ಆಧ್ಯಾತ್ಮಿಕ ಜೀವನ ಹಾಗೂ ಸಾಮಾನ್ಯ ಜೀವನಕ್ಕೆ ಧೈರ್ಯ ಅಥವಾ ಸ್ಥಿರಚಿತ್ತ ಅಗತ್ಯ. ತಪ್ಪು ಮಾಡದಿರುವುದು ಧೈರ್ಯದ ಮೂಲ. ತಪ್ಪು ಮಾಡುವವ ಸಹಜವಾಗಿಯೇ ಭಯಕ್ಕೆ ಶರಣಾಗುತ್ತಾನೆ. ತಪ್ಪು ಮಾಡದಿದ್ದರೆ ನಿಶ್ಚಿಂತೆಯಿಂದ, ಧೈರ್ಯದಿಂದ ಇರುತ್ತಾನೆ. ತಪ್ಪು ಮಾಡದಿರುವುದನ್ನು ರೂಢಿಸಿಕೊಂಡಲ್ಲಿ ಸಹಜವಾಗಿಯೇ ನಿಜವಾದ ಧೈರ್ಯ ನಮಗೆ ಬರುತ್ತದೆ ಎಂದು ಹೊಸನಗರ ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮೀಜಿ ಸಲಹೆ ಮಾಡಿದರು.
ಧೈರ್ಯ ಕಳೆದುಕೊಂಡು ಆ ಜಾಗದಲ್ಲಿ ಭಯ ಬಂದರೆ ಅದು ನಮ್ಮ ಅವಸಾನಕ್ಕೆ ಕಾರಣವಾಗುತ್ತದೆ. ಇಲ್ಲದ ಬಲವನ್ನು ತಂದುಕೊಡುವಂಥದ್ದು ಧೈರ್ಯ. ಆದರೆ ಇರುವ ಬಲವನ್ನು ಕುಗ್ಗಿಸುವಂಥದ್ದು ಭಯ ಎಂದು ಹೇಳಿದರು. ಧೈರ್ಯ ಹಾಗೂ ಭಯ ಎಂಬ ಎರಡು ಭಾವಗಳು ನಮ್ಮೆಲ್ಲರ ಬದುಕಿನಲ್ಲಿ ಬರುತ್ತವೆ. ಧೈರ್ಯಂ ಸರ್ವತ್ರ ಸಾಧನಂ ಎಂಬಂತೆ ಈ ಗುಣ ಎಲ್ಲೆಡೆ ಉಪಯೋಗಕ್ಕೆ ಬರುವಂಥದ್ದು. ಕರುಣೆ, ಪ್ರೀತಿ ಮತ್ತಿತರ ಭಾವಗಳನ್ನು ವಿವೇಚನಾಯುಕ್ತವಾಗಿ ಬಳಸಬೇಕು. ಆದರೆ ಧೈರ್ಯ ಎಲ್ಲೆಡೆ ಬಳಕೆಯಾಗುವಂಥದ್ದು ಎಂದು ವಿಶ್ಲೇಷಿಸಿದರು. ಧೈರ್ಯ ಇಲ್ಲದಿದ್ದರೆ ಏನು ಇದ್ದರೂ ಪ್ರಯೋಜನವಿಲ್ಲ. ಸ್ಥಿರವಾದ ಚಿತ್ತೋನ್ನತಿ ಧೈರ್ಯದ ಲಕ್ಷಣ. ಮತ್ತೆ ಮತ್ತೆ ವಿಘ್ನಗಳು ಬಂದು ಅಪ್ಪಳಿಸಿದರೂ ವಿಚಲಿತವಾಗದೇ ಇರುವ ಗುಣ ಇದು. ರಾಮ ಹಿಮಾಲಯ ಪರ್ವತದಂತೆ ಧೈರ್ಯವಂತ ಎಂಬ ಉಲ್ಲೇಖ ಇದೆ. ಭೂಕಂಪ, ಚಂಡಮಾರುತ ಅಪ್ಪಳಿಸಿದರೂ ವಿಚಲಿತವಾಗದೇ ಇರುವಂಥದ್ದು ಎಂಬ ಅರ್ಥ ಎಂದು ವಿವರಿಸಿದರು. ಮೂರು ಬಗೆಯ ಜನರು ಇರುತ್ತಾರೆ. ಕೆಲವರು ಮುಂದೆ ವಿಘ್ನ ಬಂದರೆ ಎಂಬ ಭಯದಿಂದ ಕಾರ್ಯವನ್ನು ಆರಂಭಿಸುವುದೇ ಇಲ್ಲ. ಇವರು ಅಧಮರು. ಇನ್ನೊಂದು ವರ್ಗ ಕಾರ್ಯ ಆರಂಭಿಸಿ ವಿಘ್ನ ಬಂದಾಗ ನಿಲ್ಲಿಸುತ್ತಾರೆ. ಇವರು ಮಧ್ಯಮವರ್ಗಕ್ಕೆ ಸೇರುತ್ತಾರೆ. ಆದರೆ ಇನ್ನೊಂದು ವರ್ಗ ಮತ್ತೆ ಮತ್ತೆ ವಿಘ್ನಗಳು ಬಂದು ಅಪ್ಪಳಿಸಿದರೂ ವಿಚಲಿತರಾಗದವರು. ಇವರು ಉತ್ತಮೋತ್ತಮರು. ಇಂಥ ಧೈರ್ಯವನ್ನು ನಾವು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ಮಾಡಿದರು. ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಗೃಹಸಚಿವ ಆರಗ ಜ್ಞಾನೇಂದ್ರ , ಶಾಸಕ ದಿನಕರ ಶೆಟ್ಟಿಯವರು ಶ್ರೀಗಳ ಆಶೀರ್ವಾದ ಪಡೆದರು. ಗಾಣಿಗ ಸಮಾಜ, ಸಿದ್ದಿ ಸಮಾಜ ಮತ್ತು ದೇಶಭಂಡಾರಿ ಸಮಾಜಗಳ ವತಿಯಿಂದ ಭಾನುವಾರ ಪಾದಪೂಜೆ ನೆರವೇರಿತು.


Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement

