985 ರಿಂದ 2014 ರವರೆಗಿನ ಡೇಟಾವನ್ನು ಮಾದರಿಯಾಗಿರಿಸಿಕೊಂಡು ಈ ಅಧ್ಯಯನ ಮಾಡಿದಾಗ ಮತ್ತು ಪ್ರಸ್ತುತ ಸೌರಶಕ್ತಿ ಉತ್ಪಾದನೆಯ ಮಟ್ಟವನ್ನು ಗಮನಿಸಿದ ಅಧ್ಯಯನವು, ವಾರ್ಷಿಕವಾಗಿ 600 ರಿಂದ 840 ಗಿಗಾವ್ಯಾಟ್ ವಿದ್ಯುತ್ ನಷ್ಟವನ್ನು ಅಂದಾಜಿಸಿದೆ. ಸೌರ ಫಲಕಗಳ  ಕಾರ್ಯನಿರ್ವಹಣೆಯಲ್ಲಿ ಸ್ಥಳೀಯ ಪರಿಸ್ಥಿತಿಗಳು ಮಹತ್ವದ ಪಾತ್ರವನ್ನು ವಹಿಸುವುದರಿಂದ ಈ ಬದಲಾವಣೆ ನಿರೀಕ್ಷೆ ಮಾಡಲಾಗಿದೆ. ಹೀಗಾಗಿ ಭಾರತವು 2030 ರ ವೇಳೆಗೆ ಸೌರಶಕ್ತಿ ಆಧಾರಿತವಾಗಿ 100 ಗಿಗಾ ವ್ಯಾಟ್‌ ವಿದ್ಯುತ್‌ ಉತ್ಪಾದನೆಯ ಮಹತ್ವಾಂಕ್ಷೆ ಯೋಜನೆಗೆ ಈಗಲೇ ಸಿದ್ಧತೆ ನಡೆಸಬೇಕಾಗಿದೆ.

ಭಾರತವು ಸಾಮಾನ್ಯವಾಗಿ ಪ್ರತಿ ವರ್ಷ ಸುಮಾರು 300 ಬಿಸಿಲಿನ ದಿನಗಳನ್ನು ಹೊಂದಿರುತ್ತದೆ.  ಸೌರ ವಿಕಿರಣದ ಮಟ್ಟವು ವಾರ್ಷಿಕವಾಗಿ ಪ್ರತಿ ಚದರ ಮೀಟರ್‌ಗೆ ಗಂಟೆಗೆ 1700 ರಿಂದ 2200 ಕಿಲೋವ್ಯಾಟ್ ಇರುತ್ತದೆ ಎಂದು ವರದಿಗಳು ಹೇಳುತ್ತವೆ. ಆದರೆ ಈಚೆಗೆ  ಬಿಸಿಲಿನ ದಿನಗಳಲ್ಲಿ ಭಾರತವು ನಿರಂತರ ಕುಸಿತವನ್ನು ಕಂಡಿದೆ.

ಸಂಶೋಧಕರ ಪ್ರಕಾರ, 1985 ರಿಂದ 2014 ರವರೆಗೆ ಭಾರತದಲ್ಲಿ ಸರಾಸರಿ ದೈನಂದಿನ ಗರಿಷ್ಠ ತಾಪಮಾನವು 15 ಡಿಗ್ರಿ ಸೆಲ್ಸಿಯಸ್‌ನಿಂದ 50 ಡಿಗ್ರಿ ಸೆಲ್ಸಿಯಸ್‌ವರೆಗೆ ಇತ್ತು. ಆದರೆ ಸೆಲ್ ತಾಪಮಾನವು 45 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಿಲ್ಲದಿದ್ದಾಗ ಸೌರ ಫಲಕಗಳು ಸಾಮಾನ್ಯವಾಗಿ ಗರಿಷ್ಠ ದಕ್ಷತೆಯಲ್ಲಿ ಕಾರ್ಯನಿರ್ವಹಿಸುತ್ತವೆ. ಆದರೆ ಈಚೆಗೆ ತಾಪಮಾನವು ಅಧಿಕವಾಗುವುದರಿಂದ ದಕ್ಷತೆ ಕಡಿಮೆಯಾಗುವುದು ಕೂಡಾ ಹೆಚ್ಚಾಗುತ್ತದೆ. ವಾಯುಮಾಲಿನ್ಯ ಹೆಚ್ಚಾಗುವಿಕೆಯಿಂದ ಸೌರಫಲಕಗಳ ಮೇಲೆಯೂ ಪರಿಣಾಮ ಬೀರುತ್ತದೆ. ಬಿಸಿಲಿಗೆ ತಡೆಯಾಗುತ್ತದೆ.  ಹೀಗಾಗಿ ವಾಯು ಮಾಲಿನ್ಯ ಮತ್ತು ಹವಾಮಾನ ಬದಲಾವಣೆ ಎರಡನ್ನೂ ತಗ್ಗಿಸಲು ಕ್ರಮ ಅಗತ್ಯವಾಗಿದೆ ಎಂದು ಅಧ್ಯಯನವು ಹೇಳುತ್ತದೆ.

ಒಟ್ಟಾರೆಯಾಗಿ ಅಧ್ಯಯನದ ಪ್ರಕಾರ, 2041-2050ರ ಅವಧಿಯಲ್ಲಿ ದೇಶದ ಬಹುತೇಕ ಭಾಗಗಳಲ್ಲಿ ಸೌರ ವಿಕಿರಣದ ಇಳಿಮುಖವಾಗುವ ಸಾಧ್ಯತೆಯನ್ನು ನಿರೀಕ್ಷಿಸಲಾಗಿದೆ.

Advertisement

Advertisement

ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Rural Mirror Special | Subscribe Our Channel

ಲೇಖಕರ ಪರಿಚಯ​

ವಿಶೇಷ ಪ್ರತಿನಿಧಿ

ರೂರಲ್‌ ಮಿರರ್‌ ವಿಶೇಷ ಪ್ರತಿನಿಧಿ.

ಇದನ್ನೂ ಓದಿ

ಕ್ಯಾಂಪ್ಕೊ ಬ್ರ್ಯಾಂಡ್ ಅಡಿಕೆ ಅಂತರಾಷ್ಟ್ರೀಯ ಮಟ್ಟಕ್ಕೆ
March 29, 2025
11:04 PM
by: ದ ರೂರಲ್ ಮಿರರ್.ಕಾಂ
ಬಂಡಿಪುರ ಅರಣ್ಯದಲ್ಲಿ ವಾಹನಗಳ ರಾತ್ರಿ ಸಂಚಾರ ನಿರ್ಬಂಧ ತೆರವಿಗೆ ಚರ್ಚಿಸಿ ನಿರ್ಧಾರ | ಅರಣ್ಯ ಸಚಿವ ಈಶ್ವರ್ ಖಂಡ್ರೆ
March 29, 2025
9:58 AM
by: The Rural Mirror ಸುದ್ದಿಜಾಲ
ಬೇಸಿಗೆ ಹಿನ್ನೆಲೆ | ರಾಜ್ಯದ ಜಲಾಶಯಗಳಿಂದ ಕುಡಿಯುವ ನೀರು ಬಿಡುಗಡೆ ಕುರಿತು ಚರ್ಚೆ
March 29, 2025
9:54 AM
by: The Rural Mirror ಸುದ್ದಿಜಾಲ
ವಿಶೇಷ ಕಾಫಿ ಉತ್ಪನ್ನಗಳ ಬಿಡುಗಡೆ | ಡಿಪ್ ಕಾಫಿ ಬ್ಯಾಗ್ ಗಳನ್ನು ಪರಿಚಯಿಸಿದ ಕಾಫಿ ಬೋರ್ಡ್
March 29, 2025
9:49 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group