ಕರವಾಳದ ಶಕ್ತಿಗಿಂತ ಕರುಣೆಯ ಶಕ್ತಿ ಅಧಿಕ. ದುಷ್ಟತನ, ಕ್ರೌರ್ಯದ ಸಂಕೇತವೇ ಆಗಿದ್ದ ಅಂಗುಲಿಮಾಲನಂಥವನನ್ನೂ ಪರಿವರ್ತಿಸಿದ್ದು, ಬುದ್ಧನ ಅಪೂರ್ವ ಕರುಣಾ ಶಕ್ತಿ. ಇಂಥ ಶಕ್ತಿ ಜಗತ್ತನ್ನು ಆಳುವಂತಾಗಬೇಕು. ನಮ್ಮೆಲ್ಲರ ಹೃದಯವನ್ನು ಕರುಣೆ ಆಳುವಂತಾಗಬೇಕು ಎಂದು ಹೊಸನಗರ ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮೀಜಿ ಹೇಳಿದರು.
ಗೋಕರ್ಣದ ಅಶೋಕೆಯ ಶ್ರೀ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಆವರಣದಲ್ಲಿ ಕೈಗೊಂಡಿರುವ ಗುರುಕುಲ ಚಾತುರ್ಮಾಸ್ಯದ ಅಂಗವಾಗಿ ಶನಿವಾರ ಧರ್ಮಸಭೆಯಲ್ಲಿ ಆಶೀರ್ವಚನ ನೀಡಿದ ಅವರು ರಾಮನ ಕಾರ್ಮುಖ (ಧನಸ್ಸು), ಕೃಷ್ಣನ ಯುಕ್ತಿ ಮತ್ತು ಬುದ್ಧನ ಕಾರುಣ್ಯ ಭಾರತೀಯ ಸಂಸ್ಕೃತಿಯಲ್ಲಿ ವಿಶೇಷ ಸ್ಥಾನವಿದೆ ಎಂದು ಬಣ್ಣಿಸಿದರು.
ರಾಜರಿಗಿಂತ ಋಷಿ ಮುನಿಗಳು ಶ್ರೇಷ್ಠರು. ರಾಜನ ಸೈನಿಕರ ಶಕ್ತಿಗಿಂತ ಋಷಿ ಮುನಿಗಳ ಕರುಣೆಯ ಸಾಮಥ್ರ್ಯ ಹೆಚ್ಚು. ಈ ಕಾರಣದಿಂದಲೇ ಎಂಥ ಶಕ್ತಿ ಸಾಮಥ್ರ್ಯ, ಸೇನಾ ಬಲ ಹೊಂದಿದ ರಾಜರಾದರೂ ಮುನಿಶ್ರೇಷ್ಠರಿಗೆ ತಲೆ ಬಾಗುತ್ತಿದ್ದರು ಎಂದು ವಿವರಿಸಿದರು. ದಂಡನೆಯಿಂದ ಸಾಧ್ಯವಾಗದ್ದು ಕಾರುಣ್ಯದಿಂದ ಸಾಧ್ಯವಾಗುತ್ತದೆ. ಗುರುಸನ್ನಿಧಾನದಲ್ಲಿ ಮುಖ್ಯವಾಗಿರುವಂಥದ್ದು ಮರುಕ ತುಂಬಿದ, ಕರುಣ ರಸ ಹೊಂದಿದ ನೋಟ. ಇಂಥ ಕರುಣಾಪೂರ್ಣ ನೋಟ ಒಮ್ಮೆ ಬಿದ್ದರೆ ನಮ್ಮ ಜೀವನ ಪಾವನವಾಗುತ್ತದೆ. ಎಷ್ಟೋ ಜೀವಗಳನ್ನು ಇದು ಉದ್ಧರಿಸುತ್ತದೆ. ಕರುಣೆ ತುಂಬಿದಾಗ ನಿಜವಾಗಿ ಶ್ರೇಷ್ಠವ್ಯಕ್ತಿಗಳಾಗುತ್ತೇವೆ. ಉದಾಹರಣೆಗೆ ವಾಲ್ಮೀಕಿ ಇಡೀ ಜಗತ್ತಿನಲ್ಲಿ ವಿಶ್ವಮಾನ್ಯರಾಗಿದ್ದರೆ, ಅವರ ಹಿಂದಿನ ರೂಪವನ್ನು ಯಾರು ನೆನಪಿಸಿಕೊಳ್ಳಲೂ ಬಯಸುವುದಿಲ್ಲ. ದೇವರ ಇಂಥ ಒಂದೊಂದು ಸಹಜ ಗುಣಗಳನ್ನು ಬೆಳೆಸಿಕೊಂಡಷ್ಟೂ ನಾವೂ ದೇವರಾಗಿ ಪರಿವರ್ತನೆಯಾಗುತ್ತೇವೆ ಎಂದು ಹೇಳಿದರು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel