ನೆಟ್ವರ್ಕ್‌ ಸಮಸ್ಯೆ ನಿವಾರಿಸಲು ಖಾಸಗಿ ಟವರ್‌ ನಿರ್ಮಿಸಿದ ಯುವಕ| ಟವರ್‌ ನಿರ್ಮಾಣಕ್ಕೆ 1.5 ಲಕ್ಷ | ಗ್ರಾಮೀಣ ಭಾಗದಲ್ಲಿ ಹೊಸ ಪ್ರಯತ್ನ |

September 9, 2021
7:24 PM

ಕೊರೋನಾ ನಂತರ ಅತಿ ಅಗತ್ಯವಾಗಿರುವ ವಿಷಯಗಳಲ್ಲಿ ನೆಟ್ವರ್ಕ್‌ ಕೂಡಾ ಒಂದು. ಕಳೆದ ಎರಡು ವರ್ಷಗಳಲ್ಲಿ  ನೆಟ್ವರ್ಕ್‌ ಸಮಸ್ಯೆ ಗ್ರಾಮೀಣ ಭಾಗದಲ್ಲಿ  ವಿಪರೀತವಾಗಿ ಕಾಡಿದೆ. ಇದೀಗ ಖಾಸಗಿ ಟವರ್‌ ಸ್ವಂತ ಜಮೀನಿನಲ್ಲಿ ನಿರ್ಮಾಣ ಮಾಡಿ ವೇಗದ ಇಂಟರ್ನೆಟ್‌ ಪಡೆದ ಸಂಗತಿಯೊಂದು ಇಲ್ಲಿದೆ.

ಕೊರೋನಾವು ಬದುಕಿಗೆ ಹಲವು ಪಾಠ ಕಲಿಸಿದೆ. ಕಳೆದ ವರ್ಷ ಕೊರೋನಾ ಲಾಕ್ಡೌನ್‌ ಭಯ ಮಾತ್ರವಲ್ಲ ಹೊಸ ಆವಿಷ್ಕಾರಗಳಿಗೆ, ಪ್ರಯತ್ನಗಳಿಗೂ ಕಾರಣವಾಗಿದೆ. ಅಂತಹದ್ದರಲ್ಲಿ  ನೆಟ್ವರ್ಕ್‌ ಸಮಸ್ಯೆಗಳೂ ಒಂದು. ಅದರಲ್ಲೂ ಗ್ರಾಮೀಣ ಪ್ರದೇಶಗಳು ನೆಟ್ವರ್ಕ್‌ ಇಲ್ಲದೆ ಒದ್ದಾಡಿತು. ಗ್ರಾಮೀಣ ಭಾಗಗಳಿಗೂ ವೇಗದ ಇಂಟರ್ನೆಟ್‌ ಅಗತ್ಯ ಎಂಬುದು ಎಲ್ಲೆಡೆಯೂ ಗಮನ ಸೆಳೆದಿದೆ ಕೂಡಾ. ಆದರೆ ಗ್ರಾಮೀಣ ಭಾಗದಲ್ಲಿ ನೆಟ್ವರ್ಕ್‌ ಸಮಸ್ಯೆ ನಿವಾರಣೆ ಮಾಡುವುದು ಕೂಡಾ ಅಷ್ಟು ಸುಲಭದ ಕೆಲಸವೂ ಅಲ್ಲ. ಅದರಲ್ಲೂ ಮಲೆನಾಡು ಭಾಗಗಳಲ್ಲಿ  ಬೆಟ್ಟ ಗುಡ್ಡಗಳ ಕಾರಣದಿಂದ ಹಳ್ಳಿ ಹಳ್ಳಿಯಲ್ಲೂ ನೆಟ್ವರ್ಕ್‌ ನೀಡುವುದು  ಸಾಹಸದ ಕೆಲಸ. ಖಾಸಗಿ ಕಂಪನಿಗಳು ಕನಿಷ್ಟ ಆದಾಯ ಬಾರದೇ ಇದ್ದರೆ ಆ ಕಡೆ ಸುಳಿಯುವುದೂ ಇಲ್ಲ, ಸರಕಾರಿ ಸ್ವಾಮ್ಯದ ಬಿ ಎಸ್‌ ಎನ್‌ ಎಲ್‌ ತೀರಾ ಹಳ್ಳಿ ಪ್ರದೇಶದಲ್ಲಿ ಟವರ್‌ ಸ್ಥಾಪನೆ, ನೆಟ್ವರ್ಕ್‌ ವ್ಯವಸ್ಥೆಗೆ ಮುಂದಾಗುತ್ತದೆಯಾದರೂ ಖಾಸಗಿ ಸಂಸ್ಥೆಗಳ ಪೈಪೋಟಿ ಹಾಗೂ ಸರಕಾರದ ನಿರ್ಲಕ್ಷ್ಯದಿಂದ ಬಿ ಎಸ್‌ ಎನ್‌ ಎಲ್‌ ಹಿಂದುಳಿದಿದೆ. ಗ್ರಾಮೀಣ ಭಾಗದ ಜನರು ಈಗಲೂ ನೆಟ್ವರ್ಕ್‌ ಗಾಗಿ ಪರದಾಟ ನಡೆಸಬೇಕಾಗಿದೆ. ಬೆಟ್ಟ ಗುಡ್ಡದ ತುದಿಯಲ್ಲಿ  ನಿಂತು ಕೆಲಸ ಮಾಡಬೇಕಾಗಿದೆ.

ಕೊರೋನಾ ಕಾಲದ ನಂತರ ಗ್ರಾಮೀಣ ಜನರು ಸಂಕಷ್ಟ ಅನುಭವಿಸಿದರು. ಅದರಲ್ಲೂ ವರ್ಕ್‌ ಪ್ರಂ ಹೋಂ ಉದ್ಯೋಗಿಗಳು, ವಿದ್ಯಾರ್ಥಿಗಳು ಇನ್ನಿಲ್ಲದ ಕಷ್ಟ ಪಟ್ಟರು. ಹಾಗೆ, ಕಳೆದ ವರ್ಷ ಕಷ್ಟ ಪಟ್ಟವರಲ್ಲಿ  ಕಾಸರಗೋಡು ಜಿಲ್ಲೆಯ ಬದಿಯಡ್ಕ ಬಳಿಯ ಮುಂಡಿತ್ತಡ್ಕದ ಮುರಳಿ ಅವರೂ ಒಬ್ಬರು. ಖಾಸಗಿ ಸಂಸ್ಥೆಯ ಉದ್ಯೋಗಿ ಹಾಗೂ ಐಟಿ ಸಂಸ್ಥೆ ಹೊಂದಿರುವ ಮುರಳಿ ಅವರು ಕಳೆದ ವರ್ಷ ಇಂಟರ್ನೆಟ್‌ ಸೌಲಭ್ಯ ಇಲ್ಲದೆ ಪರದಾಟ ನಡೆಸಿದರು. ಬೆಂಗಳೂರಿನಲ್ಲಿ ಸಂಸ್ಥೆ ಹೊಂದಿರುವ ಅವರು ಕಳೆದ ವರ್ಷದ ಕೊರೋನಾ ಲಾಕ್ಡೌನ್‌ ಸಮಯದಲ್ಲಿ  ಹಲವು ಸಮಯ ಎದುರಿಸಿದರು. ಬಳಿಕ ಬೆಂಗಳೂರಿನಲ್ಲಿಯೇ ಕೆಲಸ ಮಾಡಿದರು. ಈ ಬಾರಿಯೂ ಲಾಕ್ಡೌನ್‌ ಆರಂಭವಾಗುವ ವೇಳೆ ನೆಟ್ವರ್ಕ್‌ ವ್ಯವಸ್ಥೆ ಬಗ್ಗೆ ಗಂಭೀರ ಚಿಂತನೆ ನಡೆಸಿದರು.

ಕಾಸರಗೋಡು ಜಿಲ್ಲೆಯ ಬದಿಯಡ್ಕ ಬಳಿಯ ಶೇಣಿ  ಪ್ರದೇಶದಲ್ಲಿ ಅವರ ಮನೆ ಇದೆ. ಹೀಗಾಗಿ ಮನೆಗೆ ವೇಗದ ಇಂಟರ್ನೆಟ್‌ ಗಾಗಿ ಬಿ ಎಸ್‌ ಎನ್‌ ಎಲ್‌ ಸೇರಿದಂತೆ ವಿವಿಧ ಖಾಸಗಿ ಕಂಪನಿಗಳನ್ನು  ಸಂಪರ್ಕಿಸಿದರು, ಕೇಬಲ್‌ ವ್ಯವಸ್ಥೆಗೂ ಬೆನ್ನು ಬಿದ್ದರು. ಕೇಬಲ್‌ ವ್ಯವಸ್ಥೆಗಳು ನಿರ್ವಹಣೆ ದೃಷ್ಟಿಯಿಂದ  ಕೇರಳದ ಕೆಲವು ಗ್ರಾಮೀಣ ಭಾಗಗಳಲ್ಲಿ  ಈಚೆಗೆ ನಿಧಾನವಾಗಿಸಿದ ಬಗ್ಗೆಯೂ ಮಾಹಿತಿ ಪಡೆದರು. ಹೀಗಾಗಿ  ಇವರ ಪ್ರದೇಶಕ್ಕೆ ಇಂಟರ್ನೆಟ್‌ ಸದ್ಯ ಲಭ್ಯವಾಗುವುದು ಕಷ್ಟ ಎಂದು ಅನಿಸಿತು. ಈ ಸಮಯದಲ್ಲಿ  ಬಿ ಎಸ್‌ ಎನ್‌ ಎಲ್‌ ನ ಏರ್‌ ಫೈಬರ್‌ ವ್ಯವಸ್ಥೆ ಮೂಲಕ ಕೇಬಲ್‌ ಇಲ್ಲದೆಯೇ ವೇಗದ ಇಂಟರ್ನೆಟ್‌ ಲಭ್ಯವಾಗುವ ಮಾಹಿತಿ ಪಡೆದರು. ಈ ಬಗ್ಗೆ ಬಿ ಎಸ್‌ ಎನ್‌ ಎಲ್‌ ಮೂಲಕ ಪ್ರಾಂಚೈಸಿಯಾದ ಸೆಲ್‌ ಟೋನ್‌ ಬಾಯಾರು ಅನ್ನು ಸಂಪರ್ಕಿಸಿ ವ್ಯವಸ್ಥೆ ಮಾಡುವಂತೆ ತಿಳಿಸಿದಾಗ ಶೇಣಿ ಪ್ರದೇಶದಲ್ಲಿ  ಏರ್‌ ಫೈಬರ್‌ ವ್ಯವಸ್ಥೆ ಆದರೂ ಮುರಳಿ ಅವರ ಮನೆಗೆ ವೇಗ ಇಂಟರ್ನೆಟ್‌ ಲಭ್ಯವಾಗಲಿಲ್ಲ, ಇವರ ಜೊತೆಗೆ ಆಸುಪಾಸಿನ ಮನೆಗಳಿಗೂ ಇಂಟರ್ನೆಟ್‌ ಇರಲಿಲ್ಲ. ಹೀಗಾಗಿ ಮುರಳಿ ಅವರ ಮಿತ್ರ ಕೇಶವ ಅವರೂ ಸೇರಿ ಸ್ವಂತ ಜಾಗದಲ್ಲಿ ಖಾಸಗಿಯಾಗಿ ಟವರ್‌ ನಿರ್ಮಾಣಕ್ಕೆ ಮುಂದಾದರು.

ಬೆಂಗಳೂರಿನಲ್ಲಿ ಖಾಸಗಿ ಸಂಸ್ಥೆಗಳ ಮೂಲಕ ಟವರ್‌ ನಿರ್ಮಾಣದ ಮಾಹಿತಿ ಪಡೆದು 33  ಮೀಟರ್‌ ಎತ್ತರದ ಟವರ್‌ ನಿರ್ಮಾಣಕ್ಕೆ ಮುಂದಾಗಿ 1.45 ಲಕ್ಷ ರೂಪಾಯಿ ವೆಚ್ಚದಲ್ಲಿ  ಟವರ್‌ ನಿರ್ಮಿಸಿದರು. ಮಲೆನಾಡು ಹಾಗೂ ಕರಾವಳಿ ಭಾಗವಾದ್ದರಿಂದ ಗುಣಮಟ್ಟದ ಕಬ್ಬಿಣ ಅಳವಡಿಕೆ ಮಾಡಿದ್ದರಿಂದ ಸ್ವಲ್ಪ ವೆಚ್ಚವಾಗಿದೆ ಎನ್ನುವ ಮುರಳಿ ಅವರು  ನಮಗೆ ಅತೀ ಅಗತ್ಯವಾಗಿ ವೇಗದ ಇಂಟರ್ನೆಟ್‌ ಬೇಕಿತ್ತು, ಹೀಗಾಗಿ ಟವರ್‌ ಸ್ಥಾಪಿಸಲೇಬೇಕಾಯಿತು. ಈಗ ಊರಿನ ಮಂದಿಯೂ ಅಗತ್ಯವಿದ್ದರೆ ಇದೇ ಟವರ್‌ ಮೂಲಕ ಸಂಪರ್ಕ ಪಡೆಯಬಹುದು  ಎನ್ನುತ್ತಾರೆ. ಸದ್ಯ ಬಿ ಎಸ್‌ ಎನ್‌ ಎಲ್ ಏರ್‌ ಫೈಬರ್‌ ಮೂಲಕ ವೇಗದ ಇಂಟರ್ನೆಟ್‌ ಲಭ್ಯವಾಗಿದ್ದು ‌ ಯಾವುದೇ ಅಡೆ ತಡೆ ಇಲ್ಲದೆ ಕೆಲಸ ಮಡಲಾಗುತ್ತದೆ ಎನ್ನುತ್ತಾರೆ ಮುರಳಿ.

ಗ್ರಾಮೀಣ ಭಾಗದಲ್ಲಿ  ವೇಗದ ಇಂಟರ್ನೆಟ್‌ ಲಭ್ಯವಾಗಬೇಕು, ಆದರೆ ನಿರ್ವಹಣೆಯೂ ಕಡಿಮೆ ಇರಬೇಕು. ಅಂತಹ ಕಡೆಗಳಲ್ಲಿ ಏರ್‌ ಫೈಬರ್‌ ನಂತಹ ವ್ಯವಸ್ಥೆ ಹೆಚ್ಚು ಅನುಕೂಲ ಎನ್ನುತ್ತಾರೆ ಸೆಲ್‌ ಟೋನ್‌ ಬಾಯಾರು ಇದರ ವಿಷ್ಣುಪ್ರಸಾದ್‌.

ಗ್ರಾಮೀಣ ಭಾಗಗಳಲ್ಲಿ  ಯಾವುದೇ ಕಾರಣಕ್ಕೂ ನೆಟ್ವರ್ಕ್‌ ಸಿಗದ ಕಡೆಗಳಲ್ಲಿ  ಒಂದಷ್ಟು ಮಂದಿ ಒಂದಾಗಿ ಖಾಸಗಿ ಟವರ್‌ ಸ್ಥಾಪನೆ ಮಾಡಿ ಇಂಟರ್ನೆಟ್‌ , ನೆಟ್ವರ್ಕ್ ಪಡೆಯುವ ವ್ಯವಸ್ಥೆ ಮಾಡಹುದಾಗಿದೆ‌. ಸರಕಾರಗಳು ಮಾಡಬೇಕಾದ ವ್ಯವಸ್ಥೆಗಳನ್ನು ಗ್ರಾಮೀಣ ಜನರೇ ಮಾಡಲು ಸಾಧ್ಯವಿದೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

ಇದನ್ನೂ ಓದಿ

ಕಸದ ತೆಂಗಿನಕಾಯಿಯೂ ಈಗ ರೈತರ ಸಂಪತ್ತು…! ಭುವನೇಶ್ವರದ ‘ವೇಸ್ಟ್ ಟು ವೆಲ್ತ್’ ಮಾದರಿ
July 14, 2026
7:12 AM
by: ದ ರೂರಲ್ ಮಿರರ್.ಕಾಂ
ಮಳೆಗಾಲದ ಪರಿಸರದ ಸೊಬಗು ಜಲವರ್ಣದಲ್ಲಿ ಸೆರೆ – ಗುತ್ತಿಗಾರಿನಲ್ಲಿ ಮೂರು ದಿನಗಳ ‘ಮಾನ್ಸೂನ್ ಕಲರ್ಸ್’ ಚಿತ್ರಕಲಾ ಶಿಬಿರ
July 8, 2026
10:56 PM
by: ದ ರೂರಲ್ ಮಿರರ್.ಕಾಂ
ಮಹಾರಾಷ್ಟ್ರದಲ್ಲಿ ಅಡಿಕೆ ಲಾರಿಗಳ ತಡೆಗೆ BIS ಮಾನದಂಡ ಕಾರಣವೇ ? ಯಾವ ಅಡಿಕೆ ಉತ್ತಮ? ಗ್ರೇಡ್ ಹೇಗೆ ನಿರ್ಧಾರ?
July 4, 2026
9:45 PM
by: ದ ರೂರಲ್ ಮಿರರ್.ಕಾಂ
ಗ್ರಾಮಸಭೆಗೆ ಜನ ಯಾಕೆ ಬರುತ್ತಿಲ್ಲ? ಗ್ರಾಮಸಭೆಗಳು ಔಪಚಾರಿಕತೆಗೆ ಸೀಮಿತವೇ?
July 2, 2026
11:23 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror