Advertisement
ಸುದ್ದಿಗಳು

ಅಖಂಡ ಭಾರತದ ನೈಜ ಸ್ವಾತಂತ್ರ್ಯಕ್ಕೆ ಸಂಕಲ್ಪ : ರಾಘವೇಶ್ವರ ಶ್ರೀ ಕರೆ |

Share

ಭಾರತೀಯ ಸಂಸ್ಕೃತಿಯ ಮಕ್ಕಳೆಲ್ಲರೂ ನಮ್ಮ ಮೂಲ ಸಂಸ್ಕೃತಿಗೆ ಮರಳುವಂತಾಗಬೇಕು ಮತ್ತು ಹಿಂದೆ ಭಾರತದ ಭೂಭಾಗವೇ ಆಗಿದ್ದ ಎಲ್ಲ ಪ್ರದೇಶಗಳು ಮತ್ತೆ ಭಾರತ ಸಂಸ್ಕೃತಿಗೆ ಮರಳಬೇಕು. ಆಗ ನಿಜವಾಗಿ ಭಾರತಕ್ಕೆ ಸ್ವಾತಂತ್ರ್ಯ ಬರುತ್ತದೆ. ದೇಶದ ಸ್ವಾತಂತ್ರ್ಯದ ಅಮೃತ ಮಹೋತ್ಸವದಂದು ಈ ಸಂಕಲ್ಪ ಸಾಕಾರವಾಗಿಸುವ ಪಣ ತೊಡೋಣ ಎಂದು ಹೊಸನಗರ ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ಕರೆ ನೀಡಿದರು.

ಗೋಕರ್ಣದ ಅಶೋಕೆಯ ಶ್ರೀ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಆವರಣದಲ್ಲಿ ಕೈಗೊಂಡಿರುವ ಗುರುಕುಲ ಚಾತುರ್ಮಾಸ್ಯದ ಅಂಗವಾಗಿ ಸೋಮವಾರ ಧರ್ಮಸಭೆಯಲ್ಲಿ ಆಶೀರ್ವಚನ ನೀಡಿದ ಅವರು, ವಿದೇಶಿಯರ ಆಳ್ವಿಕೆಯಿಂದ ಮುಕ್ತಿ ಪಡೆದ ದಿನವನ್ನು ನಾವು ಸ್ವಾತಂತ್ರ್ಯ ದಿನವಾಗಿ ಆಚರಿಸುತ್ತಿದ್ದೇವೆ. ಆದರೆ ಆಹಾರ- ವಿಹಾರ, ಉಡುಗೆ ತೊಡುಗೆ, ಆಚಾರ- ವಿಚಾರ, ಸಂಸ್ಕೃತಿ- ಸಂಪ್ರದಾಯ ಎಲ್ಲದರಲ್ಲೂ ವಿದೇಶಿಯರ ಮಾನಸ ಪುತ್ರರಾಗಿಯೇ ಉಳಿದಿದ್ದೇವೆ. ಆ ಸಂಕೋಲೆ ಕಳಚಿಕೊಂಡು ಎಲ್ಲೆಡೆ ಭಾರತೀಯತೆ ವಿಜೃಂಭಿಸುವುದೇ ನೈಜ ಸ್ವಾತಂತ್ರ್ಯ ಎಂದು ವಿಶ್ಲೇಷಿಸಿದರು.

ಭಾರತಕ್ಕೆ ಪರಿಪೂರ್ಣ ಸ್ವಾತಂತ್ರ್ಯ ಇನ್ನೂ ಬಂದಿಲ್ಲ. ಎಲ್ಲಿ ತನ್ನತನಕ್ಕೆ ಪ್ರಾಶಸ್ತ್ಯ, ಪ್ರಾಧಾನ್ಯ ಇದೆಯೋ ಅದು ನಿಜವಾದ ಸ್ವಾತಂತ್ರ್ಯ. ಆಂಥ ನಮ್ಮತನ ಮತ್ತೆ ಮೆರೆಯುವಂತೆ ಮಾಡುವುದೇ ಶ್ರೀ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಮೂಲೋದ್ದೇಶ ಎಂದು ಸ್ಪಷ್ಟಪಡಿಸಿದರು.
ನಮ್ಮ ವೈಯಕ್ತಿಕ ಬದುಕಿನಲ್ಲಿ ಭಾರತೀಯತೆ ಬರಬೇಕು. ಮನೆ, ಸಮಾಜ, ರಾಜ್ಯ, ರಾಷ್ಟ್ರ ಎಲ್ಲವೂ ಭಾರತೀಯತೆಯನ್ನು ಅಳವಡಿಸಿಕೊಳ್ಳಬೇಕು. ಭಾರತಕ್ಕೆ ದೊಡ್ಡ ಶಕ್ತಿ ಬರುತ್ತದೆ. ಸುತ್ತಮುತ್ತಲಿನ ದೇಶಗಳು ಸಹಜವಾಗಿಯೇ ಆಗ ಭಾರತಕ್ಕೆ ಸೇರಿಕೊಳ್ಳುತ್ತಿವೆ. ಈ ಪುಣ್ಯ ಧರಿತ್ರಿಯಲ್ಲಿ ಅದಕ್ಕೆ ವಿಶೇಷ ಪ್ರಾರ್ಥನೆ ಸಲ್ಲಿಸೋಣ. ಇಲ್ಲಿ ಹುಟ್ಟಿದ ಬಹಳಷ್ಟು ಮಂದಿ ಮಹಾಪುರಷರಿಗೆ, ಅವತಾರ ಪುರುಷರಿಗೆ ಜನ್ಮ ನೀಡಿದ ಭೂಮಿ. ಕ್ರಿಸ್ತ, ಪೈಗಂಬರ್ ಹುಟ್ಟಿದ ಸ್ಥಳಗಳಿವೆ. ಅವರೆಲ್ಲ ದೇವದೂತರು. ದೇವದೂತರು ಹುಟ್ಟಿಬಂದ ಪ್ರದೇಶ ವಿಶ್ವದ ಹಲವು ಕಡೆಗಳಲ್ಲಿದ್ದರೆ ದೇವರೇ ಹುಟ್ಟಿಬಂದ ಪ್ರದೇಶ ಭಾರತವನ್ನು ಬಿಟ್ಟರೆ ಬೇರೆಲ್ಲೂ ಇಲ್ಲ. ಉದಾಹರಣೆಗೆ ರಾಮನ ಜನ್ಮಸ್ಥಾನವಾದ ಅಯೋಧ್ಯೆ, ಕೃಷ್ಣ ಅವತಾರವೆತ್ತಿದ ಮಥುರೆ, ಶಿವನೇ ಶಂಕರಾಚಾರ್ಯರಾಗಿ ಜನ್ಮ ತಾಳಿದ ಕಾಲಡಿ ಹೀಗೆ ಅನೇಕ ಪ್ರದೇಶಗಳಿವೆ. ಭರತ ದೇಶ ಎನ್ನುವುದು ದೇವಗರ್ಭ. ಅಂಥ ಮಣ್ಣು ಇದು. ಅದು ನಮಗೆ ಶಕ್ತಿ ನೀಡಲಿ ಎಂಬ ಪ್ರಾರ್ಥನೆ ಮಾಡೋಣ ಎಂದರು.
ಭೌಗೋಳಿಕವಾಗಿ ನೋಡಿದರೆ ಕೂಡಾ ಭಾರತಕ್ಕೆ ಪರಿಪೂರ್ಣ ಸ್ವಾತಂತ್ರ್ಯ ಬಂದಿಲ್ಲ. ಕಾಶ್ಮೀರದಿಂದ ಕನ್ಯಾಕುಮಾರಿ ವರೆಗೆ ಭಾರತ ಎಂದು ನಾವು ಹೇಳುತ್ತೇವೆ. ಆದರೆ ಕಾಶ್ಮೀರದ ಅರ್ಧಭಾಗ ನಮ್ಮ ವಶದಲ್ಲಿದೆ. ಅದು ಪಾಕ್ ಆಕ್ರಮಿತ ಕಾಶ್ಮೀರ. ಪಾಕಿಸ್ತಾನ ಕೂಡಾ ಭಾರತದ ಅಂಗವೇ ಆಗಿತ್ತು. ಪಾಕಿಸ್ತಾನದಿಂದ ಪ್ರತ್ಯೇಕಗೊಂಡ ಇನ್ನೊಂದು ಭಾಗ ಬಾಂಗ್ಲಾದೇಶ. ಇದು ಕೂಡಾ ಭಾರತವೇ. ಬರ್ಮಾ, ಶ್ರೀಲಂಕಾ, ಅಫ್ಘಾನಿಸ್ತಾನ ಕೂಡಾ ಭಾರತದ ಭಾಗವೇ ಆಗಿದೆ ಎಂದು ಪ್ರತಿಪಾದಿಸಿದರು.
ಶ್ರೀಲಂಕಾ ಇಲ್ಲದೇ ರಾಮಾಯಣದ ಕಥೆ ಪೂರ್ಣವಾಗುವುದಿಲ್ಲ. ಅದು ಭಾರತದ ಅವಿಭಾಜ್ಯ ಅಂಗ. ಶ್ರೀಲಂಕಾ ಎಂಬ ಪದ ಶುದ್ಧ ಸಂಸ್ಕøತ ಪದ. ಅಫ್ಘಾನಿಸ್ತಾನವನ್ನು ಉದಾಹರಣೆಗೆ ತೆಗೆದುಕೊಂಡರೆ ಕಂದಹಾರ ಪ್ರದೇಶ. ಅದು ನೈಜವಾಗಿ ಗಾಂಧಾರ ಮಹಾಭಾರತದಲ್ಲಿ ಉಲ್ಲೇಖ ಇರುವಂತೆ ಗಾಂಧಾರ ದೇಶ; ಗಾಂಧಾರಿಯ ತವರು ಮನೆ. ತ್ರಿಬಿಷ್ಟಪ ಎನ್ನುವುದು ಟಿಬೆಟ್‍ನ ಮೂಲ ಹೆಸರು. ತ್ರಿಬಿಷ್ಟಪ ಎಂದರೆ ಸ್ವರ್ಗ, ದೇವಭೂಮಿ ಎಂಬ ಅರ್ಥ. ಬ್ರಹ್ಮದೇಶ ಬರ್ಮಾ ಆಯಿತು. ಭೂ ಉತ್ಥಾನ ಭೂತಾನ ಎಂದಾಯಿತು. ಹೀಗೆ ಭಾರತದ ಎಲ್ಲ ನೆರೆ ಹೊರೆಯ ದೇಶಗಳೂ ಭಾರತದ ಭಾಗವೇ ಆಗಿದ್ದವು ಎಂದು ಹೇಳಿದರು.
ಟರ್ಕಿಗೂ ಭಾರತಕ್ಕೂ ಇಂದು ಯಾವ ಸಂಬಂಧವೂ ಇಲ್ಲ. ಆದರೆ ಮೊದಲು ಭಾರತೀಯರು ಇಲ್ಲಿನ ಜನರನ್ನು ತುರ್ಕಿಗಳು ಎಂದು ಕರೆಯುತ್ತಿದ್ದರು. ತುರ್ಕಿ ಎನ್ನುವ ಮೂಲ ಹೆಸರು ತುರಗ ಎಂದು. ಶ್ರೇಷ್ಠ ಕುದುರೆಗಳು ದೊರೆಯುವ ಸ್ಥಳ ತುರ್ಗ ಸ್ಥಾನ ಇದು ಇಂದು ಟರ್ಕಿ ಎಂದಾಗಿದೆ ಎಂದರು.
ಮಯಯ ದೇಶ ಮಲೇಷ್ಯಾ, ಶ್ಯಾಮದೇಶ ಥಾಯ್ಲೆಂಡ್ ಆಗಿದೆ. ಕಾಂಬೋಜ, ಕಂಬೋಡಿಯಾ ಆಗಿದೆ. ಚಂಪಾ ದೇಶ ಚಾಪ್ ಬಳಿಕ ವಿಯೇಟ್ನಾಂ ಎಂದಾಗಿದೆ. ಋಷಕ ದೇಶ ರಷ್ಯಾ ಆಯಿತು. ಚೀನಾ ಹಾಗೂ ಪರಮ ಚೀನಾದ ಉಲ್ಲೇಖ ರಾಮಾಯಣದಲ್ಲಿದೆ.  ಸಿರಿಯಾ ಮತ್ತು ಅಸಿರಿಯಾ ಎಂಬ ಹೆಸರು ಸುರ- ಅಸುರ ಎಂಬ ಪದದ ಮೂಲದ್ದು. ಮೆಡಿಟರೇನಿಯನ್, ಮಧ್ಯ ಥರಾ ಎಂಬ ಸಂಸ್ಕೃತ ಶಬ್ದ. ಬಳಿಕ ಅಪಭ್ರಂಶಗೊಂಡು ಮೆಡಿಟರೇನಿಯನ್ ಆಗಿದೆ ಎಂದು ಅಭಿಪ್ರಾಯಪಟ್ಟರು.
ಇರಾಕ್‍ನ ಬಲ್ಕ್ ಎಂಬ ಪಟ್ಟಣ ಬಾಹಲಿಕಾ ಎಂಬ ಉಲ್ಲೇಖ ಮಹಾಭಾರತದಲಿದೆ. ಅಲ್ಲಿ ಉತ್ಖನನ ಮಾಡಿದರೆ ಇಂದಿಗೂ ಶಿವಲಿಂಗ ಸಿಗುತ್ತದೆ. ರಷ್ಯಾದ ಭಾಗವಾದ ಸೈಬೀರಿಯಾದಲ್ಲಿ ಜನ ಇಂದಿಗೂ ಶಿಬಿರಗಳಲ್ಲಿ ವಾಸ ಮಾಡುತ್ತಾರೆ. ಶಿಬಿರ ಎಂಬ ಶಬ್ದದಿಂದ ಸೈಬೀರಿಯಾ ಬಂದಿದೆ. ಯಾವದ್ವೀಪ ಜಾವಾ ಆಗಿದೆ. ರಾಮಾಯಣದ ವಾಲಿಯ ನೆನಪಿನ ದ್ವೀಪ ಇಂದು ಬಾಲಿ ದ್ವೀಪವಾಗಿದೆ. ಇದು ಇಂಡೋನೇಷ್ಯಾದ ಭಾಗ. ಹಿಂದೂಗಳು ಬಹಳ ಸಂಖ್ಯೆಯಲ್ಲಿದ್ದಾರೆ. ನೇಪಾಳ ಜನಕಪುರಿ. ಇಲ್ಲಿ ಇಂದಿಗೂ ಹಿಂದೂಸಂಸ್ಕøತಿ ಇದೆ ಎಂದು ಬಣ್ಣಿಸಿದರು.
ರಾಜಾ ಶ್ರೀ ಶ್ರೀತ್ರಿಭುವನ ಸ್ಥಾಪನೆ ಮಾಡಿದ ಊರು ಸಿಂಹಪುರ; ಇಂದು ಸಿಂಗಾಪುರ ಆಗಿದೆ. ದಕ್ಷಿಣ ಆಫ್ರಿಕಾದ ಮಾಲಿ ಹಾಗೂ ಸಂಬಾಲಿ ಎಂಬ ಊರುಗಳಿವೆ. ಇದು ರಾವಣನ ತಾಯಿಯ ಊರು. ಭರತಖಂಡದ ವ್ಯಾಪ್ತಿ ಅಷ್ಟು ವಿಸ್ತಾರವಾಗಿತ್ತು. ಆದರೆ ಪುಟ್ಟ ಭೂಭಾಗವನ್ನೇ ನಾವು ಸ್ವತಂತ್ರ ಭಾರತ ಎಂದು ಹೇಳುತ್ತಿದ್ದೇವೆ. ಆ ದೇಶಗಳ ಜನರಿಗೆ ತಮ್ಮ ಇತಿಹಾಸದ ಅರಿವಿಲ್ಲ. ಭಾರತಕ್ಕೂ ಈ ಭಾಗಕ್ಕೂ ಯಾವ ಸಂಬಂಧವೂ ಇಂದು ಉಳಿದುಕೊಂಡಿಲ್ಲ ಎಂದು ವಿಷಾದಿಸಿದರು.
ಈ ಎಲ್ಲ ಭೂಪ್ರದೇಶಗಳು ಭಾರತವೇ ಆದಾಗ ಮಾತ್ರ ನೈಜ ಸ್ವಾತಂತ್ರ್ಯ ಬಂದಂತಾಗುತ್ತದೆ. ಈ ಎಲ್ಲ ದೇಶಗಳ ಮೂಲಸಂಸ್ಕೃತಿ ಭಾರತೀಯ ಸಂಸ್ಕೃತಿ. ಕೆಲವೆಡೆ ಅಲ್ಪಸ್ವಲ್ಪ ಉಳಿದುಕೊಂಡಿದೆ. ಭಾರತೀಯ ಸಂಸ್ಕೃತಿಯ ಮಕ್ಕಳೆಲ್ಲರೂ ನಮ್ಮ ಮೂಲ ಸಂಸ್ಕೃತಿಗೆ ಮರಳಬೇಕು ಎಂಬ ಸಂಕಲ್ಪವನ್ನು ತೊಡುವಂತಾಗಬೇಕು ಎಂದರು.
ಶ್ರೀಮಠದ ಸಾಮಾಜಿಕ ಜಾಲತಾಣಿಗರ ಬಳಗದ ವತಿಯಿಂದ ಸೋಮವಾರ ಸರ್ವಸೇವೆ ನಡೆಯಿತು. ಕುಮಟಾಕ್ಕೆ ಹೊಸದಾಗಿ ಆಗಮಿಸಿದ ಎಸಿ ಆರ್.ಬಿ.ಜಗಳಸರ್ ಶ್ರೀಗಳಿಂದ ಆಶೀರ್ವಾದ ಪಡೆದರು. ತಹಶೀಲ್ದಾರ್ ಅಶೋಕ್ ಭಟ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ದೇಹ–ಮನಸ್ಸು–ಆತ್ಮದ ಸಮತೋಲನವೇ ನಿಜವಾದ ಆರೋಗ್ಯ: ಆಯುರ್ವೇದದ ಪರಮ ಗುರಿ ಆತ್ಮಜ್ಞಾನ – ರಾಘವೇಶ್ವರ ಶ್ರೀ

ದೇಹ, ಮನಸ್ಸು ಮತ್ತು ಆತ್ಮದ ಸಮತೋಲನವೇ ನಿಜವಾದ ಆರೋಗ್ಯ ಎಂದು ರಾಮಚಂದ್ರಾಪುರ ಶ್ರೀ…

21 hours ago

2050 ರ ವೇಳೆಗೆ ಭೂಕುಸಿತದ ಅಪಾಯ ಮತ್ತಷ್ಟು ಹೆಚ್ಚಳ : ಮಳೆ ತೀವ್ರತೆ, ನಗರೀಕರಣವೇ ಪ್ರಮುಖ ಕಾರಣ – ಅಧ್ಯಯನ

2050ರ ವೇಳೆಗೆ ಮಳೆಯ ತೀವ್ರತೆ ಮತ್ತು ನಗರೀಕರಣದ ಪರಿಣಾಮವಾಗಿ ಭಾರತದ ಹಲವು ಗುಡ್ಡ…

1 day ago

ಅಕಾಲದ ಹಸಿವು, ಅಸಮಯದ ನಿದ್ದೆ ದೇಹದ ಯಂತ್ರ ಕೆಟ್ಟಿರುವ ಸಂಕೇತ : ರಾಘವೇಶ್ವರ ಶ್ರೀ

ಅಕಾಲದ ಹಸಿವು ಮತ್ತು ಅಸಮಯದ ನಿದ್ದೆ ದೇಹದ ಯಂತ್ರದಲ್ಲಿ ಸಮಸ್ಯೆಯ ಸಂಕೇತ ಎಂದು…

1 day ago

ಮತ್ತೆ ಚುರುಕುಗೊಂಡ ಮಳೆ | ಸುಳ್ಯ ಮಲೆನಾಡು ಭಾಗದಲ್ಲಿ ಬೆಳಗ್ಗಿನಿಂದ ಧಾರಾಕಾರ ಮಳೆ

ಸುಳ್ಯ ತಾಲೂಕಿನ ಮಲೆನಾಡು ಭಾಗದಲ್ಲಿ ಎರಡು ದಿನಗಳ ವಿರಾಮದ ಬಳಿಕ ಮತ್ತೆ ಭಾರೀ…

1 day ago

ದೇಶದ ಅಡಿಕೆ ಉತ್ಪಾದನೆಯಲ್ಲಿ ಕರ್ನಾಟಕದ ಮೊದಲು – 75.47% ಉತ್ಪಾದನೆ, 71.56% ವಿಸ್ತೀರ್ಣದಲ್ಲಿ ಅಡಿಕೆ ಬೆಳೆ

ದೇಶದ ಅಡಿಕೆ ಉತ್ಪಾದನೆ ಹಾಗೂ ಬೆಳೆ ವಿಸ್ತೀರ್ಣದಲ್ಲಿ ಕರ್ನಾಟಕವೇ ಅಗ್ರಸ್ಥಾನದಲ್ಲಿದೆ ಎಂದು ಕೇಂದ್ರ…

2 days ago